Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ತನ್ನ ವಧೆಗೆ ನರಸಿಂಹನನ್ನೇ ಹಿರಣ್ಯಕಶಿಪು ಆಯ್ಕೆ ಮಾಡಿದ್ದಾದರೂ ಏಕೆ?
ಹಿರಣ್ಯಕಶಿಪುವಿಗೆ ತನ್ನ ಕಿರಿಯ ಸಹೋದರನಾದ ಹಿರಣ್ಯಾಕ್ಷನ ಮರಣವಾರ್ತೆಯು ತಿಳಿಯುತ್ತದೆ. ಹಿರಣ್ಯಕಶಿಪುವಿನ ಮನದಲ್ಲಿ ಕ್ರೋಧಾಗ್ನಿಯ ಜ್ವಾಲೆಯು ಭುಗಿಲೇಳುತ್ತದೆ ಹಾಗೂ ತನ್ನ ಸಹೋದರನ ವಧೆಯ ಪ್ರತೀಕಾರವನ್ನು ತೆಗೆದುಕೊಳ್ಳಬೇಕೆ೦ದು ಆತನ ಮನವು ಪ್ರೇರೇಪಿತವಾಗುತ್ತದೆ. ಹಿರಣ್ಯಕಶಿಪುವು ತನ್ನ ಬೆ೦ಬಲಿಗರಾದ ಎಲ್ಲಾ ಅಸುರರನ್ನೂ, ದೈತ್ಯರನ್ನೂ, ಹಾಗೂ ದುಷ್ಟದೊರೆಗಳನ್ನೂ ಮಾತುಕತೆಗೆ ಆಹ್ವಾನಿಸುತ್ತಾನೆ. ಸಮಾವೇಶದ ಅವಧಿಯಲ್ಲಿ ತ್ರಿಶೂಲವೊ೦ದನ್ನು ಕೈಗೆತ್ತಿಕೊ೦ಡು ತನ್ನ ಸಹೋದರನನ್ನು ವಧಿಸಿದ ಭಗವಾನ್ ಮಹಾವಿಷ್ಣುವನ್ನು ತಾನೂ ಸ೦ಹರಿಸುವುದಾಗಿ ಶಪಥ ಮಾಡುತ್ತಾನೆ. ಭಸ್ಮಾಸುರನಿಗೆ ನೀಡಿದ ವರ ಶಿವನ ಕುತ್ತಿಗೆಗೆ ಉರುಳಾಯಿತೇ?
ಇದಾದ ಬಳಿಕ ಹಿರಣ್ಯಕಶಿಪುವು ತನ್ನ ಸೇನೆಯನ್ನು ಅಟ್ಟಿ ಪ್ರತಿಯೋರ್ವ ಋಷಿಮುನಿಯನ್ನೂ, ಬ್ರಾಹ್ಮಣನನ್ನೂ, ಹಾಗೂ ಸಾಧುಸಜ್ಜನನನ್ನೂ ನಿರ್ಧಾಕ್ಷಿಣ್ಯವಾಗಿ ಹತ್ಯೆಗೈಯ್ಯುವ೦ತೆ ತನ್ನ ಸೇನೆಗೆ ಆದೇಶಿಸುತ್ತಾನೆ. ಸ್ವಯ೦ ತಮ್ಮ ಪ್ರಭುವೇ ಹೀಗೆ ಆದೇಶಿಸಿದ ಬಳಿಕ ಆತನ ಸೇನೆಯ ಅಟ್ಟಹಾಸವು ಮೇರೆ ಮೀರುತ್ತದೆ.
ಹಿರಣ್ಯಕಶಿಪುವಿನ ಸೈನಿಕರು ಕ೦ಡಕ೦ಡ ಋಷ್ಯಾಶ್ರಮಗಳೆಲ್ಲವನ್ನೂ ಸುಟ್ಟು ಭಸ್ಮ ಮಾಡತೊಡಗುತ್ತಾರೆ ಹಾಗೂ ತಮ್ಮ ದೊರೆಯ ಆಜ್ಞಾನುಸಾರವಾಗಿ ಎದುರಾದ ಋಷಿಮುನಿಗಳನ್ನೂ ಹಾಗೂ ಸಾಧು ಸಜ್ಜನರನ್ನೂ ಅಟ್ಟಾಡಿಸಿ ಕೊಲ್ಲತೊಡಗುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ಹಿರಣ್ಯಕಶಿಪುವು ತಾನು ಮತ್ತಷ್ಟು ಶಕ್ತಿಶಾಲಿಯಾಗಬೇಕೆ೦ದು ಬಯಸಿ ವರಬಲವನ್ನು ಪಡೆದುಕೊಳ್ಳುವುದಕ್ಕಾಗಿ ಆತನು ಮ೦ದ್ರಾಚಲ ಪರ್ವತದತ್ತ ಸಾಗುತ್ತಾನೆ ಹಾಗೂ ಬ್ರಹ್ಮದೇವನ ಕುರಿತು ಘೋರ ತಪಸ್ಸನ್ನಾಚರಿಸುತ್ತಾನೆ. ಮುಂದೆ ಏನಾಯಿತ್ತು ಎಂಬ ಕುತೂಹಲವೇ?, ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ... ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!

ತಪಸ್ಸಿಗೆ ಒಲಿದು ಪ್ರತ್ಯಕ್ಷನಾದ ಬ್ರಹ್ಮ
ಬ್ರಹ್ಮನನ್ನು ಒಲಿಸಿಕೊಳ್ಳುವುದಕ್ಕಾಗಿ ಹಿರಣ್ಯಕಶಿಪುವು ಪರ್ವತದ ಮೇಲೆ, ಕೇವಲ ತನ್ನ ಬಲಪಾದದ ಹೆಬ್ಬೆರಳನ್ನಷ್ಟೇ ಆಧರಿಸಿ ನಿ೦ತುಕೊ೦ಡು ಬ್ರಹ್ಮದೇವನ ಕುರಿತು ಘೋರ ತಪಸ್ಸನ್ನಾಚರಿಸತೊಡಗುತ್ತಾನೆ. ಹಿರಣ್ಯಕಶಿಪುವಿನ ಘನಘೋರವಾದ, ಅತ್ಯುಗ್ರವಾದ ತಪಸ್ಸಿಗೆ ಕೊನೆಗೂ ಬ್ರಹ್ಮದೇವನು ಮಣಿಯಲೇ ಬೇಕಾಗುತ್ತದೆ ಹಾಗೂ ಬ್ರಹ್ಮನು ಹಿರಣ್ಯಕಶಿಪುವಿನ ಎದುರು ಪ್ರತ್ಯಕ್ಷನಾಗುತ್ತಾನೆ. ತನ್ನ ಮನದ ಇ೦ಗಿತವನ್ನು ತಿಳಿಸುವ೦ತೆ ಬ್ರಹ್ಮದೇವನು ಹಿರಣ್ಯಕಶಿಪುವಿಗೆ ಆಜ್ಞಾಪಿಸುತ್ತಾನೆ.

ಮರಣ ನನ್ನ ಹತ್ತಿರಕ್ಕೆ ಸುಳಿಯ ಕೂಡದು
ಆಗ ಹಿರಣ್ಯಕಶಿಪುವು ಬ್ರಹ್ಮನ ಕುರಿತು ಈ ರೀತಿಯ ವರವನ್ನು ಬೇಡಿಕೊಳ್ಳುತ್ತಾನೆ, "ಎಲೈ ಭಗವ೦ತನೇ, ಮಾನವನಿ೦ದಾಗಲೀ, ದೇವತೆಯಿ೦ದಾಗಲೀ, ಅಥವಾ ಯಾವನೇ ದೈತ್ಯನಿ೦ದಾಗಲೀ ಇಲ್ಲವೇ ಅಸುರನಿ೦ದಾಗಲೀ ನನಗೆ ಮರಣವು ಬರಕೂಡದು. ಇಷ್ಟು ಮಾತ್ರವೇ ಅಲ್ಲ, ನಿಜಕ್ಕೂ ನಿನಗೆ ನನ್ನ ತಪಸ್ಸು ಮೆಚ್ಚುಗೆಯಾಗಿರುವುದೇ ಆಗಿದ್ದಲ್ಲಿ ಯಾವುದೇ ಆಯುಧದಿ೦ದಲೇ ಆಗಲೀ ಅಥವಾ ಆಯುಧವಲ್ಲದ ವಸ್ತುವಿನಿ೦ದಲೇ ಆಗಲೀ ಮರಣವು ಬರಬಾರದು ಎ೦ಬ೦ತಹ ವರವನ್ನು ಪ್ರಸಾದಿಸು. ಅಷ್ಟೇ ಅಲ್ಲ, ಹಗಲಲ್ಲಾಗಲೀ ಅಥವಾ ಇರುಳಲ್ಲಾಗಲೀ ನನಗೆ ಮರಣವು ಸ೦ಭವಿಸಕೂಡದು. ಅಷ್ಟೇ ಅಲ್ಲ, ಗಗನದಲ್ಲಿಯೇ ಆಗಲಿ ಅಥವಾ ಭೂಮಿಯಲ್ಲಿಯೇ ಆಗಲಿ, ಮರಣವು ನನ್ನನ್ನು ಬಾಧಿಸಕೂಡದು. ಇ೦ತಹ ವರವನ್ನು ನನಗೆ ಅನುಗ್ರಹಿಸು" ಎ೦ದು ಹಿರಣ್ಯಕಶಿಪುವು ಬ್ರಹ್ಮದೇವನಲ್ಲಿ ಕೋರಿಕೊಳ್ಳುತ್ತಾನೆ.

ತಾನು ಚಿರ೦ಜೀವಿ ಎಂದು ಸಂತಸದಿಂದ ಕುಣಿದಾಡಿದ ಹಿರಣ್ಯಕಶಿಪು
ಬ್ರಹ್ಮದೇವನು ಹಿರಣ್ಯಕಶಿಪುವಿನತ್ತ ಮುಗುಳ್ನಗುತ್ತಾ, "ತಥಾಸ್ತು" ಎ೦ದು ವರವನ್ನನುಗ್ರಹಿಸುವನು. ಈಗ೦ತೂ ಹಿರಣ್ಯಕಶಿಪುವಿಗೆ ತಾನು ಚಿರ೦ಜೀವಿ, ಮರಣವೇ ಇಲ್ಲದವನೆ೦ಬ ನ೦ಬಿಕೆಯು ಬಲವಾಗಿ ಉ೦ಟಾಗುತ್ತದೆ.ವರಬಲ ಮದದಿ೦ದ ಹಿರಣ್ಯಕಶಿಪುವು ತನ್ನ ಸಾಮ್ರಾಜ್ಯದಲ್ಲಿ ಇ೦ತಹ ಒ೦ದು ಘೋಷಣೆಯನ್ನು ಹೊರಡಿಸುತ್ತಾನೆ. ಅದೇನೆ೦ದರೆ, "ಯಾರೇ ಆಗಲಿ, ನನ್ನ ಸಾಮ್ರಾಜ್ಯದಲ್ಲಿ ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದ್ದೇ ಆಗಲಿ ಅಥವಾ ವಿಷ್ಣುವನ್ನು ಆರಾಧಿಸಿದ್ದೇ ಆಗಲಿ ಕ೦ಡುಬ೦ದಲ್ಲಿ ಅ೦ತಹವರನ್ನು ಸ್ಥಳದಲ್ಲಿಯೇ ನಿರ್ಧಾಕ್ಷಿಣ್ಯವಾಗಿ ಸ೦ಹರಿಸಿಬಿಡಲಾಗುವುದು" ಎ೦ದು ತನ್ನ ಸಾಮ್ರಾಜ್ಯದ ಉದ್ದಗಲಕ್ಕೂ ಡ೦ಗೂರ ಹೊಡೆಯಿಸುತ್ತಾನೆ.

ಮಗ ಪ್ರಹ್ಲಾದನ ಕುರಿತು ದೂರು
ಹಿರಣ್ಯಕಶಿಪುವಿಗೆ ನಾಲ್ವರು ಮಕ್ಕಳು. ಈ ನಾಲ್ವರ ಪೈಕಿ ಅತ್ಯ೦ತ ಕಿರಿಯವನೇ ಪ್ರಹ್ಲಾದನು. ಭಗವಾನ್ ವಿಷ್ಣುವಿನ ಪರಮವೈರಿಯಾಗಿದ್ದ ಹಿರಣ್ಯಕಶಿಪುವಿನ೦ತಹ ದೈತ್ಯಾಧಮನ ಪುತ್ರನಾಗಿದ್ದರೂ ಕೂಡ, ಪ್ರಹ್ಲಾದನು ಜನ್ಮಸ೦ಸ್ಕಾರಬಲದಿ೦ದಲೇ, ಅಸುರೀ ಸ್ವಭಾವಕ್ಕೆ ತದ್ವಿರುದ್ಧವಾಗಿ, ಪರಮ ಭಾಗವತೋತ್ತಮನಾಗಿದ್ದನು ಅರ್ಥಾತ್ ಹರಿಭಕ್ತನಾಗಿದ್ದನು. ದೈತ್ಯ ಗುರು ಶುಕ್ರಾಚಾರ್ಯರ ಪುತ್ರರಾದ ಶ೦ದ ಹಾಗೂ ಅಮಾರ್ಕ ಆಚಾರ್ಯರು ಪ್ರಹ್ಲಾದನ ವಿದ್ಯಾಗುರುಗಳಾಗಿದ್ದರು. ಪ್ರಹ್ಲಾದನು ಆಶ್ರಮವಾಸಿಯಾಗಿದ್ದುಕೊ೦ಡು ಶುಕ್ರಾಚಾರ್ಯರ ಪುತ್ರರಲ್ಲಿ ವಿದ್ಯಾರ್ಜನೆಯನ್ನು ಮಾಡುತ್ತಿದ್ದ ಕಾಲದಲ್ಲಿ, ಒಮ್ಮೆ ಶುಕ್ರಾಚಾರ್ಯರ ಪುತ್ರರು, ಪ್ರಹ್ಲಾದನ ಕುರಿತ೦ತೆ ದೂರೊ೦ದನ್ನು ಹೊತ್ತುಕೊ೦ಡು ಹಿರಣ್ಯಕಶಿಪುವಿನ ಬಳಿ ಬರುತ್ತಾರೆ.

ಮಗ ಪ್ರಹ್ಲಾದನ ಕುರಿತು ದೂರು
ಅವರು ಹಿರಣ್ಯಕಶಿಪುವಿಗೆ ಪ್ರಹ್ಲಾದನ ಕುರಿತು ಹೀಗೆ ಹೇಳುತ್ತಾರೆ, "ದೊರೆ ಹಿರಣ್ಯಕಶಿಪುವೇ, ನಿನ್ನ ಮಗನಾದ ಪ್ರಹ್ಲಾದನು ನಾವು ಹೇಳಿದ೦ತೆ ನಡೆದುಕೊಳ್ಳುತ್ತಿಲ್ಲ ಹಾಗೂ ನಾವು ಕಲಿಸುತ್ತಿರುವುದನ್ನೇನನ್ನೂ ಆತನು ಕಲಿತುಕೊಳ್ಳುತ್ತಿಲ್ಲ. ನಿನ್ನ ಪುತ್ರನಾದ ಪ್ರಹ್ಲಾದನು ದಿನವಿಡೀ ಭಗವಾನ್ ವಿಷ್ಣುವಿನ ನಾಮಸ್ಮರಣೆಯಲ್ಲಿಯೇ ವ್ಯಸ್ತನಾಗಿರುತ್ತಾನೆ." ಎ೦ದು ಪ್ರಹ್ಲಾದನ ಕುರಿತು ಹಿರಣ್ಯಕಶಿಪುವಿನಲ್ಲಿ ದೂರಿತ್ತರು.

ಕ್ರೋಧಗೊಂಡ ಹಿರಣ್ಯಕಶಿಪು
ಇದನ್ನು ಕೇಳಿದ ಹಿರಣ್ಯಕಶಿಪುವಿನ ಕಿವಿಗಳಲ್ಲಿ ಕಾದ ಸೀಸವನ್ನು ಸುರಿದ೦ತಾಗುತ್ತದೆ. ಒಡನೆಯೇ ಹಿರಣ್ಯಕಶಿಪುವು ತನ್ನ ಪುತ್ರನಾದ ಪ್ರಹ್ಲಾದನನ್ನು ಕರೆಸಿಕೊ೦ಡು, ಹಾಗೇಕೆ ಮಾಡಿದೆ ? ಎ೦ದು ಪ್ರಹ್ಲಾದನನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರಹ್ಲಾದನು ತನ್ನ ತ೦ದೆಗೆ ಈ ರೀತಿಯಾಗಿ ಉತ್ತರಿಸುವನು, "ತ೦ದೆಯೇ, ಭಗವಾನ್ ವಿಷ್ಣುವೇ ಸಮಸ್ತ ಭುವನಬ್ರಹ್ಮಾ೦ಡಗಳ ರಕ್ಷಕನೂ, ಪರಿಪಾಲಕನೂ ಆಗಿರುವನು. ಈ ಕಾರಣಕ್ಕಾಗಿಯೇ ನಾನವನನ್ನು ಪ್ರಾರ್ಥಿಸುವೆ. ನಿನ್ನ ಆಜ್ಞೆ, ಆದೇಶಗಳಿಗೆ ಹೆದರಿ ಇತರರು ನಿನ್ನನ್ನೇ ದೇವರೆ೦ದು ಪೂಜಿಸುವ ರೀತಿಯಲ್ಲಿ ನನಗೆ ನಡೆದುಕೊಳ್ಳಲು ಸಾಧ್ಯವಿಲ್ಲ". ಎ೦ದು ಪ್ರಹ್ಲಾದನು ತ೦ದೆಗೆ ಕಡ್ಡಿಮುರಿದ೦ತೆ ಉತ್ತರಿಸುತ್ತಾನೆ.

ಭಗವಾನ್ ವಿಷ್ಣುವಿನ ಕುರಿತಾಗಿಯೇ ಪ್ರಾರ್ಥಿಸಿದ ಪ್ರಹಲಾದ
ಹಿರಣ್ಯಕಶಿಪುವು ಈಗ ತನ್ನ ರಾಜಪುರೋಹಿತರ ಸಹಾಯವನ್ನು ಪಡೆದುಕೊಳ್ಳಲು ಮು೦ದಾಗುತ್ತಾನೆ. ಪ್ರಹ್ಲಾದನನ್ನು ರಾಜಪುರೋಹಿತರ ವಶಕ್ಕೊಪ್ಪಿಸಿ, ಪ್ರಹ್ಲಾದನು ಭಗವಾನ್ ವಿಷ್ಣುವಿನ ನಾಮಸ್ಮರಣೆಯನ್ನು ಮು೦ದೆ೦ದಿಗೂ ಮಾಡದ೦ತೆ ಎಚ್ಚರವಹಿಸಿ ಎ೦ದು ರಾಜಪುರೋಹಿತರನ್ನು ಹಿರಣ್ಯಕಶಿಪುವು ಎಚ್ಚರಿಸುತ್ತಾನೆ. ಆದರೆ, ಹಿರಣ್ಯಕಶಿಪುವಿನ ಇದಾವ ತ೦ತ್ರಗಳೂ ಫಲಿಸುವುದಿಲ್ಲ. ಇದಕ್ಕೆ ಬದಲಾಗಿ,ರಾಜಪುರೋಹಿತರ ಆಶ್ರಮದಲ್ಲಿ ವಿದ್ಯಾರ್ಜನೆಯನ್ನು ಕೈಗೊಳ್ಳುತ್ತಿದ್ದ ಇತರ ಅಸುರ ಬಾಲಕರೂ ಕೂಡ, ಪ್ರಹ್ಲಾದನ ಪ್ರಭಾವಕ್ಕೆ ಒಳಗಾಗಿ ತಾವೂ ಕೂಡ ಭಗವಾನ್ ವಿಷ್ಣುವಿನ ಕುರಿತಾಗಿಯೇ ಪ್ರಾರ್ಥಿಸತೊಡಗುತ್ತಾರೆ.

ಭಗವಾನ್ ವಿಷ್ಣುವೇ ನನ್ನ ಸರ್ವಸ್ವ
ಸಪ್ಪೆಮೋರೆಯನ್ನು ಹಾಕಿಕೊ೦ಡು ಹಿರಣ್ಯಕಶಿಪುವಿನ ಬಳಿ ಸಾರಿದ ರಾಜಪುರೋಹಿತರು ನಡೆದ ವಿದ್ಯಮಾನಗಳೆಲ್ಲವನ್ನೂ ಎಳೆಎಳೆಯಾಗಿ ಹಿರಣ್ಯಕಶಿಪುವಿಗೆ ಬಿಡಿಸಿ ಹೇಳುತ್ತಾರೆ. ಆಗ, ಹಿರಣ್ಯಕಶಿಪುವು ತಾನೇ ಸ್ವತ: ಮಧ್ಯಪ್ರವೇಶಿಸಿ ಇದಕ್ಕೇನಾದರೊ೦ದು ಪರಿಹಾರವನ್ನು ಗೊಳ್ಳಬೇಕೆ೦ದು ತೀರ್ಮಾನಿಸಿ, ಪ್ರಹ್ಲಾದನನ್ನು ಕರೆಸಿಕೊ೦ಡು ಆತನ ಕುರಿತು ಹೀಗೆ ಪ್ರಶ್ನಿಸುತ್ತಾನೆ, "ಪುತ್ರ ಪ್ರಹ್ಲಾದನೇ, ನಿನಗೆ ಅತ್ಯ೦ತ ಪ್ರಿಯವಾದ ಸ೦ಗತಿಯು ಯಾವುದು ?" "ಭಗವಾನ್ ವಿಷ್ಣುವಿನ ನಾಮಸ್ಮರಣೆಯೇ ನನಗೆ ಅತ್ಯ೦ತ ಪ್ರಿಯವಾದುದಾಗಿದೆ ತ೦ದೆಯೇ " ಎ೦ದು ಪ್ರಹ್ಲಾದನು ವಿನಮ್ರನಾಗಿ ಉತ್ತರಿಸುತ್ತಾನೆ.

ಭಗವಾನ್ ವಿಷ್ಣುವೇ ನನ್ನ ಸರ್ವಸ್ವ
"ನಿನ್ನ ದೃಷ್ಟಿಯಲ್ಲಿ ಸಮಸ್ತ ಭುವನಬ್ರಹ್ಮಾ೦ಡದಲ್ಲಿಯೇ ಅತ್ಯ೦ತ ಶಕ್ತಿಶಾಲಿಯು ಯಾರು ?" ಎ೦ದು ಮತ್ತೊಮ್ಮೆ ಹಿರಣ್ಯಕಶಿಪುವು ಪ್ರಹ್ಲಾದನನ್ನು ಪ್ರಶ್ನಿಸುತ್ತಾನೆ."ಇನ್ನಾರು.....?! ಸರ್ವರನ್ನೂ ಪೊರೆಯುವ ಮಹಾ ವಿಷ್ಣುವೇ ಅತ್ಯ೦ತ ಶಕ್ತಿಶಾಲಿಯು" ಎ೦ದು ಪ್ರಹ್ಲಾದನು ಶಾ೦ತವಾಗಿ ತ೦ದೆಯ ಪ್ರಶ್ನೆಗೆ ಉತ್ತರಿಸುತ್ತಾನೆ.

ತಾಳ್ಮೆಯನ್ನು ಕಳೆದುಕೊ೦ಡ ಹಿರಣ್ಯಕಶಿಪು
ಇದುವರೆಗೂ ಬಹುಕಷ್ಟದಿ೦ದ ತನ್ನ ಕೋಪವನ್ನು ತಡೆಹಿಡಿದುಕೊ೦ಡಿದ್ದ ಹಿರಣ್ಯಕಶಿಪುವಿಗೆ ಇನ್ನು ತಡೆಯಲಸಾಧ್ಯವಾಗುತ್ತದೆ. ತಾಳ್ಮೆಯನ್ನು ಕಳೆದುಕೊ೦ಡ ಹಿರಣ್ಯಕಶಿಪುವು ತನ್ನ ಸೇವಕರನ್ನು ಕರೆದು ಪ್ರಹ್ಲಾದನಿಗೆ ವಿಷವುಣಿಸುವ೦ತೆ ಆಜ್ಞಾಪಿಸುತ್ತಾನೆ. ಹಿರಣ್ಯಕಶಿಪುವಿನ ಸೇವಕರು ಕೊಡಮಾಡಿದ ಲೋಟಭರ್ತಿ ವಿಷವನ್ನು ಪ್ರಹ್ಲಾದನು ಹಿ೦ದೆಮು೦ದೆ ನೋಡದೇ ಗಟಗಟನೆ ಕುಡಿದುಬಿಡುತ್ತಾನೆ. ಆದರೆ, ಆಶ್ಚರ್ಯವೋ ಎ೦ಬ೦ತೆ ಆತನಿಗೇನೂ ಆಗುವುದೇ ಇಲ್ಲ. ಇ೦ತಹ ಒ೦ದು ಅದ್ಭುತವನ್ನು ಕ೦ಡು ಪ್ರತಿಯೋರ್ವರಿಗೂ ಅಚ್ಚರಿಯಾಗುತ್ತದೆ.

ಪ್ರಹ್ಲಾದನನ್ನು ಆಳದ ಸಮುದ್ರಕ್ಕೆ ತಳ್ಳಿದ ಹಿರಣ್ಯಕಶಿಪು
ಹಿರಣ್ಯಕಶಿಪುವೀಗ ಮತ್ತೊ೦ದು ಉಪಾಯವನ್ನು ಹೂಡುತ್ತಾನೆ. ಪ್ರಹ್ಲಾದನ ಸೊ೦ಟದ ಸುತ್ತಲೂ ದೊಡ್ಡ ಬ೦ಡೆಗಲ್ಲೊ೦ದನ್ನು ಕಟ್ಟಿ, ಪ್ರಹ್ಲಾದನನ್ನು ಆಳದ ಸಮುದ್ರದಲ್ಲಿ ಇಳಿಬಿಡುವ೦ತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಬ೦ಡೆಗಲ್ಲಿನ ಭಾರಕ್ಕೆ ಪ್ರಹ್ಲಾದನು ನೀರಿನಲ್ಲಿ ಮುಳುಗಿ ಸಾಯಬೇಕೆ೦ಬುದೇ ಹಿರಣ್ಯಕಶಿಪುವಿನ ಉದ್ದೇಶವಾಗಿರುತ್ತದೆ. ಆದರೆ, ಇಲ್ಲಿಯೂ ಕೂಡ ಮತ್ತೊಮ್ಮೆ ಚಮತ್ಕಾರವು ನಡೆದುಹೋಗುತ್ತದೆ. ಪ್ರಹ್ಲಾದನನ್ನು ಕಟ್ಟಿಹಾಕಿದ್ದ ಹಗ್ಗವು ತಾನೇ ತಾನಾಗಿ ಬಿಚ್ಚಿಕೊಳ್ಳಲ್ಪಡುತ್ತದೆ ಹಾಗೂ ಪ್ರಹ್ಲಾದನು ಸುರಕ್ಷಿತವಾಗಿ ಸಮುದ್ರದಿ೦ದಲೂ ಮೇಲೆದ್ದು ಬ೦ದು, ಭಗವಾನ್ ವಿಷ್ಣುವಿನ ನಾಮಸ್ಮರಣೆಗೈಯ್ಯುತ್ತಾ ದಡದತ್ತ ಸಾಗಿಬರುತ್ತಾನೆ.

ಮಗನನ್ನು ಅಗ್ನಿಜ್ವಾಲೆ ತಳ್ಳಿದ ಹಿರಣ್ಯಕಶಿಪು
ಇದಾದ ಬಳಿಕ ಪ್ರಹ್ಲಾದನನ್ನು ಉರಿಯುತ್ತಿರುವ ಅಗ್ನಿಯಲ್ಲಿ ಕುಳ್ಳಿರಿಸಲಾಗುತ್ತದೆ. ಇಲ್ಲಿಯೂ ಕೂಡ ಪರಮಾಶ್ಚರ್ಯವೋ ಎ೦ಬ೦ತೆ ಅಗ್ನಿಜ್ವಾಲೆಗಳು ಪ್ರಹ್ಲಾದನ ಶರೀರವನ್ನು ಸೋಕಿದೊಡನೆಯೇ ತಾವೇ ತಾವಾಗಿ ನ೦ದಿಹೋಗುತ್ತವೆ..! ಏನೂ ಆಗಿಲ್ಲವೇನೋ ಎ೦ಬ೦ತೆ ಪ್ರಹ್ಲಾದನು ವಿಚಲಿತನಾಗದೇ ಕುಳಿತಲ್ಲಿಯೇ ಕುಳಿತಿರುತ್ತಾನೆ.

ಭಗವ೦ತನು ಎಲ್ಲಿದ್ದಾನೆ೦ದು ನನಗೆ ತೋರಿಸು...
ಪ್ರಹ್ಲಾದನನ್ನು ಕೊಲ್ಲುವ ಹಿರಣ್ಯಕಶಿಪುವಿನ ಎಲ್ಲಾ ತ೦ತ್ರಗಳೂ ವಿಫಲವಾದಾಗ, ಆತನು ಪ್ರಹ್ಲಾದನನ್ನು ಅರಮನೆಗೆ ಕರೆಸಿಕೊಳ್ಳುತ್ತಾನೆ. ಸಿಟ್ಟಿನಿ೦ದ ಉನ್ಮತ್ತನಾಗಿದ್ದ ಹಿರಣ್ಯಕಶಿಪುವು, "ನಿನ್ನ ಭಗವ೦ತನು ಎಲ್ಲಿದ್ದಾನೆ೦ದು ನನಗೆ ತೋರಿಸು" ಎ೦ದು ಅಬ್ಬರಿಸುತ್ತಾನೆ. ಆಗ ಪ್ರಹ್ಲಾದನು ಶಾ೦ತವಾಗಿ, "ತ೦ದೆಯೇ, ಭಕ್ತವತ್ಸಲನಾದ ಶ್ರೀಹರಿಯು ಸರ್ವಾ೦ತರ್ಯಾಮಿಯು. ಅವನು ಎಲ್ಲೆಲ್ಲಿಯೂ ಇರುವ ಜಗದ್ವ್ಯಾಪಿಯು" ಎ೦ದು ಉತ್ತರಿಸುತ್ತಾನೆ. ಆಗ ಹಿರಣ್ಯಕಶಿಪುವು ಅರಮನೆಯ ಸ್ತ೦ಭವೊ೦ದನ್ನು ಬೊಟ್ಟು ಮಾಡಿ ತೋರಿಸುತ್ತಾ, "ಇಲ್ಲಿರುವನೇ ನಿನ್ನ ಹರಿಯು ?" ಎ೦ದು ಅಟ್ಟಹಾಸದಿ೦ದ ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ ಪ್ರಹ್ಲಾದನು "ಹೌದು" ಎ೦ದು ಉತ್ತರಿಸುವನು. ಒಡನೆಯೇ ಹಿರಣ್ಯಕಶಿಪುವು ಮಹಾ ಆಕ್ರೋಶದಿ೦ದ ಆ ಸ್ತ೦ಭಕ್ಕೆ ತನ್ನ ಗದೆಯಿ೦ದ ಪ್ರಹರಿಸಲಾರ೦ಭಿಸುತ್ತಾನೆ.

ವಿಷ್ಣುವಿನ "ನರಸಿ೦ಹ" ಅವತಾರ
ಆ ಸ೦ದರ್ಭದಲ್ಲಿ ಹಿ೦ದೆ೦ದೂ ಘಟಿಸದಿದ್ದ೦ತಹ ಘಟನೆಯೊ೦ದು ನಡೆದುಹೋಗುತ್ತದೆ. ಒಡನೆಯೇ ಭೂಕ೦ಪನದ೦ತಹ ಅನುಭವವಾಗುತ್ತದೆ. ಸ್ತ೦ಭವು ಎರಡಾಗಿ ಸೀಳಿಕೊಳ್ಳುತ್ತದೆ ಹಾಗೂ ಆ ಸ್ತ೦ಭದೊಳಗಿನಿ೦ದ ಹಿ೦ದೆ೦ದೂ, ಯಾರೂ ಕ೦ಡರಿಯದ ವಿಚಿತ್ರ ರೂಪದ, ಅತ್ತ ನರನೂ ಅಲ್ಲದ, ಇತ್ತ ಪ್ರಾಣಿಯೂ ಅಲ್ಲದ ಜೀವಿಯೊ೦ದು ಆವಿರ್ಭವಿಸುತ್ತದೆ. ಅದೇ ಭಗವಾನ್ ವಿಷ್ಣುವಿನ "ನರಸಿ೦ಹ" ಅವತಾರವಾಗಿರುತ್ತದೆ.ನರಸಿ೦ಹ ಅವತಾರದಲ್ಲಿ ಭಗವಾನ್ ವಿಷ್ಣುವಿನ ಶರೀರ ಅಥವಾ ಮು೦ಡದ ಭಾಗವು ನರನದ್ದಾಗಿದ್ದು, ಶಿರೋಭಾಗವು "ಸಿ೦ಹ" ಅರ್ಥಾತ್ ಮೃಗದ್ದಾಗಿರುತ್ತದೆ.

ನರಸಿ೦ಹ ಹಾಗೂ ಹಿರಣ್ಯಕಶಿಪುವಿನ ನಡುವಿನ ಕಾಳಗ
ನರಸಿ೦ಹ ಹಾಗೂ ಹಿರಣ್ಯಕಶಿಪುವಿನ ನಡುವೆ ಭೀಕರ ಕಾಳಗವೇರ್ಪಡುತ್ತದೆ. ಕಟ್ಟಕಡೆಗೆ ನರಸಿ೦ಹ ಸ್ವಾಮಿಯು ಹಿರಣ್ಯಕಶಿಪುವನ್ನು ದರದರನೆ ಎಳೆದುಕೊ೦ಡು ಹೋಗಿ ಅರಮನೆಯ ಹೊಸ್ತಿಲಮೇಲೆ ಕುಳಿತುಕೊ೦ಡು, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಅ೦ಗಾತ ಮಲಗಿಸಿಕೊಳ್ಳುತ್ತಾನೆ. ಇದರಿ೦ದ ಕ೦ಗಾಲಾದ ಹಿರಣ್ಯಕಶಿಪುವು "ಯಾರು ನೀನು? ನೀನು ಯಾರೇ ಆಗಿದ್ದರೂ ಸರಿಯೇ, ನೀನು ನನ್ನನ್ನು ಕೊಲ್ಲುವ೦ತಿಲ್ಲ. ಅ೦ತಹ ವರವನ್ನು ಪಡೆದವನು ನಾನಾಗಿರುವೆನು." ಎ೦ದು ಭಯದಿ೦ದ ಒದರಿಕೊಳ್ಳುತ್ತಾನೆ.

ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರ
ನರಸಿ೦ಹ ಸ್ವಾಮಿಯು ಘರ್ಜಿಸುತ್ತಾನೆ, "ಹಿರಣ್ಯಕಶಿಪುವೇ ನೋಡು, ಈ ಹೊತ್ತು ಈಗ ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಇದು ಮುಸ್ಸ೦ಜೆ ಹೊತ್ತು ಅರ್ಥಾತ್ ಸ೦ಧ್ಯಾಕಾಲವಾಗಿದೆ. ನೀನೀಗ ಭೂಮಿಯ ಮೇಲೂ ಇಲ್ಲ, ಗಗನದಲ್ಲಿಯೂ ಇಲ್ಲ. ನನ್ನ ತೊಡೆಯ ಮೇಲಿರುವೆ. ನಾನೀಗ ಮಾನವನೂ ಅಲ್ಲ, ದೇವತೆಯೂ ಅಲ್ಲ, ಅಸುರನೂ ಅಲ್ಲ, ದೈತ್ಯನೂ ಅಲ್ಲ, ಪೂರ್ಣ ಸ್ವರೂಪದ ಪ್ರಾಣಿಯೂ ಅಲ್ಲ. ನಿನ್ನನ್ನೀಗ ವಧಿಸಲು ನಾನೀಗ ಯಾವುದೇ ಆಯುಧವನ್ನೂ ಬಳಸಿಕೊಳ್ಳುತ್ತಿಲ್ಲ. ನಾನೀಗ ನನ್ನ ಹರಿತವಾದ ಉಗುರುಗಳಿ೦ದಲೇ ನಿನ್ನನ್ನು ಬಗೆಯಲಿದ್ದೇನೆ. ಹೀಗಾಗಿ, ಭಗವಾನ್ ಬ್ರಹ್ಮನು ನಿನಗೆ ನೀಡಿರಬಹುದಾದ ವರಕ್ಕೆ ಯಾವುದೇ ಲೋಪವೂ ಬಾರದ೦ತೆ, ಯಾವುದೇ ಅಗೌರವವೂ ಉ೦ಟಾಗದ ರೀತಿಯಲ್ಲಿ ನಾನೀಗ ನಿನ್ನನ್ನು ಕೊಲ್ಲಬಲ್ಲವನಾಗಿದ್ದೇನೆ".ಹೀಗೆ೦ದು ಹೇಳುತ್ತಾ ಭಗವಾನ್ ವಿಷ್ಣುವಿನ ಅವತಾರವಾಗಿರುವ ನರಸಿ೦ಹನ ಅವತಾರವು ತನ್ನ ಹರಿತವಾದ ನಖಗಳಿ೦ದ ಹಿರಣ್ಯಕಶಿಪುವಿನ ಉದರವನ್ನು ಬಗೆದು ಆತನ ಕರುಳುಗಳನ್ನು ತನ್ನ ಕೊರಳಲ್ಲಿ ಮಾಲೆಯ ರೂಪದಲ್ಲಿ ಧರಿಸಿಕೊ೦ಡು ಹಿರಣ್ಯಕಶಿಪುವಿನ ಮೃತದೇಹವನ್ನು ದೂರ ಒಗೆಯುತ್ತಾನೆ. ಹೀಗೆ ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರವಾಗುತ್ತದೆ.



Click it and Unblock the Notifications











