Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಹೆತ್ತವರ ವಿರೋಧದ ನಡುವೆಯೂ ಪ್ರೀತಿಯಲ್ಲಿ ಗೆಲುವು ನಿಮ್ಮದಾಗಬೇಕೇ?
ಮದುವೆ-ಪ್ರತಿಯೊಬ್ಬ ಯುವಕ, ಯುವತಿಯಲ್ಲಿ ರೋಮಾಂಚನ ಉಂಟುಮಾಡುವ ಪದ. ತನ್ನ ಜೀವನಸಂಗಾತಿಯೊಂದಿಗೆ ನವಜೀವನಕ್ಕಡಿಯಿಡುವ ತವಕ. ತನ್ನ ಮದುವೆಯ ಸಮಾರಂಭದಲ್ಲಿ ಯಾವ ಬಟ್ಟೆ ತೊಡಬೇಕು, ಯಾರು ಯಾರನ್ನು ಕರೆಯಬೇಕು, ಯಾವ ರೀತಿಯಾಗಿ ಶೃಂಗರಿಸಿಕೊಳ್ಳಬೇಕು, ಯಾವ ವಿನ್ಯಾಸದ ಮದರಂಗಿ ಹಚ್ಚಿಸಿಕೊಳ್ಳಬೇಕು ಇತ್ಯಾದಿಗಳ ಬಗ್ಗೆ ಮಾಡುವ ಕಲ್ಪನೆಯೇ ಅತಿ ಸುಂದರ.
ಮುಖ್ಯವಾಗಿ ತನ್ನ ಜೀವನ ಸಂಗಾತಿಯಾಗಿ ಬರಲಿರುವ ವ್ಯಕ್ತಿಯೊಡನೆ ನನ್ನ ಮುಂದಿನ ಜೀವನ ಹೇಗಿರಬೇಕು ಎಂಬ ಕಲ್ಪನೆ ರೋಮಾಂಚನ ಮೂಡಿಸುತ್ತದೆ. ಜೊತೆಗೇ ಇದುವರೆಗೆ ನಾವು ಭಾಗವಹಿಸಿದ ಮದುವೆಗಳಲ್ಲಿ ಕೇಳಿದ ಮಂಗಳವಾದ್ಯ, ಬ್ಯಾಂಡ್, ನೋಡಿದ ಸಂಸ್ಕೃತಿ, ಆಚರಣೆ, ವಿಧಿವಿಧಾನ ಮೊದಲಾದವು ತನ್ನ ಮದುವೆಯಲ್ಲಿಯೂ ನೆರವೇರುವುದು, ತನ್ನ ಸ್ನೇಹಿತರು, ಬಂಧುಬಳಗ ಮತ್ತು ಮುಖ್ಯವಾಗಿ ಮನೆಯ ಸದಸ್ಯರು ಎಲ್ಲರೂ ಒಂದೆಡೆ ಕಲೆತು ಸಂತೋಷವಾಗಿ ಕಾಲ ಕಳೆಯುವುದನ್ನೂ ಕಲ್ಪಿಸಿಕೊಳ್ಳುತ್ತೇವೆ. ಮದುವೆಯ ಬಳಿಕ ಸುಖವಾಗಿ ನಲ್ಲ/ನಲ್ಲೆಯ ಬಾಹುಗಳಲ್ಲಿ ಕರಗುವ ಕನಸು ಕಾಣುತ್ತೇವೆ.
ಆದರೆ ವಾಸ್ತವದಲ್ಲಿ ಮೇಲಿನ ಎಲ್ಲಾ ಕಲ್ಪನೆಗಳು ಯಥಾವತ್ತಾಗಿ ನನಸಾಗುವುದಿಲ್ಲ. ಏಕೆಂದರೆ ಮೊತ್ತ ಮೊದಲಾಗಿ ನಿಮ್ಮ ಮದುವೆ ಪ್ರೇಮವಿವಾಹವೋ ಅಥವಾ ಹಿರಿಯರೇ ನಿಶ್ಚಯಿಸಿದ ಮದುವೆಯೋ ಎಂಬುವುದರ ಮೇಲೆ ಎಲ್ಲವೂ ನಿಶ್ಚಯವಾಗಿದೆ. ಒಂದು ವೇಳೆ ಹಿರಿಯರು ನಿಶ್ಚಯಿಸಿದ ವರ/ವಧುವಾದರೆ ಆ ವ್ಯಕ್ತಿಯ ಬಗ್ಗೆ ನಿಮಗೆ ಹೆಚ್ಚೇನೂ ಗೊತ್ತಿಲ್ಲದಿದ್ದು ಮನೆಯವರು ಹೇಳಿದ ಸಂಗತಿಗಳನ್ನು ಅವಲಂಬಿಸಿ ನಿಮ್ಮ ನಿಶ್ಚಯ ತಿಳಿಸಬೇಕಾಗುತ್ತದೆ. ಆದರೆ ಪ್ರೇಮವಿವಾಹವಾದರೆ ಮಾತ್ರ ಮನೆಯವರಿಂದ ವಿರೋಧವನ್ನು ಎದುರಿಸಬೇಕಾದ ಸಂದರ್ಭವೇ ಹೆಚ್ಚು. ಇಂದಿನ ದಿನಗಳಲ್ಲಿ ಗಂಡು ಹೆಣ್ಣುಗಳೆಂಬ ಬೇಧವಿಲ್ಲದೇ ಎಲ್ಲರಿಗೂ ಸಮಾನವಾದ ಶಿಕ್ಷಣ ದೊರೆತು ಉದ್ಯೋಗಿಗಳಾಗುತ್ತಿದ್ದಾರೆ. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?
ಈ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಪರಿಚಯವಾಗುವ, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗುವ ನಿರ್ಧಾರ ಕೈಗೊಳ್ಳುವ ಸಂಭವ ಮೊದಲಿಗಿಂತಲೂ ಹೆಚ್ಚಾಗಿದೆ. ಅಲ್ಲದೇ ಈಗಿನ ಯುವಜನತೆ ತಮ್ಮ ಜೀವನಸಂಗಾತಿಯನ್ನು ತಾವೇ ಆಯ್ದುಕೊಳ್ಳಲು ಇಚ್ಛಿಸುತ್ತಾರೆ. ಆದರೆ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮನೆಯವರು ಸ್ವೀಕರಿಸಲು ಹಿಂದೇಟು ಹಾಕಲು ಕಾರಣಗಳೇನು? ಮತ್ತು ಇದಕ್ಕೆ ಪರಿಹಾರ ಹೇಗೆ ಪಡೆಯಬಹುದು ಎಂಬ ವಿಷಯದ ಮೇಲೆ ಕಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಆತ/ಆಕೆ ನಮ್ಮ ಜಾತಿ/ಪಂಗಡ/ಸಂಸ್ಕೃತಿಗೆ ಸೇರಿದವನಲ್ಲ/ಳಲ್ಲ
ಭಾರತದಲ್ಲಿ ಜಾತಿಪದ್ಧತಿ ಅತ್ಯಂತ ಆಳವಾಗಿ ಬೇರೂರಿದ್ದು ಸಂಬಂಧಗಳು ಜಾತಿವಸ್ತರ ನಡುವೆಯೇ ಆಗಬೇಕೆಂಬ ಅಲಿಖಿತ ಕಟ್ಟಳೆಯನ್ನು ಎಲ್ಲರೂ ಪಾಲಿಸುತ್ತಾ ಬಂದಿದ್ದಾರೆ. ನಿಮ್ಮ ಆಯ್ಕೆಯ ವ್ಯಕ್ತಿಯ ಜಾತಿ/ಪಂಗಡ/ಸಂಸ್ಕೃತಿಯನ್ನು ಮೊತ್ತ ಮೊದಲಿಗೆ ವಿಚಾರಿಸಲಾಗುತ್ತದೆ. ಒಂದು ವೇಳೆ ಅವರು ಬೇರೆ ಜಾತಿ/ಪಂಗಡ/ಸಂಸ್ಕೃತಿಗೆ ಸೇರಿದ್ದರೆ ಸ್ವಾಭಾವಿಕವಾಗಿ ಮನೆಯವರಿಂದ ಕಟುವಾದ ವಿರೋಧ ವ್ಯಕ್ತವಾಗುತ್ತದೆ. ಅಲ್ಲದೇ ಇದುವರೆಗೆ ನೀವು ಸಾಧಿಸಿದ್ದ ಸ್ನೇಹಕ್ಕೂ ಕುಂದುಂಟಾಗಬಹುದು. ಇಂದಿನ ಯುವಜನತೆ ಜಾತಿ/ಪಂಗಡಕ್ಕಿಂತಲೂ ವ್ಯಕ್ತಿತ್ವಕ್ಕೆ ಮಾರುಹೋಗುವುದು ಈ ಆಭಾಸಕ್ಕೆ ಪ್ರಮುಖ ಕಾರಣವಾಗಿದೆ.

ಮಡಿವಂತ ಸಮಾಜದಿಂದ ಬದಲಾವಣೆಗೆ ಅಡ್ಡಿ
ಒಂದು ವೇಳೆ ನಿಮ್ಮ ಆಯ್ಕೆಯ ವ್ಯಕ್ತಿ ಕೇವಲ ಜಾತಿಯಲ್ಲಿ ಬೇರೆಯವನಾಗಿದ್ದು ಬೇರೆಲ್ಲಾ ವಿಷಯಗಳಲ್ಲಿ ಉತ್ತಮ ಮನ್ಯುಷ್ಯನೇ ಆಗಿದ್ದು ನಿಮ್ಮ ಮನೆಯವರ ವಿಶ್ವಾಸ ಗಳಿಸಿದರೂ ನಿಮ್ಮ ಇತರ ಸಂಬಂಧಿಕರ ವಿಶ್ವಾಸವನ್ನು ಗಳಿಸುತ್ತಾರೆಂದು ಖಚಿತವಾಗಿ ಹೇಳಲಾಗದು. ಏಕೆಂದರೆ ಪ್ರತಿ ಸಮಾಜದಲ್ಲಿಯೂ, ಪ್ರತಿ ಕುಟುಂಬದಲ್ಲಿಯೂ ಅತ್ಯಂತ ಕಟ್ಟುನಿಟ್ಟಾದ ಸಂಪ್ರದಾಯವಾದಿಗಳು ಒಬ್ಬರಾದರೂ ಇದ್ದೇ ಇರುತ್ತಾರೆ. ಅವರ ಪ್ರಕಾರ ಜಾತಿಯೇ ಅತ್ಯಂತ ಮುಖ್ಯವಾಗಿದ್ದು ಇತರ ಯಾವುದೇ ಗುಣಗಳು ಈ ಸಂಬಂಧಕ್ಕೆ ಒಪ್ಪಿಗೆ ನೀಡಲಾರದು. ಈ ಪರಿಸ್ಥಿತಿಯಲ್ಲಿ ನಿಮ್ಮ ಮನೆಯವರು ಅತ್ಯಂತ ಇಕ್ಕಟಿಗೆ ಒಳಗಾಗಿ ಮಗನ/ಮಗಳ ಸುಖ ನೋಡುವುದೋ ಸಮಾಜದೊಂದಿಗೆ ಸಮನ್ವಯ ಕಾಪಾಡುವುದೋ ಎಂಬ ಗೊಂದಲದಲ್ಲಿ ಬೀಳುತ್ತಾರೆ. ಒಂದು ವೇಳೆ ಮಗನ/ಮಗಳ ಕಡೆ ವಾಲಿದರೆ ಸಮಾಜದಿಂದ ತಿರಸ್ಕಾರ ಮತ್ತು ಅವಗಣನೆಗೆ ಗುರಿಯಾಗಬೇಕಾಗುತ್ತದೆ. ಸಂಪ್ರದಾಯದ ಕಡೆ ವಾಲಿದರೆ ಜೀವನಪರ್ಯಂತ ಮಗ/ಮಗಳು ದುಃಖಿಸುವುದನ್ನು ನೋಡಬೇಕಾಗುತ್ತದೆ.

ಹಿಂದಿನ ಕಹಿ ಅನುಭವಗಳು
ಪ್ರತಿ ಊರಿನಲ್ಲಿಯೂ ಮನೆಯವರ ಒಪ್ಪಿಗೆ ದೊರಕದೇ ಪ್ರೀತಿಸುವ ಜೋಡಿ ಓಡಿ ಹೋಗಿರುವ ಕಥೆಗಳು ಸಾಕಷ್ಟು ಸಿಗುತ್ತವೆ. ನಿಮ್ಮ ನಿರ್ಧಾರವನ್ನು ಪ್ರಕಟಿಸಿದಾಕ್ಷಣ ಕನಿಷ್ಟ ಒಂದಾದರೂ ಇಂತ ಪ್ರಕರಣದ ಪ್ರಸ್ತಾವನೆಯಾಗುತ್ತದೆ. ಅದರಲ್ಲಿ ದುರಂತದಲ್ಲಿ ಜೀವನ ಕೊನೆಗೊಂಡ ಪ್ರಕರಣ ಇದ್ದರಂತೂ ಆ ಪ್ರಕರಣವೇ ಈಗ ಪುನರಾವರ್ತನೆಯಾಗುತ್ತಿದೆ ಎಂಬಂತೆ ಮನೆಯವರು ವರ್ತಿಸುವುದು ಸಹಜವಾಗಿದೆ. ಏಕೆಂದರೆ ಸಮಾಜದಲ್ಲಿ ಇದುವರೆಗೆ ತಲೆಯೆತ್ತಿ ಜೀವನ ಸಾಗಿಸಿಕೊಂಡು ಬಂದಿರುವ ಕುಟುಂಬಕ್ಕೆ ಈಗ ನಿಮ್ಮ ನಿರ್ಧಾರ ತಲೆತಗ್ಗಿಸುವಂತೆ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ.

ವ್ಯಕ್ತಿಯ ಮುಖಲಕ್ಷಣಗಳನ್ನೇ ಕಾರಣವಾಗಿಸುವುದು
ತಮ್ಮ ಮಕ್ಕಳು ಆಯ್ಕೆಯಾದ ವ್ಯಕ್ತಿಯ ಬಾಹ್ಯ ಲಕ್ಷಣಗಳನ್ನೇ ಕಾರಣವಾಗಿಸಿ ನಿಮ್ಮ ಆಯ್ಕೆಯ ವ್ಯಕ್ತಿಯನ್ನು ನಿರಾಕರಿಸುವುದು ಇನ್ನೊಂದು ಕಾರಣವಾಗಿದೆ. ವ್ಯಕ್ತಿಯ ಬಣ್ಣ ಕಪ್ಪು, ನಿಮ್ಮ ಮಕ್ಕಳೂ ಕರ್ರಗೆ ನೀಗ್ರೋಗಳಂತೆ ಹುಟ್ಟುತ್ತಾರೆ, ಕುಳ್ಳ, ಬಾಲ್ಡಿ, ಹಲ್ಲು ಮುಂದಾಗಿದ್ದು ತುರಿಮಣೆಯಂತಿದೆ ಎಂಬೆಲ್ಲಾ ಟೀಕೆಗಳಿಂದ ನಿಮ್ಮ ಮನಸ್ಸನ್ನು ಬದಲಿಸಲು ನೋಡುತ್ತಾರೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಅತ್ಯಂತ ಸ್ಪುರದ್ರೂಪಿಗಳೂ, ಬೆಳ್ಳಗಿನ ಮೈಬಣ್ಣ ಹೊಂದಿದವರೂ ಆಗಿರುವುದರಿಂದ ನಿಮ್ಮ ಆಯ್ಕೆಯೂ ಅದೇ ರೀತಿ ಇರಬೇಕೆಂದು ಅವರು ಬಯಸುತ್ತಾರೆ.

ನಮ್ಮ ಒಪ್ಪಿಗೆ ಇಲ್ಲ
ಯಾವುದೇ ಮದುವೆಗೆ ಹಿರಿಯರ ಆಶೀರ್ವಾದ ರಕ್ಷೆ ನೀಡುತ್ತದೆ ಎಂಬ ನಂಬಿಕೆ ಭಾರತದಲ್ಲಿ ನಡೆದುಬಂದಿದೆ. ಹಾಗಾಗಿ ಸಪ್ತಪದಿ ತುಳಿದ ಬಳಿಕ ತಂದೆ ತಾಯಿಯರಿಂದ ಪ್ರಾರಂಭವಾಗಿ ಕುಟುಂಬದ ಎಲ್ಲಾ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ಮದುವೆಯ ವಿಧಾನಗಳಲ್ಲಿ ಪ್ರಮುಖವಾದ ಘಟ್ಟವಾಗಿದೆ. ಒಂದು ವೇಳೆ ನಿಮ್ಮ ಆಯ್ಕೆಯ ವ್ಯಕ್ತಿ ಮನೆಯವರ ಆಯ್ಕೆಯಾಗದಿದ್ದ ಪಕ್ಷದಲ್ಲಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವುದೇ ನಿಮಗೆ ಉಳಿದಿರುವ ಮಾರ್ಗವಾಗುತ್ತದೆ. ಈ ಬಗ್ಗೆ ಅರಿವಿರುವ ಪಾಲಕರು ಹಿರಿಯರ ಒಪ್ಪಿಗೆ ಇಲ್ಲದ ಮದುವೆ ನಿಲ್ಲುವುದಿಲ್ಲ ಎಂಬ ಕುಂಟುನೆಪ ನೀಡಿ ನಿಮ್ಮ ಸಂಬಂಧವನ್ನು ಮುಂದುವರೆಸಲು ಅಡ್ಡಗಾಲು ಹಾಕುತ್ತಾರೆ.

ಮನೆಯವರ ಒತ್ತಡಕ್ಕೆ ಮಣಿದು
ಒಂದು ವೇಳೆ ಮನೆಯವರು ನಿಮ್ಮ ಆಯ್ಕೆಯ ವ್ಯಕ್ತಿಯನ್ನು ನಿರಾಕರಿಸಲು ನೀಡಿದ ಕಾರಣಗಳನ್ನು ಅನುಮೋದಿಸಿ ಪ್ರೀತಿಸಿದ ವ್ಯಕ್ತಿಯಿಂದ ದೂರವಾದರೆ ಮುಂದಿನ ದಿನಗಳಲ್ಲಿ ಹಲವು ದುಮ್ಮಾನಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಅವು ಯಾವುದು ಎಂಬುದಕ್ಕೆ ಮುಂದಿನ ಸ್ಲೈಡ್ ಕ್ಕಿಕ್ ಮಾಡ....

ತಪ್ಪಿತಸ್ಥ ಭಾವನೆ
ಪ್ರಥಮ ಪ್ರೀತಿ ಜೀವಮಾನವಿಡೀ ನೆನಪಿನಲ್ಲಿರುತ್ತದಂತೆ. ನೀವು ಪ್ರೀತಿಸಿದ ವ್ಯಕ್ತಿಯಿಂದ ದೂರವಾದರೂ ಅವರ ಬಗ್ಗೆ ಯೋಚಿಸುವುದರಿಂದ ವಿಮುಖರಾಗಲು ಮಾತ್ರ ಸಾಧ್ಯವಿಲ್ಲ. ಇದರಿಂದಾಗಿ ಸದಾ ನಿಮ್ಮನ್ನು ತಪ್ಪಿತಸ್ಥ ಭಾವನೆ ಕಾಡುತ್ತಾ ಇರುತ್ತದೆ. ಈ ಭಾವನೆ ನಿಮ್ಮಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಒಂದು ವೇಳೆ ಮನೆಯವರ ಆಯ್ಕೆಯ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾದರೂ ಈ ಋಣಾತ್ಮಕ ಶಕ್ತಿ ಕುಂದದೇ ನಿಮ್ಮಿಬ್ಬರ ಮಧ್ಯೆ ಹುಳಿ ಹಿಂಡಲು ಕಾರಣವಾಗುತ್ತದೆ. ಹೆಚ್ಚಿನವರು ತಮ್ಮ ಪ್ರಥಮ ಪ್ರೇಮದ ಕುರುಹನ್ನು ಪಾಸ್ ವರ್ಡ್ ಗಳನ್ನಾಗಿ ತಮ್ಮ ಆತ್ಮಗಳಲ್ಲಿ ಶೇಖರಿಸಿಡುತ್ತಾರೆ. ಯಾವುದೋ ಪ್ರಸಂಗದಲ್ಲಿ ಪಾಸ್ವರ್ಡ್ ನೀಡಬೇಕಾದ ಸಂದರ್ಭ ಬಂದಾಗ ಹಳೆಯ ಸಂಗತಿ ಹೊರಬಂದು ನಿಮ್ಮ ಮದುವೆಗೆ ಸಂಚಕಾರ ಒಡ್ಡಬಹುದು. ಮಾತುಮಾತಿನಲ್ಲಿ ಹಿಂದಿನ ನೆನಪು ಪ್ರಸ್ತಾಪಗೊಂಡು ಕಹಿ ಮತ್ತು ಕಟುಮಾತುಗಳ ವಿನಿಮಯವಾಗಲೂಬಹುದು. ನನ್ನಿಂದಲೇ ಎಲ್ಲಾ ಆಗಿದ್ದು ಎಂಬ ಭಾವನೆ: ಪ್ರೀತಿಸಿದ ವ್ಯಕ್ತಿಯಿಂದ ದೂರಾದ ಬಳಿಕ ಹೆಚ್ಚಿನವರು ಖಿನ್ನತೆಗೆ ಒಳಗಾಗುತ್ತಾರೆ. ನಾನು ಮೊದಲಾಗಿ ಗೊತ್ತಿದ್ದೂ ಗೊತ್ತಿದ್ದೂ ಸ್ನೇಹ ಬೆಳೆಸಲೇಬಾರದಿತ್ತು, ಎಲ್ಲಾ ನನ್ನಿಂದಲೇ ಆಗಿದ್ದು ಎಂಬೆಲ್ಲಾ ಯೋಚನೆಗಳು ನಿಮ್ಮಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಇದು ಎಂದಾದರೊಮ್ಮೆ ಸ್ಪೋಟಗೊಂಡು ಕಲಹ, ಕದನಗಳಿಗೆ ಕಾರಣವಾಗುತ್ತದೆ.

ಪತಿ/ಪತ್ನಿ ಮತ್ತು ಮದುವೆಯಿಂದ ಅತಿಹೆಚ್ಚಿನದ್ದನ್ನು ಅಪೇಕ್ಷಿಸುವುದು
ಪ್ರೀತಿಸಿದ ವ್ಯಕ್ತಿಯಿಂದ ದೂರವಾಗಿ ಮನೆಯವರ ಆಯ್ಕೆಯನ್ನು ಮದುವೆಯಾದ ಬಳಿಕ ಒಂದು ರೀತಿಯ ಪ್ರತೀಕಾರದ ಭಾವನೆ ನಿಮ್ಮಲ್ಲಿ ಮೊಳೆಯುತ್ತದೆ. ಆಕೆಯಿಂದ/ಆತನಿಂದ ಬಹಳಷ್ಟನ್ನು ಅಪೇಕ್ಷಿಸುತ್ತೀರಿ. ಅವುಗಳಲ್ಲಿ ಬಹಳಷ್ಟು ಅಸಂಗತ ಮತ್ತು ಅವಾಸ್ತವಿಕವಾಗಿರುತ್ತದೆ. ಇನ್ನೂ ಉತ್ತಮವಾದ ಜೀವನ ಬೇಕು ಎಂದು ಪತಿ/ಪತ್ನಿಗೆ ಒತ್ತಡ ನೀಡಿ ನಗರದೆಡೆಗೆ, ಇನ್ನೂ ದೊಡ್ಡ ಮನೆಗೆ, ದುಬಾರಿ ಖರ್ಚುಗಳಿಗೆ ಒಲವು ತೋರುತ್ತೀರಿ. ಇದರಿಂದಾಗಿ ನಿಮ್ಮ ಸುಖಸಂಸಾರದಲ್ಲಿ ಹುಳಿ ಹಿಂಡಿದಂತಾಗುತ್ತದೆ.

ಪ್ರೀತಿಗೆ ಒತ್ತು ನೀಡಿ ಮನೆಯವರಿಂದ ದೂರಾದರೆ
ಪ್ರೇಮವಿವಾಹವಾಗಿ ಸಮಾಜವನ್ನು ಎದುರಿಸಿ ತಮ್ಮ ಮನೆಗಳನ್ನು ತೊರೆದುಬಂದವರ ಅನುಭವದ ಪ್ರಕಾರ ಪ್ರೇಮದ ಕಾವು ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ. ನಂತರ ನಿಧಾನವಾಗಿ ತಮ್ಮ ಮನೆ, ಮನೆಯವರು, ಮುಖ್ಯವಾಗಿ ತಾಯಿ ಬಳಿಕ ತಂದೆ ನೆನಪಾಗತೊಡಗುತ್ತಾರೆ. ಈ ನೆನಪು ಎಷ್ಟು ಪ್ರಬಲವಾಗಿರುತ್ತದೆ ಎಂದರೆ ತನ್ನ ಮನೆಗೆ ಹಿಂದಿರುಗದೇ ಜೀವನ ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪುತ್ತದೆ. ಇದು ನಿಮ್ಮ ಪತಿ/ಪತ್ನಿಯ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧವಾಗಿದ್ದು ಸಂಸಾರದಲ್ಲಿ ಒಡಕು ಮೂಡುತ್ತದೆ. ಕಡೆಗೆ ಒಂದೇ ವಿಚ್ಛೇದನದ ಮಾತು ಬರುತ್ತದೆ ಅಥವಾ ಮನೆಯವರ ಬಳಿ ಹೋಗಿ ಶರಣಾಗುವ ಮಾತು ಬರುತ್ತದೆ. ಕೆಲವರು ಮಾತ್ರ ಮನೆಯವರಿಗೆ ಶರಣಾಗಲು ಒಪ್ಪಿ ಕಾಲಿಗೆ ಬಿದ್ದು ತಪ್ಪಾಯಿತೆಂದು ಕ್ಷಮೆ ಕೇಳಿ ಹೊಸಬಾಳನ್ನು ಆಹ್ವಾನಿಸುತ್ತಾರೆ. ಆದರೆ ಹೆಚ್ಚಿನವರು ತಮ್ಮ ಅಹಂಭಾವನೆಯನ್ನು ಬಿಡದೇ ವಿಚ್ಛೇದನದತ್ತ ಒಲವು ತೋರುತ್ತಾರೆ. ಇದೇ ಕಾರಣದಿಂದ ವಿಚ್ಛೇದನಗೊಂಡ ಪ್ರಕರಣಗಳಲ್ಲಿ ಸಿಂಹಪಾಲು ಪ್ರೇಮವಿವಾಹಗಳೇ ಆಗಿವೆ.

ಹಿಂದಿನ ಸೇಡು ತೀರಿಸಿಕೊಳ್ಳಲು ಮದುವೆಗೆ ಒಪ್ಪುವ ಮನೆಯವರು
ಕೆಲವು ಪ್ರಸಂಗಗಳಲ್ಲಿ ಮನೆಯವರು ವಿರೋಧ ತೋರುತ್ತಿದ್ದುದು ಒಮ್ಮೆಲೇ ಮೃದುಧೋರಣೆ ತೋರಿ ಮದುವೆಗೆ ಒಪ್ಪಿಗೆಯನ್ನೂ ಬೇಗನೇ ಮಾಡಿ ಮುಗಿಸಲು ಆತುರವನ್ನೂ ತೋರುತ್ತಾರೆ. ಇದಕ್ಕೆ ಎರಡು ಕುಟುಂಬಗಳ ನಡುವೆ ಹಿಂದೆಂದೋ ಆಗಿದ್ದ ವ್ಯಾಜ್ಯಕ್ಕೆ ಈಗ ಸೇಡು ತೀರಿಸಿಕೊಳ್ಳುವ ತೀರ್ಮಾನ ಕಾರಣವಾಗಿರುವ ಸಂಭವ ಹೆಚ್ಚು. ಮದುವೆಯ ಬಳಿಕ ನಿಧಾನವಾಗಿ ಸೊಸೆ/ಅಳಿಯನನ್ನು ಮನೆಯವರು ತಮ್ಮ ಸೇಡು ತೀರಿಸುವ ಆಯುಧವನ್ನಾಗಿ ಬಳಸಿಕೊಳ್ಳುತ್ತಾರೆ. ಇದರ ಪರಿಣಾಮ ಊಹಿಸಲೂ ಅಸಾಧ್ಯವಾದಷ್ಟು ಭಯಂಕರವಾಗಿರುತ್ತದೆ. ಈ ತೊಂದರೆಗಳಿಗೆ ಪರಿಹಾರ ಹೇಗೆ? ಮುಂದೆ ಓದಿ....

ತಾಳ್ಮೆ
ನಿಮ್ಮ ಮದುವೆಗೆ ಮನೆಯವರು ಒಪ್ಪದಿದ್ದಾಕ್ಷಣ ಆಕಾಶವೇ ತಲೆಮೇಲೆ ಬಿದ್ದಂತೆ ಆಡಬೇಡಿ. ಈಗ ಅಪಾರವಾದ ತಾಳ್ಮೆ ಅಗತ್ಯ. ಮದುವೆ ಎಂದರೆ ಕೇವಲ ಹುಡುಗಾಟಿಕೆಯಲ್ಲ, ಇಡಿಯ ಜೀವನ ಪಾಲಿಸಬೇಕಾದ ನಿರ್ಧಾರ. ಈ ಹೊತ್ತಿನಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರ ನಿಮ್ಮ ಜೀವನವನ್ನು ಜರ್ಝರಿತಗೊಳಿಸಬಲ್ಲದು. ಮೊತ್ತ ಮೊದಲಿಗೆ ನೀವು ಮತ್ತು ನಿಮ್ಮ ಆಯ್ಕೆಯ ವ್ಯಕ್ತಿ ನಿಜವಾಗಿಯೂ ಒಬ್ಬರಿಗೊಬ್ಬರಿಗಾಗಿ ಪ್ರಾಣ ನೀಡುವಷ್ಟು ಪ್ರೀತಿಸುತ್ತೀರೋ ಎಂದು ಕೇಳಿಕೊಳ್ಳಿ. ಹೌದು ಎಂದಾದರೆ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗದಿದ್ದರೆ, ಬೇರೆ ವ್ಯಕ್ತಿಯನ್ನೂ ಮದುವೆಯಾಗಲಾರೆ ಎಂದು ಸ್ಪಷ್ಟವಾಗಿ ಹೇಳಿ. ನಿಮ್ಮ ಮನೆಯವರಿಗೆ ನಿಮ್ಮ ನಿರ್ಧಾರವನ್ನು ಅನುಮೋದಿಸಲೇ ಬೇಕಾಗುತ್ತದೆ. ನಿಮ್ಮ ಆಯ್ಕೆಯ ವ್ಯಕ್ತಿ ನಿಜವಾಗಿಯೂ ಉತ್ತಮ ವ್ಯಕ್ತಿಯೇ ಆಗಿದ್ದರೆ ಆ ಬಗ್ಗೆ ತಿಳಿದುಕೊಳ್ಳಲು ಮನೆಯವರಿಗೆ ಸಮಯಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೂ ತಾಳ್ಮೆ ವಹಿಸುವುದು ಅನಿವಾರ್ಯವಾಗಿದೆ. ಇದೇ ವೇಳೆ ನಿಮ್ಮ ಆಯ್ಕೆಯ ವ್ಯಕ್ತಿಯೂ ಅಷ್ಟೇ ಕಾಲ ಕಾಯಲು ಸಿದ್ಧರಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾದುದು ಎಂದು ಅರ್ಥೈಸಿಕೊಳ್ಳಿ. ಒಂದು ವೇಳೆ ಅವರಿಂದ ಸ್ವಲ್ಪವೂ ಅನುಮಾನ ಎದುರಾದರೆ ನಿಮ್ಮ ನಿರ್ಧಾರದ ಬಗ್ಗೆ ಅವಲೋಕನ ಅಗತ್ಯವಾಗಿದೆ.

ಮನೆಯವರ ವಿರೋಧಗಳಿಗೆ ಕಾರಣವನ್ನು ಹುಡುಕಿ
ನಿಮ್ಮ ಮನೆಯವರು ವಿರೋಧಿಸಿದ ತಕ್ಷಣ ಅದಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸುವುದು ಸರ್ವಥಾ ಕೂಡದು.ಇದರಿಂದ ನಿಮಗೇ ನಷ್ಟ. ಹೆಚ್ಚಿನ ಸಂದರ್ಭಗಳಲ್ಲಿ ಮನೆಯವರು ತಮ್ಮ ಮನದಲ್ಲಿ ಬೀಡುಬಿಟ್ಟಿರುವ ನಂಬಿಕೆಯನ್ನೇ ಪರಿಗಣಿಸಿ ನಿಮ್ಮ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರಬಹುದು. ಈ ನಂಬಿಕೆಗಳನ್ನು ಪರಾಮರ್ಶಿಸಿ, ನಿಜವಾದ ಸಂಗತಿಗಳ ಬಗ್ಗೆ ಅಧ್ಯಯನ ಮಾಡಿ. ಎಷ್ಟೋ ಬಾರಿ ನಮ್ಮ ಹಿರಿಯರಿಗೆ ಮೂಲಭೂತವಾದ ಎಷ್ಟೋ ಸಂಗತಿಗಳು ಗೊತ್ತಿರುವುದೇ ಇಲ್ಲ! ಅವರಿಗೆ ಗೊತ್ತಿದೆ ಎಂದು ನಾವು ತಿಳಿದುಕೊಂಡಿರುವುದಷ್ಟೇ. ವಾಸ್ತವವನ್ನು ನಿಧಾನವಾಗಿ ಅವರಿಗೆ ತಿಳಿಹೇಳಿ ಅವರು ಇದುವರೆಗೆ ಪೂರ್ವಾಗ್ರಹದ ರೂಪದಲ್ಲಿ ನಂಬಿಕೊಂಡು ಬಂದಂತಹ ನಂಬಿಕೆಗಳು ತಪ್ಪು ಎಂದು ಮನವರಿಕೆ ಮಾಡಿ. ಎರಡೂ ಕುಟುಂಬಗಳಿಗೆ ಸೂಕ್ತವಾದ ಪರಿವರ್ತನೆಯನ್ನು ಸೂಚಿಸಿ, ಈ ಬಗ್ಗೆ ಹೆಚ್ಚು ಮಾಹಿತಿ ಇರುವ ಹಿರಿಯರಲ್ಲಿ ಪರಾಮರ್ಶಿಸಿ. ತಣ್ಣನೆಯ ಮನಸ್ಸಿನಿಂದ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಆ ಪ್ರಕಾರ ಮುಂದಿನ ಜೀವನದ ಬಗ್ಗೆ ಖಚಿತವಾದ ನಿರ್ಧಾರ ಕೈಗೊಳ್ಳಿ.



Click it and Unblock the Notifications











