50ರ ಬಳಿಕವೂ ಸದೃಢವಾಗಿರಲು 10 ಟಿಪ್ಸ್

By Super

ನಮ್ಮ ನಿಯಂತ್ರಣದಲ್ಲಿಲ್ಲದ ಕೆಲವು ವಿಷಯಗಳಲ್ಲಿ ವಯಸ್ಸು ಸಹಾ ಒಂದು. ಹೆಚ್ಚಿನ ಆಯಸ್ಸಿಗಾಗಿ ಉತ್ತಮ ಆರೋಗ್ಯ ಹೊಂದಿರಬೇಕಾಗಿರುವುದು ಅಗತ್ಯ. ಆಯಸ್ಸು ಹೆಚ್ಚಿದಂತೆಯೇ ಅರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯೂ ಹೆಚ್ಚುತ್ತದೆ. ಅದರಲ್ಲೂ ಐವತ್ತರ ಬಳಿಕ ಹೆಚ್ಚಿನ ಕಾಳಜಿ ಮತ್ತು ಲಕ್ಷ್ಯ ಅಗತ್ಯ.

ಕೇವಲ ದೈಹಿಕವಾಗಿ ಅಲ್ಲದೇ ಮಾನಸಿಕವಾಗಿ ಸದೃಢರಾಗುವುದರೊಂದಿಗೆ ಭಾವೋದ್ವೇಗ ನಿಯಂತ್ರಣವೂ ಅಗತ್ಯ. ಈ ವಯಸ್ಸಿನಲ್ಲಿ ಕೆಲವೊಂದು ಸುಲಭವಾದ ಸಲಹೆಗಳನ್ನು ದಿನನಿತ್ಯ ಪಾಲಿಸುವುದರಿಂದ ಮುಂದಿನ ಜೀವನವನ್ನು ಸುಲಲಿತವಾಗಿ ನಡೆಸಬಹುದು. ಅವುಗಳಲ್ಲಿ ಪ್ರಮುಖವಾದ ಹತ್ತು ಸಲಹೆಗಳು ಈ ಕೆಳಗಿನಂತಿವೆ:

1) ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನಿರಿ

1) ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನಿರಿ

ಬೇಯಿಸಿದ ಆಹಾರದ ಹೊರತಾಗಿ ನಿಮ್ಮ ಊಟದಲ್ಲಿ ಕೆಲವು ಹಸಿರು ತರಕಾರಿ, ಹಣ್ಣುಗಳು, ಕಡಿಮೆ ಪ್ರಮಾಣದಲ್ಲಿ ಪ್ರೊಟೀನ್ ಇರುವ ಆಹಾರ, ಹಸಿ ಕಾಳುಗಳು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಇರಲಿ. ನಿಮ್ಮ ದಿನನ ಆರಂಭ ಮತ್ತು ದಿನದ ಅಂತ್ಯದಲ್ಲಿ ನೀರೇ ನಿಮ್ಮ ಆಹಾರವಾಗಿರಲಿ. ಆದಷ್ಟು ಹೆಚ್ಚು ಪ್ಯಾಕೆಟ್ಟುಗಳಲ್ಲಿನ ಆಹಾರದ ಅವಲಂಬನೆಯನ್ನು ತ್ಯಜಿಸಿ. ಅನಿವಾರ್ಯವಾದಾಗ ಮಾತ್ರ ಕನಿಷ್ಟ ಪ್ರಮಾಣದಲ್ಲಿ ಪ್ಯಾಕೆಟ್ಟುಗಳ ಆಹಾರವನ್ನು ಸೇವಿಸಿ.

2) ಸಾಧ್ಯವಾದಷ್ಟು ನಡೆಯಿರಿ.

2) ಸಾಧ್ಯವಾದಷ್ಟು ನಡೆಯಿರಿ.

ನಡಿಗೆ ಈ ವಯಸ್ಸಿಗಾಗಿ ಹೇಳಿ ಮಾಡಿಸಿದ ವ್ಯಾಯಾಮವಾಗಿದೆ. ದಿನದ ಸಾಧ್ಯವಾದಷ್ಟು ಮಟ್ಟಿನ ಕೆಲಸಗಳನ್ನು ನಡೆದುಕೊಂಡೇ ಪೂರೈಸಿ. ಮನೆಗೆ ಚಿಕ್ಕಪುಟ್ಟ ವಸ್ತುಗಳನ್ನು ತರುವುದು, ಮೊಮ್ಮಕ್ಕಳನ್ನು ಶಾಲೆಗೆ ಬಿಡುವುದು, ಶಾಲೆಯಿಂದ ಕರೆತರುವುದು ಮೊದಲಾದ ನೆವಗಳನ್ನು ಧನಾತ್ಮಕವಾಗಿ ಪರಿಗಣಿಸಿ ಎಷ್ಟು ಸಾಧ್ಯವೋ ಅಷ್ಟು ನಡೆಯಿರಿ. ಈ ವ್ಯಾಯಾಮದಿಂದ ರಕ್ತಪರಿಚಲನೆ ಉತ್ತಮಗೊಳ್ಳುವುದರಿಂದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ.

3) ಪ್ರತಿದಿನ ಒಂದೇ ಸಮಯಕ್ಕೆ ನಿದ್ರಾಪರವಶರಾಗಿ

3) ಪ್ರತಿದಿನ ಒಂದೇ ಸಮಯಕ್ಕೆ ನಿದ್ರಾಪರವಶರಾಗಿ

ಪ್ರತೀದಿನ ಒಂದೇ ಸಮಯಕ್ಕೆ ಸರಿಯಾಗಿ ನಿದ್ರಿಸಿ. ಇದರಿಂದ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ದೊರೆತು ದಿನದ ಚಟುವಟಿಕೆಗಳಿಂದ ಚೇತರಿಕೆಗೆ ಸಾಕಷ್ಟು ಸಮಯ ದೊರಕುತ್ತದೆ. ಮೆದುಳಿಗೂ ಸಾಕಷ್ಟು ವಿಶ್ರಾಂತಿ ದೊರಕುತ್ತದೆ. ನಿಮ್ಮ ನಿದ್ರೆ ಭಂಗವಾಗದಿರಲು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಮೊದಲಾದವುಗಳನ್ನು ನಿದ್ರಾವಸ್ಥೆಯಲ್ಲಿಡಿ ಅಥವಾ ಬೇರೆ ಕೋಣೆಯಲ್ಲಿರಿಸಿದರೆ ಇನ್ನೂ ಸೂಕ್ತ. ಕಿಟಕಿಗಳಿಂದ ಮನೆಯ ಹೊರಗಿನ ವಾಹನಗಳ ಬೆಳಕು ಒಳಬರುತ್ತಿದ್ದಲ್ಲಿ ಸೂಕ್ತ ಪರದೆಗಳನ್ನು ಬಳಸಿ. ಒಟ್ಟಾರೆ ಸುಖಕರ ನಿದ್ರೆಗೆ ಯಾವ ಕ್ರಮ ಸೂಕ್ತವೋ ಅವುಗಳನ್ನು ಅನುಸರಿಸಿ.

4) ವೈದ್ಯರ ಬಳಿ ನಿಯಮಿತವಾಗಿ ತಪಾಸಿಸಿಕೊಳ್ಳಿ

4) ವೈದ್ಯರ ಬಳಿ ನಿಯಮಿತವಾಗಿ ತಪಾಸಿಸಿಕೊಳ್ಳಿ

ನಿಮ್ಮ ಕುಟುಂಬ ವೈದ್ಯರ ಬಳಿ ನಿಯಮಿತವಾಗಿ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳಿ. ವೈದ್ಯರು ನಿಮ್ಮ ಆರೋಗ್ಯದ ವಿವರಗಳನ್ನು ನಿಯಮಿತವಾಗಿ ದಾಖಲಿಸಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಅವರಿಗೂ ಈ ಮಾಹಿತಿ ತುಂಬಾ ಅನುಕೂಲಕ್ಕೆ ಬರುತ್ತದೆ. ರಕ್ತದ ಕೊಲೆಸ್ಟರಾಲ್, ರಕ್ತದೊತ್ತಡ, ಮಧುಮೇಹ, ಒಸ್ಟಿಯೋಪೋರೋಸಿಸ್ ಮೊದಲಾದ ರೋಗಗಳಿಗೂ ನಿಯಮಿತ ತಪಾಸಣೆ ಅಗತ್ಯ. ನಿಮಗೆ ಅಗತ್ಯವಾಗಿರಬಹುದಾದ ಫ್ಲೂ, ನ್ಯೂಮೋನಿಯಾ, ಡಿಫ್ತೀರಿಯಾ, ಟೆಟನಸ್ ಮೊದಲಾದ ರೋಗನಿರೋಧಕಗಳ ಅವಶ್ಯಕತೆಯ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಿ ಅವರ ಸಲಹೆಯ ಮೇರೆಗೆ ಪಡೆದುಕೊಳ್ಳಿ.

5) ವ್ಯಸನಗಳಿಗೆ ಕಡಿವಾಣ ಹಾಕಿ

5) ವ್ಯಸನಗಳಿಗೆ ಕಡಿವಾಣ ಹಾಕಿ

ಚಿಕ್ಕವಯಸ್ಸಿನಲ್ಲಿ ಯಾವುದೋ ಪ್ರಲೋಭನೆಗೆ ಒಳಗಾಗಿ ವ್ಯಸನಕ್ಕೊಳಗಾಗಿದ್ದರೆ ಆ ವ್ಯಸನಗಳನ್ನು ತ್ಯಜಿಸುವುದು ಅಷ್ಟು ಸುಲಭವಲ್ಲ. ತಂಬಾಕು, ಸಿಗರೇಟು, ಮದ್ಯ, ಗುಟ್ಕಾ ಮೊದಲಾದ ವ್ಯಸನಗಳಿಗೆ ದೇಹವನ್ನು ಜರ್ಝರಿತಗೊಳಿಸುವುದು ಈ ವಯಸ್ಸಿಗೆ ಸುಲಭ. ಅಂತೆಯೇ ಪಾಲಿಸಿಕೊಂಡು ಬಂದಿರುವ ವ್ಯಸನವನ್ನು ಒಮ್ಮೆಲೇ ತ್ಯಜಿಸುವುದೂ ಆರೋಗ್ಯಕ್ಕೆ ಮಾರಕ. ವೈದ್ಯರ ಸಲಹೆ ಮೇರೆಗೆ ದೇಹಕ್ಕೆ ಅಗತ್ಯವಾದ ಕನಿಷ್ಟ ಪ್ರಮಾಣದಲ್ಲಿ ಸೇವಿಸುವುದು ಹಾಗೂ ಕ್ರಮೇಣವಾಗಿ ಈ ಪ್ರಮಾಣವನ್ನು ನಿಧಾನಕ್ಕೆ ತಗ್ಗಿಸುತ್ತಾ ಕೊನೆಗೊಮ್ಮೆ ನಿಲ್ಲಿಸಿಯೇ ಬಿಡುವುದು ಆರೋಗ್ಯಕರ ವಿಧಾನ. ಯಾವುದೇ ಕಾರಣಕ್ಕೆ ಸ್ನೇಹಿತರು ಮತ್ತು ಸಂಬಂಧಿಕರ ಒತ್ತಾಯಕ್ಕೆ ಈ ಪ್ರಮಾಣದಲ್ಲಿ ಹೆಚ್ಚಳ ಸಲ್ಲದು. ಒಮ್ಮೆ ಯಾರದ್ದೋ ಒತ್ತಾಯಕ್ಕೆ ಕಟ್ಟುಬಿದ್ದು ಪ್ರಮಾಣದಲ್ಲಿ ಜಾಸ್ತಿಯಾಯಿತೋ, ಅದಕ್ಕೂ ಹಿಂದೆ ಎಷ್ಟು ದಿನಗಳ ಕಾಲ ತಾವು ಕಷ್ಟು ಪಟ್ಟಿದ್ದಿರೋ ಅಷ್ಟೂ ದಿನಗಳ ಫಲ ನೀರಿನಲ್ಲಿ ಹೋಮವಾಗುತ್ತದೆ, ನೆನಪಿರಲಿ.

6) ಸಮಾಜದ ಆಗುಹೋಗುಗಳಲ್ಲಿ ಭಾಗಿಯಾಗಿ

6) ಸಮಾಜದ ಆಗುಹೋಗುಗಳಲ್ಲಿ ಭಾಗಿಯಾಗಿ

ರಾಜಕಾರಣಿಗಳು ತೊಂಭತ್ತರ ಹರೆಯದಲ್ಲಿಯೂ ಸಕ್ರಿಯರಾಗಿರಲು ಕಾರಣವೇನು ಗೊತ್ತೇ? ಅವರ ಸಾಮಾಜಿಕ ಒಡನಾಟ. ಸಮಾಜದ ಒಡನಾಟದಿಂದ ದೂರವಿದ್ದಷ್ಟೂ ಮಾನಸಿಕ ಮತ್ತು ಭಾವುಕ ಆರೋಗ್ಯಕ್ಕೆ ಮಾರಕ. ಇದರರ್ಥ ಸದಾ ಜನಜಂಗುಳಿಯ ನಡುವೆ ಇರಬೇಕೆಂದು ಅಲ್ಲ. ನಾಲ್ಕು ಜನರ ನಡುವೆ ಸಾದ್ಯವಾದಷ್ಟು ಸಕ್ರಿಯರಾಗಿದ್ದು ಹಿರಿಯರ ಸ್ಥಾನವನ್ನು ಅಲಂಕರಿಸುವುದು ಆರೋಗ್ಯಕರ ಬೆಳವಣಿಗೆ. ನಿಮ್ಮ ಜೀವನದ ಅನುಭವಗಳಿಂದ ಕಿರಿಯರಿಗೆ ನೀಡುವ ಮಾರ್ಗದರ್ಶನದಿಂದ ಅವರಿಗೆ ಒಳ್ಳೆಯದಾದರೆ ನಿಮಗೆ ಸಿಗುವ ಸಾರ್ಥಕಭಾವವೇ ನೆಮ್ಮದಿಯ ಲಕ್ಷಣ. ನಿಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಮಕ್ಕಳಿಗೆ ಸಮಯ ನೀಡುವ ಮೂಲಕ ನೀವು ಸದಾ ಒಡನಾಟದಲ್ಲಿರಬಹುದು.

7) ನಿಮ್ಮ ಮೆದುಳನ್ನು ಸದಾ ಕ್ರಿಯಾಶೀಲರಾಗಿರಿಸಿ

7) ನಿಮ್ಮ ಮೆದುಳನ್ನು ಸದಾ ಕ್ರಿಯಾಶೀಲರಾಗಿರಿಸಿ

ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿರಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಕಾಲ ಬದಲಾಗುತ್ತಿದ್ದಂತೆ ಹೊಸ ವಿಷಯಗಳ ಆವಿಷ್ಕಾರ, ಅವುಗಳ ಬಗ್ಗೆ ಅಧ್ಯಯನ ಮೆದುಳನ್ನು ಚುರುಕಾಗಿಸುತ್ತದೆ. ಮನೆಯೊಳಗೆ ಆಡಬಹುದಾದ ಚೆಕ್ಕರ್ಸ್, ಚದುರಂಗ, ಸ್ಕ್ರಾಬಲ್, ಶಬ್ದಕೋಶ, ಸುಡೋಕ್ಕು, ಕ್ರಾಸ್ ವರ್ಡ್ ಮೊದಲಾದ ಚಟುವಟಿಕೆಗಳಿಂದ ಮೆದುಳಿಗೆ ಕ್ರಿಯಾಶೀಲತೆ ನೀಡುತ್ತಾ ಇರಬೇಕು. ತಮ್ಮ ಸಮಯದ ವಿಷಯದ ಅಥವಾ ವಸ್ತುಗಳನ್ನು ಇಂದಿನ ವಸ್ತುಗಳಿಗೆ ಹೋಲಿಸಿ ತೆಗಳುವ ಪ್ರಕ್ರಿಯೆಗೆ ಕಡಿವಾಣ ಬೇಕು. ಬೇಕಾದರೆ ಗಮನಿಸಿ ನೋಡಿ, ಇಂದಿನ ಯುವಜನತೆಗೆ ಹಿಂದಿನ ವಿಷಯಗಳಲ್ಲಿ ಯಾವುದೇ ಆಸಕ್ತಿ ಇಲ್ಲ. ಇದ್ದರೂ ಅದೊಂದು ಹೋಲಿಕೆಗಾಗಿ ಮಾತ್ರ. ಆದುದರಿಂದ ಕಾಲದೊಂದಿಗೆ ಹೊಂದಿಕೊಂಡು ಇಂದಿನ ದಿನಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವುದು ಜಾಣತನ. ತಮ್ಮ ಧಾರ್ಮಿಕ ವಿಧಿಗಳನ್ನು ಕ್ರಮಬದ್ದವಾಗಿ ಅನುಸರಿಸುವುದರಿಂದಲೂ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುವುದು.

8) ಸೂರ್ಯನ ಪ್ರಥಮ ಕಿರಣ ನಿಮ್ಮ ಮೇಲೆ ಬೀಳಲಿ

8) ಸೂರ್ಯನ ಪ್ರಥಮ ಕಿರಣ ನಿಮ್ಮ ಮೇಲೆ ಬೀಳಲಿ

ಸೂರ್ಯೋದಯಕ್ಕೂ ಮುನ್ನ ಎದ್ದು ಪ್ರಾತಃವಿಧಿಗಳನ್ನು ಪೂರೈಸಿ ಸೂರ್ಯನ ಪ್ರಥಮ ಕಿರಣಗಳು ಬೀಳುವ ವೇಳೆಗೆ ಪ್ರಕೃತಿಯ ಮಡಿಲಲ್ಲಿರುವುದು ನಿಮ್ಮ ಜೀವನಕ್ಕೆ ಹೆಚ್ಚಿನ ಚೇತನ ನೀಡುತ್ತದೆ. ಸೂರ್ಯನ ಪ್ರಥಮ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಿರಣಗಳಿಗೆ ಮೈಯೊಡ್ಡುವುದರಿಂದ ನಿಮಗೆ ಅಗತ್ಯವಾದ ಇಡಿಯ ದಿನದ ವಿಟಮಿನ್ ಡಿ ಲಭ್ಯವಾಗುತ್ತದೆ. ಅಲ್ಲದೇ ಅಗತ್ಯಪ್ರಮಾಣದಲ್ಲಿ ಸೆರೋಟೋನಿನ್ ಸಹಾ ಉತ್ಪತ್ತಿಯಾಗುತ್ತದೆ. ದಿನವಿಡೀ ಸಂತೋಷವಾಗಿರಲು ಈ ಸೆರೋಟೋನಿನ್ ನೆರವಾಗುತ್ತದೆ. ವೈದ್ಯರೊಂದಿಗೆ ಸಮಾಲೋಚಿಸಿ ವಿಟಮಿನ್ ಮಾತ್ರೆಗಳು ಬೇಕಾದಲ್ಲಿ ಮಾತ್ರ ಸೇವಿಸಿ.

9) ಲೈಂಗಿಕ ಚಟುವಟಿಕೆಯನ್ನು ಮುಂದುವರೆಸಿ

9) ಲೈಂಗಿಕ ಚಟುವಟಿಕೆಯನ್ನು ಮುಂದುವರೆಸಿ

ಅರ್ಧಶತಕವಾದ ಬಳಿಕ ಲೈಂಗಿಕ ಚಟುವಟಿಕೆಗೆ ಕಡಿವಾಣ ಬೇಡ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳು ಮಂದುವರೆಯಲಿ. ಈ ಚಟುವಟಿಕೆಗಳಿಂದ ದೈಹಿಕ, ಮಾನಸಿಕ ಹಾಗೂ ಭಾವುಕ ಆರೋಗ್ಯ ವೃದ್ಧಿಸುತ್ತದೆ.

10) ನಿಮ್ಮ ದೃಷ್ಟಿಕೋನವನ್ನು ಹೊಂದಿಸಿಕೊಳ್ಳಿ

10) ನಿಮ್ಮ ದೃಷ್ಟಿಕೋನವನ್ನು ಹೊಂದಿಸಿಕೊಳ್ಳಿ

ಇಂದಿನ ಅಗತ್ಯಕ್ಕೆ ತಕ್ಕಂತೆ ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿ. "ಸದಾ ಆಶಾವಾದಿಗಳಾಗಿರಿ"ಎಂಬ ಧ್ಯೇಯವಾಕ್ಯ ಉತ್ತಮ ಆರೋಗ್ಯಕ್ಕೆ ಮೂಲಮಂತ್ರ. ದಿನನಿತ್ಯದ ಕೆಲಸಗಳಲ್ಲಿ ಬರುವ ಅಡೆತಡೆಗಳನ್ನು ಆಶಾವಾದದಿಂದ ಎದುರಿಸುವುದರಿಂದ, ಕುಟುಂಬದ ಸಮಸ್ಯೆಗಳನ್ನು ಸಮಾಲೋಚಿಸುವ ಹಾಗೂ ಸೂಕ್ತ ಪರಿಹಾರ ಕಲ್ಪಿಸುವ ಮೂಲಕ ಧತ್ಯತಾ ಭಾವವನ್ನು ಹೊಂದುವುದು ಉತ್ತಮ ಆರೋಗ್ಯದ ಲಕ್ಷಣ. ಮಾನಸಿಕವಾಗಿ ಸದೃಢರಾಗಿದ್ದರೆ ದೈಹಿಕವಾಗಿ ನಡೆಸುವ ಕಾರ್ಯಗಳೂ ಸುಲಭವಾಗಿ ನೆರವೇರುತ್ತವೆ. ಸೇಡು, ತೆಗಳಿಕೆ, ಅಸಮಾಧಾನ, ಜಗಳ ಮೊದಲಾದ ವಿಷಯಗಳು ನಿರರ್ಥಕ ಎಂಬ ಧೋರಣೆ ತಾಳಿ ಸಮಾಧಾನಕರ ಜೀವನ ನಡೆಸುವುದೂ ದೃಷ್ಟಿಕೋನ ಬದಲಿಸಿಕೊಳ್ಳುವ ಮೂಲಕ ಸಾಧ್ಯ.

X
Desktop Bottom Promotion