Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಸ್ಪಂದನಾ ಅವರ ಜಗತ್ತು ಎಷ್ಟು ಸುಂದರವಾಗಿತ್ತು ಗೊತ್ತಾ: ರೇಖಾರಾಣಿಯವರು ಬರೆದ ಈ ಸಾಲುಗಳೇ ಎಲ್ಲವನ್ನು ಹೇಳುತ್ತೆ
ಇಂದು ಇಡೀ ಕನ್ನಡ ಜನತೆ ಶಾಕ್ನಲ್ಲಿದೆ, ನಮ್ಮನೆಯ ಮಗಳನ್ನೇ ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ನಮ್ಮೆಲ್ಲರ ಮನಗೆದ್ದಿರುವ ಚಿನ್ನಾರಿ ಮುತ್ತ ಇನ್ನುಂದೆ ಹೇಗೆ ಇರುತ್ತಾರೋ ಎಂದು ಊಹಿಸಲೇ ಸಾಧ್ಯವಾಗುತ್ತಿಲ್ಲ, ಅಯ್ಯೋ ಅವರಿಗೆ ಇದನ್ನೆಲ್ಲಾ ನಿಜವಾಗಲೂ ಸಹಿಸಲು ಸಾಧ್ಯವೇ? ಎಂದು ಪ್ರತಿಯೊಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ, ಕಾರಣ ವಿಜಯ ರಾಘವೇಂದ್ರ ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದನ್ನು ಬಿಗ್ ಬಾಸ್ ನೋಡಿದವರಿಗೆ ತಿಳಿದರುತ್ತೆ, ಅಲ್ಲದೆ ವೀಕೆಂಡ್ ವಿಥ್ ರಮೇಶ್ ಕಾರ್ಯದಲ್ಲಿ, ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಪತ್ನಿ ಬಗ್ಗೆ ತುಂಬಾ ಸಂಭ್ರಮದಿಂದ ಹೇಳುತ್ತಿದ್ದರು... ಈ ಮುದ್ದಾದ ಜೋಡಿಯನ್ನು ನೋಡಿದವರಿಗೆ ಜೋಡಿ ಎಂದರೆ ಹೀಗಿರಬೇಕು ಎಂದು ಅನಿಸದೆ ಇರುತ್ತಿರಲಿಲ್ಲ...ಈಗ ಅಂಥ ಮುದ್ದಾದ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ...

ಸ್ಪಂದನಾ ಅವರ ಕುರಿತು ಅವರ ಆಪ್ತರು ಹೇಳುವುದನ್ನು ಕೇಳುವಾಗ ಈ ಸಾವು ಒಳ್ಳೆಯ ವ್ಯಕ್ತಿಗಳಿಗೇ ಏಕೆ ಬೇಗ ಬರುತ್ತೆ ಎಂದನಿಸದೆ ಇರಲ್ಲ. ಸ್ಪಂದನಾ ಅವರನ್ನು ತುಂಬಾ ಚಿಕ್ಕಂದಿನಿಂದಲೂ ಬಲ್ಲ ನಿರ್ಮಾಪಕಿ, ನಿರ್ದೇಶಕಿ ರೇಖಾರಾಣಿ ಕಶ್ಯಪ್ ಅವರು ಕೆಲವೊಂದು ಸಾಲುಗಳನ್ನು ತಮ್ಮ ಸಾಮಾಜಿಕ ತಾಣದಲ್ಲಿ ಬರೆದಿದ್ದಾರೆ.. ಆ ಸಾಲುಗಳೇ ಸಾಕು ಸ್ಪಂದನ ಎಷ್ಟು ಒಳ್ಳೆಯವರಾಗಿದ್ದರು ಎಂದು ಹೇಳಲು... ಅಪ್ಪ-ಅಮ್ಮನ ಮುದ್ದಿನ ರಾಜಕುಮಾರಿಯಾಗಿ, ಅಣ್ಣ ಮುದ್ದಿನ ತಂಗಿಯಾಗಿ, ಗಂಡನ ಪ್ರೀತಿಯ ಮಡದಿಯಾಗಿ ಎಷ್ಟೊಂದು ಸುಂದರರವಾಗಿತ್ತು ಅವರ ಬಾಳು ಎಂದು ಅವರು ವರ್ಣಿಸಿರುವ ರೀತಿ ನೋಡಿದಾಗ ನಮ್ಮೆದೆ ಭಾರವಾಗುವುದು...
ಅವರದ್ದೇ ಬರಹವನ್ನು ಅದೇ ರೀತಿ ಇಲ್ಲಿ ನೀಡಲಾಗಿದೆ ನೋಡಿ...
ಸ್ಪಂದನಾ! ನನ್ನ ಅಚ್ಚು!
ಅವಳು ಹುಟ್ಟಿದಾಗಿನಿಂದ ಇದುವರೆಗೂ ನಾನವಳನ್ನು ಆ ಹೆಸರಿನಿಂದ ಕರೆದೇ ಇಲ್ಲ. ಕರೆದುದೆಲ್ಲಾ ಅಚ್ಚು ಎಂದೇ!.
ಸೌಮ್ಯ ಮುಖದ ಸುಂದರ ಹಠಮಾರಿ. ಆಸೆಪಟ್ಟಿದ್ದನ್ನು ನೆರವೇರಿಸಲು ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯರಾಘವೇಂದ್ರನೋ! ದೇವಾ, ಅಳತೆ ಮಾಡಿಟ್ಟ ಹಾಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ. ನಂತರ ಮಿಕ್ಕೆಲ್ಲ.
ಬಹಳ ಮುಗ್ದೆಯಾಗಿದ್ದ ನನ್ನ ಅಚ್ಚುವನ್ನು ಒಮ್ಮೆ ಸದಾಶಿವನಗರ ಪಾರ್ಕ್ ಬಳಿ ಹರೆಯದ ಹುಡುಗನೊಬ್ಬನ ಜೊತೆ ಕಾರಿನಲ್ಲಿ ಕುಳಿತು ಹರಟೆಹೊಡೆಯುತ್ತಿದ್ದುದ್ದನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಅವಳಪ್ಪ ಬಿ.ಕೆ. ಶಿವರಾಂ ಮೊದಲೇ ಹುಲಿ. ' ನಿನ್ನ ಪ್ರಾಣಪಕ್ಷಿ ಎಲ್ಲಿಟ್ಟಿದ್ದೀಯ ಹೇಳು' ಎಂದು ರೇಗಿಸಿದಾಗಲೆಲ್ಲಾ ಮಗಳನ್ನು ಮುದ್ದುಮಾಡುತ್ತಾ ' ಅಚ್ಚು ಒಳಗಿದೆ ನನ್ನ ಪ್ರಾಣಪಕ್ಷಿ' ಎನ್ನುತ್ತಿದ್ದ. ಅಪ್ಪನ ಅಪಾರ ಪ್ರೀತಿ ಅವಳ confidence levelನ್ನು ಸದಾ ಉತ್ತುಂಗದಲ್ಲಿಟ್ಟಿತ್ತು. ಇಂತಹ ಅಪ್ಪನ ಬಳಿ ಮಗಳ ಹಿತರಕ್ಷಣೆಯ ದೃಷ್ಟಿಯಿಂದ ಚಾಡಿ ಹೇಳಲೋ? ಬೇಡವೊ? ಎಂದು ಬಹಳ ದಿನ ಒದ್ದಾಡಿದ್ದೆ. ನಂತರ ಕರೆಮಾಡಿ ನಿನ್ನ ಜೊತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. '
ಆಂಟಿ, ನಾನು ಮದುವೆಯಾದರೆ ಅವರನ್ನೇ...ಅಪ್ಪನನ್ನು ಒಪ್ಪಿಸಿ' ಎಂದಳು. ಎಷ್ಟು ಹಠಮಾಡಿದರೂ ಹುಡುಗ ಯಾರೆಂದು ಹೇಳುತ್ತಿಲ್ಲ. ಕಡೆಗೆ ' ಆಂಟಿ, ಸಿನೆಮಾದವನು ಅಂದರೆ ನೀವೆಲ್ಲಾ ಬೇಡ ಅನ್ನುತ್ತೀರಿ. ಅದಕ್ಕೆ ಅವರ ಹೆಸರು ಹೇಳೊಲ್ಲ' ಎಂದಳು. ಹಾಗಾದರೆ ನಾನೂ ನಿನ್ನ ಪ್ರೀತಿಗೆ ಸಪೋರ್ಟ್ ಮಾಡೊಲ್ಲ ಎಂದೆ.
ಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಎಲ್ಲೂ ಸಿಕ್ಕಿಹಾಕಿಕೊಳ್ಳದ ಜಾಣತನ ತೋರುವಷ್ಟು ದೊಡ್ಡವಳಾಗಿಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಸಣ್ಣ ಧ್ವನಿಯಲ್ಲಿ ಹೇಳಿದಳು ಚಿನ್ನಾರಿ ಮುತ್ತ!
ಈ ಮಧ್ಯೆ ನನ್ನ ಆಪ್ತ ಹಾಗೂ ನನ್ನ soulmate ಶಿವರಾಂಗೆ ಅಚ್ಚು ವಿಷಯ ಹೇಳಲೇಬೇಕೆಂದು ನಿರ್ಧರಿಸಿದ್ದರೂ, ಷೂಟಿಂಗ್ ನಲ್ಲಿ ಬಿಜಿಯಾದೆ.
ಬೆಳಿಗೆ ಬೆಳಿಗ್ಗೆ ಶಿವರಾಂ ಕರೆ. ' ನಿನ್ನ ಮಗಳು ಅಚ್ಚುಗೆ ಮದುವೆ ಮಾಡ್ತಿದ್ದೀನಿ ಅಂತ! ಮತ್ತೆ ನನ್ನ ಜೀವ ಬಾಯಿಗೆ ಬಂತು. ಹು..ಡು...ಗ..ಯಾರು? ಎಂದೆ ನಡುಗುವ ಧ್ವನಿಯಲ್ಲಿ. ಯಾವುದೇ ಕಾರಣಕ್ಕೂ ಅಚ್ಚು ಕನಸು ಛಿದ್ರವಾಗುವುದು ನನಗಿಷ್ಟವಾಗಿರಲಿಲ್ಲ. ಏಕೆಂದರೆ ನಮ್ಮ ಪಾಲಿಗೆ ಅವಳು ಸ್ವರ್ಗದಿಂದ ನೇರವಾಗಿ ನಮ್ಮ ಕೈಗೆ ಸಿಕ್ಕ ಹೂವು.
ನಿಧಾನವಾಗಿ, ಸಮಾಧಾನಕರವಾದ ಧ್ವನಿಯಲ್ಲಿ ಶಿವರಾಂ ಹೇಳಿದ್ದು ' ಅಚ್ಚನೇ ಆರಿಸಿಕೊಂಡಿದ್ದಾಳೆ. ವಿಜಯರಾಘವೇಂದ್ರ. ಒಳ್ಳೆ ಹುಡುಗನನ್ನೇ ಆರಿಸಿಕೊಂಡಿದ್ದಾಳಲ್ವಾ?'
ಶಿವರಾಂ ಮಾತು ಕೇಳುತ್ತಿದ್ದಂತೆ ನೂರಾರು ಬಂಡೆಗಳು ತಲೆಯಿಂದ ಕೆಳಗೆ ಇಳಿದ ಸುಂದರ ಅನುಭವ.
ಇಲ್ಲಿ ವಿಜಯರಾಘವೇಂದ್ರ ಪುಣ್ಯ ಮಾಡಿದ್ದನೋ...ಅಚ್ಚು ಪುಣ್ಯಮಾಡಿದ್ದಳೋ ಗೊತ್ತಿಲ್ಲ ಅವರ ದಾಂಪತ್ಯಜೀವನ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು.
ನಾನವಳನ್ನು ಆಗಾಗ್ಗೆ ಚಿನ್ನಾರಿ ಮುತ್ತಿ ಎಂದರೆ ಅಲ್ಲ, ನಾನು ಅಚ್ಚು ಎನ್ನುತ್ತಿದ್ದಳು.
ಅಚ್ಚು ಚಿಕ್ಕವಳಿದ್ದಾಗ ಅವಳ ಮಾವನ ಮನೆ ಬೆಳ್ತಂಗಡಿಯಲ್ಲಿ ಷೂಟಿಂಗ್ ಮಾಡುತ್ತಿದೆ. ಹಗಲು ರಾತ್ರಿ ನಡೆಯುತ್ತಿದ್ದ ಧಾರಾವಾಹಿ. ಪುಟ್ಟಿ ನನ್ನ ಹೆಗಲಿಗಂಟಿಕೊಂಡು ಹಗಲೂ ರಾತ್ರಿ ಬೇಸರವಿಲ್ಲದೆ ಆಸಕ್ತಿಯಿಂದ ಷೂಟಿಂಗ್ ನೋಡುತ್ತಿದ್ದಳು. ಒಮ್ಮೆ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಾ ಕುಳಿತಿದ್ದೆ. ಮುಖ ಊದಿಸಿಕೊಂಡು ಹತ್ತಿರ ಬಂದು 'ಸೌಮ್ಯವಾದ ಕೋಪದಿಂದ' ' ಆಂಟಿ ನಾನು ಅವತ್ತಿಂದ ನೋಡ್ತಿದ್ದೀನಿ. ಧಾರಾವಾಹಿಯಲ್ಲಿ ನನ್ನ ಹೆಸರು ಯಾಕೆ ಇನ್ನೂ ಬಂದಿಲ್ಲ?' ಎಂದು ಕೇಳಿದಳು. ನನಗರ್ಥವಾಯ್ತು, ತನ್ನ ಪ್ರೀತಿಪಾತ್ರ ಆಂಟಿ ತನ್ನ ಹೆಸರಲ್ಲದೆ ಬೇರೆ ಹೆಸರುಗಳನ್ನು ಪಾತ್ರಗಳಿಗೆ ಇಡಲು ಸಾಧ್ಯವೆ? ಪಟ್ಟನೆ ನಾನು ಎಚ್ಚೆತ್ತು ಹೇಳಿದೆ ' ಅಚ್ಚು ಮುಂದಿನ ಸೀರಿಯಲ್ ನಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇರುತ್ತೆ ನೋಡು.
ಪ್ರಾಮಿಸ್? ಎಂದಳು
ಪ್ರಾಮಿಸ್ ಎಂದೆ. ಅದರಂತೆ ನನ್ನ ಮುಂದಿನ ಮಕ್ಕಳ ಧಾರಾವಾಹಿ ಜಿಂ ಜಿಂ ಜಿಂಬಾದಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇಟ್ಟೆ
ಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಅಚ್ಚುಗಳು ನನ್ನ ಎಲ್ಲಾ ಸೀರಿಯಲ್ ಗಳಲ್ಲೂ ಓಡಾಡಿಬಿಟ್ಟರು.
ಅಚ್ಚು..ಈ ಭೂಮಿಗೆ ಬರಲು ಒಳ್ಳೆಯ ಅಪ್ಪ, ಅಮ್ಮಂದಿರ ಆಯ್ಕೆ ಸರಿಯಾಗಿತ್ತು. ಅಣ್ಣನ ಆಯ್ಕೆ ಅದೃಷ್ಟದಿಂದ ಕೂಡಿತ್ತು, ಗಂಡನ ಆಯ್ಕೆಗೆ ಸ್ವರ್ಗದಿಂದ ದೇವತೆಗಳೆಲ್ಲಾ ಬಂದು ಹರಸಿದರು. ಮಗನ ಆಯ್ಕೆಯೂ ಸ್ವರ್ಗದಿಂದ ಬಂದ ಮುದ್ದಾದ ದೇವರಾಗಿತ್ತು. ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟುಬೇಗ ನಿನ್ನ ತವರುಮನೆ oneway ಆ ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ...
ಅಲ್ಲೂ ಹೀಗೆ ಸುಖವಾಗಿರು ಕಂದಾ.



Click it and Unblock the Notifications












