ಸೌಂದರ್ಯ ಕೆಡಿಸುವ ಅನಗತ್ಯ ಕೂದಲಿಗೆ ಸೂಕ್ತ ಮನೆಮದ್ದು

By Manu

ಸೌಂದರ್ಯದ ನಿರ್ವಹಣೆಯಲ್ಲಿ ಅನಗತ್ಯ ಕೂದಲ ನಿರ್ವಹಣೆ ಅತಿ ಮುಖ್ಯ. ಇದರ ನಿವಾರಣೆಗೆ ಹಲವಾರು ವಿಧಾನಗಳಿವೆ. ವ್ಯಾಕ್ಸಿಂಗ್, ಶೇವಿಂಗ್, ಬ್ಲೀಚಿಂಗ್, ಥ್ರೆಡಿಂಗ್ ಮೊದಲಾದವು. ಆ ಸಮಯಕ್ಕೆ ಈ ವಿಧಾನಗಳು ಉತ್ತಮ ಪರಿಹಾರವೆಂದು ಕಂಡುಬಂದರೂ ಕಿರಿಕಿರಿಯಾಗುವುದು ಕತ್ತರಿಸಿದ ಕೂದಲು ಮತ್ತೆ ಬೆಳೆದಾಗ.

ಹೆಚ್ಚಿನ ಸಮಯದಲ್ಲಿ ಈ ಕೂದಲ ಬುಡದಿಂದ ನೇರವಾಗಿ ಮತ್ತೊಮ್ಮೆ ಬೆಳೆದ ಕೂದಲು ಲಂಬವಾಗಿ ಬೆಳೆಯುತ್ತಾ ಹೋಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಕೂದಲ ತುದಿ ಚರ್ಮದಿಂದ ಹೊರಬರದೇ ಕೂದಲ ಬುಡದ ಅಂಚಿನಲ್ಲಿ ಚರ್ಮದೊಳಕ್ಕೆ ತೂರಿಬಿಡುತ್ತದೆ. ದಿನಗಳೆದಂತೆ ಬುಡದಿಂದ ಬೆಳೆಯುವ ಕೂದಲು ಕಮಾನಿನಾಕೃತಿಯಲ್ಲಿ ಬಾಗುತ್ತಾ ಈ ಚರ್ಮವನ್ನು ಹೊರದೂಡುತ್ತದೆ.

ಹೊರಗಿಂದ ನೋಡಿದರೆ ಚಿಕ್ಕ ಮೊಡವೆಯಂತೆ ಇದು ತೋರುತ್ತದೆ. ಇದೇ ಒಳಮುಖ ಬೆಳೆದ ಕೂದಲು. ಇದಕ್ಕೆ ಮುಖ್ಯ ಕಾರಣ ಕೂದಲ ಬೆಳವಣಿಗೆಗೆ ವಿರುದ್ಧ ದಿಕ್ಕಿನಲ್ಲಿ ಶೇವ್ ಮಾಡುವುದು. ಇನ್ನುಳಿದಂತೆ ವಿರುದ್ಧ ದಿಕ್ಕಿನಲ್ಲಿ ವ್ಯಾಕ್ಸಿಂಗ್, ಹೆಚ್ಚಿನ ಸಮಯಾವಕಾಶ ನೀಡದೇ ಪದೇ ಪದೇ ವ್ಯಾಕ್ಸಿಂಗ್, ಶೇವಿಂಗ್ ಮಾಡುವುದು ಇತ್ಯಾದಿ. ಶೇವ್ ಮಾಡಿದ ಬಳಿಕ ಅಥವಾ ವ್ಯಾಕ್ಸಿಂಗ್ ಬಳಿಕ ಕೂದಲು ನಿವಾರಣೆಯಾದ ಸ್ಥಳದಲ್ಲಿ ಚಿಕ್ಕದೊಂದು ಗುಳಿ ಬೀಳುತ್ತದೆ.

ನಮ್ಮ ಚರ್ಮದ ಸತ್ತ ಜೀವಕೋಶಗಳು ಇಲ್ಲಿ ತುಂಬಿಕೊಂಡು ಗಟ್ಟಿಯಾಗಿಬಿಡುತ್ತದೆ. ಗಟ್ಟಿಯಾದ ಈ ಪದರವನ್ನು ತೂರಲಾರದೇ ಹೊಸದಾಗಿ ಬೆಳೆದ ಕೂದಲು ಪಕ್ಕಕ್ಕೆ ಬಾಗಿ ಚರ್ಮದೊಳಕ್ಕೆ ನುಗ್ಗುತ್ತದೆ. ಈ ಭಾಗ ನಿಧಾನವಾಗಿ ದೊಡ್ಡದಾಗುತ್ತಾ ಹೋದಂತೆ ಕೀವು ತುಂಬಿಕೊಳ್ಳುವ ಮೂಲಕ ನೋವಿನಿಂದ ಕೂಡುತ್ತದೆ. ತುರಿಕೆ ಹಾಗೂ ಉರಿ ಸಹಾ ಕಂಡುಬರುತ್ತದೆ.

ಒಂದು ವೇಳೆ ಇವು ಮುಖ, ಪಾದ, ಮಣಿಕಟ್ಟು, ಮೊಣಕೈ ಮೊದಲಾದ ಸ್ಥಳಗಳಲ್ಲಿ ಆದರೆ ಮುಜುಗರವನ್ನೂ ಎದುರಿಸಬೇಕಾಗುತ್ತದೆ. ಈ ಸ್ಥಿತಿಯಿಂದ ಹೊರಬರಲು ಕೆಲವು ಮನೆಮದ್ದುಗಳು ಲಭ್ಯವಿವೆ. ಕೆಳಗಿನ ಸ್ಲೈಡ್ ಶೋನಲ್ಲಿ ನೀಡಲಾಗಿರುವ ವಿಧಾನಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಿ ಈ ತೊಂದರೆಯಿಂದ ಮುಕ್ತಿ ಪಡೆಯಲು ಸಾಧ್ಯ. ಬನ್ನಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾ ಒಂದು ಉತ್ತಮ ಉರಿಯೂತ ನಿವಾರಕವಾಗಿರುವ ಕಾರಣ ಚರ್ಮಕ್ಕೆ ಹಿತವಾದ ಪರಿಣಾಮವನ್ನು ನೀಡುತ್ತದೆ. ಇದು ಒಳಮುಖ ಬೆಳೆದ ಕೂದಲ ನಿವಾರಣೆಗೂ ಸಮರ್ಥವಾಗಿದೆ. ಇದಕ್ಕಾಗಿ ಕೊಂಚ ಓಟ್ಸ್ ಗಳನ್ನು ಕೊಂಚ ನೀರಿನೊಂದಿಗೆ ನುಣ್ಣಗೆ ಅರೆದು ಇದಕ್ಕೆ ಅರ್ಧದಷ್ಟು ಪ್ರಮಾಣದ ಅಡುಗೆ ಸೋಡಾ ಹಚ್ಚಿ ಒಳಮುಖ ಬೆಳೆದ ಕೂದಲಿರುವಲ್ಲೆಲ್ಲಾ ನಯವಾದ ಮಸಾಜ್ ನೊಂದಿಗೆ ಹಚ್ಚಿ. ಕೊಂಚ ಸಮಯ, ಅಂದರೆ ಸುಮಾರು ಹತ್ತರಿಂದ ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ನಿಧಾನವಾಗಿ ಉಜ್ಜಿಕೊಳ್ಳುತ್ತಾ ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳ ಪದರ ಕರಗಿ ತೆರೆದುಕೊಳ್ಳುವ ಮೂಲಕ ಕೂದಲು ಹೊರಬರಲು ಸಾಧ್ಯವಾಗುತ್ತದೆ.

ಓಟ್ಸ್ (Oatmeal), ಜೇನು ಮತ್ತು ಮೊಸರು

ಓಟ್ಸ್ (Oatmeal), ಜೇನು ಮತ್ತು ಮೊಸರು

ಸಮಪ್ರಮಾಣದಲ್ಲಿ ಓಟ್ಸ್, ಮೊಸರು ಮತ್ತು ಜೇನುತುಪ್ಪವನ್ನು ಕಲೆಸಿ ನಯವಾಗಿ ಅರೆದುಕೊಳ್ಳಿ. ಈ ಮಿಶ್ರಣವನ್ನು ಪ್ರಭಾವಿತ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸಕ್ಕರೆ ಮತ್ತು ಆಲಿವ್ ಎಣ್ಣೆ

ಸಕ್ಕರೆ ಮತ್ತು ಆಲಿವ್ ಎಣ್ಣೆ

ಸತ್ತ ಜೀವಕೋಶಗಳ ನಿವಾರಣೆಗೆ ಸಕ್ಕರೆ ಸಹಾ ಉತ್ತಮ ಪರಿಹಾರವಾಗಿದೆ. ಏಕೆಂದರೆ ಸಕ್ಕರೆ ಸತ್ತ ಜೀವಕೋಶಗಳನ್ನು ಕರಗಿಸಿಕೊಳ್ಳಬಲ್ಲ ಶಕ್ತಿ ಹೊಂದಿದೆ. ಇದಕ್ಕಾಗಿ ಸಕ್ಕರೆಯನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ, ಕೆಲವು ಹನಿ ಟೀ ಟ್ರೀ ಎಣ್ಣೆ(tea tree oil), ಮತ್ತು ಕೆಲವು ಹನಿ ಲ್ಯಾವೆಂಡರ್ ಎಣ್ಣೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಅಗತ್ಯವಿರುವ ಚರ್ಮದ ಮೇಲೆ ನಯವಾದ ಮಸಾಜ್ ನೊಂದಿಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಜೇನು

ಜೇನು

ಜೇನಿನ ನಂಜುನಿರೋಧಕ ಗುಣ ಇಲ್ಲಿ ಕೆಲಸಕ್ಕೆ ಬರುತ್ತದೆ. ವಿಶೇಷವಾಗಿ ಚರ್ಮದಲ್ಲಿ ಚಿಕ್ಕ ಗುಳ್ಳೆ ಉಬ್ಬಿದಂತಾಗಿದ್ದರೆ ಮತ್ತು ಉರಿ ಪ್ರಾರಂಭವಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತ. ಇದಕ್ಕಾಗಿ ಜೇನನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿ ಹತ್ತು ನಿಮಿಷದವರೆಗೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೆಕ್ಕೆಜೋಳದ ಹಿಟ್ಟು (Cornstarch)

ಮೆಕ್ಕೆಜೋಳದ ಹಿಟ್ಟು (Cornstarch)

ಮೆಕ್ಕೆಜೋಳದ ಹಿಟ್ಟನ್ನು ಕೊಂಚ ನೀರಿನೊಂದಿಗೆ ಮಿಶ್ರಣ ಮಾಡಿ ಈ ಮಿಶ್ರಣವನ್ನು ತೆಳ್ಳಗೆ ಚರ್ಮದ ಮೇಲೆ ಹಚ್ಚಿ. ಅಡುಗೆ ಸೋಡಾದಂತೆಯೇ ಈ ಹಿಟ್ಟು ಸಹಾ ಉರಿಯೂತ ನಿವಾರಕವಾಗಿದ್ದು ಉರಿ, ನೋವನ್ನು ಶಮನಗೊಳಿಸಿತ್ತದೆ. ಒಂದು ವೇಳೆ ಊತ ಅತಿಹೆಚ್ಚಾಗಿದ್ದು ಕೀವು ತುಂಬಿಕೊಂಡಿದ್ದರೆ ಈ ವಿಧಾನ ಸೂಕ್ತ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಆಸ್ಪಿರಿನ್

ಆಸ್ಪಿರಿನ್

ಒಂದು ವೇಳೆ ಒಳಮುಖ ಬೆಳೆದ ಕೂದಲು ಅತಿ ಹೆಚ್ಚಾಗಿ ಬೆಳೆದು ಚರ್ಮ ಕೆಂಪಗಾಗಿ ಸೀಳಿ ಕೂದಲಿನ ಕಮಾನು ಹೊರಬಂದಿದ್ದರೆ ಈ ವಿಧಾನ ಸೂಕ್ತ. ಇದಕ್ಕಾಗಿ ಎರಡು ಆಸ್ಪಿರಿನ್ ಮಾತ್ರೆಗಳನ್ನು ಚಿಕ್ಕದಾಗಿ ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ. ಇದಕ್ಕೆ ಕೊಂಚ ಜೇನನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಇದನ್ನು ಪ್ರಭಾವಿತ ಚರ್ಮದ ಮೇಲೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಸೌತೆಕಾಯಿ

ಸೌತೆಕಾಯಿ

ಚರ್ಮದಲ್ಲಿ ಉರಿ, ಊತ, ಕೆಂಪಗಾಗಿರುವುದು ಕಂಡುಬಂದರೆ ಇದಕ್ಕೆ ಸೌತೆಕಾಯಿ ಸಹಾ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಎಳೆಯ ಸೌತೆಯನ್ನು ಅಡ್ಡಲಾಗಿ ಬಿಲ್ಲೆಗಳಂತೆ ಕತ್ತರಿಸಿ ಚರ್ಮದ ಮೇಲೆ ಕೊಂಚಕಾಲ ಇಡಬೇಕು. ಒಂದು ವೇಳೆ ಈ ತೊಂದರೆ ವಿಸ್ತಾರವಾಗಿ ಹರಡಿಕೊಂಡಿದ್ದರೆ ಬಿಲ್ಲೆಗಳನ್ನು ಎಲ್ಲೆಡೆ ಹರಡುವಂತೆ ಇಟ್ಟು ತೆಳುವಾದ ಹತ್ತಿಯ ಬ್ಯಾಂಡೇಜ್ ಪಟ್ಟಿಯಿಂದ ಕಟ್ಟಿಕೊಳ್ಳಬೇಕು. ಸುಮಾರು ಅರ್ಧಘಂಟೆ ಅಥವಾ ಮುಕ್ಕಾಲು ಘಂಟೆ ಬಿಟ್ಟು ಬಿಲ್ಲೆಗಳನ್ನೆಲ್ಲಾ ನಿವಾರಿಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಇದು ಅತ್ಯಂತ ಸುರಕ್ಷಿತ ವಿಧಾನವಾಗಿದ್ದು ಉತ್ತಮ ಪರಿಣಾಮಕ್ಕಾಗಿ ಪ್ರತಿದಿನವೂ ತೊಂದರೆ ಪೂರ್ಣವಾಗಿ ನಿವಾರಣೆಯಾಗುವವರೆಗೆ ಅನುಸರಿಸಬೇಕು.

ಉಪ್ಪು

ಉಪ್ಪು

ಒಂದು ವೇಳೆ ಕೂದಲು ಹೊರಬಂದಿರದೇ ಒಳಗಿನಿಂದ ಉಬ್ಬಿಕೊಂಡಿದ್ದರೆ ಈ ವಿಧಾನ ಸೂಕ್ತ. ಉಪ್ಪನ್ನು ಕೊಂಚ ನೀರಿನೊಂದಿಗೆ ಬೆರೆಸಿ ದಪ್ಪನೆಯ ದ್ರಾವಣವಾಗುವಂತೆ ಕಲಸಿ. ಈ ದ್ರಾವಣದಲ್ಲಿ ಒಂದು ಹತ್ತಿಯುಂಡೆಯನ್ನು ಅದ್ದಿ ಚರ್ಮದ ಮೇಲೆ ಹಚ್ಚಿಕೊಳ್ಳಿ. ಸುಮಾರು ಹತ್ತರಿಂದ ಹದಿನೈದು ನಿಮಿಷ ಕಳೆದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ನಿತ್ಯವೂ ದಿನಕ್ಕೆ ಎರಡು ಬಾರಿ, ತೊಂದರೆ ನಿವಾರಣೆಯಾಗುವರೆಗೂ ಅನುಸರಿಸಬೇಕು.

Story first published: Thursday, February 18, 2016, 8:05 [IST]
X
Desktop Bottom Promotion