Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ದೇವಾನುದೇವತೆಗಳೆ ‘ತಿಂಡಿಪೋತ’ರಾಗಿರುವಾಗ... (ಭಾಗ 2)
ಶ್ರೀರಾಮಚಂದ್ರನಿಗೆ ವನವಾಸದ ತಾಪ ಕಡಿಮೆ ಮಾಡಿಕೊಳ್ಳಲು ಪಾನಕ, ಮಜ್ಜಿಗೆ, ಕೋಸಂಬರಿ, ವಿವಿಧ ಹಣ್ಣಿನ ರಸಾಯನ, ಗೊಜ್ಜವಲಕ್ಕಿ ಮುಂತಾದ ಸುಮಧುರ ತಿಂಡಿಗಳ ನಿವೇದನೆ. ಆದರೆ ಶಿಷ್ಯ ಆಂಜನೇಯನಿಗೆ ಬರೀ ರಾಮನಾಮ ಜಪದ ನೈವೇದ್ಯ ಮಾತ್ರ- ಕಡಿಯಲು ಬೇರೆ ತಿಂಡಿ ಇಲ್ಲವೇ ಇಲ್ಲ ! ‘ಹನುಮಪ್ಪ ಹಗ್ಗ ಕಡಿಯುತ್ತಿದ್ದರೆ ಪೂಜಾರಿ ಶಾವಿಗೆ ಬೇಡಿದನಂತೆ’ ಎಂಬ ಗಾದೆಯನ್ನು ಬರಗಾಲ ಪೀಡಿತ ಕುಕವಿ ಅಷ್ಟಲ್ಲದೆ ಒದರಲಿಲ್ಲ!
ಆದರೆ ಸೃಷ್ಟಿಕರ್ತ ಬ್ರಹ್ಮನಿಗೆ ಈ ಚಾಟೂಕ್ತಿಯಿಂದ ಪೂರ್ಣ ವಿನಾಯಿತಿ ಉಂಟು. ಯಾಕೆಂದರೆ ಅವನು ಬರೀ ಜೀವಿಗಳ ಸೃಷ್ಟಿಕರ್ತ. ಅವನ ಅಗಾಧ ಸೃಷ್ಟಿಯಿಂದ ಮಾನವ ಜೀವನ ಹದಗೆಟ್ಟಿದೆ. ಸಿಟ್ಟಿಗೆದ್ದ ಜನ, ಬ್ರಹ್ಮನಿಗೆ ಯಾವುದೇ ನೈವೇದ್ಯ ನೀಡದೆ ಬಹಿಷ್ಕರಿಸಿದ್ದಾರೆ! ಇನ್ನು ಸರಸ್ವತಿ ಮಾತೆಗೆ ಬರೀ ಪುಸ್ತಕಗಳನ್ನೇ ನಿವೇದಿಸಿರುವಂತೆ ತೋರುತ್ತದೆ. ಮಾತೆಯ ಕೃಪೆಗೆ ಒಳಗಾದ ಜನ ಬರೀ ವಿದ್ವಾಂಸ ಅಥವಾ ಬರಹಗಾರ ಆಗುತ್ತಾರೆ ವಿನಾ ಝಣಝಣ ರೊಕ್ಕ ಎಣಿಸುವ ಕಷ್ಟವನ್ನು ಎದುರಿಸುವುದೇ ಇಲ್ಲ !
ಇನ್ನು ಕಾಳಿ, ದುರ್ಗಿ, ಚಂಡಿ, ಮಾರಿ- ಮಾತೆಯರು ಕ್ಷಮಿಸಲಿ- ಇವರ ತಿಂಡಿ ಹತ್ತು ಹಲವು ಬಗೆಯವು- ಕುರಿ, ಕೋಳಿ ಮುಂತಾದ ಜೀವಂತ ಬಡಪ್ರಾಣಿಗಳು, ಕೋಣನೆಂಬ ಬೃಹತ್ ಮಿಕ! ಪಾನಪ್ರಿಯರು ಕಳ್ಳಭಟ್ಟಿಯನ್ನು ನಿವೇದಿಸಲು ಆರಂಭಿಸಿದ್ದಾರಂತೆ.
ಕ್ರಿಕೆಟಿಗರಿಗೆ ಜೇಬು ತುಂಬಾ ಚೂಯಿಂಗ್ ಗಂ ಎಂಬ ನವನವೀನ ತಿಂಡಿ ಇದ್ದೇ ಇರಬೇಕು. ಆಟದ ಮೈದಾನದಲ್ಲಿರುವಾಗ ಕ್ಷೇತ್ರ ರಕ್ಷಣೆ ಮಾಡದಿದ್ದರೂ ನಡೆಯುತ್ತದೆ. ಆದರೆ ಸದಾ ಕಾಲ ಚೂಯಿಂಗ್ ಗಂ ಅಗೆಯುತ್ತಿದ್ದರೆ ಕನಿಷ್ಠ ದವಡೆಗಾದರೂ ವ್ಯಾಯಾಮವಾಗುತ್ತದೆ. ಮೂರು ಹೊತ್ತೂ ಹೀಗೆ ಜಗಿಯುತ್ತಿದ್ದರೆ ಪಾಪ ದವಡೆ ಹಲ್ಲಿನ ಅವಸ್ಥೆ ಏನಾದೀತು ಎಂದು ಅಜ್ಜಿ ಕುಟ್ಟಾಣೆಯಲ್ಲಿ ಎಲೆಯಡಿಕೆ ತಂಬಾಕು ಕುಟ್ಟುತ್ತ ಗೊಣಗುತ್ತಾಳೆ.
ತಿಂಡಿಪೋತರ ಸುವ್ಯವಸ್ಥೆಯನ್ನು ರೈಲು ಪ್ರಯಾಣದಲ್ಲಿ ನೋಡಿ ಆನಂದಿಸಬೇಕು. ಸ್ವಾದಿಷ್ಟ ತಿಂಡಿ ತಿನಿಸುಗಳನ್ನು ಮೆಲಕು ಹಾಕುತ್ತ ಕಾಲಹರಣ ಮಾಡುತ್ತಾರೆ ಈ ಪಯಣಿಗರು. ಇವರೆಲ್ಲ ಮನೆಯಲ್ಲಿ ಏನೂ ತಿಂದು ಬಂದಿಲ್ಲವೆ ಎಂದು ಪ್ರಯಾಣಿಕರು ಸಂದೇಹಿಸುತ್ತಾರೆ. ಬಿಸ್ಕೀಟು, ಉಪ್ಪೇರಿ, ಖಾರದ ಮಂಡಕ್ಕಿ, ಕಾಫಿ, ಟೀ ಪಾನೀಯಗಳನ್ನು ಮಾರುವವರು ಈ ತಿಂಡಿಪೋತರಿಗೆ ಪುರುಸೊತ್ತು ಕೊಡದಂತೆ ಕಾಡಿಸಿ, ಬೇಡಿ ವ್ಯಾಪಾರ ಗಿಟ್ಟಿಸಿಕೊಳ್ಳುತ್ತಾರೆ. ಕೆಲವರಂತೂ ಅಚ್ಚುಕಟ್ಟಾಗಿ ಸೀಟಿನ ಮೇಲೆ ಬಾಳೆಲೆ ಹರಡಿ, ಮನೆಯಿಂದ ತಂದಿದ್ದ ಕ್ಯಾರಿಯರ್ ಬಿಡಿಸಿ, ಹೊಟ್ಟೆ ತುಂಬ ತಿಂದು ಢರ್ರನೆ ತೇಗಿ ತೃಪ್ತಿ ಪಡುತ್ತಾರೆ. ಹೊಟ್ಟೆ ಭರ್ತಿಯಾಗದ ಪಕ್ಷದಲ್ಲಿ, ಇವರ ಸೇವೆಗೆ ಕೈ ಕಟ್ಟಿರುವ ಮಾರಾಟಗಾರರು ಇದ್ದೇ ಇರುತ್ತಾರೆ.
ದಢೂತಿ ಆಸಾಮಿಯಾಬ್ಬ ತನ್ನ ಮಕ್ಕಳಿಗೆ ತಿನ್ನಿಸುವ ಕಾರಣ, ತಾನು ಪ್ರತಿ ನಿಲ್ದಾಣದಲ್ಲೂ ಇಳಿದು ಎರಡೂ ಕೈ, ಜೇಬು ತುಂಬಾ ತಿಂಡಿ ತಿನಿಸುಗಳನ್ನು ತಂದು ಮಕ್ಕಳಿಗೂ ಗುಟುಕು ನೀಡಿ ಹೆಚ್ಚಿನದನ್ನು ತಾನು ಕಬಳಿಸುತ್ತಿದ್ದ. ಅವನ ಹೆಂಡತಿಯ ಬಿರುಗಣ್ಣಿನ ನೋಟವನ್ನು ಅಲಕ್ಷಿಸುತ್ತ ಅಟ್ಟಹಾಸದಿಂದ ಬೀಗುತ್ತಿದ್ದ. ಪಾಪ ಸಹ ಪಯಣಿಗರ ಮುಂದೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಆಕೆ. ಆದರೆ ಮನೆಗೆ ಹಿಂತಿರುಗಿದ ನಂತರ ಆಕೆ ಸೇಡನ್ನು ಬಡ್ಡಿ ಸಮೇತ ತೀರಿಸಿದ್ದಿರಬೇಕು.
ನಮ್ಮಲ್ಲೂ ಹಲ್ಲಿಗಳು ಇವೆ. ಅವಕ್ಕೆ ತಿಂಡಿಯ ಕೊರತೆ ಯಾವತ್ತೂ ಇಲ್ಲ . ನಗರಸಭೆಯ ಕೃಪೆಯಿಂದ ಸೊಳ್ಳೆ, ಜಿರಲೆ, ತಗಣಿ ಮುಂತಾದ ಕ್ರಿಮಿಕೀಟಗಳು ನಮ್ಮ ಮನೆಯಲ್ಲಿ ಸದಾ ಕಾಲ ತುಳುಕಾಡುತ್ತಿವೆ. ಇವುಗಳನ್ನು ಭಕ್ಷಿಸಿಕೊಂಡು ಹಲ್ಲಿಗಳು ಸುಖಜೀವನ ಸಾಗಿಸುತ್ತವೆ. ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟರೂ ಕೇವಲ ನಾನೊಬ್ಬನೆ ತಿಂಡಿಪೋತ ಅಲ್ಲ ಎಂಬುದನ್ನು ನನ್ನ ಹಠಮಾರಿ ಗೆಳೆಯಗೆಳತಿಯರು ಒಪ್ಪುವುದೇ ಇಲ್ಲ . ನನ್ನ ಕರ್ಮ!



Click it and Unblock the Notifications