Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರ ಯೌವ್ವನದ ಕಳೆ ನೀಡುವ ಆಯುರ್ವೇದ ಔಷಧಿಗಳು
ತ್ವಚೆಯ ನಿಜವಾದ ಸೌಂದರ್ಯ ಅಡಗಿರುವುದು ತ್ವಚೆಯ ಆರೋಗ್ಯದಲ್ಲಿಯೇ ಹೊರತು ಇದರ ಮೇಲೆ ಹಚ್ಚಿರುವ ಪ್ರಸಾದನಗಳಲ್ಲ! ಅದರಲ್ಲೂ ಮುಖದ ತ್ವಚೆ ಅತಿ ಸೂಕ್ಷ್ಮವಾಗಿದ್ದು ಅಂದಗಾಣಿಸಲು ಉಪಯೋಗಿಸುವ ಅಪಾಯಕರ ರಾಸಾಯನಿಕಗಳಿಂದ ತಯಾರಾದ ಪ್ರಸಾದನಗಳು ಆ ಕ್ಷಣಕ್ಕೆ ಮುಖದ ಅಂದವನ್ನು ಪ್ರಖರಗೊಳಿಸಬಹುದಾದರೂ ಕಾಲಕ್ರಮೇಣ ತ್ವಚೆ ತನ್ನ ನೈಸರ್ಗಿಕ ಆರೋಗ್ಯವನ್ನು ಕಳೆದುಕೊಂಡು ಶಿಥಿಲವಾಗಿ ವೃದ್ದಾಪ್ಯ ಆವರಿಸುವ ಎಷ್ಟೋ ಮುನ್ನವೇ ವೃದ್ದಾಪ್ಯದ ಲಕ್ಷಣಗಳನ್ನು ತೋರಿಸತೊಡಗುತ್ತದೆ. ಈ ವ್ಯಕ್ತಿಗಳಿಗೆ ಕೃತಕ ಮೇಕಪ್ ಇಲ್ಲದೇ ಹೊರಹೋಗುವುದೇ ದುಸ್ತರವಾಗುತ್ತದೆ. ಹಾಗಾಗಿ, ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಎಂದರೆ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂದೇ ಅರ್ಥೈಸಿಕೊಳ್ಳಬಹುದು.
ತ್ವಚೆಯ ನೈಸರ್ಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಸರ್ಗಕ್ಕಿಂತ ಉತ್ತಮ ರಕ್ಷಕ ಇನ್ನಾರಿದ್ದಾರೆ? ನಿಸರ್ಗ ನೀಡಿರುವ ಪ್ರಸಾದನಗಳು ರಾಸಾಯನಿಕ ಆಧಾರಿತ ಪ್ರಸಾದನಗಳಿಗಿಂತ ನಿಧಾನ ಎಂಬ ಒಂದೇ ಕಾರಣವನ್ನು ಹೊರತುಪಡಿಸಿದರೆ ಇದರಷ್ಟು ಅಗ್ಗ, ಸುರಕ್ಷಿತ, ಪ್ರಮಾಣಿತ ಹಾಗೂ ಸೌಂದರ್ಯವರ್ಧಕ ಪ್ರಸಾದನ ಈ ಜಗತ್ತಿನಲ್ಲಿಯೇ ಇಲ್ಲ. ವೃದ್ದಾಪ್ಯ ಎದುರಾಗದೇ ಇರುವ ವ್ಯಕ್ತಿಯೇ ಈ ಜಗತ್ತಿನಲ್ಲಿಲ್ಲ! ಕಾಲನ ಹೊಡೆತದಿಂದ ತ್ವಚೆಯಲ್ಲಿ ಸೂಕ್ಷ್ಮನೆರಿಗೆಗಳು, ಕಪ್ಪು ಕಲೆಗಳು, ಬಿಳಿಯಾಗುವುದು ಮೊದಲಾದವು ಎದುರಾಗಿಯೇ ಎದುರಾಗುತ್ತವೆ. ಕೃತಕ ಪ್ರಸಾದನಗಳನ್ನು ಹಚ್ಚಿ ಇವನ್ನು ಮರೆಮಾಚಬಹುದಾದರೂ ಇದು ಇದೆ ಎಂದು ಮನಸ್ಸಿನಲ್ಲಿದ್ದಷ್ಟೂ ಹೊತ್ತು ಎದುರಿನವರು ಈ ಕಲೆಯನ್ನು ಗಮನಿಸಲಾರರು ಎಂಬ ಭಾವನೆ ಇದ್ದರೂ, ಕಲೆ ಇದ್ದೆ ಇದೆಯಲ್ಲಾ ಎಂಬ ಭಾವನೆಯಿಂದ ಹೊರಹೋಗಲು ಸಾಧ್ಯವಿಲ್ಲ. ಹಾಗಾಗಿ, ಇವನ್ನು ಮರೆಮಾಚುವ ಬದಲು ಇವನ್ನೇ ಇಲ್ಲವಾಗಿಸಿದರೆ? ಇದು ಕೇವಲ ಸೌಂದರ್ಯವನ್ನು ವೃದ್ದಿಸುವುದು ಮಾತ್ರವಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸುವುದು ಖಂಡಿತ.
1. ತುಪ್ಪ
ಜೀರ್ಣಕ್ರಿಯೆಯ ತೊಂದರೆಗಳಿಗೆ ಔಷಧಿಯಾಗಿ ತುಪ್ಪವನ್ನು ಆಯುರ್ವೇದ ಸಾವಿರಾರು ವರ್ಷಗಳಿಂದ ಬಳಸುತ್ತಿದೆ. ಇದರ ಜೊತೆ ಮೂತ್ರ ಸಂಬಂಧಿ ತೊಂದರೆಗಳು, ಬೆನ್ನುಹುರಿಯ ತೊಂದರೆಗಳು ಹಾಗೂ ಒಟ್ಟಾರೆ ಆರೋಗ್ಯ ವೃದ್ಧಿಗೂ ತುಪ್ಪದ ಬಳಕೆ ಬಳಕೆಯಲ್ಲಿದೆ. ಇದಕ್ಕಾಗಿ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವೇ ಉತ್ತಮವಾಗಿದೆ. ಇದಕ್ಕೆ ಕೊಂಚ ಪ್ರಮಾಣದಲ್ಲಿ ಕುರಿಯ ಹಾಲಿನಿಂದ ಪ್ರತ್ಯೇಕಿಸಲ್ಪಟ್ಟ ಅಂಶಗಳನ್ನು ಸೇರಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ.
ಈ ಅಂಶಗಳನ್ನು ಬಳಸಿ ತಯಾರಿಸಲ್ಪಟ್ಟ ಔಷಧಿಯಾದ ಛಾಗಲದ್ಯ ಗೃತ ವೃದ್ದಾಪ್ಯವನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿ ತಾರುಣ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹದಾರ್ಢ್ಯತೆಯನ್ನೂ ಉತ್ತಮಗೊಳಿಸುತ್ತದೆ.
ಸೇವಿಸಬಹುದಾದ ಪ್ರಮಾಣ: ದಿನಕ್ಕೆ ಒಂದು ಅಥವಾ ಎರಡು ಬಾರಿಯಂತೆ 3-5 ಮಿ.ಲೀ. ಅಥವಾ ನಿಮ್ಮ ವೈದ್ಯರು ತಿಳಿಸುವ ಪ್ರಮಾಣದಂತೆ.
2. ಶಿಲಜಿತ್
ಒಟ್ಟಾರೆ ಆರೋಗ್ಯ ವೃದ್ಧಿ ಹಾಗೂ ಕೆಲವಾರು ಕಾಯಿಲೆಗಳಿಂದ ರಕ್ಷಣೆ ಪಡೆಯಲು ವಿಶೇಷವಾಗಿ ಅಲ್ಜೀಮರ್ಸ್ ಕಾಯಿಲೆಯಿಂದ ತಡೆಯಲ್ಪಡಲು ಈ ಔಷಧಿಯನ್ನು ಬಳಸಲಾಗುತ್ತದೆ. ಉಳಿದಂತೆ ಅತೀವ ಸುಸ್ತು, ನಿದ್ರಾರಾಹಿತ್ಯ, ಕಬ್ಬಿಣದ ಕೊರತೆ, ರಕ್ತಹೀನತೆ ಮೊದಲಾದವು. ಶಿಲಜಿತ್ ನಲ್ಲಿ ಪ್ರಮುಖ ಅಂಶವಾಗಿರುವ ಫಲ್ವಿಕ್ ಆಮ್ಲ ಅದ್ಭುತವಾದ ಅಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ತ್ವಚೆಗೆ ಹಾನಿ ಎಸಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ ಹಾಗೂ ತ್ವಚೆಯನ್ನು ವೃದ್ಧಾಪ್ಯ ಆವರಿಸುವುದರಿಂದ ತಡೆಯುತ್ತದೆ.
ಈ ಉತ್ಪನ್ನದ ನಿಯಮಿತ ಸೇವನೆಯಿಂದ ಒಟ್ಟಾರೆ ಆರೋಗ್ಯ ವೃದ್ಧಿಸುವ ಜೊತೆಗೇ ವೃದ್ಧಾಪ್ಯದ ಲಕ್ಷಣಗಳು ಆವರಿಸುವುದು ತಡವಾಗುತ್ತದೆ.
ಸೇವಿಸಬಹುದಾದ ಪ್ರಮಾಣ: ದಿನಕ್ಕೆ 200 ಮಿಲಿ ಗ್ರಾಂ, ಹಾಲಿನ ಜೊತೆಗೆ, ಅಥವಾ ನಿಮ್ಮ ವೈದ್ಯರು ತಿಳಿಸುವ ಪ್ರಮಾಣದಂತೆ.
3. ರಕ್ತ ಸ್ವಚ್ಛಕಾರಕ
ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು ಹಾಗೂ ಕಲ್ಮಶಗಳನ್ನು ಕೊಂಡೊಯ್ದು ವಿಸರ್ಜಿಸುವುದು ರಕ್ತದ ಒಂದು ಪ್ರಮುಖ ಕೆಲಸ. ಕಲ್ಮಶಗಳನ್ನು ಪರಿಪೂರ್ಣವಾಗಿ ವಿಸರ್ಜಿಸಲು ಸಾಧ್ಯವಾಗದೇ ಹೋದಾಗ ರಕ್ತ ಮಲಿನಗೊಳ್ಳುತ್ತದೆ. ಹಾಗಾಗಿ, ರಕ್ತವನ್ನು ಆಗಾಗ ಶುದ್ಧೀಕರಿಸುವುದು ಅಗತ್ಯವಾಗಿದೆ. ಇದು ಸಾಧ್ಯವಾಗದಿದ್ದರೆ ತ್ವಚೆಗೆ ದೊರಕುವ ಪೋಷಕಾಂಶಗಳ ಪ್ರಮಾಣದಲ್ಲಿ ಕಡಿಮೆಯಾಗಿ ತ್ವಚೆ ಬಳಲುತ್ತದೆ ಹಾಗೂ ವೃದ್ಧಾಪ್ಯದ ಚಿಹ್ನೆಗಳು ಸುಲಭವಾಗಿ ಅವರಿಸತೊಡಗುತ್ತವೆ.
ರಕ್ತ ಸ್ವಚ್ಛಕಾರಕ ಈ ನಿಟ್ಟಿನಲ್ಲಿ ಅತ್ಯುತ್ತಮವಾದ ಪೋಷಣೆಯನ್ನು ನೀಡುವ ಔಷಧಿಯಾಗಿದ್ದು ರಕ್ತದಲ್ಲಿರುವ ಮಲಿನವಸ್ತುಗಳನ್ನು ನಿವಾರಿಸಿ ರಕ್ತ ಅತ್ಯುತ್ತಮ ಕ್ಷಮತೆಯನ್ನು ಪಡೆಯಲು ನೆರವಾಗುತ್ತದೆ. ತನ್ಮೂಲಕ ಪ್ರತಿ ಜೀವಕೋಶವೂ ಪರಿಪೂರ್ಣ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ರಕ್ತದ ಕ್ಷಮತೆ ಪರಿಪೂರ್ಣವಾಗಿದ್ದಾಗ ರಕ್ತದ ಇತರ ಕಾರ್ಯಗಳೂ ಪೂರ್ಣಕ್ಷಮತೆಯಿಂದಲೇ ನಡೆಯುತ್ತವೆ. ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವಿಕೆ ಕ್ಷಿಪ್ರವಾಗುವುದು, ಮೊಡವೆಗಳಿದ್ದರೆ ಶೀಘ್ರವೇ ಗುಣವಾಗುವುದು, ತ್ವಚೆ ಒಣಗುವುದನ್ನು ತಡೆಯುವುದು ಮೊದಲಾದ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಕೇವಲ ತ್ವಚೆ ಮಾತ್ರವಲ್ಲ, ದೇಹದ ಎಲ್ಲಾ ಕಾರ್ಯಗಳೂ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.
ಸೇವಿಸಬಹುದಾದ ಪ್ರಮಾಣ: ನಿಮ್ಮ ವೈದ್ಯರು ತಿಳಿಸುವ ಪ್ರಮಾಣದಂತೆ.
4. ಮೋರಿಂಗಾ ಅಥವ ನುಗ್ಗೆಸೊಪ್ಪಿನ ಸಾರ
ತ್ವಚೆ ಆರೋಗ್ಯಕರವಾಗಿರಲು ಏನೇನು ಬೇಕೋ ಅದೆಲ್ಲಾ ಈ ನುಗ್ಗೆಸೊಪ್ಪಿನಲ್ಲಿದೆ. ಈ ಸೊಪ್ಪಿನಿಂದ ಪ್ರತ್ಯೇಕಿಸಲ್ಪಟ್ಟ ಸಾರದ ಸೇವನೆಯಿಂದ ತ್ವಚೆ ಆರೋಗ್ಯಕರವಾಗಿರುವ ಜೊತೆಗೇ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ ಹಾಗೂ ಹೃದಯಸಂಬಂಧಿ ಚಟುವಟಿಕೆಗಳೂ ಉತ್ತಮಗೊಳ್ಳುತ್ತವೆ.
ಇದರಲ್ಲಿ ಹಲವಾರು ಅಮೈನೋ ಆಮ್ಲಗಳು, ಖನಿಜಗಳಾದ ಮೆಗ್ನೀಶಿಯಂ, ಕಬ್ಬಿಣ, ಪೊಟ್ಯಾಶಿಯಂ, ಸತು ಮತ್ತು ಗಂಧಕಗಳಿವೆ. ಇದರ ಸೇವನೆಯಿಂದ ವೃದ್ಧಾಪ್ಯ ದೂರಾಗುವ ಪ್ರಯೋಜನಗಳು, ಆರೋಗ್ಯಕರ ಮೂಳೆಸಂಧುಗಳು, ಹಾಗೂ ಯಕೃತ್ ನ ಕ್ಷಮತೆ ಹೆಚ್ಚುತ್ತದೆ.
ಸೇವಿಸಬಹುದಾದ ಪ್ರಮಾಣ: ದಿನಕ್ಕೆ ಮೂರು ಗ್ರಾಂ ನಷ್ಟು (ಅಥವಾ ವೈದ್ಯರ ಸಲಹೆಯ ಪ್ರಕಾರ)
5. ರಾಸಾಯನ
ಆಹಾರದಲ್ಲಿ ಆರೋಗ್ಯಕ್ಕೆ ಅಗತ್ಯವಾಗಿರುವ ಕೆಲವು ಪೋಷಕಾಂಶಗಳು ದೊರಕದೇ ಹೋದಾಗ ತ್ವಚೆ ಬಳಲಿದಂತೆ ಮತ್ತು ಸುಸ್ತಾದ ಅನಿಸಿಕೆ ಎದುರಾಗುತ್ತದೆ. ನಿತ್ಯವೂ ಒಂದೇ ಬಗೆಯ ಆಹಾರಗಳನ್ನು ಸೇವಿಸುವವರಲ್ಲಿ ಈ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು. ಈ ತೊಂದರೆ ಎದುರಾದವರ ತ್ವಚೆಯಲ್ಲಿ ಕಪ್ಪು ಕಲೆಗಳು ಶೀಘ್ರವಾಗಿ ಮೂಡತೊಡಗುತ್ತವೆ. ಇದನ್ನು ಪರಿಹರಿಸಲು ಆಯುರ್ವೇದ ಕೆಲವು ಮೂಲಿಕೆಗಳ ಸೇವನೆಯನ್ನು ಔಷಧಿಯ ರೂಪದಲ್ಲಿ ಪ್ರಸ್ತುತಪಡಿಸಿದೆ. ಈ ರಾಸಾಯನ ತ್ವಚೆ ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಮತ್ತೊಮ್ಮೆ ಪಡೆಯುವಂತೆ ಮಾಡುತ್ತದೆ ಹಾಗೂ ಇವುಗಳ ಕೊರತೆಯಿಂದ ಎದುರಾಗಿದ್ದ ಪರಿಣಾಮಗಳನ್ನು ನೈಸರ್ಗಿಕವಾಗಿ ಹಿಂದಿನ ಸ್ಥಿತಿಗೆ ಕೊಂಡೊಯ್ಯುವಂತೆ ಮಾಡುತ್ತದೆ.
ಇದರ ಸೇವನೆಯಿಂದ ತ್ವಚೆ ವೃದ್ದಾಪ್ಯ ಪಡೆಯುವ ಗತಿಯನ್ನು ತಡವಾಗಿಸಬಹುದು. ತನ್ಮೂಲಕ ಸೂಕ್ಷ್ಮಗೆರೆಗಳು, ನೆರಿಗೆಗಳು, ಕೂದಲು ನೆರೆಯುವುದು ಮೊದಲದವುಗಳನ್ನು ತಡೆಯುವ ಜೊತೆಗೇ ಮಾನಸಿಕ ಕ್ಷಮತೆ ಉಡುಗುವುದನ್ನು ತಡೆಯುತ್ತದೆ, ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಇತರ ವೃದ್ದಪ್ಯ ಸಂಬಂಧಿ ತೊಂದರೆಗಳು ಎದುರಾಗುವುದನ್ನು ತಡೆಯುತ್ತದೆ.
ಸೇವಿಸಬಹುದಾದ ಪ್ರಮಾಣ: ದಿನಕ್ಕೆ ಒಂದು ಲೋಟ ಹಾಲಿನಲ್ಲಿ ಹನ್ನೆರಡು ಗ್ರಾಂ ಬೆರೆಸಿ ಸೇವಿಸಬೇಕು ಅಥವಾ ನಿಮ್ಮ ವೈದ್ಯರ ಸಲಹೆಯ ಪ್ರಕಾರ.
6. ಹರಿತಕಿ ಪುಡಿ (ಅಳಲೇಕಾಯಿ ಪುಡಿ)
ಸಾಮಾನ್ಯವಾಗಿ ಆಯುರ್ವೇದ ಪಂಡಿತರಿಗೆ ಅಳಲೇಕಾಯಿ ಪಂಡಿತರು ಎಂಬ ಅನ್ವರ್ಥನಾಮವೂ ಇದೆ. ಹಾಗೆಂದ ಮೇಲೆ ಈ ಅಳಲೇಕಾಯಿ ಯಾವುದಕ್ಕೆ ಔಷಧಿಯಲ್ಲ ಎಂದು ನಾವು ಊಹಿಸಿಕೊಳ್ಳಬಹುದು. ವಿಶೇಷವಾಗಿ ಉತ್ತಮ ಆರೋಗ್ಯ ಹಾಗೂ ವೃದ್ದಾಪ್ಯ ತಡವಾಗಿಸುವಿಕೆಗೆ ಅಳಲೇಕಾಯಿ ಉತ್ತಮವಾಗಿದೆ. ಈ ವಿಷಯವನ್ನು ಚರಕ ಸಂಹಿತೆಯಲ್ಲಿಯೂ ಉಲ್ಲೇಖಿಸಲಾಗಿದೆ. ಇದು ಕೇವಲ ಸೌಂದರ್ಯಕಾರಕ ಮಾತ್ರವಲ್ಲ, ಗುಣಪಡಿಸುವ ಔಷಧಿಯೂ ಆಗಿದೆ.
ನಿಸರ್ಗದಲ್ಲಿ ಸಿಗುವ ಅಳಲೇಕಾಯಿಯ ಪುಡಿಯನು ಯಾವುದೇ ಬೆರಕೆ ಅಥವಾ ಹಾನಿಕಾರಕ ಸಂರಕ್ಷಕಗಳ ನೆರವಿಲ್ಲದೇ ಅಥವಾ ಉಪ್ಪು ಸಕ್ಕರೆ ಬೆರೆಸಿ ಇದನ್ನು ರುಚಿಕರವಾಗಿಸದೇ ಅಪ್ಪಟ ರೂಪದಲ್ಲಿ ಈ ಉತ್ಪನ್ನದ ಮೂಲಕ ಗ್ರಾಹಕರಿಗೆ ಒದಗಿಸಲಾಗುತ್ತದೆ. ಅಲ್ಲದೇ ಆಯುರ್ವೇದ ವ್ಯವಸ್ಥೆಗೆ ಅನುಗುಣವಾಗಿ ಹಾಗೂ ಗುಣಮಟ್ಟವನ್ನು ಕಾಪಾಡಿಕೊಂಡು ಬರವಂತೆ ತಯಾರಿಸಲ್ಪಟ್ಟಿದೆ.
ದಿನಕ್ಕೆ ಎರಡರಿಂಡ ನಾಲ್ಕು ಗ್ರಾಂ ಅಥವಾ ನಿಮ್ಮ ವೈದ್ಯರ ಸಲಹೆಯ ಪ್ರಕಾರ.
7. ಅಶ್ವಗಂಧ
ಅಶ್ವಗಂಧ ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ತ್ವಚೆಯನ್ನು ವೃದ್ದಾಪ್ಯದ ಧಾಳಿಯಿಂದ ರಕ್ಷಿಸುತ್ತದೆ. ಅಲ್ಲದೇ ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ ಹಾಗೂ ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಕಣಗಳ ಧಾಳಿಯಿಂದಲೂ ರಕ್ಷಿಸುತ್ತದೆ. ಈ ಮಾತ್ರೆಯ ಸೇವನೆಯಿಂದ ಒಟ್ಟಾರೆ ಆರೋಗ್ಯ ವೃದ್ದಿಸುವ ಜೊತೆಗೇ ಮಾನಸಿಕ ಒತ್ತಡದಿಂದಲೂ ಪರಿಹಾರ ದೊರಕುತ್ತದೆ.
ಸೇವಿಸಬಹುದಾದ ಪ್ರಮಾಣ: ದಿನಕ್ಕೆರಡು ಹೊತ್ತಿನಲ್ಲಿ ಊಟದ ಬಳಿಕ ತಲಾ ಒಂದು ಮಾತ್ರೆಯಂತೆ ಅಥವಾ ನಿಮ್ಮ ವೈದ್ಯರ ಸಲಹೆಯ ಮೇರೆಗೆ.
ನಿಸರ್ಗ ನೀಡಿರುವ ತ್ವಚೆ ಕಾಪಾಡಿಕೊಳ್ಳಿ
ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆಗೆ ನಿಸರ್ಗ ನೀಡಿರುವ ತ್ವಚೆಯನ್ನು ಮೂಲರೂಪದಲ್ಲಿ ಕಾಪಾಡಿಕೊಳ್ಳುವುದೇ ಅತ್ಯುತ್ತಮ ಆರೈಕೆಯಾಗಿದೆ. ಇದಕ್ಕೆ ದೇಹದ ಒಳಗಿನಿಂದ ದೊರಕುವ ಆರೈಕೆಯೇ ಅತ್ಯುತ್ತಮವಾದವು. ಆದರೆ ಕೇವಲ ಔಷಧಿಗಳ ಮೇಲೆ ಎಲ್ಲಾ ಭಾರವನ್ನು ಹಾಕಿ ಉಳಿದ ಆರೋಗ್ಯವನ್ನು ಕಡೆಗಣಿಸಿದರೆ ನಿರೀಕ್ಷಿತ ಫಲ ದೊರಕದು. ಹಾಗಾಗಿ, ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪಡೆಯಲು ಆರೋಗ್ಯಕರ ಆಹಾರಕ್ರಮ ಮತ್ತು ಜೀವನಕ್ರವಮೂ ಮುಖ್ಯವಾಗಿದೆ. ಸಮತೋಲನ ಆಹಾರ, ಸಾಕಷ್ಟು ವ್ಯಾಯಾಮ, ಸಾಕಷ್ಟು ನಿದ್ದೆ, ಆಹಾರದಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿರುವುದು ಎಲ್ಲವೂ ಮುಖ್ಯವಾಗಿದ್ದು ಇದರ ಜೊತೆಗೇ ಈ ಔಷಧಿಗಳನ್ನು ಸೇವಿಸಿದಾಗ ಇವುಗಳ ಪರಿಪೂರ್ಣ ಪ್ರಯೋಜನ ಪಡೆಯಬಹುದು.
ಇವನ್ನು ಅನುಸರಿಸುವ ಪ್ರಾರಂಭದಲ್ಲಿ ಯಾವುದೇ ಪರಿಣಾಮ ಗೋಚರಿಸದೇ ಹೋಗಬಹುದು, ಆದರೆ ಇವು ನಿಧಾನವಾಗಿಯಾದರೂ ಸರಿ, ಕ್ರಮೇಣ ಉತ್ತಮ ಫಲವನ್ನೇ ನೀಡುತ್ತವೆ. ನಿಸರ್ಗವೇ ಹಾಗಲ್ಲವೇ, ಮಾವಿನ ಹಣ್ಣು ಏಕಾಏಕಿ ದೊರಕುತ್ತದೆಯೇ? ಮಿಡಿಯಾಗಿ ಕಾಯಾಗಿ ಬಲಿತು ಹಣ್ಣಗಿಯೇ ಅಲ್ಲವೇ ಸಿಗುವುದು? ಅಂತೆಯೇ ನಿಮ್ಮ ಆಹಾರ ಮತ್ತು ಆರೋಗ್ಯಕ್ರಮಗಳು ಉತ್ತಮವಾದಂತೆಯೇ ಈ ಔಷಧಿಗಳೂ ಉತ್ತಮ ಪರಿಣಾಮವನ್ನೇ ನೀಡುವುದು. ಇಂದಿನಿಂದಲೇ ನಿಮಗೆ ಸೂಕ್ತವಾದ ಔಷಧಿಯನ್ನು ಪ್ರಯತ್ನಿಸಿ, ಪರಿಣಾಮದ ಬಗ್ಗೆ ಕೆಳಗಿನ ಕಂಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.