Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚುಮುಚುಮು ಚಳಿ ಮತ್ತು ಆರೋಗ್ಯದ ಆರೈಕೆ
ನಿಸರ್ಗ ಪ್ರಕೃತಿದತ್ತವಾಗಿ ಮೂರು ಕಾಲಗಳನ್ನು ಮಾನವರಿಗೆ ನೀಡಿದೆ. ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಮತ್ತು ಬೇಸಿಗೆಯಲ್ಲಿ ಬಿಸಿಯ ಅನುಭವ ನಮಗಾಗಲಿ ಎಂದೇ ಪ್ರಕೃತಿ ಮೂರು ಕಾಲಗಳ ಮೂರು ಭಿನ್ನ ಅನುಭವಗಳನ್ನು ನಮಗೆ ನೀಡಿದೆ. ಎಷ್ಟೋ ಸಮಯದಿಂದ ಈ ಕಾಲಗಳ ವೈಪರೀತ್ಯಗಳನ್ನು ನಾವು ಅನುಭವಿಸಿಕೊಂಡು ಬರುತ್ತಿದ್ದೇವೆ. ಮಳೆಯ ಥಂಡಿ ಅನುಭವ, ಬೇಸಿಗೆಯ ಚುರುಕ್ ಎನ್ನುವ ಬಿಸಿಯ
ನಡುವೆಯೂ ಚಳಿಗಾಲದ ಕೊರೆಯುವ ಕುಳಿರ್ಗಾಳಿ ನಮ್ಮ ದೇಹಕ್ಕೆ ಅತ್ಯವಶ್ಯಕ ಎಂದೆನಿಸಿದೆ. ಮೂರು ಕಾಲಗಳಲ್ಲಿ ಒಂದು ಕಾಲದ ಗೈರುಹಾಜರಿ ನಮ್ಮ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಮೂರು ಕಾಲಗಳಲ್ಲಿ ಚಳಿಗಾಲ ನಮಗೆ ಏಕೋ ಹೆಚ್ಚು ಪ್ರಿಯವಾಗಿದೆ. ಚುಮುಗುಟ್ಟುವ ಚಳಿಯಿದ್ದರೂ ಒಂದು ರೀತಿಯ ಆಹ್ಲಾದತೆಯನ್ನು ನಮ್ಮ ಮೈಮನ ಒಳಗೊಂಡಿರುತ್ತದೆ. ಬಿಸಿ ಬಿಸಿ ಚಹಾದ ಹೀರುವಿಕೆಯೊಂದಿಗೆ
ಬಿಸಿ ಬಿಸಿ ಬಜ್ಜಿ ಬೋಂಡಾದಂತಹ ಕುರುಕಲು ತಿಂಡಿಗಳ ಸೇವನೆ ಚಳಿಗಾಲದ ಚಳಿಯನ್ನು ನವಿರಾಗಿಸುತ್ತದೆ. ಚಳಿಗಾಲದಲ್ಲಿ ದೇಹವು ಜಡ್ಡುಗಟ್ಟಿರುತ್ತದೆ. ಬೇಗನೇ ಏಳಬೇಕು ಎಂಬ ದೃಢ ಸಂಕಲ್ಪದಿಂದ ರಾತ್ರಿ ಮಲಗಿದ್ದರೂ ಹಾಳು ಚಳಿ ಇನ್ನು ಸ್ವಲ್ಪ ಮಲಗಬೇಕು ಎನ್ನುವ ಆಸೆಯನ್ನು ನಮ್ಮಲ್ಲಿ ಉಂಟುಮಾಡಿ ಬೆಚ್ಚಗೆ ಹೊದ್ದು ಮಲಗುವಂತೆ ಮಾಡುತ್ತದೆ. ಯಾವ ಕಾಲವಾದರೂ ನಮ್ಮ ದೇಹವೆಂಬ ಇಂಜಿನ್ಗೆ ಆಹಾರದ ಇಂಧನವನ್ನು ತುಂಬಿಸಲೇಬೇಕು. ಚಳಿಗಾಲದಲ್ಲಿ ಆಹಾರಗಳು ದೇಹವನ್ನು ಬೆಚ್ಚಗಿರಿಸು ಗುಣಗಳನ್ನು ಹೊಂದಿರಬೇಕು.
ಇದರಿಂದ ನಮ್ಮ ದೇಹಕ್ಕೆ ಅನುಕೂಲ ಜಾಸ್ತಿ. ನಾವು ಸೇವಿಸುವ ಆಹಾರ ಪದಾರ್ಥಗಳ ಮೂಲಕ ಕರುಳುಗಳು ಕ್ಯಾಲೋರಿಗಳನ್ನು ಒಮ್ಮೆಲೆ ಬಿಡುಗಡೆ ಮಾಡದೇ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಇದರಿಂದ ದೇಹ ಬಿಸಿಯಾಗಿ ಆರೋಗ್ಯಕರವಾಗಿ ಇರುತ್ತದೆ. ಇಂತಹ ಆಹಾರಗಳು ಕಾರ್ಬೋಹೈಡ್ರೇಟ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಪಚನ ಕ್ರಿಯೆಗೆ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಇದರಿಂದ ಜೀವರಾಸಾಯನಿಕ ಕ್ರಿಯೆಯಲ್ಲಿ ಏರಿಕೆಯಾಗುತ್ತದೆ. ಇಂದಿನ ಲೇಖನದಲ್ಲಿ ಚಳಿಗಾಲದಲ್ಲಿ ನೀವು ಸೇವಿಸಬೇಕಾದ ವಿಶೇಷ ಆಹಾರ ಪದಾರ್ಥಗಳ ವಿವರಗಳನ್ನು ನೀಡುತ್ತಿದ್ದೇವೆ.

ಮೆಂತೆಸೊಪ್ಪು
ಮೆಂತೆಸೊಪ್ಪಿನಲ್ಲಿ ಪ್ರಮುಖವಾಗಿ ವಿಟಮಿನ್ ಕೆ ಇದೆ. ಈ ವಿಟಮಿನ್ ನಮ್ಮ ರಕ್ತ ಹೆಪ್ಪುಗಟ್ಟಲು ಅತ್ಯವಶ್ಯವಾಗಿದೆ. ಇದರೊಂದಿಗೆ ಕಬ್ಬಿಣ ಮತ್ತು ಫೋಲಿಕ್ ಆಮ್ಲಗಳಿವೆ. ಈ ಎಲ್ಲಾ ಪೋಷಕಾಂಶಗಳು ದೇಹದ ಉಷ್ಣಾಂಶವನ್ನು ಹೆಚ್ಚು ಹೊತ್ತು ಕಾಪಿಡಲು ನೆರವಾಗುತ್ತವೆ ಹಾಗೂ ಚಳಿಗಾಲವನ್ನು ದೇಹ ಸಮರ್ಥವಾಗಿ ಎದುರಿಸಲು ಸಹಕರಿಸುತ್ತವೆ.

ಕ್ಯಾರೆಟ್
ಬಗ್ಸ್ ದ ಬನ್ನಿ ಎಂಬ ಮೊಲ ಯಾವಾಗಲೂ ಕ್ಯಾರೆಟ್ಟೊಂದನ್ನು ಕಚ್ಚಿ ಮೆಲುಕು ಹಾಕುತ್ತಿರುವುದನ್ನು ಗಮನಿಸಿದ್ದೀರಲ್ಲಾ, ಈ ಮೊಲದ ಚೂಟಿತನಕ್ಕೆ ಅದೇ ಕಾರಣ. ಕ್ಯಾರೆಟ್ಟಿನಲ್ಲಿರುವ ವಿಟಮಿನ್ ಎ ಸಹಿತ ಹಲವು ಆಂಟಿ ಆಕ್ಸಿಡೆಂಟುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಪೋಷಕಾಂಶಗಳು ಚರ್ಮ, ಕೂದಲು, ಉಗುರು ಮತ್ತು ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.ಶೀತ, ನೆಗಡಿಯಿಂದ ದೇಹವನ್ನು ರಕ್ಷಿಸುತ್ತವೆ. ಕ್ಯಾರೆಟ್ಟನ್ನು ಹಸಿಯಾಗಿಯೂ, ರಸತೆಗೆದು ಜ್ಯೂಸ್ ಮಾಡಿಕೊಂಡು ಅಥವಾ ಕ್ಯಾರೆಟ್ಟುಗಳ ವಿವಿಧ ಭಕ್ಷ್ಯಗಳ ರೂಪದಲ್ಲಿಯೂ ಸೇವಿಸಬಹುದು. ಸಿದ್ಧರೂಪದಲ್ಲಿ ಸಿಗುವ ಜ್ಯೂಸ್ ಅಷ್ಟು ಪ್ರಯೋಜನಕಾರಿಯಲ್ಲ

ಕಿತ್ತಳೆ, ಮೂಸಂಬಿ ಅಂತಹ ಸಿಟ್ರಿಕ್ ಹಣ್ಣುಗಳು
ಲಿಂಬೆ ಜಾತಿಯ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿ, ಚಕ್ಕೋತ, ಗಜಲಿಂಬೆ ಮೊದಲಾದವುಗಳಲ್ಲಿ ಪ್ರಮುಖವಾಗಿ ವಿಟಮಿನ್ ಸಿ. ಮತ್ತು ರೋಗಗಳಿಗೆ ಕಾರಣವಾಗುವ ವೈರಸ್ಸುಗಳಿಗೆ ಎದುರಾಗಿ ಹೋರಾಡಲು ನೆರವಾಗುವ ಫ್ಲೇವನಾಯ್ಡ್ ಎಂದ ಪೋಷಕಾಂಶಗಳಿವೆ. ಅಲ್ಲದೇ, ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಹಾಕಿ ದೇಹದಲ್ಲಿ ಉತ್ತಮ ಕೊಲೆಸ್ಟರಾಲ್ ಶೇಖರವಾಗುವಲ್ಲಿ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಣ್ಣುಗಳ ಸೇವನೆ ದೇಹಕ್ಕೆ ಅತ್ಯುತ್ತಮವಾಗಿವೆ. ಆದರೆ ಇವುಗಳನ್ನು ತಾಜಾ ರೂಪದಲ್ಲಿ ಅಥವಾ ತಾಜಾ ಹಣ್ಣಿನಿಂದ ತೆಗೆದ ರಸವನ್ನು ಸೇವಿಸಿದರೆ ಉತ್ತಮ. ಬಾಟಲಿರೂಪದಲ್ಲಿರುವ ಅಥವಾ ಸಂಸ್ಕರಿಸಿದ ಜ್ಯೂಸ್ ಗಳು ಅಷ್ಟು ಪ್ರಯೋಜನಕಾರಿಯಲ್ಲ.

ಸೀಬೆಹಣ್ಣು (ಪೇರಳೆ)
ಸೀಬೆಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವ ಕಾರಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂಗಳು ಪಚನಕ್ರಿಯೆಯನ್ನು ನಿಧಾನಗೊಳಿಸಿ ದೇಹ ಹೆಚ್ಚು ಹೊತ್ತು ಬೆಚ್ಚಗಿರಲು ಸಹಕರಿಸುತ್ತವೆ.

ಒಣಫಲಗಳು (ಬಾದಾಮಿ, ಒಣ ಅಂಜೂರ, ಗೋಡಂಬಿ ಮೊದಲಾದವು)
ಒಣಫಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಆಮ್ಲ (fatty acid), ಪ್ರೋಟೀನ್ ಮತ್ತು ವಿಟಮಿನ್ ಇ ಇದೆ. ಈ ಪೋಷಕಾಂಶಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಕಡಿಮೆಗೊಳಿಸಿ ಕೆಂಪುರಕ್ತಕಣಗಳು ವೃದ್ಧಿಯಾಗುವಂತೆ ನೋಡಿಕೊಳ್ಳುತ್ತವೆ. ಗೋಡಂಬಿ, ಪಿಸ್ತಾ, ಬಾದಾಮಿ, ಒಣ ಅಂಜೂರ ಮೊದಲಾದವು ಉತ್ತಮ ಒಣಫಲಗಳಾಗಿವೆ. ಸಾಮಾನ್ಯವಾಗಿ ಇವು ಕೊಂಚ ದುಬಾರಿಯಾಗಿರುವುದರಿಂದ ಇದರ ಬದಲಿಗೆ ಶೇಂಗಾಬೀಜವನ್ನೂ ಸೇವಿಸಬಹುದು. ಅಗ್ಗವಾದರೂ ಪೋಷಕಾಂಶಗಳ ವಿಷಯದಲ್ಲಿ ಮೇಲಿನ ಎಲ್ಲಾ ಫಲಗಳಿಗೆ ಸೆಡ್ಡು ಹೊಡೆಯುವ ಶೇಂಗಾಬೀಜಕ್ಕೆ ಬಡವರ ಬಾದಾಮಿ ಎಂಬ ಅನ್ವರ್ಥನಾಮವೂ ಇದೆ. ಆದರೆ ಶೇಂಗಾಬೀಜವನ್ನು ಸೇವಿಸುವಲ್ಲಿ ಪ್ರಮಾಣದ ಎಚ್ಚರಿಕೆ ಅಗತ್ಯ.

ಒಣಫಲಗಳು
ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ದೇಹ ಲವಣ ಮತ್ತು ಖನಿಜಗಳನ್ನು ಹೆಚ್ಚಾಗಿ ಹೀರುವುದು ಕಂಡುಬಂದಿದೆ, ಇದು ದೇಹಕ್ಕೆ ಬೇರೆ ತೊಂದರೆಗಳನ್ನು ಉಂಟುಮಾಡುತ್ತದೆ. ಉಪ್ಪು ಹಾಕಿದ ಒಣಫಲಗಳನ್ನು ರುಚಿಗಾಗಿ ಸೇವಿಸುವುದೂ ತರವಲ್ಲ. ಇದರ ಗರಿಷ್ಟ ಪ್ರಮಾಣವೆಂದರೆ ಒಂದು ಮುಷ್ಟಿಯಷ್ಟು ಮಾತ್ರ. ಇದಕ್ಕೂ ಹೆಚ್ಚು ಸೇವಿಸಿದರೆ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗಿ ಇತರ ತೊಂದರೆಗಳು ಪ್ರಾರಂಭವಾಗುತ್ತವೆ. ಹಾಗಾಗಿ ಉಪ್ಪಿಲ್ಲದ ಅಥವಾ ಬೇಯಿಸಿದ ಫಲಗಳು ಉತ್ತಮವಾಗಿವೆ

ಚಳಿಗಾಲದಲ್ಲಿ ಹೆಚ್ಚಿನ ನೀರು ಕುಡಿಯಿರಿ
ಚಳಿಗಾಲದಲ್ಲಿ ತ್ವಚೆ ಮತ್ತು ದೇಹ ಒಣಗುತ್ತದೆ. ದೇಹದಲ್ಲಿ ನೀರಿನಾಂಶವನ್ನು ಸಮಪ್ರಮಾಣದಲ್ಲಿರಿಸಲು ಹೆಚ್ಚು ಹೆಚ್ಚು ನೀರನ್ನು ಸೇವಿಸಿ.

ಆಹಾರ ಕ್ರಮ ಹಿತಮಿತವಾಗಿರಲಿ
ಚಳಿಗಾಲದಲ್ಲಿ ಹಸಿವಾಗುವುದು ಹೆಚ್ಚು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಇದರಿಂದ ಅಜೀರ್ಣ ಸಮಸ್ಯೆ ಕಾಡದು. ನಿಮ್ಮ ದೇಹದ ಉಷ್ಣತೆ ಸರಿಯಾದ ಪ್ರಮಾಣದಲ್ಲಿ ಕಾಪಾಡುವಂತಹ ಆಹಾರವನ್ನು ಸೇವಿಸಿ



Click it and Unblock the Notifications


