Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಚಳಿಗಾಲದಲ್ಲಿ ತಯಾರಿಸಿ ಅವರೆಕಾಳಿನ ಹುಳಿ

* ಭೀಮಸೇನ್ ರಾವ್
ಹೇಮಂತಋತು ಕಾಲಿಡುತ್ತಿದ್ದಂತೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಅವರೆಕಾಳು ಗುಡ್ಡೆಗಳು ಹಾಜರಾಗುತ್ತವೆ. ಸೇರಿಗೆ 40 ಅಥವಾ 50 ರು. ಸೇರಿಗೆ ಅರವತ್ತೆಂದರೂ ಜನ ಮುಗಿಬಿದ್ದು ಕೊಂಡ್ಕೊಂಡು ಹೋಗ್ತಾರೆ. ಅವರೆಕಾಳು ಮಾರುವವರಿಗೂ ಭರ್ಜರಿ ವ್ಯಾಪಾರ.
ಅವರೆಕಾಳಿನಿಂದ ತಯಾರಿಸುವ ನಾನಾಬಗೆಯ ತಿಂಡಿತಿನಿಸುಗಳನ್ನು ನೆನೆದರಂತೂ ಕುಂತಲ್ಲಿಯೇ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಅವರೆಕಾಳು ನಿಪ್ಪಟ್ಟು, ಕೋಡುಬಳೆ, ಉಸಳಿ, ಹುಳಿ, ಬಸ್ಸಾರು, ಮಸಾಲೆವಡೆ... ಒಂದೆ ಎರಡೆ... ಇನ್ನೂ ಎಷ್ಟೆಷ್ಟಿವೆಯೋ ಆ ಭಗವಂತನೇ ಬಲ್ಲ.
ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಂತೆ. ಡಿಸೆಂಬರ್ ಕೊನೆಯ ವಾರ ಮತ್ತು ಮುಂದಿನ ವರ್ಷದ ಮೊದಲ ವಾರ ರಾಜ್ಯದಲ್ಲಿ ಭಯಂಕರ ಚಳಿ ಇರುತ್ತದೆಂದು ಹವಾಮಾನ ಇಲಾಖೆ ಬೇರೆ ಮುನ್ನೆಚ್ಚರಿಕೆ ನೀಡಿದೆ. ಚಳಿಯನ್ನು ಒದ್ದೋಡಿಸಲು ಅವರೆಕಾಳು ಹುಳಿ ಅಥವಾ ಸಾಂಬಾರನ್ನೇ ಮಾಡಿದರೆ ಹೇಗೆ?
ಬೇಕಾಗುವ ಪದಾರ್ಥ : ಬಲಿತ ಅವರೆಕಾಯಿ, ಒಂದು ಚಮಚ ತುಪ್ಪ, 1 ಚಮಚ ಮೆಂತ್ಯ, ಅರ್ಧ ಗಿಟಕು ಒಣಕೊಬ್ಬರಿ, ಒಂದು ಚಮಚ ಹುರಿಗಡಲೆ, ಒಂದೊಂದು ಚಮಚದಷ್ಟು ಅರಿಶಿನ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ನಾಲ್ಕು ಈರುಳ್ಳಿ, 10-15 ಕೆಂಪು ಮೆಣಸಿನಕಾಯಿ ಮತ್ತು ಪಾಲಾಕ್ ಸೊಪ್ಪು, ಸ್ವಲ್ಪ ಎಣ್ಣೆ.
ಮಾಡುವ ವಿಧಾನ : ಮೊದಲು ಬಲಿತ ಅವರೆಕಾಯನ್ನು ಸುಲಿದು ಕಾಳನ್ನು ಆರಿಸಿ ಸಾರು ಮಾಡುವ ಹಿಂದಿನ ರಾತ್ರಿ ನೀರಿಗೆ ಹಾಕಿಡಿ. ಬೆಳಗ್ಗೆ ಚೆನ್ನಾಗಿ ನೆಂದ ಕಾಳಿನ ಮೇಲ್ಭಾಗದ ಸಿಪ್ಪೆ ತೆಗೆದು ಇದುಕಿ ಬೇಳೆ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ ಕಾಳುಗಳನ್ನು ಬಿಳಿಹೊಗೆ ಬರುವವರೆಗೆ ಹುರಿಯಿರಿ.
2 ಪಾವಿನಷ್ಟು ಕಾಳಿಗೆ 3 ಪಾವು ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಮಸಾಲೆಗೆ 1 ಚಮಚ ಮೆಂತ್ಯ, ತುರಿದ ಕೊಬ್ಬರಿ, ಹುರಿಗಡಲೆ, ಅರಿಶಿನ, ಜೀರಿಗೆ, ಕೊತ್ತಂಬರಿಬೀಜ, ಗಸಗಸೆ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿಯನ್ನು ಎಣ್ಣೆಯ ಬಾಣಲೆಯಲ್ಲಿ ಕೆಂಪಾಗಿ ಹುರಿಯಿರಿ. ನಂತರ ಉಳಿದ ಸಾಮಾನುಗಳನ್ನು ಹಾಕಿ ನುಣ್ಣಗೆ ರುಬ್ಬಿ.
ಬೆಂದ ಕಾಳಿಗೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕಲಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಎಣ್ಣೆಯಲ್ಲಿ ಸ್ಪಲ್ಪ ತಾಳಿಸಿ ಮಾಡಿ ಹಾಕಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆಯ ಮೇಲಿಡಿ. ಚೆನ್ನಾಗಿ ಕುದ್ದನಂತರ ಕೆಳಗಿಳಿಸಿದರೆ ಸೊಗಸಾದ ... ಆಹಾ... ಘಮ..ಘಮ.
ತುಪ್ಪ ಬಡಿಸಿದ ಅನ್ನ, ಚಪಾತಿ, ರೊಟ್ಟಿ, ಬಿಸಿಬಿಸಿ ರಾಗಿ ಮುದ್ದೆ, ಮಸಾಲೆ ದೋಸೆ ಯಾವುದೇ ತಿನಿಸಿನ ಜೊತೆ ಬೆರೆಯಲು ಅವರೆಕಾಳು ಹುಳಿ ಹಿಂಜರಿಯುವುದಿಲ್ಲ. ಸರಿ ಇನ್ನೇಕೆ ತಡ, ಜಮಾಯಿಸಿ. ಆದರೆ, ಮಿತಿಯಿರಲಿ!



Click it and Unblock the Notifications