ಈ ಕಾರಣಕ್ಕೆ, ಹೆರಿಗೆಯಲ್ಲಿ ಆರೈಕೆ ಎಲ್ಲಾ ಹೆಣ್ಮಕ್ಕಳಿಗೆ ಒಂದೇ ರೀತಿ ಸಿಗುತ್ತಿಲ್ಲ!

ಮಗುವಿಗೆ ಜನ್ಮ ನೀಡುವುದು ಎಂದರೆ ತಾಯಿಗೆ ಪುನರ್ಜನ್ಮ ಸಿಕ್ಕಂತೆ ಎಂಬ ಮಾತಿತ್ತು. ಆ ಕಾಲದ ಸನ್ನಿವೇಶಗಳೂ ಹಾಗೆಯೇ ಇತ್ತು. ವೈದ್ಯಕೀಯ ಕ್ಷೇತ್ರ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಆಗ ಗರ್ಭಿಣಿ ಆದಾಗಿನಿಂದ ಹೆರಿಗೆಯ ತನಕವೂ ತಾಯಿ-ಮಗು ಆರೋಗ್ಯದ ಬಗ್ಗೆ ಒಂದು ರೀತಿಯ ಹೆದರಿಕೆ, ಆತಂಕ ಎಲ್ಲರ ಮನಸ್ಸಿನಲ್ಲಿ ಮನೆ ಮಾಡುತ್ತಿತ್ತು. ಹೊಟ್ಟೆಯಲ್ಲಿರುವ ಮಗಿವಿನ ಆರೋಗ್ಯ ಹೇಗಿದೆ, ಬೆಳವಣಿಗೆ ಸರಿಯಾಗಿ ಆಗಿದೆಯೇ ಎಂಬೆಲ್ಲಾ ಮಾಹಿತಿಗಳು ಈಗಿನಂತೆ ತಿಳಿಯುವುದು ಕೂಡ ಸುಲಭವಾಗಿರಲಿಲ್ಲ.

ಈಗ ಕಾಲ ಬದಲಾಗಿದೆ. ಗರ್ಭಿಣಿ ಆದಾಗಿನಿಂದ ಹೆರಿಗೆಯ ತನಕ ಎಲ್ಲಾ ಹಂತಗಳಲ್ಲೂ ನಿಗಾ ವಹಿಸಿ ತಾಯಿ ಹಾಗೂ ಹೊಟ್ಟೆಯಲ್ಲಿರುವ ಮಗು ಇಬ್ಬರ ಆರೋಗ್ಯವನ್ನೂ ನೋಡಿಕೊಳ್ಳಲಾಗುತ್ತದೆ. ಎಲ್ಲಾ ಹಂತಗಳಲ್ಲೂ ಸ್ಕಾನಿಂಗ್ ಮತ್ತು ಇತರ ಟೆಸ್ಟ್ ಗಳ ಸಹಾಯದಿಂದ ಯಾವುದೇ ಸಣ್ಣ ಬದಲಾವಣೆಯನ್ನೂ ಗಮನಿಸಲಾಗುತ್ತದೆ ಮತ್ತು ಅನಪೇಕ್ಷಿತ ಬದಲಾವಣೆಗಳನ್ನು ನಿಯಂತ್ರಿಸಲಾಗುತ್ತದೆ. ಹಾಗಾಗಿ ಈಗ ಮಗುವಿಗೆ ಜನ್ಮ ನೀಡುವುದು ಅಷ್ಟೊಂದು ಸಮಸ್ಯೆ ಎನಿಸುವುದಿಲ್ಲ. ಅಥವಾ ಸಮಸ್ಯೆಯನ್ನು ಎದುರಿಸಲೂ ಸಾಧ್ಯವಾಗುತ್ತದೆ.

Why Maternal Care Not Getting Same For Every Women In Kannada

ಆದರೇ ಈ ಸನ್ನಿವೇಶಗಳೂ ಎಲ್ಲಾ ಕಡೆಯೂ ಹೀಗೆಯೇ ಇದೆಯೇ ? ತಾಯಿ ಮಗುವಿನ ಆರೋಗ್ಯದ ನಿಗಾ ವಹಿಸಲು ಹಲವಾರು ಸ್ಕಾನಿಂಗ್ ಮತ್ತು ಟೆಸ್ಟ್ ಗಳು ಇವೆ ನಿಜ ಆದರೆ ಇದು ಎಲ್ಲಾ ಕಡೆ ತಲುಪಿದೆಯೇ? ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಈ ಎಲ್ಲವನ್ನೂ ಸರಿಯಾಗಿ ಬಳಸಲಾಗುತ್ತದೆಯೇ ಉತ್ತರ ಇಲ್ಲ. ನಗರಗಳಲ್ಲಿರುವ ಜನರಿಗೆ ಈಗ ಮಗುವಿಗೆ ಜನ್ಮ ಕೊಡುವುದು ಒಂದು ಸರಳವಾದ ಜೀವನದ ಭಾಗವಾಗಿರಬಹುದು, ಗರ್ಭಿಣಿಯಾದಾಗಿನಿಂದ ಹಿಡಿದು ಎಲ್ಲರೂ ಕಾಳಜಿ ವಹಿಸಿ ತಾಯಿ ಮಗು ಆರೋಗ್ಯವನ್ನು ನೋಡಿಕೊಳ್ಳಬಹುದು, ಕೆಲಸದ ಜಾಗದಲ್ಲೂ ಸಂಬಳ ಸಹಿತ ರಜೆ ನೀಡಬಹುದು ಹೀಗೆ ಎಲ್ಲಾ ಸೌಲಭ್ಯಗಳೂ ಇವೆ. ಆದರೆ ಹಳ್ಳಿಗಳಲ್ಲಿ ಸ್ಥಿತಿ ಮೊದಲಿನ ಕಾಲಕ್ಕಿಂತ ಬದಲಾಗಿದ್ದರೂ ನಗರಗಳಲ್ಲಿ ಸಿಗುವ ಸೌಲಭ್ಯಗಳಿಗೆ ಹೋಲಿಸಿದರೆ ಬಹಳ ಹಿಂದುಳಿದಿದೆ.

ಒಂದು ಅಧ್ಯಯನದ ಪ್ರಕಾರ ಮಹಿಳೆಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ಆಕೆಯ ತಾಯ್ತನದ ಆರೈಕೆಯಲ್ಲೂ ಬಹಳ ಪರಿಣಾಮ ಬೀರುತ್ತವೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳಲ್ಲಿ ಕೆಳಮಟ್ಟದಲ್ಲಿರುವ ಕುಟುಂಬಗಳಲ್ಲಿ ಸರಿಯಾದ ಆರೈಕೆಯಾಗಲೀ ವೈದ್ಯಕೀಯ ನೆರವಾಗಲೀ ಸಿಗುವುದಿಲ್ಲ. ಮಧ್ಯಮ ವರ್ಗದ ಮತ್ತು ಮೇಲ್ವರ್ಗದ ಜನರು ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ನೆರವು ಪಡೆದರೆ ಕೆಳ ವರ್ಗದ ಜನರು ಸರಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಹೆಚ್ಚಿನ ರೋಗಿಗಳ ಒತ್ತಡದಿಂದ ಎಲ್ಲರಿಗೂ ಸರಿಯಾಗಿ ಚಿಕಿತ್ಸೆ ನೀಡಲು ಆಗುವುದಿಲ್ಲ.

ಹೀಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಇಬ್ಬರು ಮಹಿಳೆಯರು ಕೆಲವೊಮ್ಮೆ ಒಂದೇ ಬೆಡ್ ಬಳಸಬೇಕಾದ ಅನಿವಾರ್ಯತೆಯೂ ಬರುತ್ತದೆ. ಅಂತಹ ಸನ್ನಿವೇಶದಲ್ಲಿ ಜಗಳಗಳು ಮತ್ತು ದೂಡಾಟಗಳು ಸಾಮಾನ್ಯ. ಹೀಗೆ ಹೆಚ್ಚಿನ ರೋಗಿಗಳು ಇರುವ ಕಡೆಗಳಲ್ಲಿ ಸರಿಯಾದ ಶುಚಿತ್ವ ಕೂಡ ಇರುವುದಿಲ್ಲ. ಎಲ್ಲರಿಗೂ ಸರಿಯಾದ ಸಮಯಕ್ಕೆ ಆರೈಕೆ ಸಿಗುವುದಿಲ್ಲ. ಪ್ರಸವ ಬೇನೆ ಬಂದ ಬಳಿಕವೂ ಲೇಬರ್ ರೂಮ್ ಗಳು ಸಿಗದೇ ಇದ್ದ ಉದಾಹರಣೆಗಳು ಹಲವಾರು ಇವೆ. ವೈದ್ಯಕೀಯ ಸಿಬ್ಬಂದಿ ಕೂಡ ಸರಿಯಾದ ತರಬೇತಿ ಹೊಂದಿದವರಾಗಿರುವುದಿಲ್ಲ.

ಗರ್ಭಿಣಿ ಇರುವಾಗ ಮಾಡಬೇಕಾದ ಎಲ್ಲಾ ಪರೀಕ್ಷೆಗಳು ಸರಿಯಾಗಿ ನಡೆಯುವುದಿಲ್ಲ. ಅದಕ್ಕೆ ಬೇಕಾದ ಪರಿಕರಣೆಗಳೂ ಇದ್ದರೂ ಸರಿಯಾದ ಸ್ಥಿತಿಯಲ್ಲಿ ಇರುವುದಿಲ್ಲ. ಸ್ಕಾನಿಂಗ್ ಮೆಷಿನ್ನುಗಳೂ ಅಷ್ಟೇ ಸರಿಯಾಗಿದ್ದರೇ ಮಾತ್ರ ಪರೀಕ್ಷೆಗಳು ನಡೆಯುತ್ತವೆ, ಇಂತಹ ಸ್ಥಿತಿಯಲ್ಲಿ ತಾಯಿ ಮತ್ತು ಮಗು ಇಬ್ಬರ ಜೀವವೂ ಅಪಾಯದಲ್ಲಿರುತ್ತದೆ ಮತ್ತು ಇಂತಹ ಅದೆಷ್ಟೊ ಸಾವುಗಳು ಸಂಭವಿಸಿವೆ.

ಸರ್ಕಾರಿ ಆಸ್ಪತ್ರೆಯಾಗಲೀ ಆರೋಗ್ಯ ಕೇಂದ್ರಗಳಲ್ಲೇ ಆಗಲಿ ಸರಿಯಾದ ಮೇಲುಸ್ತುವಾರಿ ಇಲ್ಲದೇ ನಡೆಯುತ್ತಿರುತ್ತದೆ. ಮೊದಲೇ ಉಪಕರಣಗಳ ಮತ್ತು ಸಿಬ್ಬಂದಿ ಕಡಿಮೆ ಇರುವ ಕಡೆ ಬೇಜವಾಬ್ದಾರಿಯಿಂದ ಆರೈಕೆ ಮಾಡಿದಲ್ಲಿ ಜೀವಗಳು ಅಪಾಯದಲ್ಲಿರುತ್ತವೆ. ಇನ್ನೂ ಹಲವು ಕಡೆಗಳಲ್ಲಿ ಸರಿಯಾದ ರೀತಿಯ ಆರೈಕೆ ನಡೆಯುತ್ತಿಲ್ಲ ಎಂದು ಕಂಪ್ಲೈಂಟ್ ಮಾಡಿದಾಗ ಲೇಬರ್ ರೂಮಿನಲ್ಲೇ ಗಲಾಟೆಗಳಾಗಿರುವ ಸನ್ನಿವೇಶಗಳಿವೆ. ಕೇವಲ ಮಾತಿನಲ್ಲಿ ಬೈಯುವುದಷ್ಟೇ ಅಲ್ಲ ದೈಹಿಕವಾಗಿಯೂ ಹಲ್ಲೆಗಳಾಗಿರುವ ವರದಿಗಳಿವೆ. ಮೊದಲೇ ಪ್ರಸವ ಬೇನೆಯಿಂದ ನರಳುತ್ತಿರುವ ಮಹಿಳೆಗೆ ಮತ್ತೂ ಇಂತಹ ಸನ್ನಿವೇಶಗಳೂ ಎದುರಾದರೆ ಅವರ ಮನಃಸ್ಥಿತಿ ಹೇಗಿರಬಹುದು ಊಹಿಸಿ.
ಇಂತಹ ಕೇಂದ್ರಗಳೂ ದೂರದಲ್ಲಿರುವ ಹಲವು ಮನೆಗಳಲ್ಲಿ ಹೆರಿಗೆಗಳು ಇಂದಿಗೂ ಮನೆಗಳಲ್ಲೇ ಆಗುತ್ತವೆ.

ಇದು ಇನ್ನೂ ಅಪಾಯಕಾರಿ ಯಾವುದೇ ರೀತಿಯ ವೈದ್ಯಕೀಯ ವಿಧಾನಗಳನ್ನಾಗಲೀ ಸಲಕರಣೆಗಳನ್ನಾಗಲೀ ಬಳಸಲಾಗುವುದಿಲ್ಲ. ಎಲ್ಲಾ ಹೆರಿಗೆಗಳೂ ಅಪಾಯಕಾರಿ ಎಂದಲ್ಲ. ಆದರೆ ಹಲವಾರು ಸನ್ನಿವೇಶಗಳಲ್ಲಿ ಹೆರಿಗೆಯು ಹಲವು ತೊಡಕುಗಳನ್ನು ಒಳಗೊಂಡಿರುತ್ತದೆ ಅಂತಹ ಸಂದರ್ಭದಲ್ಲಿ ವೈದ್ಯಕೀಯ ನೆರವು ಲಭ್ಯ ಇದ್ದರೆ ಉಳಿಸಬಹುದಾದ ಜೀವವನ್ನೂ ಕಳೆದುಕೊಳ್ಳಾಬೇಕಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಜಗತ್ತು ಮುಂದುವರೆದಿದೆ ನಿಜ. ಆದರೆ ಇದು ಎಲ್ಲಾ ಕಡೆಗೂ ತಲುಪಿಲ್ಲ. ನಾವು ಇರುವ ಕಡೆ ಸಿಗುವ ಆರೈಕೆ ಎಲ್ಲಾ ಕಡೆಯೂ ಸಿಗುತ್ತಿದೆ ಎಂದು ನಾವು ಅಂದುಕೊಂಡಿದ್ದರೆ ಅದು ತಪ್ಪು.

English summary

Why Maternal Care Not Getting Same For Every Women In Kannada

Whay maternal care not same for every women, read on.
Story first published: Saturday, June 17, 2023, 15:00 [IST]
X
Desktop Bottom Promotion