9 ಜಿಲ್ಲೆಗಳಲ್ಲಿ ಆನೆಕಾಲು ರೋಗ ನಿರ್ಮೂಲನೆಗೆ ಔಷಧಿ

By Prasad

Treatment for Filariasis (Elephant leg disease)
ಆನೆಕಾಲು ರೋಗ ನಿರ್ಮೂಲನೆಗಾಗಿ 7ನೇ ಸುತ್ತಿನ ಸಾಮೂಹಿಕ ಔಷಧಿ ನೀಡಿಕೆ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಆನೇಕಾಲು ರೋಗ ಪೀಡಿತ 9 ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಯಾದಗಿರಿ, ಬಿಜಾಪುರ, ಬಾಗಲಕೋಟೆ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜ.10ರಿಂದ ಹಮ್ಮಿಕೊಳ್ಳಲಾಗಿದೆ.

ಯಾರಿಗೆ ಎಷ್ಟು? : ಡಿ.ಇ.ಸಿ. ಮತ್ತು ಆಲ್ಬೆಂಝೋಲ್ ಗುಳಿಗೆಗಳನ್ನು 2 ವರ್ಷದೊಳಗಿನವರಿಗೆ ನೀಡಲಾಗುವುದಿಲ್ಲ. 2ರಿಂದ 5 ವರ್ಷದವರಿಗೆ 100 ಮಿಲಿಗ್ರಾಂ ಡಿಇಸಿ ಹಾಗೂ ಆಲ್ಬೆಂಡಝೋಲ್ ಗುಳಿಗೆಗಳನ್ನು ತಲಾ ಒಂದರಂತೆ ನುಂಗಿಸಲಾಗುವುದು. 6ರಿಂದ 14 ವರ್ಷದವರಿಗೆ ಎರಡು 200 ಮಿಲಿಗ್ರಾಂ ಡಿಇಸಿ ಗುಳಿಗೆ ಮತ್ತು ಒಂದು ಆಲ್ಬೆಂಡಝೋಲ್ ಗುಳಿಗೆಗಳನ್ನು ನುಂಗಿಸಲಾಗುವುದು. 15 ವರ್ಷ ಮೇಲ್ಪಟ್ಟವರಿಗೆ 300 ಮಿಲಿಗ್ರಾಂ ಡಿಇಸಿ ಗುಳಿಗೆ ಮೂರು ಮತ್ತು ಒಂದು ಆಲ್ಬೆಂಡ್‌ಝೋಲ್ ಗುಳಿಗೆಗಳನ್ನು ನುಂಗಿಸಲಾಗುವುದು. (ಗರ್ಭಿಣಿಯರಿಗೆ, ವಯೋವೃದ್ಧರಿಗೆ, ಹೃದ್ರೋಗ, ಮೂತ್ರಪಿಂಡ ಹಾಗೂ ನಿರಂತರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಗುಳಿಗೆಗಳನ್ನು ನೀಡಲಾಗುವುದಿಲ್ಲ)

ಒಟ್ಟು 9 ಜಿಲ್ಲೆಗಳಲ್ಲಿನ 50 ತಾಲ್ಲೂಕುಗಳ ಪೈಕಿ 39 ತಾಲ್ಲೂಕುಗಳಲ್ಲಿನ 434 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 2243 ಉಪಕೇಂದ್ರಗಳು ಸೇರಿದಂತೆ 5650 ಗ್ರಾಮಗಳಲ್ಲಿ ಸುಮಾರು 120 ಲಕ್ಷ ಜನರಿಗೆ ಈ ಗುಳಿಗೆಗಳನ್ನು ನುಂಗಿಸುವ ಬೃಹತ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯವಿರುವ ಮೇಲ್ಕಂಡ ಗುಳಿಗೆಗಳನ್ನು ಭಾರತ ಸರ್ಕಾರವು ಸರಬರಾಜು ಮಾಡಿರುತ್ತದೆ. ಔಷಧಿ ವಿತರಣೆ ಕಾರ್ಯಕ್ಕಾಗಿ ಸುಮಾರು 50 ಸಾವಿರ ಸ್ವಯಂಸೇವಕರು ಹಾಗೂ 5000 ಮೇಲ್ವಿಚಾರಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಒಟ್ಟು ರೂ 98.58 ಲಕ್ಷಗಳ ಅನುದಾನವನ್ನು ಸಹ 9 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ಸುರಕ್ಷಿತ ಗುಳಿಗೆ : ಡಿಇಸಿ ಗುಳಿಗೆಗಳನ್ನು ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಬಳಸಲಾಗುತ್ತಿದ್ದು, ಈ ಗುಳಿಗೆಗಳು ಅತ್ಯಂತ ಸುರಕ್ಷಿತವಾಗಿವೆ ಹಾಗೂ ಹಾನಿಕಾರಕವಾಗಿರುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಈ ಗುಳಿಗೆಗಳನ್ನು ಸೇವನೆ ಮಾಡಬಾರದು. ಮೈಕ್ರೋಫೈಲೇರಿಯ ಜಂತುಗಳನ್ನು ಹೊಂದಿದ ವ್ಯಕ್ತಿಗಳು ಈ ಗುಳಿಗೆಗಳನ್ನು ಸೇವಿಸಿದಾಗ ಕೆಲವೊಮ್ಮೆ ಅಡ್ಡ ಪರಿಣಾಮಗಳಾದ ಹೊಟ್ಟೆ ಉರಿ, ಸಂಕಟ, ವಾಂತಿ ಉಂಟಾಗಬಹುದು. ಆದರೆ ಇದು ಕೆಲವೇ ಗಂಟೆಗಳಲ್ಲಿ ತಾನಾಗಿ ಉಪಶಮನವಾಗುತ್ತದೆ. ಈ ಅಡ್ಡ ಪರಿಣಾಮಗಳ ಚಿಕಿತ್ಸೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸೇವಿಸುವುದು ಅವಶ್ಯಕ : ಮೈಕ್ರೋಫೈಲೇರಿಯ ಜಂತುಗಳನ್ನು ರಕ್ತದಲ್ಲಿ ಹೊಂದಿರುವ ವ್ಯಕ್ತಿಗಳು ಸಾಮಾನ್ಯರಂತೆಯೇ ಇರುವರು. ಇವರನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು, ಇತರರನ್ನು ಕಚ್ಚಿದಾಗ ಈ ರೋಗ ಹರಡುವ ಸಾಧ್ಯತೆಯಿರುತ್ತದೆ. ಡಿಇಸಿ ಗುಳಿಗೆಗಳು ರಕ್ತಸಂಚಾರದಲ್ಲಿ ಬೆರೆತ ಮೈಕ್ರೋಫೈಲೇರಿಯಾ ಜಂತುಗಳನ್ನು ನಾಶಪಡಿಸಿ, ಈ ರೋಗ ಹರಡುವಿಕೆಯನ್ನು ತಡೆಗಟ್ಟುತ್ತದೆ. ಆದ್ದರಿಂದ ಆನೆಕಾಲು ರೋಗ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಈ ಗುಳಿಗೆಗಳನ್ನು ನುಂಗುವುದು ಅತಿ ಅವಶ್ಯಕವಾಗಿರುತ್ತದೆ. [ಆರೋಗ್ಯ ಸಲಹೆ]

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Elephant leg disease | Treatment for Filariasis | Medicine distribution in Karnataka | ಕರ್ನಾಟಕದಲ್ಲಿ ಆನೆಕಾಲು ರೋಗ | 9 ಜಿಲ್ಲೆಗಳಲ್ಲಿ ಔಷಧಿ ವಿತರಣೆ

Karnataka government is distributing free medicines to eradicate elephant leg disease in 9 districts, which are prone to Filariasis disease. Health department says it is safe and necessary to take this pill.
Story first published: Saturday, January 8, 2011, 18:09 [IST]
X
Desktop Bottom Promotion