ವಿಶೇಷ ಸಂದರ್ಶನ: ಮಿಸೆಸ್ ಇಂಡಿಯಾ ಅರ್ಥ್ 2019 ಫೈನಲಿಸ್ಟ್ ಶ್ರೀಮತಿ ಅಂಜಲಿ ರಾವ್ ಅವರೊಂದಿಗೆ

ಸಾಮಾನ್ಯವಾಗಿ ವಿವಾಹದ ನಂತರ ಹಲವು ಮಹಿಳೆಯರಲ್ಲಿ ವೈಯಕ್ತಿಕ ಸಾಧನೆ, ಬ್ಯೂಟಿ ಬಗೆಗಿನ ಆಸಕ್ತಿಯೇ ಕಡಿಮೆಯಾಗುತ್ತದೆ, ಇನ್ನು ಮಕ್ಕಳಾದರಂತು ಮುಗಿದೆ ಹೋಯಿತು. ಸೌಂದರ್ಯ, ದೈಹಿಕ ಫಿಟ್ ನೆಸ್, ಸಾಧನೆ ಇವೆಲ್ಲ ಸೆಲೆಬ್ರಿಟಿಗಳಿಗೆ ಮಾತ್ರ ಎಂದು ತಮ್ಮನ್ನು ಆ ಚೌಕಟ್ಟಿನ ಹೊರಗೆ ಇರಿಸಿಕೊಳ್ಳುವ ಮಹಿಳೆಯರೇ ಹೆಚ್ಚು. ಇಂಥವರ ನಡುವೆ ಸಾಕಷ್ಟು ವಲಯಗಳಲ್ಲಿ ಗುರುತಿಸಿಕೊಂಡಿರುವ ನಮ್ಮದೇ ನಾಡಿನ ಮಹಿಳೆ ಅಂಜಲಿರಾವ್ ಮಿಸೆಸ್ ಇಂಡಿಯಾ ಅರ್ಥ್ 2019 ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದು ಹಲವು ಮಹಿಳೆಯರಿಗೆ ಮಾದರಿ ಎನಿಸಿದ್ದಾರೆ.

ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಉಡುಪಿ ಮೂಲದವರಾದ ಅಂಜಲಿ, ಆರಂಭದಲ್ಲಿ ಏರ್ ಹೋಸ್ಟ್ ಆಗಿ ವೃತ್ತಿ ಆರಂಭಿಸಿದರು. ನಂತರ ಖಾಸಗೀ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ, ಸಿಂಗಾಪುರದಲ್ಲಿ ಮಾಧ್ಯಮ ವಲಯದಲ್ಲಿ ಸೇವೆ, ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಕೆಲಸ ಹೀಗೆ ವಿಭಿನ್ನ ವಲಯಗಳಲ್ಲಿ ಗುರುತಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಪರಿಸರ ಜಾಗೃತಿಯನ್ನು ಉತ್ತೇಜಿಸುವ ವಾರ್ಷಿಕ, ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ನೀಡಲಾಗುವ ಶೀರ್ಷಿಕೆಗೆ ಫೈನಲಿಸ್ಟ್ ಕರ್ನಾಟಕದ ಮಹಿಳೆ ಅಂಜಲಿರಾವ್ ಆಯ್ಕೆಯಾಗುವ ಮೂಲಕ ಈ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಬೋಲ್ಡ್ ಸ್ಕೈ ಕನ್ನಡ ಅವರೊಂದಿಗೆ ನಡೆಸಿರುವ ಸಂದರ್ಶನ ಇಲ್ಲಿದೆ.

Exclusive Interview With Mrs India Earth 2019 Finalist Mrs Anjali Raos

ಮಿಸೆಸ್ ಇಂಡಿಯಾ ಅರ್ತ್ ಮೊಟ್ಟ ಮೊದಲ ಸ್ಪರ್ಧೆ

* ಮಿಸೆಸ್ ಇಂಡಿಯಾ ಅರ್ಥ್ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದೀರಾ. ಹೇಗೆನಿಸುತ್ತಿದೆ?

ತುಂಬಾನೇ ಖುಷಿ ಇದೆ. ಜೀವನದಲ್ಲಿ ಒಂದೇ ಬಾರಿ ಲಭಿಸುವ ಅವಕಾಶ ಇದು. ಈ ಸ್ಪರ್ಧೆಗೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು, ಇಷ್ಟು ಜನರಲ್ಲಿ ನಾನು ಆಯ್ಕೆಯಾಗಿರುವುದು ಬಹಳಾನೆ ಖುಷಿಯಾಗಿದೆ. ಖಂಡಿತವಾಗಿಯೂ ನನಗೆ ಹಾಗೂ ನನ್ನ ಕುಟುಂಬದವರಿಗೆ ಹೆಮ್ಮೆಯ ಎನಿಸುತ್ತಿದೆ. ಪತಿ ತುಂಬಾನೆ ಖುಷಿ ಪಟ್ಟಿದ್ದಾರೆ.

* ಅಂಜಲಿ ರಾವ್ ಯಾರು, ಹಿನ್ನೆಲೆ, ಬಾಲ್ಯ ಕುಟುಂಬದ ಬಗ್ಗೆ ತಿಳಿಸಿ?

ನನ್ನ ತಂದೆ ಉಡುಪಿ ಹಾಗೂ ತಾಯಿ ಧರ್ಮಸ್ಥಳದವರು, ನಾನು ಹುಟ್ಟಿದ್ದು ಮಾತ್ರ ಮಧ್ಯಪ್ರದೇಶದ ಬಿಲೈ ನಗರದಲ್ಲಿ. ಆದರೆ ನಾನು ಅಪ್ಪಟ ಕನ್ನಡತಿ, ಏಕೆಂದರೆ ಉಡುಪಿ, ಮಂಗಳೂರು, ಕಾರ್ಕಳದಲ್ಲೇ ನನ್ನ ವಿದ್ಯಾಭ್ಯಾಸ ಆಗಿದ್ದು. ನಂತರ ಬೆಂಗಳೂರಿಗೆ ಬಂದು ಏರ್ ಡೆಕ್ಕನ್ ನಲ್ಲಿ ಏರ್ ಹೋಸ್ಟ್ ಆಗಿ, ನಂತರ ಖಾಸಗಿ ವಾಹಿನಿಯಲ್ಲಿ ನ್ಯೂಸ್ ರೀಡರ್ ಆಗಿ ಕೆಲಸ ಮಾಡಿದೆ. ಆದರೆ ಇದೆಲ್ಲದರ ನಡುವೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇತ್ತು, ಸಿಂಗಪುರದಲ್ಲಿ ಏಳು ವರ್ಷ ಸಂಪಾದಕಿ ಹಾಗೂ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಿ ನಂತರ ಮರಳಿ ಭಾರತಕ್ಕೆ ಬಂದೆ. ಮುಂದೆ ಐಟಿ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದೆ ನಂತರ ವಿವಾಹ, ಮಗು... ಆದರೆ ನನ್ನೆಲ್ಲಾ ಕನಸನ್ನು ನನಸು ಮಾಡುವಲ್ಲಿ ನನ್ನ ತಾಯಿ, ಪತಿ, ಅತ್ತೆ ಎಲ್ಲರ ಪ್ರೋತ್ಸಾಹ ಎಂದಿಗೂ ಇದೆ.

* ಎಲ್ಲಾ ಒತ್ತಡಗಳ ನಡುವೆ ಕುಟುಂಬದ ನಿರ್ವಹಣೆ ಹೇಗೆ ಸಾಧ್ಯ

ಇದಕ್ಕೆ ತುಂಬಾನೆ ಪರಿಶ್ರಮ ಅಗತ್ಯವಿದೆ. ಮದುವೆ, ಮಕ್ಕಳ ನಂತರ ತುಂಬಾನೆ ಪ್ರಾಮುಖ್ಯತೆಗಳು ಬರುತ್ತದೆ. ಎಂದಿಗೂ ಕುಟುಂಬಕ್ಕೆ ನನ್ನ ಮೊದಲ ಆದ್ಯತೆ. ಆದರೆ ಮತ್ತೊಂದು ಮುಖ್ಯವಾದ ವಿಷಯವೆಂದರೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ವಿವಾಹದ ನಂತರ ತಮ್ಮ ವೈಯಕ್ತಿಕ ಗುರಿಗಳನ್ನು ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ. ಆದರೆ ನಾವು ಪ್ರಾಮುಖ್ಯತೆಗಳ ಅನುಸಾರ ಕೆಲಸ ಮಾಡಿದಾಗ, ಎಲ್ಲವನ್ನು ಸಮಪ್ರಮಾಣದಲ್ಲಿ ಬ್ಯಾಲೆನ್ಸ್ ಮಾಡಿಯೂ ನಮ್ಮ ಸಾಧನೆಗಳತ್ತ ಗಮನಹರಿಸಬಹುದು. ಇದಕ್ಕೂ ಮುಳ್ಯವಾಗಿ ನಿಮಗೂ ಸಾಧನೆ ಮಾಡಬೇಕೆಂಬ ಹಠ ಇರಬೇಕು. ಇದಕ್ಕೆ ತಕ್ಕಂತೆ ಕುಟುಂಬದ ಸಹಕಾರವೂ ಮುಖ್ಯವಾಗುತ್ತದೆ.

* ಮಿಸೆಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತು ದೆಹಲಿಯಲ್ಲಿ ನಡೆಯಲಿದೆ. ಹೇಗಿದೆ ನಿಮ್ಮ ತಯಾರಿ

ಸಾಕಷ್ಟು ಸಿದ್ಧತೆಗೆ ಈಗಾಗಲೇ ನಡೆಯುತ್ತಿದೆ. 4 ಸುತ್ತುಗಳಿವೆ ಮೊದಲ ಸುತ್ತು ಸಂದರ್ಶನ, ನಂತರ ಸ್ವ ಪರಿಚಯ, ಇಕೋ ವೇರ್ ಸುತ್ತು ಅಂತಿಮವಾಗಿ ಪ್ರಶ್ನಾವಳಿ ಸುತ್ತು ನಡೆಯಲಿದೆ. ಪ್ರತಿ ಸುತ್ತಿಗೂ ತುಂಬಾನೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಫಿಟ್ ನೆಸ್ ಗೆ ಹೆಚ್ಚು ಫೋಕಸ್ ಮಾಡುತ್ತಿದ್ದೇನೆ, ಜತೆಗೆ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನೆಗಳಿಗೂ ತಯಾರಿ ನಡೆಸುತ್ತಿದ್ದೇನೆ. ಕಿರೀಟವನ್ನು ಬೆಂಗಳೂರಿಗೆ ತರಲೇಬೆಕೆಂಬ ಹೆಬ್ಬಯಕೆ ಇದೆ.

* ಫಿಟ್ ನೆಸ್ ಹೇಗೆ ಕಾಪಾಡಿದ್ದೀರಿ.

ಮದುವೆಯಾದ ಮೇಲೆ, ಮಕ್ಕಳಾದ ನಂತರ ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಇದರಿಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯವೂ ಕಡಿಮೆಯಾಗುತ್ತದೆ. ನಾನು ಇದನ್ನೆಲ್ಲಾ ಮೊದಲೇ ಯೋಚನೆ ಮಾಡಿದ್ದೇ. ಆದ್ದರಿದ ನಾನು ಗರ್ಭಿಣಿಯಾಗಿದ್ದ ವೇಳೆ ನಿತ್ಯ ಯೋಗ ಮಾಡುತ್ತಿದ್ದೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಂಡಿದ್ದೆ. ಮಗುವಾದ 6 ತಿಂಗಳ ನಂತರ ಮತ್ತೆ ಯೋಗ ಆರಂಭಿಸಿದೆ. ವಿಶೇಷವಾದ ಯಾವುದೇ ಪ್ರಯೋಗಗಳನ್ನು, ಪ್ರಯತ್ನಗಳನ್ನು ನಾನು ಮಾಡಿಲ್ಲ. ಆದರೆ ಇಂದಿಗೂ ನನ್ನ ಫಿಟ್ ನೆಸ್ ರಹಸ್ಯ ಯೋಗ. 16 ವರ್ಷಕ್ಕೆ ಯೋಗಾಭ್ಯಾಸ ಆರಂಭಿಸಿದ ನಾನು ಎಂದಿಗೂ ಅಭ್ಯಾಸ ನಿಲ್ಲಿಸಿಲ್ಲ. ಜತೆಗೆ ಸ್ವಿಮ್ಮಿಂಗ್, ನಡಿಗೆ ಎಲ್ಲವನ್ನೂ ನಾನು ಪತಿ ಜತೆಗೇ ಮಾಡುತ್ತೇನೆ, ಫಿಟ್ ನೆಸ್ ಜತೆಗೆ ಇಬ್ಬರು ಒಟ್ಟಿಗೆ ಸಮಯ ಕಳೆಯಲು ಸಹ ಇದು ಉತ್ತಮ ಅವಕಾಶ ಅಲ್ಲವೇ.

* ಮಹಿಳೆಯರಿಗೆ ಹೇಗೆ ಪ್ರೇರಣೆ

ಎಲ್ಲವೂ ಪ್ರಾಮುಖ್ಯತೆ ಇರಲಿ, ಆದರೆ ನಿಮ್ಮ ಬಗ್ಗೆ ಕಾಳಜಿ ವಹಿಸಿ. ನೀವು ಖುಷಿಯಾಗಿದ್ದರೆ ಎಲ್ಲರನ್ನು ಖುಷಿಯಾಗಿಡಬಹುದು. ನೀವು ಏನೇ ಮಾಡಿದರೂ ಫೋಕಸ್ ಆಗಿರಿ, ದೊಡ್ಡ ಗುರಿಗಳನ್ನು ಹೊಂದಿ, ಸತ್ಯಯುತವಾಗಿರಿ. ಬ್ಯೂಟಿ ಇರಬೇಕು, ಆದರೆ ಬ್ಯೂಟಿ ಒಂದೇ ಸಾಲದು. ಜ್ಞಾನ, ಆತ್ಮಸ್ಥೈರ್ಯ, ಎಲ್ಲವೂ ಮುಖ್ಯವಾಗುತ್ತದೆ.

* ಮುಂದಿನ ಗುರಿ

ಮೊದಲನೆಯದಾಗಿ ಈ ವರ್ಷದ ನನ್ನ ಗುರಿ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರೀಟ ಪಡೆಯುವುದು. ನಂತರ ಗರ್ಭಿಣಿಯರಿಗೆ, ಬಾಣಂತಿಯರಿಗೆ ಯೋಗ ತರಬೇತಿ, ದೈಹಿಕ ಸ್ವಾಸ್ಥ್ಯದ ಬಗ್ಗೆ ತರಬೇತಿ, ಅಸಹಾಯಕ ಮಕ್ಕಳಿಗೆ ಸೇವೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ.

English summary

Exclusive Interview With Mrs India Earth 2019 Finalist Mrs Anjali Rao's

Mrs Earth India or Mrs India Earth is a title given to the Indian woman who represents India in the Mrs Earth Pageant, an annual, international beauty pageant promoting environmental awareness. The national pageant which chooses the Indian representative for Mrs Earth is Mrs Divine Beauty of India.
X
Desktop Bottom Promotion