Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Valentines Day: ಮನ್ನಿಸು ಗೆಳತಿ ಈ ನಿನ್ನ ನತದೃಷ್ಟ ಪ್ರೇಮಿಯ, ಕ್ಷಮೆಗೂ ಅರ್ಹನಲ್ಲ ನಾನು
ಇಳಿ ಸಂಜೆಯ ಸಮಯವದು. ನೇಸರನು ಕೆಂಪೇರಿಸಿಕೊಂಡು ಬಾನಂಗಳದಿಂದ ಸ್ವಲ್ಪ ಸ್ವಲ್ಪವೇ ಮರೆಯಾಗುತ್ತಾ ಮುಸ್ಸಂಜೆಗೆ ಸ್ವಾಗತ ಕೋರುತ್ತಿದ್ದನು. ಮತ್ತೊಂದೆಡೆ ತಂಗಾಳಿಯ ರಭಸಕೆ ಕಡಲಲೆಗಳು ಜೋರಾಗಿ ಅಪ್ಪಳಿಸುವಂತೆ ಮನದ ಭಾವನೆಗಳು ಕೂಡ ಎಲ್ಲೆಗಳನ್ನು ಮೀರಿ ಎದೆ ಬಡಿತವನ್ನು ಮತ್ತಷ್ಟು ಹೆಚ್ಚಿಸಿತು.

ಮನದಲ್ಲೇನೊ ಒಂಥರ ದುಗುಡ. ಎದೆಗೆ ಯಾರೋ ತಿವಿದಂತಹ ಅನುಭವ. ಧ್ವನಿಯೊಂದು ಕಿವಿಯ ಒಳ ಹೊಕ್ಕಾಗ ಯಾರೆಂದು ಹಿಂದಿರುಗಿ ನೋಡಿದೆ, "ಏನ್ ಸಾಹೇಬ್ರು ಇಲ್ಲಿ ನಿಂತಿದ್ದೀರ?? ಯಾರಿಗೆ ಕಾಳ್ ಹಾಕ್ತಿದೀರ" ಅಂದ್ಳು. ಬಹಳ ಪರಿಚಿತ ಧ್ವನಿ.ನನ್ನ "ಪ್ರಥಮಿ" ಯವಳು. ಪ್ರೀತಿಯಿಂದ "ಪಟ್ಟಿ" ಅಂತ ಕರೀತಿದ್ದೆ. "ಪಟ್ಟಿ" ಅಂದಾಗ ಅವಳ ಜೊತೆ ಕಳೆದ ಎಲ್ಲ ನೆನಪುಗಳು ಹಾಗೆ ಕಣ್ಮುಂದೆ ಬಂದು ಚಿತ್ರಣವನ್ನು ನೀಡಿತು.
"ಪಟ್ಟಿ" ಪಟಾಕಿ ತರ. ಪಟ ಪಟ ಅಂತ ಮಾತಾಡೋಳು. ಅವತ್ತು ಅಷ್ಟೇ ಏನೇನೋ ರ್ಲೆ ಮಾಡ್ತಿದ್ಳು ಅನ್ಸುತ್ತೆ. ನನ್ಗೆ ಬರೀ ಅಲೆಗಳ ಅಬ್ಬರಗಳ ಧ್ವನಿಯಷ್ಟೇ ಕೇಳಿಸುತ್ತಿತ್ತು, ಜೊತೆಗೆ ಕಾಣಿಸುತ್ತಿತ್ತು. ಮಾತು ನಿಲ್ಸಿ ಮೌನವಾಗಿದ್ದ ನನ್ನ ತಬ್ಬಿ ಹಿಡಿದಾಗಲೇ ನಾನು ವಾಸ್ತವಕ್ಕೆ ಬಂದೆ "ಪ್ರದೀ, ಏನಾಯ್ತು ಯಾಕ್ ಸೈಲೆಂಟಾಗಿದೀಯ?? ನಿನ್ಗೆ ಗುಡ್ ನ್ಯೂಸ್ ಹೇಳ್ಬೇಕು" ಅಂದಾಗ "ಏನು" ಅಂದೆ.
"ಗೆಸ್ ಮಾಡೊ" ಅಂದ್ಳು. "ಗೊತ್ತಿಲ್ಲ ಹೇಳು" ಅಂದೆ. "ಪ್ರದೀ ನಮ್ ಮನೇಲಿ ನಮ್ಮ ಪ್ರೀತೀನ ಒಪ್ಪಿದ್ರು. ನಿಮ್ ಮನೇಲಿ ಒಪ್ಪರ್ತಾರೆ ಅಲ್ವ" ಅಂದ್ಳು. "ನಮ್ ಮನೇಲಿ ಒಪ್ಪಿಲ್ಲ ಅಂತ ಹೇಗ್ ಹೇಳೋದು ದೇವ್ರೆ. ಯಾಕ್ ಇಷ್ಟೊಂದು ಇಷ್ಟ ಪಡೋಳ ಜೊತೆ ಇರೋಕೆ ಬಿಡ್ತಿಲ್ಲ. ಪ್ಲೀಸ್ ದೇವ್ರೆ "ಪಟ್ಟಿ" ನ ಮನೇಲಿ ಒಪ್ಪೋ ತರ ಮಾಡು" ಅಂತ ಎಷ್ಟೋ ಸಲ ಬೇಡಿಕೊಂಡಿದ್ದೂ ಇದೆ ಆದರೆ ಮನೆಯವರು ಒಪ್ಪುತ್ತಿಲ್ಲ, ಅವರ ಎದುರಿಸುವ ಧೈರ್ಯವೂ ನನಗಿಲ್ಲ.
ಭಾರವಾದ ಮನಸ್ಸಿನಿಂದ ಕೊನೆಗೂ "ಪಟ್ಟಿ"ಗೆ ವಿಷಯ ತಿಳಿಸಿದೆ. ಹೆಗಲ ಮೇಲೆ ತಲೆಯನ್ನಿಟ್ಟಿದ್ದ "ಪಟ್ಟಿ" ಎದ್ದು ತಕ್ಷಣ ನನ್ನೇ ನೋಡುತ್ತಿದ್ದಂತೇ ಕಣ್ಣಿಂದ ಕಂಬನಿಯು ಅವಳಿಗೆ ತಿಳಿಯೆದೆಯೇ ಅವಳ ಕೆನ್ನೆಯ ಮುತ್ತಿಕ್ಕಿತ್ತು. ಬರುವ ಅಳುವನ್ನು ತಡೆದುಕೊಳ್ಳುತ್ತಾ "ಪಟ್ಟಿ"ಯನ್ನ ಕೊನೆಯ ಬಾರಿ ಎಂಬಂತೆ ಅಪ್ಪಿಕೊಡೆ. "ಪಟ್ಟಿ" ಹೊರಡೋದಕ್ಕೆ ಅಣಿಯಾದಾಗ ಮನಸ್ಸು ಹೋಗಬೇಡವೆಂದರೂ ವಾಸ್ತವವಾಗಿ ಎಲ್ಲವನ್ನು ಒಪ್ಪಿಕೊಳ್ಳಬೇಕಿತ್ತು. ಮರಳಲ್ಲಿ ಕಟ್ಟಿದ ಗೂಡು ನೆಲಸಮವಾಗಿತ್ತು.
ಕಡಲ ಅಲೆಗಳಂತೆ ಅವಳೊಂದಿಗೆ ಕಳೆದ ನೆನಪುಗಳು ಕೂಡ ಹಿತವಾಗಿ ಸೋಕುತ್ತಿದೆ ನನ್ನೆದೆಯನ್ನು. ಆದರೆ ವಿಧಿಯೊಡ್ಡಿದ ಅಗ್ನಿಪರೀಕ್ಷೆಯಲ್ಲಿ ನಂದಿಸಲೂ ಆಗದೆ ಕೈಚೆಲ್ಲಿ ಕುಳಿತಿರುವೆ ವಿರಹದ ವೇದನೆಯಲ್ಲಿ! ಈ ಸಂಜೆಯ ಬಣ್ಣಗಳಂತೆ ಕಣೇ ನೀನು. ನೀ ನನ್ನ ಬದುಕಿಗೆ ಬಂದಾಗಲೇ ನನ್ ನಿಜ ಜೀವನದ ಸುಂದರ ಬಣ್ಣಗಳಿನ್ನೂ ಹೆಚ್ಚು ಪ್ರಕಾಶಿಸಿದ್ದು.
ಇನ್ಮೇಲೆ ಅದ್ಹೇಗೇ ನಿನ್ನ ಬಿಟ್ಟಿರಲಿ ಬಣ್ಣಗಳಿಲ್ಲದ ಕತ್ತಲೆಯ ಪ್ರಪಂಚದಲ್ಲಿ?? ಆಗ್ತಿಲ್ವೇ ಗೆಳತಿ... ನಿನ್ನನ್ನು ತೊರೆದು ನಾ ಸಾಧಿಸುವುದಾದರೂ ಏನಿದೆ ಹೇಳು? ವಿಧಿಲಿಖಿತ ಬರೆದವನನ್ನು ಪ್ರಶ್ನಿಸಿದರೆ ಅವನಿಂದ ಉತ್ತರ ಕೂಡ ಸಿಗಲಾರದು. ನಮ್ಮ ಪರಿಶುದ್ಧ ಪ್ರೀತಿ ಹೀಗಾಗುವುದೆಂಬ ಕಲ್ಪನೆಯೂ ಮೂಡಿರಲಿಲ್ಲ ಕಣೇ. ಅಂದು ಪ್ರೀತಿಯೆಂಬ ಸುಂದರ ಅಧ್ಯಾಯ ಮೂಡಿಸಿದ ನಿನ್ಮನಿಸಿಗಿಂದು ಸಾಂತ್ವನಗೈಯ್ಯಲಾರದಷ್ಟು ವಿದಾಯ ಎಂಬ ನೋವನ್ನೀಡುತ್ತಿರುವೆ. ಕ್ಷಮೆಗೂ ಅರ್ಹ ಇಲ್ಲದವನಾಗಿ ಬಿಟ್ಟೆ .
"ಕ್ಷಮಿಸಿ ಬಿಡು ಗೆಳತಿ" ಈ ಜನುಮದಲ್ಲಿ ನಾ ನಿನ್ನವನಾಗಿ ಉಳಿದಿರುವ ಅದೃಷ್ಟ ನನ್ನ ಪಾಲಿಗಿಲ್ಲ! ಮರುಜನ್ಮವೊಂದಿದ್ದರೆ ನಾನೆಂದೂ ನಿನ್ನ ಸ್ವತ್ತು!! ಹೀಗೆಂದು ಮಾತು ಕೊಡುವೆ. ಮಾತು ತಪ್ಪಿದರೆ ಈ ಪಾಪಿಯನ್ನು ಕ್ಷಮಿಸಬೇಡವೇ... ಬೇಕಾದಷ್ಟು ನೋವಣ್ಣುತ್ತಿರುವೆ ನನ್ನ ಪ್ರೀತಿಸಿದ ತಪ್ಪಿಗೆ. ಈಗಾಗಲೇ ನಿನ್ನ ಮನವನ್ನು ನೋಯಿಸಿಬಿಟ್ಟಿರುವೆ ಸಕಾರಣ ನೀಡಲಾಗದೆ.
ಒಂದಂತು ಸತ್ಯ; ತುಂಬು ಮನದಿ ಹಾರೈಸುವೆ ನಾನು ಪ್ರೀತಿಸಿದ ಜೀವ ಎಲ್ಲಿದ್ದರೂ ಸುಖವಾಗಿರಲೆಂದು. ಕೊನೆಯ ಬಾರಿ ಮನ್ನಿಸು ಗೆಳತಿ ಈ ನಿನ್ನ ನತದೃಷ್ಟ ಪ್ರೇಮಿಯ...! ಆದರೆ ಕ್ಷಮೆಗೂ ನಾನು ಅರ್ಹನಲ್ಲ ಎಂಬ ಸತ್ಯ ನನಗೆ ಗೊತ್ತಿದೆ, ಸುಂದರ ಪ್ರೀತಿಯನ್ನು ಕೊಂದ ಕೊಲೆಗಾರ ನಾನು, ನಿನಗಾಗಿ ಜಗತ್ತು ಎದುರಿಸುವ ಧೈರ್ಯಯಿಲ್ಲದ ಹೇಡಿ ನಾನು... ಮುಂದೊಂದು ಜನ್ಮವಿದ್ದರೆ ನಾನು ನಿನ್ನವನಾಗಿ ಬರಲಿ ಎಂದು ಬೇಡಲಾರೆ, ಕೊನೆಯರೆಗೆ ನಿನ್ನ ಜೊತೆಗಿರುವ ಪ್ರೀತಿ ನಿನಗೆ ಸಿಗಲಿ ಪಟ್ಟಿ........
ಹೇಮಾವತಿ
ಎಸ್.ಡಿ.ಎಂ. ಕಾಲೇಜು, ಉಜಿರೆ



Click it and Unblock the Notifications












