Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಹಬ್ಬದೂಟವಿದು, ಹೊಟ್ಟೆಯಾಂದಿಗೆ ಮನಸ್ಸಿಗೂ ಸುಗ್ಗಿ

ಮನೆಯಲ್ಲಿ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಕಾರ್ಯಕ್ರಮದ ಬಜೆಟ್ ಶುರುವಾಗುವುದೇ ಊಟದ ಲೆಕ್ಕಾಚಾರದಿಂದ. ಎಷ್ಟು ಜನರ ಅಂದಾಜು ಮಾಡಿದ್ದೀರಿ ಎಂದು ಪಕ್ಕದ ಮನೆಯವರು ಮನೆಯಾಕೆಯನ್ನು ಕೇಳುತ್ತಾರೆ. ಆ ಸಂಖ್ಯೆಯ ಮೇಲೆ ಕಾರ್ಯಕ್ರಮದ ಜೋರು ಎಷ್ಟಿರಬಹುದು ಎಂದು ಅಂದಾಜು ಮಾಡಲಾಗುತ್ತದೆ.
ದೈಹಿಕ ಅಗತ್ಯ ಅಥವಾ ಹೊಟ್ಟೆಯ ಹಸಿವಿನ ಬೆಂಕಿಯನ್ನು ತಣಿಸುವ ಕಚ್ಚಾ ವಸ್ತು ಅಂತ ಊಟವನ್ನು ನೀವು ಭಾವಿಸಿದ್ದೀರಾದರೆ, ನಿಮಗೆ ಬದುಕುವ ಕಲೆ ಗೊತ್ತಿಲ್ಲ ಅಂತಲೇ ಅರ್ಥ. ಮನುಷ್ಯ ಹೃದಯಗಳನ್ನು ಬೆಸೆಯುವ, ಪ್ರೀತಿ ಆದರಗಳ ಬಿಂಬವಾಗಿ ಮನೆಮಂದಿಯನ್ನು ಕಲೆ ಹಾಕುವ ಮಾಧ್ಯಮ.. .. ಹೀಗೆ ಊಟದ ಅರ್ಥ ಅದರ ಬಗೆಯಷ್ಟೇ ವಿಸ್ತಾರವಾದುದು. ಲಂಚ್ ಆನ್ ಮೀಟಿಂಗ್, ಅಥವ ಡಿನ್ನರ್ ಪಾರ್ಟಿಗಳೆಲ್ಲ ಹುಟ್ಟಿಕೊಂಡಿರುವುದರ ಹಿನ್ನೆಲೆಯಲ್ಲಿ ಬರೇ ಹಸಿವು ಮಾತ್ರ ಕೆಲಸ ಮಾಡಿದೆ ಎಂದು ಅನಿಸುವುದಿಲ್ಲ.
ಇನ್ನೂ ಬಂದಿಲ್ಲವಲ್ಲಾ ಎಂದು ದಾರಿ ನೋಡುವ ಕಣ್ಣುಗಳು...
ಒಟ್ಟಿಗೇ ಕುಳಿತು ಊಟ ಮಾಡಲು ಹಬ್ಬವೊಂದು ನೆಪ. ಆಫೀಸಿಗೆ ರಜೆ ಇರುವ ಅನುಕೂಲ, ಮನೆತನದ ಶಾಸ್ತ್ರ ಎನ್ನುವ ದೈವ ನಂಬಿಕೆ .. . ನೆಪಗಳಿಗೆ ಪರಿಧಿಯಿದೆಯೇ. ಬಾಳೆಲೆಯೋ, ಡೈನಿಂಗ್ ಟೇಬಲ್ಲೋ.. ಬದಲಾಗಿರುವ ಊಟದ ಪದ್ಧತಿ ಭಾವವನ್ನು ಕಸಿದುಕೊಂಡಿಲ್ಲ , ನಮ್ಮ ನಿಮ್ಮ ಪುಣ್ಯ.
ಹಬ್ಬದಂದು ಅಜ್ಜಿ ಮನೆಗೆ ಬಂದಿರುವ ಹುಡುಗ, ಊಟದ ಪಂಕ್ತಿಯಲ್ಲಿ ಅಜ್ಜಿ ಅನ್ನವನ್ನು ಉಂಡೆ ಕಟ್ಟಿ ಮೊದಲ ತುತ್ತನ್ನು ತೀರಿಹೊಗಿರುವ ಅಜ್ಜನಿಗೆಂದು ಅಂಗಳದಲ್ಲಿ ಕಾಗೆಗೆ ಇಡುವುದನ್ನು ನೋಡುತ್ತಾನೆ. ಬೆಳೆದು ನಿಂತಿರುವ ಮೊಮ್ಮಗನ ತುಂಟಾಟ ನೋಡಿ ಅಜ್ಜಿ ಖುಷಿ ಪಡುತ್ತಾಳೆ.
ರಾತ್ರಿ ಹೋಂ ವರ್ಕ್ ಪುಸ್ತಕಗಳನ್ನು ಹರಡಿಕೊಂಡು ಅಪ್ಪನಿಗಾಗಿ ಕಾಯುವ ಮಕ್ಕಳು, ನೈಟ್ ಕ್ಲಬ್ಗೆ ಹೋಗಿರುವ ಗಂಡನನ್ನು ಕಾಯುತ್ತಾ ನಿದ್ದೆ ಹೋಗುವ ಹೆಂಡತಿ ಗದ್ದೆಯಲ್ಲಿ ನೇಜಿ ನೆಡುತ್ತಿರುವ ಕೆಲಸದಾಳುಗಳೂ, ಮಧ್ಯಾಹ್ನ ಮನೆಯ ಯಜಮಾನನ ಹಾದಿ ನೋಡುವಾಗ ಊಟವೆನ್ನುವುದು ಸಮಯ ಮೀರಿ ಕಾಯುತ್ತಿರುತ್ತದಲ್ಲಾ ... ಮನುಷ್ಯ ಸಂಬಂಧಕ್ಕೂ, ಊಟಕ್ಕೂ ಏನು ನಂಟಿದೆ ಅಂತ ಬಗೆದರೆ ಕಾಂಕ್ರೀಟ್ ಕಾರಣಗಳು ಯಾವುದೂ ಸಿಗುವುದಿಲ್ಲ.
ಹಬ್ಬದ ದಿನದಂದು ಪಕ್ಕದೂರಿಗೇ ಮದುವೆ ಮಾಡಿಕೊಟ್ಟ ಕಿರಿ ಮಗಳ ಗಂಡ ಬರದಿದ್ದರೆ, ಚಾವಡಿಯಲ್ಲಿ ಎಲೆ ಇಕ್ಕದೇ ನೀವೂ ಕೂಡ ಕಾಯುತ್ತೀರಲ್ಲ . ಅಳಿಯ ಕಡಿಮೆ ಮಾತನಾಡುವ ಸೈಲೆಂಟ್ ಹುಡುಗನಾದರೂ ಒಟ್ಟಿಗೇ ಕುಳಿತು ಊಟ ಮಾಡುವ ಮಜಾಕ್ಕಾಗಿ ಗಡಿಯಾರ ನೋಡದೇ ಕಾಯಬೇಕಿದ್ದರೆ ಅಲ್ಲಿ ದೊಡ್ಡದೊಂದು ಸಂತಸ ಅಡಗಿರಬೇಕಲ್ಲವೇ ?
ಊಟ ಮಾಡುವಾಗ ಮಾತನಾಡಬಾರದು, ಆದರೆ ...
ಹಾಗಂತ ಹಿರಿಯರ ಶಾಸ್ತ್ರಗಳೂ ಹೇಳುತ್ತವೆ, ವಿಜ್ಞಾನವೂ ಹೇಳುತ್ತದೆ. ಆದರೆ ಸಂಭ್ರಮದ ನಡುವೆ ಅದಕ್ಕೆ ಕಿವಿ ಕೊಟ್ಟವರಿಲ್ಲ. ಮದುವೆಯಾಗಲೀ, ಉತ್ತರ ಕ್ರಿಯೆಯಾಗಲೀ, ಸಾವಿರ ಜನ ಸ್ತೋಮ ಸೇರಿರಲಿ, ಸಾವಕಾಶವಾಗಿ ಊಟ ಮಾಡಿ ಅಂತ ಮನೆ ಯಜಮಾನ ಊಟದ ಪಂಕ್ತಿಯುದ್ದಕ್ಕೂ ಹೋಗುವ ಸಂಪ್ರದಾಯ ಇವತ್ತಿಗೂ ಇದೆ.
ಮನೆ ಮಂದಿಯೆಲ್ಲಾ ಜತೆಯಾಗಿ ಊಟ ಮಾಡುವಾಗ ಡೆಲ್ಲಿಯ ಸರಕಾರ, ಆಫೀಸಿನ ಕಿರಿಕ್ಕುಗಳು, ಪಕ್ಕದ ಮನೆ ಹುಡುಗಿ ಓಡಿ ಹೋದ ಕತೆಯಿಂದ ಮಗನಿಗೆ ಕೊಡಿಸಿದ ಹೊಸ ಆಟದ ಕಾರಿನ ರೇಟಿನವರೆಗೂ ಮಾತುಗಳು ಹರಿಯುತ್ತವೆ. ಮಗಳಿಗೆ ಹೊಸ ಸಂಬಂಧ ಹುಡುಕಬೇಕು, ನಮ್ಮ ಹುಡುಗನೋ ಮದುವೆಯೆಂದರೆ ಮುಖ ಸಿಂಡರಿಸುತ್ತಾನೆ... ಹೀಗೆ ಮಾತಿನ ಹೊಳೆಗೆ ಡೈನಿಂಗ್ ಟೇಬಲ್ ಸಾಕ್ಷಿಯಾಗುತ್ತದೆ. ಊಟ ಮಾಡುತ್ತಲೇ ಮಾತುಗಳು ವಿಕೋಪಕ್ಕೆ ಹೋಗುವುದಿಲ್ಲ ಎಂದಲ್ಲ. ಅನ್ನದ ಸಾಕ್ಷಿಯಾಗಿ ಹೇಳುತ್ತೇನೆ ನಿನ್ನ ತಂಟೆಗೆ ಬಂದರೆ ನೋಡು ಅಂತ ಗಬಗಬ ಊಟ ಮುಗಿಸುವುದುಂಟು. ಆದರೆ ಸಂಕ್ರಾಂತಿ ಹಬ್ಬದಂದು ಆಡಿದ ಜಗಳ ಯುಗಾದಿ ಊಟದಂದು ಎಲ್ಲಿ ನೆನಪಿರುತ್ತದೆ ?
ಎಲೆ ತುದಿಯಲ್ಲಿರುವ ಕೋಸಂಬರಿಯಿಂದ ಹಿಡಿದು ಕೊನೆಯ ಮಜ್ಜಿಗೆಯವರೆಗೆ ಊಟಕ್ಕೆ ಏನೇ ಸ್ವೀಟ್ ಇರಲಿ, ಎಲ್ಲರೂ ಸೇರಿದ ಖುಷಿಯೇ ಸದ್ದು ಮಾಡುವುದು. ಸಾರಿಗೆ ಉಪ್ಪು ಜಾಸ್ತಿ ಹಾಕಿದ್ದೀಯಾ, ದೊಡ್ಡಣ್ಣ ಬಂದಿದ್ದರೆ ಚೆನ್ನಾಗಿ ಬೈತಿದ್ದ, ಓಹ್, ಮೈಸೂರ್ ಪಾಕಾ. ಸರಸು ನಿಂಗಿಷ್ಟ ಅಲ್ವಾ, ಅವಳಿಗೆ ಇನ್ನೆರಡು ಹಾಕು.. ಹೀಗೆ ಬಂದವರ ಮತ್ತು ಬಾರದವರ ನೆನಪುಗಳಲ್ಲಿ , ಪರಸ್ಪರ ಛೇಡಿಸಿಕೊಂಡು ಊಟ ಮಾಡುವ ಆನಂದಕ್ಕೆ ಯಾವ ಉಪಮೆ ನೀಡೋಣ ಹೇಳಿ. ಅಂಥಾ ಸಂಭ್ರಮಕ್ಕೊಂದು ನೆಪವಾಗಿ ಮತ್ತೆ ಯುಗಾದಿ ಮರಳಿದೆ. ಸಂಭ್ರಮವೂ ಮನೆ- ಮನಸ್ಸು ತುಂಬಲಿದೆ.



Click it and Unblock the Notifications











