Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಕಾರ್ತೀಕ ಕೃಷ್ಣ ದ್ವಾದಶಿಗೆ ಸ್ಪೆಷಲ್ ಸಾರು

ನಾಳೆ ದ್ವಾದಶಿಗೆ ಹೊಸ ಟೈಪ್ ಬೇಳೆ ಸಾರು. ಆದರೆ ಅದೇ, ಮಾಡಿದ್ದೇ ಮಾಡೋ ಸಾರಲ್ಲ. ಬೇಳೆ ಬೇಯಿಸಿ ಉಪ್ಪು ಖಾರ ಹುಳಿ ಹಾಕಿ ಸ್ಟೌವ್ ನಿಂದ ಪಾತ್ರೆ ಕೆಳಗಿಳಿಸಿ ಕೈತೊಳೆದುಕೊಂಡು ಜೀ ಕನ್ನಡ ಆನ್ ಮಾಡಿ ಬದುಕು ಜಟಕಾ ಬಂಡಿ ಸೀರಿಯಲ್ಲಿಗೆ ಕಣ್ಣು ಕೀಲಿಸಿ ಕೂಡುವವರಿಗೆ ಇವತ್ತಿನ ಸಾರು ರೆಸಿಪಿ ಹೇಳಿಮಾಡಿಸಿದ ಕಿವಿಮಾತಲ್ಲ. ಈ ಸ್ಪೆಷಲ್ ಸಾರು ನಿಮಗೆ ಮಾತ್ರ. ಭಾನುವಾರದ ರಜೆಗಾಗಿ ಕಾಯುತ್ತಿರುವ ಶಬರಿಯರಿಗೆ ಮಾತ್ರ.
ಬೇಕಾಗುವ ಪದಾರ್ಥಗಳ ಪಟ್ಟಿಯಲ್ಲಿ ಯಥಾಪ್ರಕಾರ ತೊಗರಿ ಬೇಳೆ, ಹುಣಿಸೆ ಹಣ್ಣು, ಸಾರಿನ ಪುಡಿ, ಉಪ್ಪು, ಟೊಮೆಟೋ, ತುಪ್ಪ, ತೆಂಗಿನತುರಿ, ಜೀರಿಗೆ ಇರಲಿ. ಸಾರು ಪಾತ್ರೆ ತುಂಬಾ ಮಾಡಬೇಕಾ? ಅಥವಾ ಸ್ವಲ್ಪನೇ ಸಾಕಾ? ಎಂಬ ಪ್ರಶ್ನೆಯೇ ಇಲ್ಲ. ನಿಮ್ಮ ಮನೆಯಲ್ಲಿ ಊಟಕ್ಕೆ ಹಾಜರಾಗುವ ಅನ್ನ ಸಾರು ಭಕ್ತರ ಲೆಕ್ಕದ ಮೇಲೆ ಪ್ರಮಾಣ ಅವಲಂಬಿತ.
ಹಂತ 1) ಕುಕ್ಕರಿನಲ್ಲಿ ಬೇಳೆ ಬೇಯಲಿ. ಬೆಂದು ಕರಗಿರಲಿ; ಹಂತ 2) ಒಗ್ಗರಣೆ ಸೌಟಿನಲ್ಲಿ ತುಪ್ಪ, ಜೀರಿಗೆ, ಟೊಮೆಟೋ ಸ್ವಲ್ಪ ಕಾಯಿತುರಿ ಹಾಕಿ ಬಾಡಿಸಿ ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಈಕಡೆ ಇಡಿ; ಹಂತ 3) ನಿತ್ಯ ಸಾರು ಮಾಡುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಒಲೆ ಮೇಲಿಟ್ಟು ಅದು ಕುದಿಬಂದ ಮೇಲೆ ಹೆಚ್ಚಿದ ಕೊತ್ತಂಬರಿ, ಹೆಚ್ಚಿದ ಕರಿಬೇವು, ಸಾರಿನಪುಡಿ, ಉಪ್ಪು ಹಾಕಿ ಕುದಿಯುವುದಕ್ಕೆ ಬಿಡಿ; ಹಂತ 4) ಇದು ಚೆನ್ನಾಗಿ ಕುದ್ದು ಸಾರಿನ ಪುಡಿಯ ಹಸಿ ವಾಸನೆ ಆವಿಯಾದನಂತರ ಹುಣಿಸೆಹಣ್ಣಿನ ರಸ, ಚೂರು ಬೆಲ್ಲ ಹಾಕಿ ಮತ್ತೆ ಕುದಿಯಲು ಬಿಡಿ;
ಹಂತ 5) ರುಬ್ಬಿಕೊಂಡ ಟೊಮೆಟೋ ಚಟ್ನಿಯನ್ನು ಕುದಿಯುತ್ತಿರುವ ಈ ನೀರಿಗೆ ಬೆರಸಿ ಮತ್ತೆ ಕುದಿಯಲು ಬಿಡಿ. ಒಂದೊಂದೂ ಹಂತದಲ್ಲೂ ಚೆನ್ನಾಗಿ ಕುದಿಯುತ್ತಲೇ ಇರಬೇಕು.ಈ ಮೆಥೆಡ್ಡೇ ಈ ಸಾರಿನ ಬಂಡವಾಳ. ಇದೇ ವೇಳೆ, ದಟ್ಸ್ ಕನ್ನಡ ಅಡುಗೆ ರೆಸಿಪಿಗೆ ಗ್ಯಾಸ್ ಜಾಸ್ತಿ ಖರ್ಚಾಗತ್ತೆ ಎಂದು ಗೊಣಗಬಾರದು, ಪ್ಲೀಜ್.
ಕುದಿಯುತ್ತಿರುವ ಸಾರುನೀರಿಗೆ ಈಗ ಬೆಂದ ಬೇಳೆ ಕಟ್ಟನ್ನು ಸುರಿದು ಮತ್ತೆ ಕುದಿಯಲು ಬಿಡಿ. ಕೊತಕೊತ ಕುದ್ದನಂತರ ಎರಡು ಚಮಚ ತುಪ್ಪಕ್ಕೆ, ಚಮಚೆ ಜೀರಿಗೆ, ಚಿಟಿಕೆ ಇಂಗಿನ ಒಗ್ಗರಣೆ ಕೊಟ್ಟು ಸಾರಿನ ಪಾತ್ರೆಯಲ್ಲಿ ಮುಳುಗಿಸಿ. ಚುಂಯ್ ಅಂದರೆ ಸಾರು ರೆಡಿ. ಊಟಕ್ಕೆ ಇನ್ನೂ ಟೈಂ ಇದೆ ಎನ್ನುವವರು ಪುನಃ ಹೆಚ್ಚಿದ ಕೊತ್ತಂಬರಿ, ತೊಳೆದ ಹಸಿ ಕರಿಬೇವಿನ ಎಲೆಗಳನ್ನು ಸಾರಿನ ಮೇಲೆ ತೇಲಿಬಿಡಬಹುದು. ಕೊತ್ತಂಬರಿ ಅಲಂಕಾರಕ್ಕೆ, ಹಸಿ ಕರಿಬೇವು ಪರಿಮಳಕ್ಕೆ.
(ದಟ್ಸ್ ಕನ್ನಡ ಅಡುಗೆಶಾಲೆ)



Click it and Unblock the Notifications