ಕನ್ನಡಿಗರೇ ನಾವು ಈ 5 ತಪ್ಪುಮಾಡದಿದ್ದರೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆ, ಕನ್ನಡ ಎಂಬ ಭಾಷೆಯನ್ನು ಹಲವು ಶೈಲಿಯಲ್ಲಿ ಬಳಸುತ್ತೇವೆ. ಮೈಸೂರು ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಉತ್ತರ ಕರ್ನಾಟಕ ಕನ್ನಡ... ಹೀಗೆ ಒಂದೊಂದು ಪ್ರಾಂತ್ಯಕ್ಕೆ ಹೋದಾಗ ಕನ್ನಡವನ್ನೇ ಕೇಳುತ್ತೇವೆ, ಆದರೆ ಅಲ್ಲಿಯ ಭಾಷಯ ಸೊಗಡು ಭಿನ್ನವಾಗಿರುತ್ತದೆ.

ನಮ್ಮ ಕನ್ನಡ ಭಾಷೆಯಲ್ಲಿ ಇಷ್ಟೆಲ್ಲಾ ವೈವಿಧ್ಯತೆಯಿದ್ದರೂ ಬರಿಯಲು ಮಾತ್ರ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿಯ ಕನ್ನಡ ಬಳಸುತ್ತೇವೆ. ಇಷ್ಟೆಲ್ಲಾ ಸಮೃದ್ಧಿಯಾದ ಕನ್ನಡವನ್ನು ಕನ್ನಡಿಗರೇ ನಿರ್ಲಕ್ಷ್ಯ ಮಾಡುತ್ತಿದ್ದೀರಾ? ಹೌದು ಇತ್ತೀಚಿನ ಪರಿಸ್ಥಿತಿ ನೋಡಿದರೆ ಆ ರೀತಿ ಅನಿಸದೆ ಇರಲ್ಲ.

ಕರ್ನಾಟಕದಲ್ಲಿ ಕನ್ನಡ ಭಾಷೆಯ ಜೊತೆ ಇತರ ಭಾಷೆಗಳು ತಮ್ಮ ಪ್ರಾಬಲ್ಯ ಬೀರಲು ಪ್ರಯತ್ನಿಸುತ್ತಿದೆ, ಅವುಗಳಿಗೆ ನಾವೇ ಅನುವು ಮಾಡಿ ಕೊಡುತ್ತಿದ್ದೇವೆ, ಕನ್ನಡಿಗರೇ ನಾವು ಈ 5 ತಪ್ಪುಗಳನ್ನು ಮಾಡುವುದನ್ನು ಬಿಟ್ಟರೆ ನಮ್ಮ ಕನ್ನಡ ಮತ್ತಷ್ಟು ಬೆಳೆಯುವುದು.

kannada rajyotsava 2023

1. ಬೇರೆಯವರ ಜೊತೆಗೆ ಕನ್ನಡದಲ್ಲಿಯೇ ಮಾತುಕತೆ ನಡೆಸಿ
ಐಟಿ ಸಿಟಿ ಬೆಂಗಳೂರಿನಲ್ಲಿ ಕನ್ನಡ ಭಾಷೆಗಿಂತ ಇತರ ಭಾಷೆಯೇ ಹೆಚ್ಚಾಗಿ ಕೇಳಿಸುತ್ತದೆ. ಅಲ್ಲಿಯ ಮಾಲ್‌ಗಳಲ್ಲಿ ಆಂಗ್ಲ ಭಾಷೆ ಕೇಳಿಸುವಷ್ಟು ಕನ್ನಡ ಕೇಳಿಸುವುದಿಲ್ಲ. ಇನ್ನು ಕರ್ನಾಟಕದಲ್ಲಿ ಬಂದು ನೆಲೆಸಿ 10-15 ವರ್ಷವಾದರೂ ಕನ್ನಡ ಬರಲ್ಲ. ಅದೇ ಬೇರೆ ರಾಜ್ಯಗಳಿಗೆ ಹೋದಾಗ ಕೇವಲ 6 ತಿಂಗಳಿನಲ್ಲಿ ಆ ಭಾಷೆ ಕಲಿತು ಬಿಡುತ್ತಾರೆ, ಕಾರಣ ಅಲ್ಲಿಯ ಜನರು ಅವರು ಅಲ್ಲಿಯ ಸ್ಥಳೀಯ ಭಾಷೆಯನ್ನೇ ಹೆಚ್ಚಾಗಿ ಮಾತನಾಡುತ್ತಾರೆ, ಅನಿವಾರ್ಯವಾಗಿ ಆ ರಾಜ್ಯಗಳಿಗೆ ಹೋದವರು ಅಲ್ಲಿಯ ಭಾಷೆ ಕಲಿಯುತ್ತಾರೆ, ನಾವು ಕನ್ನಡಿಗರು ಅವರ ಭಾಷೆ ಕಲಿತು ಅವರ ಜೊತೆ ಮಾತನಾಡುತ್ತೇವೆ, ಆದರೆ ಅವರಿಗೆ ನಮ್ಮ ಭಾಷೆ ಕಲಿಸುವ ಪ್ರಯತ್ನ ಮಾಡಲ್ಲ.

2. ಭಾಷೆ ಕಲಿಸುವುದು ಒತ್ತಾಯ ಮಾಡುವುದು ಅಲ್ಲ
ಅವರು ಬೇರೆ ಭಾಷೆ ಮಾತನಾಡುತ್ತಿದ್ದಾರೆ ಎಂದು ನಾವು ಅವರ ಬಳಿ ಆ ಕುರಿತು ಪ್ರಶ್ನೆ ಮಾಡುವುದಲ್ಲ, ಬದಲಿಗೆ ನಾವು ಅವರ ಜೊತೆ ಮಾತನಾಡುವಾಗ ಕನ್ನಡದಲ್ಲಿಯೇ ಮಾತನಾಡಬೇಕು, ಅರ್ಥ ಆಗದಿದ್ದರೆ ಆಂಗಿಕ ಭಾಷೆ ಮೂಲಕ ತಿಳಿಸಿ, ಆವಾಗ ಅವರು ನಾವು ಹೇಳುವ ಪದಗಳನ್ನು ಗ್ರಹಿಸುತ್ತಾರೆ, ಕನ್ನಡವನ್ನು ಅರ್ಥ ಮಾಡಿಕೊಳ್ಳಲು, ಮಾತನಾಡಲು ಕಲಿಯುತ್ತಾರೆ. ನಮ್ಮ ಭಾಷೆಯನ್ನು ಪ್ರೀತಿಯಿಂದ ಕಲಿಸುವ ಪ್ರಯತ್ನ ಮಾಡೋಣ.

3. ಮಾಲ್‌ಗಳಿಗೆ, ಪಿಜ್ಜಾ ಹಟ್, ಬರ್ಗರ್‌ ಶಾಪ್, ರೆಸ್ಟೋರೆಂಟ್‌ಗಳಿಗೆ ಹೋದಾಗ ಇಂಗ್ಲಿಷ್‌ನಲ್ಲಿ ಮಾತನಾಡುವುದು
ಸಾಮಾನ್ಯವಾಗಿ ನಾವು ಹೊರಗಡೆ ಅವರು ಇಂಂಗ್ಲಿಷ್ ಅಥವಾ ಹಿಂದಿಯಲ್ಲಿ ಕೇಳುತ್ತಾರೆ, ನಾವು ಕೂಡ ಅದಕ್ಕೆ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತೇವೆ, ಇಂಗ್ಲಿಷ್‌ ಗೊತ್ತಿಲ್ಲದಿದ್ದರೆ ಒಂಥರಾ ಕೀಳೆರಿಮೆ ಅಲ್ವಾ? ಏಕೆ, ನಮ್ಮ ಕನ್ನಡ ಭಾಷೆ ಇಷ್ಟು ಚೆನ್ನಾಗಿದೆ, ಕನ್ನಡದಲ್ಲಿಯೇ ಮಾತನಾಡೋಣ, ಕನ್ನಡ ಭಾಷೆ ಮಾತನಾಡಲು ಯಾವ ಕೀಳೆರಿಮೆಯೂ ಬೇಡ. ಪಿಜ್ಜಾ, ಬರ್ಗರ್ ತಿನ್ನಲು ಹೋದಾಗ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ, ಮಾಲ್‌ಗಳಿಗೆ ಹೋದಾಗ ಕನ್ನಡದಲ್ಲಿಯೇ ಮಾತನಾಡಿ, ನಮ್ಮ ಭಾಷೆ ನಮ್ಮ ಹೆಮ್ಮೆ.

4. ಮನೆಯಲ್ಲಿ ಮಾತೃಭಾಷೆ ಕನ್ನಡ ಮಾತನಾಡಿ
ಸಾಕಷ್ಟು ಮನೆಗಳಲ್ಲಿ ಪೋಷಕರು ಮಕ್ಕಳೊಂದಿಗೆ ಇಂಗ್ಲಿಷ್‌ ಮಾತನಾಡುತ್ತಾರೆ. ನಮ್ಮ ಮಕ್ಕಳ ಜೊತೆ ಕನ್ನಡದಲ್ಲಿ ನಾವೇ ಮಾತನಾಡದಿದ್ದರೆ ಅವರಲ್ಲಿ ಭಾಷಾ ಹಿಡಿತ ಬರುವುದು ಕಷ್ಟ. ಅಲ್ಲದೆ ನಮ್ಮ ಮನಸ್ಸಿನ ಭಾವನೆಗಳನ್ನು ನಮ್ಮ ಮಾತೃಭಾಷೆಯಲ್ಲಿ ಹೇಳುವಂತೆ ಇಂಗ್ಲಿಷ್‌ನಲ್ಲಿ ಹೇಳಲು ಸಾಧ್ಯವಿಲ್ಲ, ಮಕ್ಕಳು ಶಾಲೆಗೆ ಹೋದಾಗ ಇಂಗ್ಲಿಷ್ ಕಲಿಯುತ್ತಾರೆ. ನೀವು ಇಂಗ್ಲಿಷ್‌ನಲ್ಲಿ ಮಾತನಾಡಲೇಬೇಡಿ ಎಂದಲ್ಲ, ಆದರೆ ಮಕ್ಕಳಿಗೆ ಕನ್ನಡವೇ ಬರದಷ್ಟು ಇಂಗ್ಲಿಷ್‌ ಮಾತನಾಡಬೇಡಿ.

5. ಕನ್ನಡ ಬೋರ್ಡ್‌ಗಳಲ್ಲಿ ತಪ್ಪಿದ್ದರೆ ಧ್ವನಿಯೆತ್ತಿ
ಕೆಲವು ಬೋರ್ಡ್‌ಗಳನ್ನು ನೋಡಿದರೆ ತಲೆ ತಿರುಗಿ ಹೋಗುತ್ತದೆ. ಗೂಗಲ್‌ ಟ್ರಾನ್ಸ್‌ಲೇಷನ್‌ ಮಾಡಿ ಕನ್ನಡ ಬೋರ್ಡ್ ಹಾಕಿರುತ್ತಾರೆ, ಅಲ್ಲದೆ ಬೋರ್ಡ್‌ಗಳಲ್ಲಿ ತುಂಬಾನೇ ತಪ್ಪುಗಳಿರುತ್ತದೆ, ಆದ್ರೂ ನಾವು ಸುಮ್ಮನಾಗುತ್ತೇವೆ, ಅವುಗಳನ್ನು ಸರಿಪಡಿಸಲು ಸೂಚಿಸಿ.
ಈ ರೀತಿ ನಾವು ನಮ್ಮ ಭಾಷೆಗೆ ಅಭಿಮಾನ ತೋರಿಸಿದರೆ ನಮ್ಮ ಭಾಷೆಗೆ ಯಾವ ಆಪತ್ತೂ ಬರಲ್ಲ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

English summary

kannada rajyotsava: We Kannadige Should Not Do These 5 Mistakes

kannada rajyotsava 2023: For Kannada language we should not do these 5 mistakes, read on..
X
Desktop Bottom Promotion