ರಕ್ಷಣೆಯನ್ನು ನೀಡುವ ಬಂಧನ- ಅದುವೇ 'ರಕ್ಷಾ ಬಂಧನ'

By deepak

ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳ ಸುಗ್ಗಿ ಅಂತನೇ ಹೇಳಬಹುದು, ಇಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಬರುವ ಹಬ್ಬಗಳಂತೂ ಸಂತೋಷವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಾ ಹೋಗುತ್ತವೆ, ಅದರಲ್ಲೂ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ.

ಹೌದು, ಸಹೋದರ-ಸಹೋದರಿಯರಿಯರ ಸಂಬಂಧವನ್ನು ಕೊಂಡಾಡುವ ಮತ್ತು ಅದರ ಸ್ವಾದವನ್ನು ಸವಿಯುವ ಹಬ್ಬವೇ ರಕ್ಷಾ-ಬಂಧನ. ಇದನ್ನು ಭಾರತದಲ್ಲಿ ಅಂತೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಅಣ್ಣ-ತಂಗಿಯರ ಮತ್ತು ಅಕ್ಕ-ತಮ್ಮನ ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವಾಗಿರುವುದರಿಂದ, ಈ ಹಬ್ಬದಂದು ಸಹೋದರ-ಸಹೋದರಿಯರು ಪರಸ್ಪರರ ಏಳಿಗೆಯನ್ನು, ಸಂತೋಷವನ್ನು ಮತ್ತು ಒಳ್ಳೆಯದಾಗಲಿ ಎಂಬ ಆಸೆಯನ್ನು ವ್ಯಕ್ತಪಡಿಸುತ್ತ ಹಬ್ಬವನ್ನು ಆಚರಿಸುತ್ತಾರೆ.

"ರಕ್ಷಾ ಬಂಧನ್" ಎನ್ನುವ ಹೆಸರೇ ಸೂಚಿಸುವಂತೆ ಇದು "ರಕ್ಷಣೆಯನ್ನು ನೀಡುವ ಬಂಧನ". ಈ ಹಬ್ಬದಂದು ಸಹೋದರರು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರು ಸರಿ ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಈ ಹಬ್ಬವು ಶ್ರಾವಣ ಪೂರ್ಣಿಮೆಯ ದಿನದಂದು ಬರುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ.

Meaning & Significance of Raksha Bandhan

ರೇಷ್ಮೆಯಿಂದ ಮಾಡಲಾಗಿರುವ ದಾರದಿಂದ ತಯಾರಿಸಲಾದ ರಾಖಿಯನ್ನು ಸೋದರರ ಕೈಗೆ ಕಟ್ಟಲಾಗುತ್ತದೆ. ಹೀಗೆ ಕಟ್ಟುವಾಗ ತಮ್ಮ ಸೋದರರಿಗೆ ಒಳ್ಳೆಯದಾಗಲಿ ಎಂಬ ಆಸೆಯನ್ನು ಸೋದರಿಯರು ವ್ಯಕ್ತಪಡಿಸುತ್ತಾರೆ ಮತ್ತು ಸೋದರರು ತಮ್ಮ ಸೋದರಿಗೆ ಪ್ರಮಾಣವನ್ನು ಮಾಡುತ್ತಾರೆ. ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?

ಮಹತ್ವ
ರಕ್ಷಾ ಬಂಧನವು ಈಗಿನ ಕಾಲದಲ್ಲಿ ಸೋದರ-ಸೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಕೊಂಡಾಡುವ ದಿನವಾಗಿ ಗುರುತಿಸಲ್ಪಟ್ಟಿದೆ. ಇತಿಹಾಸದಲ್ಲಿ ಉಲ್ಲೇಖಗೊಂಡಿರುವಂತೆ ಹಿಂದಿನ ಕಾಲದಲ್ಲಿ ರಾಖಿ ಕೇವಲ ರಕ್ಷಣೆಯ ಪ್ರತೀಕವಾಗಿ ಪರಿಗಣಿಸಲ್ಪಟ್ಟಿತ್ತು. ಇದನ್ನು ಆಗ ಹೆಂಡತಿ,ಮಗಳು ಅಥವಾ ತಾಯಿ ಸಹ ಕಟ್ಟುತ್ತಿದ್ದರು. ಋಷಿಗಳು ತಮ್ಮ ದರ್ಶನ ಕೋರಿ ಬರುವ ಜನರಿಗೆ ಇದನ್ನು ಕಟ್ಟುತ್ತಿದ್ದರು. ಜೊತೆಗೆ ಸಾಧುಗಳು ತಮ್ಮ ಕೈಗೆ ತಾವೇ ಈ ದಾರಗಳನ್ನು ಕಟ್ಟಿಕೊಂಡು ದುಷ್ಟಶಕ್ತಿಗಳಿಂದ ರಕ್ಷಣೆಯನ್ನು ಪಡೆಯುತ್ತಿದ್ದರು. ಹೀಗೆ ಇದು "ಪಾಪ ತೋಡಕ್, ಪುಣ್ಯ ಪ್ರದಾಯಕ್ ಪರ್ವ" ಅಥವಾ ಎಲ್ಲಾ ವರಗಳನ್ನು ನೀಡುವ ಮತ್ತು ಪಾವಗಳನ್ನು ನಿವಾರಿಸುವ ಅಂಶವಾಗಿ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಹಿಂದಿನ ಕಾಲದಲ್ಲಿ ರಕ್ಷಾ ಬಂಧನವನ್ನು ಸಹೋದರ-ಸಹೋದರಿಯರು ಮತ್ತು ತಮ್ಮ ಓರಗೆಯವರ ಜೊತೆಯಲ್ಲಿ ಮಾತ್ರ ಸೇರಿ ಆಚರಿಸಿಕೊಳ್ಳುತ್ತಿದ್ದರು. ಆದರೆ ಇಂದು ಇದು ಆ ಮಿತಿಯನ್ನು ದಾಟಿ ಹೊರಗೆ ಬಂದಿದೆ. ಕೆಲವರು ತಮ್ಮ ಅಕ್ಕ-ಪಕ್ಕದ ಮನೆಯವರಿಗೆ ರಾಖಿಯನ್ನು ಕಟ್ಟುತ್ತಾರೆ, ಇನ್ನೂ ಕೆಲವರು ತಮ್ಮ ಆಪ್ತ ಸ್ನೇಹಿತರಿಗೆ ಕಟ್ಟುತ್ತಾರೆ. ಇದು ಶಾಂತಿಯುತವಾಗಿ ಸಹ-ಬಾಳ್ವೆ ನಡೆಸುವ ಸಂದೇಶವನ್ನು ಸಾರುವ ಪ್ರತೀಕವಾಗಿ ಕಟ್ಟಲ್ಪಡುತ್ತದೆ. ರಾಖಿ ಉತ್ಸವವನ್ನು ಮೊದಲು ಪ್ರಚಾರ ಮಾಡಿ ಅದಕ್ಕೆ ಜನಪ್ರಿಯತೆ ತಂದುಕೊಟ್ಟವರು ರವೀಂದ್ರನಾಥ ಠಾಕೂರ್‌ರವರು.

ಐಕ್ಯತೆ ಮತ್ತು ಬದ್ಧತೆಯನ್ನು ತರುವ ಮೂಲಕ ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಪರಸ್ಪರ ರಕ್ಷಿಸಿಕೊಳ್ಳುವಂತೆ ಮತ್ತು ಸಹಬಾಳ್ವೆಯನ್ನು ನಡೆಸಲು ಪ್ರೇರೇಪಿಸುವ ಸಲುವಾಗಿ ಇದನ್ನು ಅವರು ಆಚರಣೆಗೆ ತಂದರು. ಇಂದಿನ ದಿನಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಈ ಸಂದರ್ಭವು ಈಗಿನ ಕಾಲದಲ್ಲಿ ನೈತಿಕತೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಈ ಹಬ್ಬದಲ್ಲಿ ಆಚರಿಸಲಾಗುವ ಮೌಲ್ಯಗಳು ಮತ್ತು ಆಚರಣೆಗಳು ಮಾನವನಿಗೆ ಅತ್ಯಂತ ಅವಶ್ಯಕವಾಗಿವೆ. ರಾಖಿ ಹಬ್ಬದ ವಿಶೇಷ: ರುಚಿಕರವಾದ ಗೋಡಂಬಿ ಅಣಬೆ ಮಸಾಲೆ

ಶಾಂತಿ ಮತ್ತು ಸಹಬಾಳ್ವೆಯ ಮೌಲ್ಯವು ಮನುಷ್ಯನಿಗೆ ತೀರಾ ಅಗತ್ಯ. ರಕ್ಷಾ ಬಂಧನವು ಅದನ್ನು ಸಾರಿ ಸಾರಿ ಹೇಳುತ್ತದೆ. ಇದು ಪಾಪಗಳನ್ನು ತೊಡೆದು ಹಾಕುವುದರ ಮೂಲಕ ರಕ್ಷಣೆಯ ಭರವಸೆಯನ್ನು ನೀಡುತ್ತದೆ. ರಕ್ಷಾ ಬಂಧನದ ನೆಪದಲ್ಲಾದರು ದೂರ ಇರುವ ಸಹೋದರ-ಸಹೋದರಿಯರು ಪರಸ್ಪರ ಒಟ್ಟಿಗೆ ಒಂದು ಆಚರಣೆಗಾಗಿ ಸೇರುವ ನೆಪ ದೊರೆಯುತ್ತದೆ.

ಇದರಿಂದ ಪರಸ್ಪರರ ಕಷ್ಟಸುಖಗಳನ್ನು ಇತ್ಯಾರ್ಥ ಮಾಡಿಕೊಳ್ಳಬಹುದು. ಇವರಿಬ್ಬರು ಒಂದಾಗಿ ಇರುವುದರಿಂದ ಇಡೀ ಕುಟುಂಬವು ಸಂತೋಷವಾಗಿ ಒಂದು ಆಚರಣೆಯನ್ನು ಮಾಡಿ, ಎಲ್ಲರೂ ಸಂತಸವನ್ನು ಹಂಚಿಕೊಳ್ಳಬಹುದು. ಹೀಗೆ ಸಂಬಂಧವು ಶಾಶ್ವತವಾಗುತ್ತದೆ ಮತ್ತು ಪ್ರೀತಿ ಹೆಚ್ಚಾಗುತ್ತದೆ.

Story first published: Friday, August 28, 2015, 23:30 [IST]
X
Desktop Bottom Promotion