Just In
Don't Miss
- News ಚಿತ್ರದುರ್ಗದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
- Movies ಚಕ್ಕಡಿ ಬಂಡಿ ಸವಾರಿ, ಕೆರೆ ಪಕ್ಕ ಊಟ, ನಿದ್ದೆ; ದರ್ಶನ್ ನೈಟ್ ಔಟ್ ಸಿಂಪ್ಲಿ ಸೂಪರ್
- Automobiles ಭಾರತ ನಿರ್ಮಿತ ಹೋಂಡಾ ಎಲಿವೇಟ್ ಜಪಾನ್ಗೆ ರಫ್ತು: ವಿಶ್ವಗುರು ಭಾರತದ ಓಟವನ್ನು ತಡೆಯುವವರಾರು?
- Sports IPL 2024: ಮೊದಲ ಗೆಲುವಿನ ಕನಸಿನಲ್ಲಿ SRH, ಸಂಘಟಿತ ಆಟದ ಮೇಲೆ KKR ವಿಶ್ವಾಸ
- Technology Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಲಾಂಚ್! ಅಮೋಲೆಡ್ 2X ಆಂಟಿ-ಗ್ಲೇರ್ ಡಿಸ್ಪ್ಲೇ, ಬೆಲೆ ಎಷ್ಟು?
- Finance BMRCL: ಬೆಂಗಳೂರು ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯ ವಿಸ್ತರಣೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರ್ಭಪಾತದ ಬಳಿಕ ಸೆಕ್ಸ್ ಲೈಫ್ ಯಾವಾಗ ಪ್ರಾರಂಭಿಸಬಹುದು?
ಗರ್ಭಪಾತ ಎಂದರೆ ಪೂರ್ಣ ಬೆಳವಣಿಗೆ ಪಡೆಯುವ ಮುನ್ನವೇ ಗರ್ಭದಲ್ಲಿರುವ ಭ್ರೂಣ ಸಾವಿಗೀಡಾಗಿ ಹೊರಬರುವುದು ಅಥವಾ ಕಾರಣಾಂತರಗಳಿಂದ ಭ್ರೂಣವನ್ನು ಗರ್ಭದಿಂದ ಹೊರತರುವುದು. ಕಾರಣವೇನೇ ಇರಲಿ, ಇದು ದಂಪತಿಗಳಿಬ್ಬರ ಮೇಲೂ ಮಾಡುವ ಪರಿಣಾಮ ಮಾತ್ರ ವಿವರಿಸಲು ಸಾಧ್ಯವಾಗದೇ ಇರುವಂತಹದ್ದು.
ಮಾನಸಿಕವಾಗಿಯೂ ದೈಹಿಕವಾಗಿಯೂ ಅಪಾರ ನೋವು ಮತ್ತು ದುಃಖವನ್ನು ತರುವ ಗರ್ಭಪಾತ ದಂಪತಿಗಳ ಅತಿಯಾದ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ ಹಾಗೂ ಜೀವನದಲ್ಲಿ ಜುಗುಪ್ಸೆ ಎದುರಾಗುವಂತೆ ಮಾಡುತ್ತದೆ. ಈ ಆಘಾತದಿಂದ ಮತ್ತೆ ಹೊರಬಂದು ಸಾಮಾನ್ಯ ಜೀವನ ನಡೆಸಲು ಹೆಚ್ಚಿನ ಕಾಲಾವಧಿಯ ಅವಶ್ಯಕತೆ ಇದೆ.
ಅದರಲ್ಲೂ ದೈಹಿಕ ಕಾಮನೆಗಳನ್ನು ಪೂರೈಸಲು ಲೈಂಗಿಕ ಚಟುವಟಿಕೆಗಳಲ್ಲಿ ಮತ್ತೊಮ್ಮೆ ಪಾಲ್ಗೊಳ್ಳಲು ಮನಸ್ಸು ಮತ್ತು ದೇಹ ಎರಡೂ ಸಿದ್ಧವಾಗಲು ಹೆಚ್ಚೇ ಸಮಯ ಬೇಕಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಗರ್ಭಪಾತವಾದ ಎಷ್ಟು ದಿನಗಳ ಬಳಿಕ ಮತ್ತೊಮ್ಮೆ ಸಮಾಗಮಗೊಂಡರೆ ಸರಿ?
ಇಂದಿನ ಲೇಖನದಲ್ಲಿ ಈ ಪ್ರಶ್ನೆಗೆ ತಜ್ಞರು ನೀಡುವ ವಿವರಗಳನ್ನು ವಿವರಿಸಲಾಗಿದ್ದು ಈ ಸ್ಥಿತಿಯನ್ನು ಎದುರಿಸುತ್ತಿರುವ ದಂಪತಿಗಳಿಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಲಿದೆ. ಈ ಮೂಲಕ ಗರ್ಭಪಾತದ ಬಳಿಕ ದಂಪತಿಗಳು ಅನುಭವಿಸುವ ದುಗುಡ ಹಾಗೂ ದುಃಖಗಳನ್ನು ಮರೆಸಲು ಹಾಗೂ ಗರ್ಭ ಧರಿಸಲು ಮರುಪ್ರಯತ್ನಿಸಲು ಸಾಧ್ಯವಾಗುವ ಸಾಧ್ಯತೆಗಳನ್ನು ನೀಡಲಿದೆ: ಬನ್ನಿ ನೋಡೋಣ:
ಮೊದಲ ತ್ರೈಮಾಸಿಕದಲ್ಲೇ ಗರ್ಭಪಾತ ಹೆಚ್ಚು
ಸಾಮಾನ್ಯವಾಗಿ ಗರ್ಭಪಾತಗಳು ಮೊದಲ ತ್ರೈಮಾಸಿಕದಲ್ಲಿಯೇ ಹೆಚ್ಚಾಗಿ ಸಂಭವಿಸುತ್ತವೆ. ಈ ಅವಧಿಯ ಗರ್ಭಪಾತ ಸಾಮಾನ್ಯವಾಗಿ ಸುರಕ್ಷಿತವಾಗಿದ್ದು ಹೆಚ್ಚಿನ ನೋವಾಗಲೀ ಜನನಾಂಗದಲ್ಲಿ ರಕ್ತಸ್ರಾವವಾಗಲೀ ಇರುವುದಿಲ್ಲ ಹಾಗೂ ಮುಂದಿನ ತಿಂಗಳಿನಿಂದ ಯಥಾಪ್ರಕಾರದ ಮಾಸಿಕ ಋತುಚಕ್ರವೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ದಂಪತಿಗಳು ಗರ್ಭಪಾತವಾದ ಬಳಿಕ ಎರಡರಿಂದ ಮೂರು ವಾರಗಳನ್ನು ಬಿಟ್ಟು ಮಿಲನಗೊಳ್ಳಬಹುದು. ಆದರೆ ಗರ್ಭಪಾತ ಎರಡನೆಯ ತ್ರೈಮಾಸಿಕ ಅಥವಾ ಮೂರನೆಯ ತ್ರೈಮಾಸಿಕದಲ್ಲಿ ಆದರೆ ಮಾತ್ರ ಇದು ಸಂಭವಿಸಿದ ಬಳಿಕ ಕನಿಷ್ಟ ಆರು ವಾರಗಳಾದರೂ ಮಿಲನ ನಡೆಸಬಾರದು.
ಗರ್ಭಪಾತದ ಬಳಿಕ ಎದುರಾಗುವ ಮಾನಸಿಕ ಆಘಾತದಿಂದ ಹೊರಬರುದು ಹೇಗೆ
ಗರ್ಭಪಾತದ ಕಾರಣದಿಂದ ಎದುರಾಗಿರುವ ದೈಹಿಕ ತೊಂದರೆಗಳ ಹೊರತಾಗಿ ಮಹಿಳೆ ಮಾನಸಿಕವಾಗಿಯೂ ಜರ್ಝರಿತಳಾಗುತ್ತಾಳೆ. ಆದರೆ ನಿಸರ್ಗ ಈ ತೊಂದರೆಯಿಂದ ಹೊರಬರಲು ಆಕೆಗೆ ಮಾನಸಿಕ ಸ್ಥೈರ್ಯವನ್ನೂ ನೀಡಿದೆ. ಹಿಂದಿನ ಕಹಿಯನ್ನು ಮರೆತು ಮುಂದೆ ಬರಲಿರುವ ಸಿಹಿಯನ್ನು ನಿರೀಕ್ಷಿಸಲು ಮಹಿಳೆ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳಬೇಕು. ತನೆಗೇಕೆ ಹೀಗಾಗಬೇಕ್? ದೇವರಿಗೆ ಕರುಣೆ ಇಲ್ಲವೇ? ನಾನೇನು ಅನ್ಯಾಯ ಮಾಡಿದ್ದೆ ಇಂತಹ ನೂರಾರು ಋಣಾತ್ಮಕ ಚಿಂತನೆಗಳು ಮಹಿಳೆಗೆ ಎದುರಾಗುವುದು ಸರ್ವೇ ಸಾಮಾನ್ಯ.
ಆದರೆ ಈ ನಿಸರ್ಗಕ್ಕೆ ಈ ಮಾತುಗಳಿಂದ ಯಾವುದೇ ಪ್ರಭಾವ ಬೀರುವುದಿಲ್ಲ. ಕಷ್ಟವೇ ಆಗಲಿ ಸುಖವೇ ಆಗಲಿ ದೇವರು ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯದನ್ನು ನೀಡುತ್ತಾನೆ ಎಂಬ ಆಶಾಭಾವನೆಯಿಂದ ಈ ಬಗೆಯ ಚಿಂತನೆಗಳನ್ನು ತ್ಯಜಿಸಿ ಧನಾತ್ಮಕ ಧೋರಣೆ ತಾಳಿದರೆ ಈ ಮಾನಸಿಕ ತೊಳಲಾಟದಿಂದ ಶೀಘ್ರವೇ ಹೊರಬರಬಹುದು. ಸಾಮಾನ್ಯವಾಗಿ ಈ ತೊಳಲಾಟದಲ್ಲಿರುವ ಮಹಿಳೆಯರಿಗೆ ಸಂಗಾತಿಯ ಸಾಮೀಪ್ಯವೂ ಬೇಡವೆನಿಸುತ್ತದೆ. ಯಾವಾಗ ಮನಸ್ಸು ಧನಾತ್ಮಕವಾಗಿ ಚಿಂತಿಸಲು ಪ್ರಾರಂಭಗೊಳ್ಳುತ್ತದೆಯೋ ಆಗ ಸಂಗಾತಿಯ ಮಿಲನ ಮತ್ತೊಮ್ಮೆ ಹಿತವೆನಿಸತೊಡಗುತ್ತದೆ.
ಗರ್ಭಪಾತದ ಬಳಿಕ ಎದುರಾಗುವ ಆಘಾತದ ಐದು ಹಂತಗಳು
ಗರ್ಭಪಾತದ ಬಳಿಕ ದಂಪತಿಗಳು ಎದುರಿಸುವ ದೈಹಿಕ ಮತ್ತು ಮಾನಸಿಕ ವೇದನೆಯನ್ನು ಅಭ್ಯಸಿಸಿದ ತಜ್ಞರು ಒಟ್ಟು ಐದು ಹಂತಗಳಾಗಿ ವಿಂಗಡಿಸಿದ್ದಾರೆ. ಸಮಯ ಎಲ್ಲವನ್ನೂ ಮರೆಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಗರ್ಭಪಾತದ ದುಃಖವನ್ನೂ ಸಮಯ ಮರೆಸುವ ಐದು ಹಂತಗಳು ಹೀಗಿರುತ್ತವೆ:
1. ಅಲ್ಲಗಳೆಯುವಿಕೆ
ಗರ್ಭಪಾತವಾದ ಬಗ್ಗೆ ಮಾಹಿತಿ ನೀಡಿದಾಗ ದಂಪತಿಗಳು ಅತ್ತು ಕರಗುವ ಮುನ್ನ ಈ ಮಾಹಿತಿಯನ್ನು ಅಲ್ಲಗಳೆಯುತ್ತಾರೆ. ಇದು ಸಾಧ್ಯವೇ ಇಲ್ಲ, ಹೀಗಾಗಿರಲಿಕ್ಕಿಲ್ಲ, ವೈದ್ಯರು ಮತ್ತೊಮ್ಮೆ ನೋಡಿ ಎಂಬೆಲ್ಲಾ ಮಾತುಗಳನ್ನು ಆಡುತ್ತಾರೆ. ಏಕೆಂದರೆ ಇದುವರೆಗೂ ಮಾನಸಿಕರಾಗಿ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಈ ಮಾತು ಸಿಡಿಲಿನಂತೆ ಎರಗುತ್ತದೆ. ಹಲವು ಸಂದರ್ಭಗಳಲ್ಲಿ ಈ ಮಾತನ್ನು ದಂಪತಿಗಳಿಗೆ ನಂಬಿಸಬೇಕಾದರೆ ವೈದ್ಯರು ಮತ್ತು ದಾದಿಯರಿಗೆ ಸಾಕಾಗಿ ಹೋಗುತ್ತದೆ.
2. ಕೋಪ / ತಪ್ಪಿತಸ್ಥ ಭಾವನೆ
ಯಾವಾಗ ಮಗು ತಮ್ಮ ಕೈಯಿಂದ ತಪ್ಪಿ ಹೋಯಿತು ಎಂದು ಖಚಿತವಾಯ್ತೋ, ಆಗ ದಂಪತಿಗಳಲ್ಲಿ ಕೋಪ, ಹತಾಶೆ ಮನದಲ್ಲಿ ಮಡುಗಟ್ಟುತ್ತದೆ. ಇದಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಅಸಾಧ್ಯ ಕೋಪ ಬರುತ್ತದೆ. ವಿನಾಕಾರಣ ವೈದ್ಯರ ಅಥವಾ ದಾದಿಯರ ಮೇಲೆ ರೇಗಲೂ ಬಹುದು. ಇದಕ್ಕೆಲ್ಲಾ ತಾವೇ ಕಾರಣ ಎಂಬಂತೆ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾರೆ. ತಪ್ಪಿತಸ್ಥ ಭಾವನೆಯಿಂದ ಹತಾಶೆಗೊಳಗಾಗುತ್ತಾರೆ.
3. ನಾವೇ ಏಕೆ? ನಮಗೇ ಏಕೆ? ಎಂದು ದೇವರನ್ನು ದೂರುವುದು
ಈ ಹಂತದಲ್ಲಿ ದುಃಖ ಸೃಷ್ಟಿಕರ್ತದನ್ನು ದೂಷಿಸುವ ನಿಟ್ಟಿನತ್ತ ಮುಂದುವರೆಯುತ್ತದೆ. 'ನಮಗೇಕೆ ಈ ಶಿಕ್ಷೆ?' ' ನಾವು ಯಾರಿಗೇನು ಅನ್ಯಾಯ ಮಾಡಿದ್ದೆವು?' 'ನಿನಗೆ ಬೇಕಿದ್ದರೆ ನನ್ನ ಪ್ರಾಣ ತೆಗೆದುಕೊಳ್ಳಬೇಕಿತ್ತು,, ಇನ್ನೂ ಹುಟ್ಟದೇ ಇರುವ ಆ ಪುಟ್ಟ ಮಗುವಿನ ಪ್ರಾಣವನ್ನೇಕೆ ತೆಗೆದೆ?" ಎಂದೆಲ್ಲಾ ದೇವರನ್ನು ದೂರತೊಡಗುತ್ತಾರೆ. ಕೆಲವು ಮಹಿಳೆಯರಂತೂ ದೇವರಲ್ಲಿ ತನ್ನ ಮಗುವನ್ನು ಹಿಂದಿರುಗಿಸಿದರೆ ಏನಾದರೂ ಸಲ್ಲಿಸುವೆ ಎಂದು ಹರಕೆಯನ್ನೂ ಹೊರುತ್ತಾರೆ.
4. ಖಿನ್ನತೆ
ಪ್ರಬಲವಾದ ಋಣಾತ್ಮಕ ಚಿಂತನೆಗಳೆಲ್ಲಾ ದಂಪತಿಗಳನ್ನು ಇನ್ನಷ್ಟು ದುಃಖಕ್ಕೆ ದೂಡುತ್ತವೆ. ಪರಿಣಾಮವಾಗಿ ಖಿನ್ನತೆ ಎದುರಾಗುತ್ತದೆ. ಇಬ್ಬರಿಗೂ ಈ ಜೀವನವೇ ಬೇಡವಾಗಿ ಹೋಗುತ್ತದೆ.
5. ಒಪ್ಪಿಕೊಳ್ಳುವಿಕೆ
ಆದರೆ ಜೀವನದಲ್ಲಿ ದುಃಖ ಎದುರಾದರೆ ಇದನ್ನು ಎದುರಿಸಿ ಮುನ್ನಡೆಯಬೇಕೇ ವಿನಃ ಇದೇ ಜೀವನದ ಅಂತ್ಯವಲ್ಲ ಎಂಬ ಸತ್ಯ ನಿಧಾನವಾಗಿ ಮನವರಿಕೆಯಾಗತೊಡಗುತ್ತದೆ. ತಮ್ಮಿಂದ ಆಗಬೇಕಾದ ಇತರ ಕೆಲಸಗಳ ಬಗ್ಗೆ ಮನಸ್ಸು ನೀಡುವ ಮೂಲಕ ನಿಧಾನವಾಗಿ ತಮಗೆ ಎದುರಾದ ದುಃಖವನ್ನು ಒಪ್ಪಿಕೊಂಡು ಮುಂದಿನ ಕ್ರಮಗಳತ್ತ ಕಾಳಜಿ ವಹಿಸತೊಡಗುತ್ತಾರೆ. ಎಷ್ಟು ಬೇಗನೇ ದಂಪತಿಗಳು ವಾಸ್ತವ ಜಗತ್ತಿಗೆ ಮರಳುತ್ತಾರೋ ಅಷ್ಟೇ ಬೇಗನೇ ಮತ್ತೊಮ್ಮೆ ಮಿಲನಕ್ಕೆ ಪ್ರಯತ್ನಿಸಿ ಗರ್ಭಧಾರಣೆಗೆ ಹೊರದಾಗಿ ಪ್ರಯತ್ನಿಸಬಹುದು.
ನಿಮ್ಮ ಸಂಗಾತಿಗೆ ನಿಮಗೆ ಏನೆನಿಸುತ್ತದೆ ಎಂಬುದನ್ನು ವಿವರಿಸಿ ಸಹಕಾರವನ್ನು ಬೇಡಿ
ಗರ್ಭಪಾತದ ಆಘಾತದಿಂದ ಹೊರಬರಲು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ. ಕುಟುಂಬದವರ ಹಾಗೂ ಆತ್ಮೀಯರ ಸಹಕಾರ ಮತ್ತು ಸಾಂತ್ವಾನ ನಿಮಗೆ ಲಭಿಸುತ್ತದೆ ಹಾಗೂ ನಿಮ್ಮ ದುಃಖದಲ್ಲಿ ಅವರೂ ಭಾಗಿಯಾಗುತ್ತಾರೆ. ಅಲ್ಲೊಂದು ಇಲ್ಲೊಂದು ಕುಹಕ ಮಾತುಗಳು ಕೇಳಿಬರಲೂಬಹುದು. ಪ್ರತಿ ಕಡೆಯಲ್ಲಿಯೂ ಇಂತಹವರು ಒಬ್ಬರಾದರೂ ಇದ್ದೇ ಇರುತ್ತಾರೆ.
ಹಾಗಾಗಿ ಇಂತಹ ಮಾತುಗಳನ್ನು ಮೊದಲೇ ನಿರೀಕ್ಷಿಸಿ ಇದಕ್ಕೆ ಸೂಕ್ತ ಉತ್ತರ ಸಿದ್ಧಪಡಿಸಿಟ್ಟುಕೊಂಡಿದ್ದರೆ ಈ ಮಾತುಗಳಿಗೆ ಆಘಾತಕ್ಕೊಳಗಾಗುವುದರಿಂದ ತಪ್ಪಿಸಬಹುದು. ಒಂದು ವೇಳೆ ಈ ಆಘಾತದಿಂದ ಹೊರಬರಲು ಬಹಳವೇ ಕಷ್ಟವಾಗುತ್ತಿದ್ದರೆ ತಜ್ಞರ ಅಥವಾ ಸಾಂತ್ವಾನ ನೀಡಲು ಸಮರ್ಥರಿರುವ ಹಿರಿಯರ ಸಲಹೆಯನ್ನು ಪಡೆಯಬಹುದು. ವಿಶೇಷವಾಗಿ ಸಂಗಾತಿಯೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ ಎರಡನೆಯ ಗರ್ಭಧಾರಣೆಗೆ ಯಾವಾಗ ಸೂಕ್ತ ಸಮಯ ಎಂಬುದನ್ನು ನಿರ್ಧರಿಸಿ.
ಎರಡನೆಯ ಗರ್ಭಧಾರಣೆಗೆ ನೀವು ಯಾವಾಗ ಪ್ರಯತ್ನಿಸಬೇಕು?
ಒಂದು ವೇಳೆ ನೀವು ಗರ್ಭಪಾತವಾದ ಬಳಿಕ ಹೆಚ್ಚು ದಿನ ಕಾಯಲು ಇಚ್ಛಿಸದೇ ಆದಷ್ಟು ಬೇಗನೇ ಎರಡನೆಯ ಗರ್ಭಧಾರಣೆಗೆ ಪ್ರಯತ್ನಿಸುವ ಹಂಬಲ ಹೊಂದಿದ್ದರೆ ವೈದ್ಯರ ಸಲಹೆಯನ್ನು ಪಡೆಯುವುದು ಅವಶ್ಯಕ. ಹೆಚ್ಚಿನ ವೈದ್ಯರ ಪ್ರಕಾರ ಗರ್ಭಪಾತವಾದ ಬಳಿಕ ಮುಂದಿನ ದಿನಗಳಲ್ಲಿ ಎದುರಾಗುವ ಮಾಸಿಕ ಋತುಸ್ರಾವದ ದಿನಗಳು ಪೂರ್ಣವಾಗಿ ಕಳೆಯುವವರೆಗಾದರೂ ಕಾಯಲೇಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಅಂದರೆ ಸುಮಾರು ನಾಲ್ಕು ವಾರಗಳ ಕಾಲ. ಈ ಅವಧಿಯಲ್ಲಿ ಮಹಿಳೆಯ ದೇಹದಲ್ಲಿ ಗರ್ಭಾವಸ್ಥೆಗಾಗಿ ಸ್ರವಿಸಲ್ಪಟ್ಟಿದ್ದ ರಸದೂತಗಳು ಹಿಂದಿರುಗೆ ಮಾಸಿಕ ಋತುಸ್ರಾವದ ರಸದೂತಗಳು ಮೊದಲಿನಿಂತೆ ಸ್ರವಿಸಬೇಕಾಗುತ್ತದೆ. ಮಾಸಿಕ ಋತುಸ್ರಾವ ಆರೋಗ್ಯಕರ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಖಚಿತವಾದ ಬಳಿಕ ಅಂಡಾಣು ಪಕ್ವಗೊಂಡು ಮಿಲನಕ್ಕೆ ಸಿದ್ಧವಾಗುವ ದಿನಗಳು ಯಾವುವು ಎಂಬುದನ್ನು ಕಂಡುಕೊಳ್ಳಬೇಕು. ವೈದ್ಯರು ಈ ದಿನಗಳನ್ನು ಹೆಚ್ಚು ನಿಖರವಾಗಿ ತಿಳಿಸಬಲ್ಲರು. ಈ ದಿನಗಳಲ್ಲಿ ಮತ್ತೊಮ್ಮೆ ಗರ್ಭಧಾರಣೆಗೆ ಪ್ರಯತ್ನಿಸಬಹುದು. ಸಾಮಾನ್ಯವಾಗಿ ಗರ್ಭಪಾತವಾದ ಒಂದು ತಿಂಗಳ ಬಳಿಕ ಮಿಲನಕ್ಕೆ ಪ್ರಯತ್ನಿಸಬಹುದು.
ದೈಹಿಕವಾಗಿ ಮರುಚೈತನ್ಯ ಪಡೆಯುವ ಅವಧಿ ಮುಖ್ಯ
ಎರಡನೆಯ ಪ್ರಯತ್ನಕ್ಕಾಗಿ ಎಷ್ಟು ಕಾಲ ಕಾಯಬೇಕು ಎಂಬುದು ದೈಹಿಕವಾಗಿ ಮರುಚೈತನ್ಯ ಪಡೆಯುವ ಅವಧಿಯನ್ನು ಅವಲಂಬಿಸಿರುತ್ತದೆ. ಕೆಲವು ಮಹಿಳೆಯರಿಗೆ ಗರ್ಭಪಾತವಾದ ಬಳಿಕ ಕೆಲವು ತಿಂಗಳವರೆಗೂ ಜನನಾಂಗದಿಂದ ರಕ್ತಸ್ರಾವ ಮುಂದುವರೆಯುತ್ತದೆ. ಈ ಮಹಿಳೆಯರು ರಕ್ತಸ್ರಾವ ಪರಿಪೂರ್ಣವಾಗಿ ನಿಂತು ಜನನಾಂಗಗಳು ಮತ್ತೊಮ್ಮೆ ಆರೋಗ್ಯಕರವಾಗುವವರೆಗೂ ಮಿಲನಕ್ಕೆ ಪ್ರಯತ್ನಿಸಬಾರದು. ಅಲ್ಲದೇ ಮಿಲನ ನಡೆಸಿದರೆ ಇದು ರಕ್ತಸ್ರಾವವನ್ನು ಹೆಚ್ಚಿಸಬಹುದು ಹಾಗೂ ಸೋಂಕು ಎದುರಾಗಲೂ ಕಾರಣವಾಬಹುದು.
ಶಸ್ತ್ರಕ್ರಿಯೆ
ಕೆಲವು ಮಹಿಳೆಯರಿಗೆ ಗರ್ಭಪಾತದ ಸಮಯದಲ್ಲಿ ಕಾರಣಾಂತರಗಳಿಂದ ಶಸ್ತ್ರಕ್ರಿಯೆಗೆ ಒಳಗಾಗಬೇಕಾಗಿ ಬರಬಹುದು. ಗರ್ಭದಲ್ಲಿ ಉಳಿದಿದ್ದ ಭಾಗವನ್ನು ನಿವಾರಿಸಲು ಶಸ್ತ್ರಕ್ರಿಯೆ ಅನಿವಾರ್ಯವಾಗಬಹುದು. ಈ ಗಾಯಗಳು ಮಾಗಲು ಹೆಚ್ಚೇ ಸಮಯ ತೆಗೆದುಕೊಳ್ಳುತ್ತವೆ. ಅಲ್ಲದೇ ಗರ್ಭಪಾತದ ಬಳಿಕ ಗರ್ಭಕಂಠ ಮತ್ತು ಗರ್ಭಕೋಶಗಳು ಆಂಶಿಕವಾಗಿ ಹಿಗ್ಗಿರುತ್ತವೆ ಹಾಗೂ ಕೊಂಚ ಶಿಥಿಲವೂ ಆಗಿರುತ್ತವೆ. ಹಾಗಾಗಿ ಇಲ್ಲಿ ಸೋಂಕು ತಗಲುವುದು ಅತಿ ಸುಲಭವಾಗುತ್ತದೆ. ಈ ಸಂದರ್ಭಗಳಲ್ಲಿ ಮಿಲನವಾಗಲೀ ರಕ್ತವನ್ನು ಹೀರಿಕೊಳ್ಳುವ ಟ್ಯಾಂಪೋನ್ ಗಳನ್ನಾಗಲೀ ಉಪಯೋಗಿಸುವುದನ್ನು ವೈದ್ಯರು ನಿಷೇಧಿಸುತ್ತಾರೆ. ಸಾಮಾನ್ಯವಾಗಿ ಈ ಗಾಯಗಳು ಎರಡು ವಾರದಲ್ಲಿ ಗುಣ ಹೊಂದುತ್ತವೆ.
ಒಂದು ವೇಳೆ ಗರ್ಭಪಾತಕ್ಕೆ ಏನು ಕಾರಣ ಎಂಬುದನ್ನು ವೈದ್ಯರು ಖಚಿತಪಡಿಸಿದರೆ ಈ ಕಾರಣ ಇಲ್ಲವಾಗುವವರೆಗೂ ಚಿಕಿತ್ಸೆಯನ್ನು ಪಡೆಯಬೇಕು ಹಾಗೂ ಅಲ್ಲಿಯವರೆಗೂ ಮರು ಗರ್ಭಧಾರಣೆಯ ಪ್ರಯತ್ನಗಳನ್ನು ನಡೆಸಬಾರದು.
ಗರ್ಭಪಾತದ ಬಳಿಕ ಮತ್ತೊಮ್ಮೆ ಗರ್ಭ ಧರಿಸಲು ಸಾಧ್ಯವಾಗುವ ಕೆಲವು ಸಲಹೆಗಳು
* ಗರ್ಭಧಾರಣೆಗೂ ಮುನ್ನ ಸೂಕ್ತ ವಿಟಮಿನ್ನುಗಳನ್ನು ಸೇವಿಸಿ: prenatal vitamins ಎಂದು ಕರೆಯಲ್ಪಡುವ ಪ್ರಸವಪೂರ್ವ ವಿಟಮಿನ್ನುಗಳನ್ನು ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ ಫೋಲಿಕ್ ಆಮ್ಲವನ್ನು ನಿಯಮಿತವಾಗಿ ಸೇವಿಸಬೇಕು. ಆದರೆ ನೀವಾಗಿ ಇದನ್ನು ಸೇವಿಸದೇ ವೈದ್ಯರ ಸಲಹೆಯ ಪ್ರಕಾರವೇ ಸೇವಿಸಬೇಕು.
* ಪರಿಪೂರ್ಣರಾಗಿ ಗುಣಮುಖರಾಗುವವರೆಗೂ ಕಾಯಬೇಕು: ಗರ್ಭಪಾತದ ಆಘಾತದಿಂದ ಮಾನಸಿಕರಾಗಿಯೂ ದೈಹಿಕರಾಗಿಯೂ ನೀವು ಪೂರ್ಣವಾಗಿ ಚೇತರಿಸಿಕೊಂಡಿದ್ದೀರಿ ಎಂದು ಖಾತ್ರಿಯಾದ ಬಳಿಕವೇ ಎರಡನೆಯ ಗರ್ಭಧಾರಣೆಗೆ ಪ್ರಯತ್ನಿಸಿ. ಈ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಿ ಹಾಗೂ ಒಂದು ವೇಳೆ ಮಾನಸಿಕರಾಗಿ ಇನ್ನೂ ಆಘಾತದಿಂದ ಹೊರಬಂದಿಲ್ಲದಿದ್ದರೆ ತಜ್ಞರಿಂದ ಸಾಂತ್ವಾನ ಸಲಹೆಯನ್ನು ಪಡೆಯಿರಿ. ಈ ಸಲಹೆಯಿಂದ ಮಾನಸಿಕ ದೃಢತೆ ಮತ್ತು ಸ್ಥೈರ್ಯ ಲಭಿಸುವ ಮೂಲಕ ಮರು ಪ್ರಯತ್ನಕ್ಕೆ ಹೆಚ್ಚಿನ ಒಲವು ತೋರಬಹುದು.
ಗರ್ಭಪಾತದ ಬಳಿಕ ಮತ್ತೊಮ್ಮೆ ಗರ್ಭ ಧರಿಸಲು ಸಾಧ್ಯವಾಗುವ ಕೆಲವು ಸಲಹೆಗಳು
* ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮ: ನಿಮ್ಮ ನಿತ್ಯದ ಆಹಾರಗಳ ಜೊತೆಗೇ ಸಾಕಷ್ಟು ಹಸಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಆರೋಗ್ಯಕರ ಆಹಾರ ನಿಮ್ಮ ದೇಹವನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುತ್ತದೆ ಹಾಗೂ ಗರ್ಭಪಾತಗೊಳ್ಳುವ ಸಾಧ್ಯತೆಯನ್ನು ಆದಷ್ಟೂ ಕಡಿಮೆಯಾಗಿಸುತ್ತದೆ. ಅಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹ ತಾಳಿಕೊಳ್ಳುವಷ್ಟು ವ್ಯಾಯಾಮಗಳನ್ನು ನೀವು ನಿತ್ಯವೂ ಮಾಡಲೇಬೇಕು.
* ಅನಾರೋಗ್ಯಕರ ಆಹಾರ, ವ್ಯಸನಗಳಿಂದ ದೂರವಿರಿ: ಧೂಮಪಾನ, ಮದ್ಯಪಾನ ಅಥವಾ ಇನ್ನಾವುದೋ ವ್ಯಸನಗ ನಿಮಗಿದ್ದರೆ ಇದರಿಂದ ಹೊರಬರಲು ನೀವು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕೆಫೀನ್ ಪ್ರಮಾಣವನ್ನೂ ತಗ್ಗಿಸಬೇಕು. ಏಕೆಂದರೆ ಇವೆಲ್ಲವೂ ಗರ್ಭಪಾತದ ಸಾದ್ಯತೆಯನ್ನು ಹೆಚ್ಚಿಸುವ ವಸ್ತುಗಳಾಗಿವೆ ಹಾಗೂ ನಿಮ್ಮ ಮುಂದಿನ ಗರ್ಭಧಾರಣೆಗೆ ಇವು ಅಡ್ಡಿಯಾಗುವುದು ನಿಮಗೆ ಬೇಕಿಲ್ಲ, ಅಲ್ಲವೇ!
ಗರ್ಭಪಾತದ ಬಳಿಕ ಮತ್ತೊಮ್ಮೆ ಗರ್ಭ ಧರಿಸಲು ಸಾಧ್ಯವಾಗುವ ಕೆಲವು ಸಲಹೆಗಳು
* ನಿರಾಳರಾಗಿರಿ, ಮಾನಸಿಕ ಒತ್ತಡದಿಂದ ದೂರವಾಗಿ: ಕೆಲವು ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಕಂಡುಬಂದ ಅಂಶವೆಂದರೆ ಮಾನಸಿಕ ಒತ್ತಡ ಎಷ್ಟು ಹೆಚ್ಚಿರುತ್ತದೆಯೋ ಅಷ್ಟೂ ಗರ್ಭಪಾತದ ಸಾಧ್ಯತೆಗಳೂ ಹೆಚ್ಚುತ್ತವೆ. ಹಾಗಾಗಿ ಆದಷ್ಟೂ ನಿರಾಳರಾಗಿರಿ ಮತ್ತು ನಿಮಗೆ ಸೂಕ್ತವೆನಿಸಿದ ಅಭ್ಯಾಸಗಳಿಂದ ಮಾನಸಿಕ ಒತ್ತಡಗಳನ್ನು ದೂರವಾಗಿಸಿ. ಯೋಗಾಭ್ಯಾಸ, ಧ್ಯಾನ ಇದಕ್ಕೆ ಹೆಚ್ಚು ಸೂಕ್ತವಾಗಿವೆ. ಅದೂ ಸಾಧ್ಯವಿಲ್ಲ ಎಂದೆನ್ನಿಸಿದರೆ ಸುಮ್ಮನೇ ನಡೆದಾಡಿದರೂ ಸಾಕು. ಒಟ್ಟಾರೆ ನಿಮಗೆ ನೆಮ್ಮದಿ ನೀಡುವ ಮತ್ತು ಧನ್ಯತೆಯ ಭಾವನೆ ಮೂಡಿಸುವ ಯಾವುದೇ ಕಾರ್ಯವನ್ನು ನೀವು ಮಾಡಬಹುದು.
* ಮರು ಗರ್ಭಧಾರಣೆಗೆ ವೈದ್ಯರ ಸೂಚನೆ ದೊರಕುವವರೆಗೂ ಕಾಯಿರಿ: ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಗಳನ್ನು ಸತತವಾಗಿ ಪಾಲಿಸಬೇಕು. ನೀವು ಮತ್ತೊಮ್ಮೆ ಯಾವಾಗ ಮಿಲನಕ್ಕೆ ಪ್ರಯತ್ನಿಸಬಹುದು ಎಂಬುದನ್ನು ವೈದ್ಯರೇ ಸಲಹೆ ಮಾಡುತ್ತಾರೆ. ಒಂದು ವೇಳೆ ಗರ್ಭಪಾತದ ಬಳಿಕ ಜನನಾಂಗದ ಸ್ರಾವ ಇದ್ದರೆ ಇದು ಪೂರ್ಣವಾಗಿ ನಿಲ್ಲುವವರೆಗೂ ಕಾಯುವುದು ಅನಿವಾರ್ಯ. ಅದರಲ್ಲೂ ಗರ್ಭಪಾತವಾದ ಬಳಿಕ ನಡೆಸುವ ಮೊದಲ ಮಿಲನ ಆದಷ್ಟೂ ಎಚ್ಚರಿಕೆಯಿಂದ ಮುಂದುವರೆಯಬೇಕು. ಒಂದು ವೇಳೆ ಸಮಾಗಮದ ಸಮಯದಲ್ಲಿ ರಕ್ತಸ್ರಾವ ಕಂಡುಬಂದರೆ ತಕ್ಷಣವೇ ನಿಲ್ಲಿಸಿ ಆದಷ್ಟೂ ಬೇಗನೇ ವೈದ್ಯರ ಸಲಹೆ ಪಡೆಯಬೇಕು.
ಗರ್ಭಪಾತದ ಬಳಿಕ ಮತ್ತೊಮ್ಮೆ ಗರ್ಭ ಧರಿಸಲು ಸಾಧ್ಯವಾಗುವ ಕೆಲವು ಸಲಹೆಗಳು
* ಆರೋಗ್ಯಕರ ಲೈಂಗಿಕ ಜೀವನ ನಡೆಸಿ: ಗರ್ಭಧಾರಣೆಗೆ ಒಂದೇ ಪ್ರಯತ್ನ ಸಾಕಾಗುವುದಿಲ್ಲ. ಅಧ್ಯಯನಗಳ ಪ್ರಕಾರ ವಾರದಲ್ಲಿ ಮೂರು ಬಾರಿಯಾದರೂ ಸಮಾಗಮಗೊಳ್ಳುವ ಮೂಲಕ ಗರ್ಭ ಧರಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇಂದು ಗರ್ಭಧಾರಣೆಯನ್ನು ಖಚಿತ ಪಡಿಸುವ ಕಿಟ್ ಗಳು ಸುಲಭವಾಗಿ ಔಷಧಿ ಅಂಗಡಿಯಲ್ಲಿ ಲಭ್ಯವಿವೆ. ಅಂಡಾಣು ಬಿಡುಗಡೆಯಾಗುವ ಮೂರರಿಂದ ನಾಲ್ಕು ದಿನಗಳ ಮುನ್ನ ಹಾಗೂ ಬಿಡುಗಡೆಯಾಗುವ ದಿನದ ಮಿಲನದಿಂದ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚುತ್ತದೆ.
* ಪ್ರಸವಪೂರ್ವ ಆಸ್ಪಿರಿನ್ ಔಷಧಿಯನ್ನು ಮೂರು ತಿಂಗಳ ಮುನ್ನವೇ ತೆಗೆದುಕೊಳ್ಳಬೇಕು
ಗರ್ಭಪಾತ ಯಾವುದೇ ದಂಪತಿಗಳಿಗೆ ಅತೀವ ನೋವಿನ ವಿಷಯವಾಗಿದ್ದು ಮಾನಸಿಕ ವೇದನೆಯನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ದೈಹಿಕವಾಗಿ ಚೇತರಿಸಿಕೊಳ್ಳುವುದಕ್ಕಿಂತಲೂ ಮಾನಸಿಕವಾಗಿ ಚೇತರಿಸಿಕೊಳ್ಳುವುದು ಹೆಚ್ಚು ಕಷ್ಟಕರ. ಹಾಗಾಗಿ ಕೇವಲ ದೈಹಿಕರಾಗಿ ಸನ್ನದ್ಧರಾದರೆ ಮಾತ್ರ ಸಾಲದು, ಮಾನಸಿಕರಾಗಿಯೂ ಮತ್ತೊಮ್ಮೆ ಗರ್ಭಧಾರಣೆಗೆ ತಯಾರಾಗಲು ಸನ್ನದ್ಧರಾಗಬೇಕು.
ಇದು ಒಂದೆರಡು ದಿನಗಳಲ್ಲಿ ಆಗುವ ಮಾತಲ್ಲ, ವಿಶೇಷವಾಗಿ ಮಹಿಳೆ ಇದಕ್ಕಾಗಿ ಹೆಚ್ಚಿನ ಸಮಯವನ್ನು ನೀಡಬೇಕು. ಮಾನಸಿಕರಾಗಿ ಸನ್ನದ್ಧರಾದ ಬಳಿಕವೇ ಮತ್ತೊಮ್ಮೆ ತಾಯ್ತನಕ್ಕೆ ಪ್ರಯತ್ನಿಸಬಹುದು. ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಮತ್ತು ನೆರವನ್ನು ಪಡೆದೇ ಮುಂದುವರೆಯಬೇಕೇ ವಿನಃ ತಾವಾಗಿಯೇ ಯಾವುದೇ ನಿರ್ಧಾರವನ್ನು ಕೈಗೊಳ್ಳದಿರಿ.