ಅಯೋಧ್ಯೆ ಮಂದಿರಕ್ಕೆ ಮೈಸೂರು ಶಿಲ್ಪಿ ಕೆತ್ತಿರುವ ರಾಮನ ವಿಗ್ರಹ ಆಯ್ಕೆ..! ಯಾರು ಈ ಶಿಲ್ಪಿ.?

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಗಳು ಹತ್ತಿರವಾಗುತ್ತಿವೆ. ಜನವರಿ 22ರಂದು ಅದ್ದೂರಿಯಾಗಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಅಯೋಧ್ಯೆ ಈ ಸಮಾರಂಭಕ್ಕಾಗಿ ಸಿಂಗಾರಗೊಂಡಿದೆ. ಬೀದಿ ಬೀದಿಯು ಹಬ್ಬದಂತೆ ಕಂಗೊಳಿಸುತ್ತಿದೆ. ಇತ್ತ ಮಂದಿರದೊಳಗೆ ಸ್ಥಾಪನೆಯಾಗಬೇಕಾಗಿದ್ದ ಮೂರ್ತಿ ಯಾವುದು ಎಂಬುದನ್ನು ಟ್ರಸ್ಟ್‌ ಅಂತಿಮಗೊಳಿಸಿದೆ.

ಜ.22ರಂದು ನಡೆಯಲಿರುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 'ಎಲ್ಲಿ ರಾಮನೋ ಅಲ್ಲಿ ಹನುಮನು' ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ' ಎಂದಿದ್ದಾರೆ.

Arun Yogiraj

'ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.

ಇವರ ಜೊತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶುಭಕೋರಿದ್ದಾರೆ.

ಯಾರು ಈ ಅರುಣ್ ಯೋಗಿರಾಜ್?

ಇನ್ನು ಅಯೋಧ್ಯೆಯ ರಾಮನ ಮೂರ್ತಿ ಕೆತ್ತನೆಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಶ್ರಮವಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳ ಜೊತೆ ಅರುಣ್ ಯೋಗಿರಾಜ್ ಸಹ ಒಬ್ಬರಾಗಿದ್ದಾರೆ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಪ್ರತ್ಯೇಕ ಮೂರ್ತಿ ಕೆತ್ತನೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮಾಡಲಾಗಿದ್ದು, ಪ್ರತಿಮೆಯನ್ನು ಪೂರ್ಣಗೊಳಿಸಲು 6 ತಿಂಗಳು ತೆಗೆದುಕೊಂಡಿದ್ದಾರೆ.

ರಾಮನ ವಿಗ್ರಹದ ಕೆತ್ತನೆ ಕಾರ್ಯ ಮುಗಿಸಿ ಟ್ರಸ್ಟ್‌ಗೆ ನೀಡಿದ್ದ ಅವರು ಬಳಿಕ ತಮ್ಮ ಸಂತಸ ಹಂಚಿಕೊಂಡಿದ್ದರು. "ನಾನು ಕೆತ್ತಿದ ವಿಗ್ರಹ ಸೇರಿದಂತೆ ಎರಡು ವಿಗ್ರಹಗಳು ಪೂರ್ಣಗೊಂಡಿವೆ ಮತ್ತು ಒಂದು ವಿಗ್ರಹ ತಯಾರಿಕೆ ಅಂತಿಮ ಹಂತದಲ್ಲಿದೆ. ಟ್ರಸ್ಟ್ ಅಂತಿಮ ವಿಗ್ರಹವನ್ನು ಆಯ್ಕೆ ಮಾಡುತ್ತದೆ, ಆದರೆ ನನ್ನ ಕೆಲಸ ಮತ್ತು ಭರವಸೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ'' ಎಂದಿದ್ದರು.

"ಬಾಲರಾಮನ ಸೃಷ್ಟಿ ಮಾಡಿಕೊಳ್ಳುವುದೇ ದೊಡ್ಡ ಚಾಲೆಂಜ್ ಆಗಿತ್ತು. ಶ್ರೀರಾಮನ ಬಾಲಕ ಸ್ವರೂಪವನ್ನು ನಾವು ನೋಡಿರಲಿಲ್ಲ. ಆದರೆ, ಅದನ್ನ ಜನರ ಮನಸ್ಸಿಗೆ ಮುಟ್ಟುವಂತೆ ಮೂರ್ತಿ ಸೃಷ್ಟಿಸಬೇಕಿತ್ತು. ಬಾಲಕನ ದೇಹ ಸ್ವರೂಪ, ಶ್ರೀರಾಮನ ಮುಖ ಗೋಚರಿಸುವಂತೆ ಮೂರ್ತಿಯನ್ನು ಕೆತ್ತಿದ್ದೇನೆ. ಈ ಹಿಂದೆ ನಾನು ಕೆತ್ತನೆ ಮಾಡಿದ್ದ ಶಂಕರಾಚಾರ್ಯರರ ಪ್ರತಿಮೆ, ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳು ಈ ಅವಕಾಶದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದಿದ್ದರು.

ಆರು ತಿಂಗಳ ಕಾಲ ಅರುಣ್ ರಾಮ ಮೂರ್ತಿಯ ಕೆತ್ತನೆಗೆ ಕೆಲಸ ಮಾಡಿದ್ದರು. ಪೀಠವನ್ನು ಒಳಗೊಂಡಿರುವ ಎಂಟು ಅಡಿ ಎತ್ತರದಲ್ಲಿ, ವಿಗ್ರಹವು ಮೂರೂವರೆ ಅಡಿ ಅಗಲ ಹೊಂದಿದ್ದು, ಅದರ ಸುತ್ತಲು ವಿಸ್ತಾರವಾದ 'ಪ್ರಭಾವಳಿ' ಅನ್ನು ಒಳಗೊಂಡಿದೆ. ಪ್ರತಿಮೆಯ ವಿವರವಾದ ಕರಕುಶಲತೆಯು ತನ್ನ ಬಾಲ್ಯದಲ್ಲಿ ಭಗವಾನ್ ರಾಮನನ್ನು ಚಿತ್ರಿಸುತ್ತದೆ, ಬಿಲ್ಲು ಮತ್ತು ಬಾಣವನ್ನು ಹಿಡಿದು, ಅವನ ದೈವಿಕ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ. 'ನನಗೆ ನೀಡಿದ ವಿನ್ಯಾಸದ ಆಧಾರದ ಮೇಲೆ ನನ್ನ ಕೈಗಳಿಂದ ಮೂರ್ತಿಯನ್ನು ಸೂಕ್ಷ್ಮವಾಗಿ ಕೆತ್ತಿದ್ದೇನೆ ಮತ್ತು ಯಾವುದೇ ಯಂತ್ರವನ್ನು ಬಳಸಿಲ್ಲ' ಎಂದು ಯೋಗಿರಾಜ್ ಹೇಳಿದ್ದರು.

ಎಂಬಿಎ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರೂ 2008ರಲ್ಲಿ ಪೂರ್ಣಾವಧಿ ಶಿಲ್ಪಕಲೆಗೆ ಮರಳಿದರು. ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಶಾಸನದ ಹೊರತಾಗಿ, ಅವರು ತಮ್ಮ ತವರು ಮೈಸೂರಿನಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಬಿಳಿ ಅಮೃತಶಿಲೆಯ ಮೂರ್ತಿ ಮತ್ತು ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲೆಯ ಮೂರ್ತಿಯನ್ನು ಸಹ ಕೆತ್ತಿದ್ದಾರೆ.

English summary

Who Is Arun Yogiraj, Sculptor Whose Ram Lalla Idol Selected For Ayodhya Temple?

An idol made by Mysore sculptor Arun Yogiraj has been selected for the installation of Ram's statue.
X
Desktop Bottom Promotion