Just In
Don't Miss
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ತೀಕ ಕೃಷ್ಣ ದ್ವಾದಶಿಗೆ ಸ್ಪೆಷಲ್ ಸಾರು
ನಾಳೆ ದ್ವಾದಶಿಗೆ ಹೊಸ ಟೈಪ್ ಬೇಳೆ ಸಾರು. ಆದರೆ ಅದೇ, ಮಾಡಿದ್ದೇ ಮಾಡೋ ಸಾರಲ್ಲ. ಬೇಳೆ ಬೇಯಿಸಿ ಉಪ್ಪು ಖಾರ ಹುಳಿ ಹಾಕಿ ಸ್ಟೌವ್ ನಿಂದ ಪಾತ್ರೆ ಕೆಳಗಿಳಿಸಿ ಕೈತೊಳೆದುಕೊಂಡು ಜೀ ಕನ್ನಡ ಆನ್ ಮಾಡಿ ಬದುಕು ಜಟಕಾ ಬಂಡಿ ಸೀರಿಯಲ್ಲಿಗೆ ಕಣ್ಣು ಕೀಲಿಸಿ ಕೂಡುವವರಿಗೆ ಇವತ್ತಿನ ಸಾರು ರೆಸಿಪಿ ಹೇಳಿಮಾಡಿಸಿದ ಕಿವಿಮಾತಲ್ಲ. ಈ ಸ್ಪೆಷಲ್ ಸಾರು ನಿಮಗೆ ಮಾತ್ರ. ಭಾನುವಾರದ ರಜೆಗಾಗಿ ಕಾಯುತ್ತಿರುವ ಶಬರಿಯರಿಗೆ ಮಾತ್ರ.
ಬೇಕಾಗುವ ಪದಾರ್ಥಗಳ ಪಟ್ಟಿಯಲ್ಲಿ ಯಥಾಪ್ರಕಾರ ತೊಗರಿ ಬೇಳೆ, ಹುಣಿಸೆ ಹಣ್ಣು, ಸಾರಿನ ಪುಡಿ, ಉಪ್ಪು, ಟೊಮೆಟೋ, ತುಪ್ಪ, ತೆಂಗಿನತುರಿ, ಜೀರಿಗೆ ಇರಲಿ. ಸಾರು ಪಾತ್ರೆ ತುಂಬಾ ಮಾಡಬೇಕಾ? ಅಥವಾ ಸ್ವಲ್ಪನೇ ಸಾಕಾ? ಎಂಬ ಪ್ರಶ್ನೆಯೇ ಇಲ್ಲ. ನಿಮ್ಮ ಮನೆಯಲ್ಲಿ ಊಟಕ್ಕೆ ಹಾಜರಾಗುವ ಅನ್ನ ಸಾರು ಭಕ್ತರ ಲೆಕ್ಕದ ಮೇಲೆ ಪ್ರಮಾಣ ಅವಲಂಬಿತ.
ಹಂತ 1) ಕುಕ್ಕರಿನಲ್ಲಿ ಬೇಳೆ ಬೇಯಲಿ. ಬೆಂದು ಕರಗಿರಲಿ; ಹಂತ 2) ಒಗ್ಗರಣೆ ಸೌಟಿನಲ್ಲಿ ತುಪ್ಪ, ಜೀರಿಗೆ, ಟೊಮೆಟೋ ಸ್ವಲ್ಪ ಕಾಯಿತುರಿ ಹಾಕಿ ಬಾಡಿಸಿ ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಈಕಡೆ ಇಡಿ; ಹಂತ 3) ನಿತ್ಯ ಸಾರು ಮಾಡುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಒಲೆ ಮೇಲಿಟ್ಟು ಅದು ಕುದಿಬಂದ ಮೇಲೆ ಹೆಚ್ಚಿದ ಕೊತ್ತಂಬರಿ, ಹೆಚ್ಚಿದ ಕರಿಬೇವು, ಸಾರಿನಪುಡಿ, ಉಪ್ಪು ಹಾಕಿ ಕುದಿಯುವುದಕ್ಕೆ ಬಿಡಿ; ಹಂತ 4) ಇದು ಚೆನ್ನಾಗಿ ಕುದ್ದು ಸಾರಿನ ಪುಡಿಯ ಹಸಿ ವಾಸನೆ ಆವಿಯಾದನಂತರ ಹುಣಿಸೆಹಣ್ಣಿನ ರಸ, ಚೂರು ಬೆಲ್ಲ ಹಾಕಿ ಮತ್ತೆ ಕುದಿಯಲು ಬಿಡಿ;
ಹಂತ 5) ರುಬ್ಬಿಕೊಂಡ ಟೊಮೆಟೋ ಚಟ್ನಿಯನ್ನು ಕುದಿಯುತ್ತಿರುವ ಈ ನೀರಿಗೆ ಬೆರಸಿ ಮತ್ತೆ ಕುದಿಯಲು ಬಿಡಿ. ಒಂದೊಂದೂ ಹಂತದಲ್ಲೂ ಚೆನ್ನಾಗಿ ಕುದಿಯುತ್ತಲೇ ಇರಬೇಕು.ಈ ಮೆಥೆಡ್ಡೇ ಈ ಸಾರಿನ ಬಂಡವಾಳ. ಇದೇ ವೇಳೆ, ದಟ್ಸ್ ಕನ್ನಡ ಅಡುಗೆ ರೆಸಿಪಿಗೆ ಗ್ಯಾಸ್ ಜಾಸ್ತಿ ಖರ್ಚಾಗತ್ತೆ ಎಂದು ಗೊಣಗಬಾರದು, ಪ್ಲೀಜ್.
ಕುದಿಯುತ್ತಿರುವ ಸಾರುನೀರಿಗೆ ಈಗ ಬೆಂದ ಬೇಳೆ ಕಟ್ಟನ್ನು ಸುರಿದು ಮತ್ತೆ ಕುದಿಯಲು ಬಿಡಿ. ಕೊತಕೊತ ಕುದ್ದನಂತರ ಎರಡು ಚಮಚ ತುಪ್ಪಕ್ಕೆ, ಚಮಚೆ ಜೀರಿಗೆ, ಚಿಟಿಕೆ ಇಂಗಿನ ಒಗ್ಗರಣೆ ಕೊಟ್ಟು ಸಾರಿನ ಪಾತ್ರೆಯಲ್ಲಿ ಮುಳುಗಿಸಿ. ಚುಂಯ್ ಅಂದರೆ ಸಾರು ರೆಡಿ. ಊಟಕ್ಕೆ ಇನ್ನೂ ಟೈಂ ಇದೆ ಎನ್ನುವವರು ಪುನಃ ಹೆಚ್ಚಿದ ಕೊತ್ತಂಬರಿ, ತೊಳೆದ ಹಸಿ ಕರಿಬೇವಿನ ಎಲೆಗಳನ್ನು ಸಾರಿನ ಮೇಲೆ ತೇಲಿಬಿಡಬಹುದು. ಕೊತ್ತಂಬರಿ ಅಲಂಕಾರಕ್ಕೆ, ಹಸಿ ಕರಿಬೇವು ಪರಿಮಳಕ್ಕೆ.
(ದಟ್ಸ್ ಕನ್ನಡ ಅಡುಗೆಶಾಲೆ)