ಬೆನ್ನೇರಿ ಬಂತು ತಾಳಲಾರದ ನೋವು!

By * ಯಶ್

Healthy lifestyle is the answer for back pain
ನೆಗಡಿ ಬಂದ್ರೆ ಸಿಟ್ರಿಜಿನ್, ವೈರಲ್ ಜ್ವರ ಬಂದ್ರೆ ಡೋಲೋ ಜೊತೆಗೊಂದು ಆಂಟಿಬಯೋಟಿಕ್, ತಲೆಸಿಡಿತಕ್ಕೆ ಅನಾಸಿನ್ ಅಥವಾ ಝಂಡುಬಾಮ್ ಅಥವಾ ಅಮೃತಾಂಜನ... ಆದರೆ ಬೆನ್ನು ನೋವಿಗೆ ಯಾವುದು? ಮೂವ್ ಅಥವಾ ನಾರಾಯಣ ತೈಲ ಅಥವಾ ಕುಕ್ಕೆ ತೈಲ ಅಥವಾ ಸೆನ್ಸೂರ್ ಲೋಶನ್ ಅಥವಾ ಇನ್ನಾವುದೋ ತೈಲ ಹಚ್ಚಿ ತಿಕ್ಕಿದರೆ ಬೆನ್ನು ನೋವು ಮಂಗಮಾಯವಾಗಿರುತ್ತದೆ ಅಂದ್ರೆ ಎರಡೇ ದಿನದಲ್ಲಿ ಅದು ಮರುಕಳಿಸಿರುತ್ತದೆ.

ಯಾವುದೋ ತೈಲ ಅಥವಾ ಮತ್ಯಾವುದೋ ಬಾಮ್ ಬೆನ್ನುನೋವು ನಿವಾರಕ ಅಲ್ಲವೇ ಅಲ್ಲ. ಅವುಗಳ ಲೇಪನ ತಾತ್ಕಾಲಿಕವಾಗಿ ನೋವು ಶಮನ ಮಾಡಿರಬಹುದು, ಆದರೆ ಅದು ಶಾಶ್ವತವಲ್ಲ. ಇದಕ್ಕೆ ಕಾರಣವಾದರೂ ಏನು ಅಂತ ಒಮ್ಮೆ ಜೀವನಶೈಲಿಯತ್ತ ಮುಖಮಾಡಿ ನೋಡಿ. ಯಾವುದೇ ಔಷಧಿಯಿಲ್ಲದೆ ಬೆನ್ನು ನೋವು ನಿವಾರಿಸಿಕೊಳ್ಳುವುದು ಸಾಧ್ಯ. ಅದು ನಮ್ಮ ಶಿಸ್ತಿನ ಜೀವನಕ್ರಮದಿಂದ ಮಾತ್ರ ಸಾಧ್ಯ.

ಅಶಿಸ್ತಿನಿಂದ ಕೂಡಿದ ಜೀವನಕ್ರಮವೇ ಬೆನ್ನು ನೋವಿಗೆ ಮೂಲ ಕಾರಣ ಎನ್ನುವುದು ನೆನಪಿನಲ್ಲಿರಲಿ. ಜೀವನಕ್ರಮ ಶಿಸ್ತಿನಿಂದ ಕೂಡಿದ್ದರೆ ಬೆನ್ನುನೋವು ಹತ್ತಿರವೂ ಸುಳಿಯುವುದಿಲ್ಲ, ಮರುಕಳಿಸುವುದೂ ಇಲ್ಲ.

ಈ ಅಂಶಗಳನ್ನು ಗಮನಿಸಿ

1) ಕಚೇರಿಯಲ್ಲಿ ಸರಿಯಾಗಿ ಕುಳಿತುಕೊಳ್ಳದೇ ಕೆಲಸ ಮಾಡುವುದು
2) ಬಿಡುವು ನೀಡದೆ ದೀರ್ಘಕಾಲ ಕೆಲಸ ನಿರ್ವಹಿಸುವುದು
3) ಬೆಳಗಿನ ಜಾವ ವ್ಯಾಯಾಮ ಮಾಡದಿರುವುದು
4) ಅಪಥ್ಯವಾದ ತಿಂಡಿಗಳನ್ನು ಹೊಟ್ಟೆಗೆ ಸೇರಿಸಿದಾಗ
5) ಸರಿಸಮವಿಲ್ಲದ ಹಾಸಿಗೆ ಬಳಸಿದಾಗ
6) ಹೃದಯದ ಬೇನೆ ಇದ್ದಾಗ

ಈ ಎಲ್ಲ ಅಂಶಗಳು ನಿಮ್ಮ ಬೆನ್ನು ನೋವಿಗೆ ದಾರಿ ಮಾಡಿಕೊಡಬಹುದು.

ಬೆಳಗಿನ ಜಾವ ವ್ಯಾಯಾಮ ಮಾಡುವುದನ್ನು ಒಂದು ತಪಸ್ಸಿನಂತೆ ಆಚರಿಸಬೇಕು. ಆಲಸ್ಯತನದಿಂದಲೋ ಮತ್ತಾವುದೋ ಕಾರಣದಿಂದಲೋ ವ್ಯಾಯಾಮ ಬಿಡಲೇಬಾರದು. ನಿಯಮಿತವಾದ ನಡಿಗೆ, ಜಾಗಿಂಗ್, ಮತ್ತಿತರ ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ. ಯೋಗಾಭ್ಯಾಸವಂತೂ ಸರ್ವರೀತಿಯಿಂದಲೂ ದೇಹವನ್ನು ಗೆಲುವಾಗಿಟ್ಟಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವ ಪರಿಯನ್ನು ಗಮನಿಸಿ. ವಿಪರೀತ ಕೆಲಸ ಅಂತ ಕಚೇರಿಯಲ್ಲಿ ಸರಿಯಾಗಿ ಕುಳಿತುಕೊಳ್ಳದೇ ಸುದೀರ್ಘಕಾಲ ಕೆಲಸ ಮಾಡಿದರೆ ಬೆನ್ನು ನೋವು ತಾನಾಗಿಯೇ ಅಮರಿಕೊಂಡಿರುತ್ತದೆ.

ಇನ್ನು ಕೆಲವರಿಗೆ ತಮ್ಮ ಅಜ್ಜಿಕಾಲದ ಹಳೆ ಪಾತ್ರೆ, ಹಳೆ ಕಬ್ಬಿಣದ ವಸ್ತುಗಳೆಂದರೆ ವಿಪರೀತ ಪ್ರೀತಿ. ಹಾಗೆಯೇ ತಾವು ಚಿಕ್ಕವರಿದ್ದಾಗ ಅಪ್ಪ ತಂದ ಹಾಸಿಗೆ ಅಂತ ವರ್ಷಾನುಗಟ್ಟಲೆ ಅದರ ಮೇಲಿಯೇ ಪವಡಿಸುತ್ತಿರುತ್ತಾರೆ. ಗಂಟುಗಂಟಾದ ಹಾಸಿಗೆ, ಸಮತಟ್ಟಾಗಿಲ್ಲದ ಹಳೆ ಹಾಸಿಗೆ ಬೆನ್ನು ನೋವು ಬಳುವಳಿಯಾಗಿ ನೀಡಬಹುದು. ಯಾವುದೇ ಮುಲಾಜಿಲ್ಲದೆ ಹಳೆ ಹಾಸಿಗೆಯನ್ನು ಬಿಸಾಡಿ ಹೊಸದನ್ನು ಕೊಂಡುಕೊಳ್ಳಿ. ಜಿಪುಣತನ ಮಾಡಿದರೆ ನೋವು ಬೆನ್ನೇರಿ ಬಂದಿರುತ್ತದೆ. ಬರೀ ಒಂದು ಚಾಪೆಯ ಮೇಲೆ ಅಥವಾ ಜಮಖಾನದ ಮೇಲೆ ಬೆನ್ನು ನೀಡಿ ಮಲಗುವುದು ಒಳ್ಳೆಯ ರೂಢಿ.

ಕೆಲವರಿಗೆ ಕಂಡಕಂಡಲ್ಲೆಲ್ಲ ಜಂಕ್ ಆಹಾರವನ್ನು ತಿನ್ನುವ ಖಯಾಲಿಯಿರುತ್ತದೆ. ಇದಕ್ಕೂ ಬೆನ್ನು ನೋವಿಗೆ ಎತ್ತಣಿಂದೆತ್ತಣ ಸಂಬಂಧ ಅಂತ ನೀವು ಅನ್ನಬಹುದು. ನಮ್ಮ ದೇಹಕ್ಕೆ ಒಗ್ಗದ ಮತ್ತು ಪೌಷ್ಟಿಕಾಂಶಗಳಿಂದ ಕೂಡಿಲ್ಲದ ಆಹಾರ ಬೆನ್ನು ನೋವಿಗೆ ಕಾರಣವಾಗಬಹುದು, ತಿಳಿದಿರಲಿ.

ಎಲ್ಲಕ್ಕಿಂತ ಹೆಚ್ಚಾಗಿ, ಹೃದಯದ ಬಗ್ಗೆ ತಿಳಿವಳಿಕೆಯಿರಲಿ. ಮೇಲಿಂದ ಮೇಲೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ ಕಡೆಗಣಿಸಬೇಡಿ. ಕಾರ್ಡಿಯೋಲಜಿಸ್ಟ್ ಸಂಪರ್ಕಿಸಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿ. ರಕ್ತ ಹರಿವಿನಲ್ಲಿ ತಡೆಯುಂಟಾದಾಗ ಮೊದಲು ಕಾಣಿಸಿಕೊಳ್ಳುವುದೇ ಬೆನ್ನು ನೋವು ಎಂಬ ಅರಿವಿರಲಿ. ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ತಿನ್ನುವ ಆಹಾರದ ಮೇಲೆ ನಿಗಾ ಇರಲಿ. ಆಹಾರ ಸತ್ವಯುತವಾಗಿರಲಿ. ಹಸಿಸೊಪ್ಪು, ಒಣಹಣ್ಣು, ಹಣ್ಣುಗಳು ನಮ್ಮ ದಿನನಿತ್ಯದ ಆಹಾರದ ಭಾಗವಾಗಿರಲಿ.

Story first published: Monday, April 26, 2010, 17:37 [IST]
X
Desktop Bottom Promotion