Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಭಯ ಹುಟ್ಟಿಸುವ ಮಳೆಗಾಲದ ಕಾಯಿಲೆಗಳಿಗೆ-ಆಯುರ್ವೇದ ಚಿಕಿತ್ಸೆ
ಮುಂಗಾರು ಮಳೆಯ ಸಿಂಚನದಿಂದ ಬಿಸಿಲ ಬೇಗೆ ಕೊಂಚ ಕಡಿಮೆಯಾದರೂ ಕೆಸರು, ಗಾಳಿಯಲ್ಲಿನ ತೇವಾಂಶ ಮೊದಲಾದವುಗಳ ಮೂಲಕ ಶೀತ ನೆಗಡಿ ಮೊದಲಾದ ವೈರಸ್ಸುಗಳ ಸೋಂಕಿನಿಂದ ಬರಬಹುದಾದ ಕಾಯಿಲೆಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಮಾನ್ಸೂನಿನಲ್ಲಿ ಅಥವಾ ಮಳೆಗಾಲದಲ್ಲಿ ಕಾಡುವ ಇನ್ನೊಂದು ತೊಂದರೆ ಎಂದರೆ ಅತಿಸಾರ. ಏಕೆಂದರೆ ಮಳೆಯ ಮೊದಲ ಹನಿಗಳು ಗಾಳಿಯಲ್ಲಿದ್ದ ಹೊಗೆ ಮತ್ತು ರಾಸಾಯನಿಕಗಳನ್ನು ತಮ್ಮೊಂದಿಗೆ ಕರಗಿಸಿಕೊಂಡು ಕುಡಿಯುವ ನೀರಿನಲ್ಲಿ ಬೆರೆತು ಈ ನೀರನ್ನು ಕುಡಿದವರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡುತ್ತದೆ.
ನಿಂತ ನೀರಿನಲ್ಲಿ ಸೊಳ್ಳೆಗಳೂ ಅತಿಯಾಗಿ ವೃದ್ಧಿಸಿ ಕಚ್ಚಿ ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್, ನ್ಯೂಮೋನಿಯಾ ಮೊದಲಾದ ಕಾಯಿಲೆಗಳನ್ನು ಉಂಟುಮಾಡುತ್ತವೆ. ಅಷ್ಟೇ ಅಲ್ಲ, ಕಣ್ಣು ಕೆಂಪಗಾಗುವ ಮದ್ರಾಸ್ ಕಣ್ಣಿಗೂ ಮಾನ್ಸೂನಿನ ಮೊದಲ ದಿನಗಳೇ ಹೆಚ್ಚು ಪ್ರಿಯವಾಗಿವೆ. ಮಳೆಗಾಲದ ಅತಿಥಿಗಳು..! ದಯವಿಟ್ಟು ಇವರಿಂದ ದೂರವಿರಿ!
ಪ್ರತಿಬಾರಿಯೂ ಗಾಳಿಯಲ್ಲಿ ಹೊಸ ಹೊಸ ವಿಧದ ವೈರಸ್ಸುಗಳು ಆಗಮಿಸುತ್ತಲೇ ಇರುವ ಕಾರಣ ಎಲ್ಲರಿಗೂ ಕೊಂಚವಾದರೂ ಮಳೆಗಾಲ ಕಾಟ ಕೊಟ್ಟೇ ಕೊಡುತ್ತದೆ. ಅದರಲ್ಲೂ ಜೀವ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ರೋಗ ಹಿಡಿಯುವ ಸಂಭವ ಅತಿ ಹೆಚ್ಚು. ವೈದ್ಯರ ಬಳಿ ಈ ಸಮಯದಲ್ಲಿ ಬರುವ ರೋಗಿಗಳನ್ನು ಗಮನಿಸಿದರೆ ಮಕ್ಕಳು ಮತ್ತು ವೃದ್ದರೇ ಹೆಚ್ಚಾಗಿರುವುದು ಕಂಡುಬರುತ್ತದೆ.
ಏಕೆಂದರೆ ಹೊಸ ವೈರಸ್ಸುಗಳಿಗೆ ಮಕ್ಕಳಲ್ಲಿ ಜೀವ ನಿರೋಧಕ ಶಕ್ತಿ ಪ್ರಾರಂಭವಾಗಿರುವುದಿಲ್ಲ, ವೃದ್ದರಲ್ಲಿ ಈ ಶಕ್ತಿ ಕುಂಠಿತವಾಗಿರುತ್ತದೆ. ಆಯುರ್ವೇದದ ಪ್ರಕಾರ ಯಾವಾಗ ವಾತಾವರಣದಲ್ಲಿ ಬದಲಾವಣೆಯಾಯಿತೋ, ವಿಶೇಷವಾಗಿ ಒಣಹವೆಯಿಂದ ಮಳೆಗೆ ಬದಲಾಯಿತೋ, ಆಗ ನಮ್ಮ ದೇಹದ ಪಿತ್ತದೋಶ ವಿಕಾರಗೊಳ್ಳುತ್ತದೆ. ಈ ವಿಕಾರ ಹಲವು ಸೋಂಕುಗಳಿಗೆ ಆಹ್ವಾನ ನೀಡುತ್ತದೆ. ಮಳೆಗಾಲದಲ್ಲಿ ಸರಳ ಆಯುರ್ವೇದ ಸೂತ್ರ ಅನುಸರಿಸಿ
ಆರೋಗ್ಯದ ವಿಷಯ ಬಂದಾಗ ಕಾಯಿಲೆ ಬಂದ ಮೇಲೆ ವಾಸಿ ಮಾಡುವುದಕ್ಕಿಂತಲೂ ಬರದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮ ಎಂದು ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ಈ ಮಳೆಗಾಲದ ದಿನಗಳಲ್ಲಿ ನಿಮ್ಮ ಮೇಲೆ ಧಾಳಿ ಇಡಲು ಸಿದ್ಧರಾಗಿ ಬಿಲ್ಲು ಬಾಣ ಹಿಡಿದು ಸಜ್ಜಾಗಿರುವ ವೈರಸ್ಸುಗಳ ಧಾಳಿಯನ್ನು ಎದುರಿಸಲು ನಿಮ್ಮನ್ನು ಸಜ್ಜುಗೊಳಿಸಲು ಆಯುರ್ವೇದ ನೀಡಿರುವ ಅತ್ಯುತ್ತಮ ಹತ್ತು ಪ್ರತ್ಯಾಸ್ತ್ರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಬೇವಿನ ಎಲೆಗಳು
ರುಚಿಯಲ್ಲಿ ಕಹಿಯಾದರೂ ವೈರಸ್ಸುಗಳನ್ನು ಎದುರಿಸಲು ಈ ಎಲೆಗಳು ಸಮರ್ಥವಾಗಿವೆ. ಕೊಂಚ ನೀರಿನಲ್ಲಿ ಹತ್ತರಿಂದ ಹನ್ನೆರಡು ಕಹಿಬೇವಿನ ಎಲೆಗಳನ್ನು ಕುದಿಸಿ ತಣಿಸಿ ಬಳಿಕ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ದಿನಕ್ಕೆ ಮೂರು ನಾಲ್ಕು ಬಾರಿ ಕುಡಿಯಿರಿ. ಇದರಿಂದ ರೋಗ ನಿರೋಧಕ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರನಿವಾರಕ ಮತ್ತು ವೈರಸ್ ನಿವಾರಕ ಗುಣಗಳಿವೆ. ಈ ಗುಣಗಳನ್ನು ಕೆಲಸಕ್ಕೆ ಹಚ್ಚಬೇಕಾದರೆ ಸುಮಾರು ಮೂರು ನಾಲ್ಕು ಬೆಳ್ಳುಳ್ಳಿಯ ಎಸಳುಗಳನ್ನು ಸುಲಿದು ಹಸಿಯಾಗಿಯೇ ಅಗಿದು ನುಂಗಬೇಕು. ಪ್ರತಿ ಊಟದ ಬಳಿಕ ಒಂದೊಂದು ತಿಂದರೂ ಸಾಕು. ಇದರ ಘಾಟಿನಿಂದ ತಿನ್ನಲು ಸಾಧ್ಯವಾಗದಿದ್ದರೆ ಊಟದ ಕಡೆಯ ತುತ್ತಿನೊಂದಿಗೆ ಜಜ್ಜಿದ ಒಂದು ಎಸಳನ್ನು ನುಂಗಿದರೂ ಸರಿ. ಇದರಿಂದ ವಿಶೇಷವಾಗಿ ವೈರಸ್ ಮೂಲಕ ಬರುವ ಜ್ವರವನ್ನು ಮತ್ತು ಶೀತವನ್ನು ಎದುರಿಸಬಹುದು.

ಹಸಿಶುಂಠಿ
ಹಸಿಶುಂಠಿಗೆ ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಪಾತ್ರವಿದ್ದು ಇದನ್ನೊಂದು ಪ್ರಬಲ ಔಷಧವೆಂದು ಪರಿಗಣಿಸಲಾಗಿದೆ. ಒಂದು ಚಿಕ್ಕ ಚೂರು ಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ ಕೊಂಚ ನೀರಿನಲ್ಲಿ ಕುದಿಸಿ ತಣಿದ ಬಳಿಕ ಸೋಸಿ ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಅಥವಾ ಚಿಕ್ಕದಾಗಿ ಹೆಚ್ಚಿರುವ ಶುಂಠಿಯನ್ನು ನಿಮ್ಮ ನಿತ್ಯದ ಟೀ ಯೊಂದಿಗೆ ಕೊಂಚ ಲಿಂಬೆ ಮತ್ತು ಜೇನು ಬೆರೆಸಿಯೂ ಸೇವಿಸಬಹುದು.

ಜೇನು
ಜೇನಿನಲ್ಲಿ ಆಂಟಿಆಕ್ಸಿಡೆಂಟುಗಳು ಹೇರಳವಾಗಿವೆ. ಇದರ ಸೂಕ್ಷ್ಮಾಣು ಪ್ರತಿಜೀವಕ ಗುಣ ಹಲವು ಸೂಕ್ಷ್ಮಾಣುಗಳನ್ನು ದೂರವಿರಿಸಲು ನೆರವಾಗುತ್ತದೆ. ತಲಾ ಒಂದು ದೊಡ್ಡಚಮಚ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಕೊಂಚ ಬಿಸಿನೀರಿನಲ್ಲಿ ಕದಡಿ ಕುಡಿಯುವ ಮೂಲಕ ಕೆಮ್ಮು, ಗಂಟಲ ಬೇನೆ, ಕಟ್ಟಿಕೊಳ್ಳುವ ಮೂಗು ಮೊದಲಾದವುಗಳಿಂದ ರಕ್ಷಣೆ ದೊರಕುತ್ತದೆ. ವಿಶೇಷವಾಗಿ ಕಫ ಕಟ್ಟಿಕೊಂಡಿದ್ದರೆ ಈ ನೀರನ್ನು ದಿನಕ್ಕೆ ಮೂರು ಬಾರಿ ಸಾಧ್ಯವಿದ್ದಷ್ಟು ಬಿಸಿಯಾಗಿ ಸೇವಿಸುವ ಮೂಲಕ ಕಫ ಸಡಿಲವಾಗಿ ಹೊರಬರಲು ನೆರವಾಗುತ್ತದೆ.

ಅರಿಶಿನ
ಬ್ಯಾಕ್ಟ್ರೀರಿಯಾ ನಿವಾರಕ ಮತ್ತು ವೈರಸ್ ನಿವಾರಕ ಗುಣ ಹೊಂದಿರುವ ಅರಿಶಿವೂ ಆಯುರ್ವೇದದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರ ವೈರಸ್ ನಿರೋಧಕ ಶಕ್ತಿ ಕೆಮ್ಮು ಮತ್ತು ಶೀತವನ್ನು ದೂರವಿಡಲು ಸಮರ್ಥವಾಗಿದೆ. ಇದಕ್ಕಾಗಿ ಬಿಸಿನೀರಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ ಸೇರಿಸಿ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಬಿಸಿಹಾಲಿನಲ್ಲಿ ಒಂದು ಚಮಚ ಸೇರಿಸಿ ಕುಡಿಯುವುದರಿಂದಲೂ ಉತ್ತಮ ರಕ್ಷಣೆ ದೊರಕುತ್ತದೆ.

ದಾಲ್ಚಿನ್ನಿ
ದಾಲ್ಚಿನ್ನಿ ಅಥವಾ ಚೆಕ್ಕೆಯಲ್ಲಿ ಸಹಾ ಬ್ಯಾಕ್ಟೀರಿಯಾ ನಿರೋಧಕ ಗುಣವಿದ್ದು ಶೀತ, ಕೆಮ್ಮು, ಗಂಟಲಬೇನೆಗಳಿಂದ ರಕ್ಷಿಸಲು ಸಮರ್ಥವಾಗಿದೆ. ದಿನಕ್ಕೆ ಎರಡು ಬಾರಿ ಚೆಕ್ಕೆಯನ್ನು ಚಿಕ್ಕದಾಗಿ ಕುಟ್ಟಿ ಪುಡಿಮಾಡಿ ಅರ್ಧ ಚಮಚದಷ್ಟನ್ನು ಒಂದು ಚಿಕ್ಕಚಮಚ ಜೇನಿನೊಂದಿಗೆ ಬೆರೆಸಿ ಸೇವಿಸಿ.

ಪಾರಿಜಾತ (Night Jasmine)
ಈ ಹೂವಿನಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ಶೀತ ಮತ್ತು ಕೆಮ್ಮು ನಿವಾರಿಸಲು ಉತ್ತಮವಾಗಿದೆ. ಇದಕ್ಕಾಗಿ ಈ ಹೂವಿನ ಕೆಲವು ಎಸಳುಗಳನ್ನು ಅರೆದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಸಮಪ್ರಮಾಣದಲ್ಲಿ ಜೇನಿನೊಂದಿಗೆ ಬೆರೆಸಿ ಕುಡಿಯಿರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

ತುಳಸಿ ಎಳೆಗಳು
ತುಳಸಿ ಎಲೆಗಳು ಯಾವುದಕ್ಕೆ ಔಷಧಿ ಎಂಬುದನ್ನು ಪಟ್ಟಿಮಾಡಹೊರಟರೆ ತುಂಬಾ ಉದ್ದವಾಗುತ್ತದೆ. ಇದರ ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳು ಜ್ವರ, ಮಲೇರಿಯಾ, ಗಂಟಲಬೇನೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಕೊಂಚ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಸೇರಿಸಿ ತಣಿಸಿ. ಬಳಿಕ ಈ ನೀರನ್ನು ಸೋಸಿ ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಿರಿ.

ಕ್ಯಾಮೊಮೈಲ್ ಟೀ
ಕ್ಯಾಮೋಮೈಲ್ ಎಂಬ ಗಿಡದಲ್ಲಿಯೂ ಹಲವು ಆಂಟಿ ಆಕ್ಸಿಡೆಂಟುಗಳಿವೆ. ಇವು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ವಿರುದ್ಧ ಹೋರಾಡಲು ಶಕ್ತವಾಗಿವೆ. ಕೆಲವು ಕ್ಯಾಮೋಮೈಲ್ ಗಿಡದ ಕೆಲವು ಒಣಗಿದ ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ಸೋಸಿ ಕುಡಿಯಿರಿ. ವಿಶೇಷವಾಗಿ ಶೀತ ಮತ್ತು ಗಂಟಲ ಬೇನೆ ಆವರಿಸಿದ್ದರೆ ಈ ನೀರು ತಕ್ಷಣವೇ ಪರಿಹಾರ ನೀಡುತ್ತದೆ.
ಕ್ಯಾಮೊಮೈಲ್ ಟೀ ತಯಾರಿಸಿಕೊಳ್ಳುವ ಬಗೆ: ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜೇನು ತುಪ್ಪ ಅಥವಾ ಸ್ವಲ್ಪ ಲಿಂಬೆರಸವನ್ನು ಬೆರೆಸಿಕೊಂಡು ಸೇವಿಸಿ.

ಹಸಿರು ಟೀ
ಹಸಿರು ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಶೀತ, ಸುರಿಯುವ ಮೂಗು, ಗಂಟಲಬೇನೆಯಿಂದ ಉಪಶಮನ ನೀಡುತ್ತದೆ. ಒಂದು ಲೋಟ ಕುದಿಯುವ ನೀರಿಗೆ ಒಂದು ಬ್ಯಾಗ್ ಹಸಿರು ಟೀ ಸೇರಿಸಿ ಸುಮಾರು ಐದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಈ ಟೀಯನ್ನು ನಿಧಾನವಾಗಿ ಹೀರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಮೂರು ಹೊತ್ತು ಈ ಟೀ ಕುಡಿಯಿರಿ.



Click it and Unblock the Notifications