Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಪ್ಪಂದಿರ ದಿನ ವಿಶೇಷ: ನೆನಪಿನಂಗಳದಿಂದ ಒಂದಿಷ್ಟು....
ಮನೆಗೊಂದು ಮಗುವಿನ ಆಗಮನವಾಗುತ್ತಿದ್ದಂತೆಯೇ ಹತ್ತು ಹಲವು ಸಂಬಂಧಗಳು ಚಿಗುರುತ್ತವೆ. ಮೊತ್ತ ಮೊದಲನೆಯದಾಗಿ ಹೆತ್ತವಳು ತಾಯಿಯಾದರೆ ಜನ್ಮ ನೀಡಿದವನು ತಂದೆಯಾಗುತ್ತಾನೆ. ಅಂತೆಯೇ ಅಜ್ಜ, ಅಜ್ಜಿ, ತಾತ, ಮುತ್ತಜ್ಜಿ, ಚಿಕ್ಕಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ ಇತ್ಯಾದಿ. ವಾಸ್ತವವಾಗಿ ಮಹಿಳೆ ಗರ್ಭ ಧರಿಸಿದ ಕ್ಷಣದಿಂದಲೇ ತಾಯಿಯ ಪಟ್ಟ ಅನುಭವಿಸಿದರೆ ತಂದೆಗೆ ಮಾತ್ರ ಮಗುವಿನ ಜನ್ಮದ ಬಳಿಕವೇ ಈ ಪಟ್ಟ ಲಭಿಸುತ್ತದೆ. ಪಟ್ಟ ಲಭಿಸುತ್ತಲೇ ಸಾಮಾಜಿಕವಾಗಿ ಈತನ ಜವಾಬ್ದಾರಿಗಳೂ ಬದಲಾಗುತ್ತವೆ.
ನಮ್ಮ ಕರ್ನಾಟಕದಲ್ಲಿ ತಂದೆಗೆ ಮಗುವಿನ ಹೆಸರಿನ ಮುಂದೆ 'ತಂದೆ' ಎಂದು ಸೇರಿಸಿ ಹೆಸರನ್ನೇ ಬದಲಿಸುವ ಎಂದು ಹೇಳುವ ಪದ್ಧತಿ ಇಲ್ಲವಾದರೂ ಉತ್ತರ ಭಾರತ, ಪೂರ್ವ ಭಾರತ, ಅರೇಬಿಯಾ, ಆಫ್ರಿಕ, ಪಾಲಿನೇಶ್ಯಾ ಮೊದಲಾದ ಕಡೆ ಈ ಪದ್ದತಿ ಇದೆ. ಅರಬ್ ಸಂಸ್ಕೃತಿಯಲ್ಲಂತೂ ತಾಯಿಗೂ ಈ ಪಟ್ಟ ಸಿಗುತ್ತದೆ. (ಗಂಡು ಮಗುವಿನ ತಂದೆಗೆ ಆ ಮಗುವಿನ ಹೆಸರಿನ ಹಿಂದೆ ಅಬೂ ಎಂದೂ ಸೇರಿಸಿ, ತಾಯಿಗೆ ಹೆಣ್ಣು ಮಗುವಿನ ಹೆಸರಿನ ಹಿಂದೆ ಉಮ್ಮ್ ಎಂದೂ ಸೇರಿಸಿ ಕರೆಯುತ್ತಾರೆ). ಪ್ರೀತಿ ಮತ್ತು ರಕ್ಷಣೆಯ ಮೂರ್ತಿ ಅಪ್ಪ!
ಸಾಮಾನ್ಯವಾಗಿ ಮಗುವಿನ ತಂದೆಯಾಗುತ್ತಿರುವವರಿಗೆ ಈ ಪಟ್ಟವನ್ನು ಹೊರುವ ಬಗ್ಗೆ ಕೊಂಚ ಆತಂಕ ಇದ್ದೇ ಇರುತ್ತದೆ. ಸಮಾಜದಲ್ಲಿ ಈ ಪಟ್ಟ ಹೆಚ್ಚಿನ ಗೌರವ, ಸ್ಥಾನಮಾನ ಹಾಗೂ ಜವಾಬ್ದಾರಿಯನ್ನೂ ನೀಡುತ್ತದೆ. ನಿಮಗೆ ಅರಿವೇ ಇಲ್ಲದಂತೆ ಸಮಾಜದಲ್ಲಿ ಮಹತ್ವದ ಸ್ಥಾನವೊಂದನ್ನು ಕಲ್ಪಿಸುತ್ತದೆ. ಪ್ರತಿ ವರ್ಷದ ಜೂನ್ ಎರಡನೇ ಭಾನುವಾರದಂದು ಆಚರಿಸಲಾಗುವ ಅಪ್ಪಂದಿರ ದಿನದ ವಿಶೇಷವಾಗಿ ಇಂದು ಬೋಲ್ಡ್ ಸ್ಕೈ ತಂಡ ಕೆಲವು ಮಹತ್ವದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.
ಒತ್ತಡ ನಿವಾರಕ
ತಾಯಿಯಾದವಳಿಗೆ ತನ್ನ ಮಗು ಕರೆಯುವ ಅಮ್ಮಾ ಎಂಬ ಒಂದೇ ಪದ ಆಕೆಯ ಹೃದಯವನ್ನು ಹೂವಾಗಿಸುತ್ತದೆ. ಇದು ತಂದೆಯಾದವನಿಗೂ ಅನ್ವಯಿಸುತ್ತದೆ. ದಿನದ ಕೆಲಸದಲ್ಲಿ ಎಷ್ಟೇ ಮಾನಸಿಕ ಒತ್ತಡವಿರಲಿ, ಮನೆಗೆ ಬಂದಾದ ಅಪ್ಪಾ ಎಂದು ಮಗು ಕರೆದರೆ ಸಾಕು ಆ ಮಾನಸಿಕ ಒತ್ತಡಗಳೆಷ್ಟಿದ್ದರೂ ದೂರ ಓಡುತ್ತವೆ. ಬಳಿಕ ಮಗುವಿನೊಂದಿಗೆ ಕಳೆಯುವ ಪ್ರತಿ ಕ್ಷಣವೂ ಆನಂದಕರ, ಆಹ್ಲಾದಕರ ಮತ್ತು ಜೀವನದಲ್ಲಿ ಮರೆಯಲಾಗದಂತಹ ಕ್ಷಣಗಳಾಗಿ ಮಾರ್ಪಡುತ್ತವೆ.
ನಿಸ್ವಾರ್ಥ ಪ್ರೇಮ
ಸಾಮಾನ್ಯವಾಗಿ ಪ್ರಾಪ್ತವಯಸ್ಕರಾದ ಬಳಿಕ ನಮ್ಮ ಪ್ರೀತಿ ಪ್ರೇಮಗಳು ಕೊಂಚವಾದರೂ ಸ್ವಾರ್ಥ ಅಥವಾ ಹಕ್ಕುಸಾಮ್ಯದ ನಿಟ್ಟಿನಲ್ಲಿಯೇ ಇರುತ್ತವೆ. ಕೆಲವರಂತೂ ಎದುರಿನವರ ಹಣ ಅಂತಸ್ತು ಜಾತಿಗಳನ್ನೇ ನೋಡಿ ಪ್ರೀತಿಯನ್ನು ಹರಿಸುವುದುಂಟು. ಆದರೆ ಯಾವುದೇ ಬೆರಕೆ, ಸ್ವಾರ್ಥವಿಲ್ಲದ ಅಪ್ಪಟ ಪ್ರೇಮವನ್ನು ನೀಡಲು ಕೇವಲ ಮಕ್ಕಳಿಂದ ಮಾತ್ರ ಸಾಧ್ಯ. ತಂದೆಯಾದ ಬಳಿಕವೇ ಈ ಪರಿಯ ಪ್ರೀತಿ ಈ ಭೂಮಿ ಮೇಲಿದೆ ಎಂಬುದನ್ನು ಕಂಡುಕೊಳ್ಳಬಹುದು.
ಆಟ ಆಡುವ ಮೂಲಕ ಮತ್ತೆ ಚಿಗುರುವ ಬಾಲ್ಯ
ಪ್ರತಿ ಪುರುಷನಲ್ಲಿಯೂ ಓರ್ವ ಬಾಲಕ ಹುದುಗಿರುತ್ತಾನೆ. ಸೂಕ್ತ ಸಂದರ್ಭದಲ್ಲಿ ಈ ಬಾಲಕ ತನ್ನ ಅಸ್ತಿತ್ವವನ್ನು ತೋರುತ್ತಾನೆ. ಆದರೆ ಹಿರಿಯರಾಗಿರುವ ಮೂಲಕ ನಮಗೆ ನಾವೇ ಕಟ್ಟಿಕೊಂಡ ಪ್ರತಿಷ್ಠೆ ಮತ್ತು ಹಿರಿತನದ ಸೋಗಿನಲ್ಲಿ ಈ ಬಾಲಕನನ್ನು ವ್ಯಕ್ತಪಡಿಸಲು ನಾವೆಲ್ಲಾ ಹಿಂಜರಿಯುತ್ತೇವೆ. ಉದಾಹರಣೆಗೆ ದಾರಿಯಲ್ಲಿ ನಡೆದು ಬರುತ್ತಿದ್ದಾಗ ಮಕ್ಕಳು ಆಡುತ್ತಿದ್ದ ಚೆಂಡು ನಿಮ್ಮೆಡೆಗೆ ಬರುತ್ತಿದ್ದರೆ ಈ ಬಾಲಕ ಜಾಗೃತನಾಗುತ್ತಾನೆ.
ಆ ಚಂಡನ್ನು ಹೀಗೇ ಎಸೆದು ಹಿಂದಿರುಗಿಸುವ ಬದಲು ಕಾಲಿನಿಂದ ಹೊಡೆದೇ ಹಿಂದಿರುಗಿಸುವುದು ಈ ಬಾಲಕನ ಇರುವಿಕೆಯ ಕುರುಹಾಗಿದೆ. ಆದರೆ ತಂದೆಯಾದ ತಕ್ಷಣ ಈ ಬಿಗುಮಾನ, ಬಿಂಕ, ಕಟ್ಟುಪಾಡುಗಳೆಲ್ಲವೂ ನುಚ್ಚುನೂರಾಗುತ್ತವೆ. ಮಗುವಿನೊಂದಿಗೆ ಮಗುವಾಗಿ ಇದುವರೆಗೆ ಕಟ್ಟಿಹಾಕಿದ್ದ ತಮ್ಮೊಳಗಿನ ಬಾಲಕನನ್ನು ಬಿಡುಗಡೆ ಮಾಡುತ್ತಾರೆ. ಮಕ್ಕಳೊಂದಿಗೆ ಮಣ್ಣು, ಕೆಸರಿನಲ್ಲಿ ಆಡಿ, ಮಳೆಯಲ್ಲಿ ನೆನೆದು ಪಡುವ ಸಂಭ್ರಮ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ.
ಕಡೆಗೂ ನಿಮ್ಮ ತಂದೆಯನ್ನು ಅರಿಯಲು ಸಾಧ್ಯವಾಗುತ್ತದೆ
ನಿಮ್ಮ ತಂದೆ ನಿಮ್ಮ ಬಗ್ಗೆ ತೋರುತ್ತಿದ್ದ ಪ್ರೀತಿ ವಾತ್ಯಲ್ಯ, ಗದರಿಕೆ, ಶಿಕ್ಷಣ, ನಿಮಗೆ ಬೇಸರ ಹಿಡಿಸುತ್ತಿದ್ದ ಅವರ ಮಾತುಗಳೆಲ್ಲಾ ಈಗ ನಿಮಗೆ ನೆನಪಾಗುತ್ತವೆ. ನಿಮಗೆ ತಂದೆಯ ಪಟ್ಟ ಸಿಗುತ್ತಿದ್ದಂತೆಯೇ ಆ ಮಗುವಿನ ರಕ್ಷಣೆಗೆ ನಿಮಗರಿವಿಲ್ಲದಂತೆಯೇ ನಿಮ್ಮ ಮನಸ್ಸು ಸನ್ನದ್ಧವಾಗುತ್ತದೆ. ಈಗ ನೀವು ಮಗುವಾಗಿದ್ದಾಗ ನಿಮ್ಮ ತಂದೆ ನಿಮ್ಮ ಬಗ್ಗೆ ಹೊಂದಿದ್ದ ಕಠಿಣ ನಿಲುವಿನ ಬಗ್ಗೆ ಅರ್ಥವಾಗುತ್ತದೆ. ಈ ಅಪ್ಪಂದಿರ ದಿನ ನಿಮ್ಮ ಮಕ್ಕಳೊಂದಿಗೆ ಹೇಗೆ ಸಂಭ್ರಮಿಸುವಿರೋ ಹಾಗೇ ನಿಮ್ಮ ತಂದೆಯೊಂದಿಗೂ ಸಂಭ್ರಮಿಸಿದರೆ ಈ ದಿನಕ್ಕೆ ನಿಜಕ್ಕೂ ಸಾರ್ಥಕತೆ ಬರುತ್ತದೆ.



Click it and Unblock the Notifications











