ಶಿರಸಿಭವನದಲ್ಲಿ ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿ

By Staff

appe midi chutney
ಇದನ್ನು ಅಪ್ಪಟ ಉತ್ತರಕನ್ನಡದ ಚಟ್ನಿಯೆನ್ನಬಹುದು. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಉಪ್ಪಿನಲ್ಲಿ ಹಾಕಿದ ಮಾವಿನಮಿಡಿಗೆ ಅಪ್ಪೆಮಿಡಿ ಎನ್ನುತ್ತೇವೆ. ಇದನ್ನು ವಿಶೇಷವಾಗಿ ಬಾಣಂತಿಯರಿಗಾಗಿ ತಯಾರಿಸುತ್ತಾರಾದರೂ, ಎಲ್ಲರೂ ಎಲ್ಲಾ ಕಾಲದಲ್ಲೂ ಇಷ್ಟಪಡುವಂತಹ ಈ ಚಟ್ನಿಯನ್ನು ದೋಸೆ, ಚಪಾತಿ, ಅನ್ನಕ್ಕೆ ಹಾಕಿ ಸೇವಿಸಬಹುದಾಗಿದೆ.

* ತೇಜಸ್ವಿನಿ ಹೆಗಡೆ, ಬೆಂಗಳೂರು

ಅಪ್ಪೆಮಿಡಿ ಬೆಳ್ಳುಳ್ಳಿ ಚಟ್ನಿಯು ಬಹು ಉಪಯೋಗಿಯಾಗಿದೆ. ತಯಾರಿಸಲೂ ಬಲು ಸುಲಭ. ತುಂಬಾ ಸ್ವಾದಭರಿತ ಹಾಗೂ ಆರೋಗ್ಯಕರವಾದುದು ಕೂಡ. ಇದನ್ನು ತಯಾರಿಸಲು ಬಳಸುವ ಬೆಳ್ಳುಳ್ಳಿ ಗ್ಯಾಸ್ಟ್ರಿಕ್ ಸಮಸ್ಯೆ, ರಕ್ತ ಶುದ್ಧೀಕರಣಕ್ಕೆ ತುಂಬಾ ಉಪಯುಕ್ತವಾದರೆ ಕರಿಮೆಣಸಿನ ಕಾಳು(Pepper) ಶೀತ, ಕೆಮ್ಮಿಗೆ ರಾಮಬಾಣ. ಹಾಗಾಗಿಯೇ ಈ ಚಟ್ನಿಯನ್ನು ಬಾಣಂತಿಯರ ಚಟ್ನಿಯೆಂದೂ ಹೇಳುತ್ತಾರೆ. ಬಾಣಂತಿಯರು ಈ ಚಟ್ನಿಯನ್ನು ಊಟದ ಪ್ರಾರಂಭದಲ್ಲಿ ಒಂದು ಚಮಚ ಚಟ್ನಿಗೆ ಒಂದು ಚಮಚ ತುಪ್ಪವನ್ನು ಹಾಕಿ ಸೇವಿಸಿದರೆ ಕ್ಷೇಮ.

ಬೇಕಾಗುವ ಸಾಮಗ್ರಿಗಳು:
1. ಬೆಳ್ಳುಳ್ಳಿ - 10 ಎಸಳು (ಸುಮಾರು ಒಂದು ಗಡ್ಡೆ)
2. ಅಪ್ಪೆಮಿಡಿ - ಮೂರು (3)
3. ಕಡ್ಡಿಮೆಣಸು (ಕೆಂಪು ಮೆಣಸು) - 2
4. ತೆಂಗಿನ ಕಾಯಿ - ಅರ್ಧ ಭಾಗ.
5. ಕರಿಮೆಣಸಿನ ಕಾಳು (Pepper) - 1 ಚಮಚ. ವಿ.ಸೂ: 1) ಈ ಚಟ್ನಿಯನ್ನು ಬಾಣಂತಿಯರಿಗಾಗಿಯೇ ತಯಾರಿಸುವಾಗ, ಕೇವಲ ಕರಿಮೆಣಸನ್ನೇ ಬೇಕಿದ್ದರೆ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಹಾಕಿ. ಕೆಂಪುಮೆಣಸನ್ನು ಬಳಸದಿದ್ದರೆ ಒಳ್ಳೆಯದು. 2) ಉಪ್ಪಿನಲ್ಲಿ ಹಾಕಿದ ಮಿಡಿಯನ್ನೇ ಬಳಸುವುದರಿಂದ ಮೇಲಿನಿಂದ ಉಪ್ಪನ್ನು ಹಾಕದಿದ್ದರೆ ಒಳಿತು.

ತಯಾರಿಸುವ ವಿಧಾನ :
1. ಮೊದಲಿಗೆ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಬೇಕು. ಅಪ್ಪೆಮಿಡಿಗಳನ್ನು ಚೆನ್ನಾಗಿ ತೊಳೆದು ಸಣ್ಣ ಚೂರಾಗಿಸಿಟ್ಟುಕೊಳ್ಳಬೇಕು.
2. ಬಾಣಲೆಗೆ 2 ಚಮಚ ತೆಂಗಿನೆಣ್ಣೆಯನ್ನು ಹಾಕಿ ಮೊದಲಿಗೆ ಬೆಳ್ಳುಳ್ಳಿಯನ್ನು ಹುರಿಯಬೇಕು. ಬೆಳ್ಳುಳ್ಳಿ ಎಸಳುಗಳು ಕಂದುಬಣ್ಣಕ್ಕೆ ತಿರುಗತೊಡಗಿದ್ದಾಗ, ಕಡ್ಡಿಮೆಣಸು ಚೂರುಗಳು ಹಾಗೂ ಮಾವಿನಮಿಡಿ ಚೂರುಗಳನ್ನು ಹಾಕಿ, ಮಿಡಿಯ ಚೂರುಗಳು ತುಸು ಬಾಡುವತನಕ ಹುರಿಯಬೇಕು.
3. ಹುರಿದ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿ ಹಾಗೂ ಕಾಳುಮೆಣಸನ್ನು ಜೊತೆಗೆ ಹಾಕಿ ನುಣ್ಣನೆ ರುಬ್ಬಬೇಕು. ಬಾಯಲ್ಲಿ ನೀರೂರಿಸುವ, ಆರೋಗ್ಯಕರ ಚಟ್ನಿ ಈಗ ತಿನ್ನಲು ರೆಡಿ.
ಈ ಚಟ್ನಿಯನ್ನು ತಯಾರಿಸಿದ ನಂತರ ಸ್ವಲ್ಪ ನೀರನ್ನು ಹಾಕಿ ಕುದಿಸಿ, ಆರಿಸಿ, ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟರೆ, ಚಟ್ನಿ ಒಂದುವಾರದವರೆಗೂ ಬಳಕೆಗೆ ಬರುತ್ತದೆ. ಅದರ ಸ್ವಾದವೂ ಕೆಡುವುದಿಲ್ಲ.

Story first published: Friday, November 7, 2008, 2:59 [IST]
X
Desktop Bottom Promotion