₹100 ಕೋಟಿ ಆಸ್ತಿ ದಾನ ಮಾಡಿ ಆಟೋದಲ್ಲಿ ಓಡಾಡ್ತಿದ್ದಾರೆ ಅಣ್ಣಾವ್ರ 'ಬಬ್ರುವಾಹನ' ಸಿನಿಮಾ ನಾಯಕಿ

By Narayana M

ಸಿನಿಮಾರಂಗ ಹೊರಗಿನಿಂದ ನೋಡಲು ಕಲರ್‌ಫುಲ್ ಆಗಿರುತ್ತದೆ. ಆದರೆ ಒಳಗೆ ಆ ರೀತಿ ಇಲ್ಲ. ತಾರೆಯರು ತೆರೆಮೇಲೆ ಮಾತ್ರ ಸೊಗಸಾಗಿ ಕಾಣುತ್ತಿದೆ. ತೆರೆಹಿಂದೆ ನಿಜ ಜೀವನದಲ್ಲಿ ಅವರ ಬದುಕು ಅಷ್ಟು ಕಲರ್‌ಫುಲ್ ಆಗಿ ಇರುತ್ತದೆ ಎಂದು ಹೇಳುವುದು ಕಷ್ಟ. ಕೆಲವರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಬಹುಭಾಷಾ ನಟಿಯೊಬ್ಬರು ಈಗ ಆಟೋದಲ್ಲಿ ಓಡಾಡುತ್ತಿದ್ದಾರೆ. ಒಂದ್ಕಾಲದಲ್ಲಿ ಪಂಚಭಾಷಾ ತಾರೆಯಾಗಿ ಮಿಂಚಿದ್ದ ಈಕೆ ಅಣ್ಣಾವ್ರ ಜೊತೆ ನಾಯಕಿಯಾಗಿ ನಟಿಸಿದ್ದವರು. ಬಬ್ರುವಾಹನ, ಶಂಕರ್‌ಗುರು, ಬಂಧನ ಹೀಗೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಪೋಷಕರಿಂದಲೇ ಮೋಸ ಹೋಗಿ ಮನೆಬಿಟ್ಟು ಬಂದಿದ್ದ ಈಕೆ ಮುಂದೆ ತನ್ನ ಸಂಪಾದಿಸಿದ ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ದಾನ ಮಾಡಿದ್ದರು.


Once a Pan-Indian Star Now Travelling by Auto Veteran Actress Life of Grace and Simplicity

ನಿಜ ಜೀವನದಲ್ಲಿ ತನ್ನವರಿಂದಲೇ ಸಾಕಷ್ಟು ನೋವು ಅನುಭವಿಸಿದ ನಟಿ ಮದುವೆ ಆಗದೇ ಉಳಿದುಬಿಟ್ಟಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮೆರೆದ ನಟಿ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. 1987ರ ಬಳಿಕ 30 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಕೊನೆಗೆ 'ಅರ್ಜುನ್ ರೆಡ್ಡಿ' ಚಿತ್ರದ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಹೀಗೆ ನಿಜ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡ ನಟಿ ಕಾಂಚನಾ. ಚೆನ್ನೈನಲ್ಲಿ ಹುಟ್ಟಿಬೆಳೆದ ವಸುಂಧರಾ ದೇವಿ ಬಳಿಕ ಕಾಂಚನಾ ಆಗಿ ಹೆಸರು ಬದಲಿಸಿಕೊಂಡಿದ್ದರು. ಆಕೆಗೆ ಈಗ 86 ವರ್ಷ ವಯಸ್ಸು. ಇತ್ತೀಚೆಗೆ ಎವಿಎಂ ಸ್ಟುಡಿಯೋ ಮಾಲೀಕ, ನಿರ್ಮಾಪಕ ಎಂ. ಶರವಣನ್ ನಿಧನರಾಗಿದ್ದರು. ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕಾಂಚಾನ ಬಂದಿದ್ದರು. ಆಟೋದಲ್ಲಿ ಬಂದು ಅಂತಿಮ ದರ್ಶನ್ ಪಡೆದು ಮತ್ತೆ ಆಟೋ ಏರಿ ಹೊರಟು ಹೋದರು. ಆ ವೀಡಿಯೋ ವೈರಲ್ ಆಗ್ತಿದೆ.

ಒಂದ್ಕಾಲದಲ್ಲಿ ಪಂಚಭಾಷೆ ತಾರೆಯಾಗಿ ಮಿಂಚಿ ಕೋಟಿ ಕೋಟಿ ಆಸ್ತಿಯನ್ನು ದಾನ ಮಾಡಿದ ನಟಿ ಕಾಂಚಾನ ಈಗ ಆಟೋದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 15 ವರ್ಷಗಳ ಹಿಂದೆ ತಮ್ಮ 15 ಕೋಟಿ ರೂ. ಮೌಲ್ಯದ ಜಾಗವನ್ನು ಟಿಟಿಡಿಗೆ ದಾನವಾಗಿ ಕಾಂಚನಾ ನೀಡಿದ್ದರು. ಈಗ ಆ ಆಸ್ತಿ ದರ ಬರೋಬ್ಬರಿ 100 ಕೋಟಿ ರೂ. ಎನ್ನಲಾಗ್ತಿದೆ. ಕಾಂಚನಾ ಹೀಗೆ ಆಟೋದಲ್ಲಿ ಬಂದು ಹೋದ ವಿಚಾರ ಗೊತ್ತಾಗುತ್ತಿದ್ದಂತೆ ಆಕೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಹಿರಿಯ ನಟಿ ಕಾಂಚನಾ ತಮ್ಮ ಜೀವನದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದರು. "ನನ್ನ ತಂದೆ ತಾಯಿಗೆ ನನ್ನ ಚಿಕ್ಕಮ್ಮನ ಮಗನ ಮೇಲೆ ಮಮಕಾರ ಹೆಚ್ಚು. ಅವನು ಹೇಳಿದಂತೆ ಪೋಷಕರು ಕೇಳ್ತಿದ್ರು. ನಾನು ಸಂಪಾದಿಸಿದ ಆಸ್ತಿ ಕಬಳಿಸಲು ಅವನು ನೋಡಿದ್ದ. ಸಾಕಷ್ಟು ಆಸ್ತಿ ಧಕ್ಕಿಸಿಕೊಂಡಿದ್ದ. 90ರ ದಶಕದಲ್ಲಿ ಮನೆ ಬಿಟ್ಟು ಬಂದೆ. ಅಪ್ಪ ಅಮ್ಮ ಬದಲಾಗ್ತಾರೆ ಎಂದುಕೊಂಡೆ. ಆದರೆ ಅವನನ್ನು ನಂಬಿ ನನಗೆ ಮೋಸ ಮಾಡಿದ್ರು. ನನಗೆ ದೇವರು ಜೊತೆಗಿದ್ದಾನೆ" ಎಂದು ಹೇಳಿದ್ದರು.

ಸದ್ಯ ನಾನು ನನ್ನ ಸಹೋದರಿ ಮನೆಯಲ್ಲಿ ಇದ್ದೀನಿ. ನನ್ನ ಸಹೋದರಿ ಹಾಗೂ ಆಕೆಯ ಪತಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಬಹಳ ಜನ ಅಂದುಕೊಂಡಿರುವಂತೆ ದಯನೀಯ ಸ್ಥಿತಿಯಲ್ಲಿ ನಾನು ಇಲ್ಲ. ನಿತ್ಯ ದೇವರ ಪೂಜೆ, ಧ್ಯಾನ ಮಾಡುತ್ತಾ ಇದ್ದೀನಿ ಎಂದು ನಟಿ ಕಾಂಚನಾ ತಿಳಿಸಿದ್ದರು.

'ಬಬ್ರುವಾಹನ' ಚಿತ್ರದಲ್ಲಿ ಉಲೂಚಿ ಪಾತ್ರದಲ್ಲಿ ಅಣ್ಣಾವ್ರ ಜೊತೆ ಕಾಂಚನಾ ನಟಿಸಿದ್ದರು. 'ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು' ಹಾಡನ್ನು ಮರೆಯೋಕೆ ಸಾಧ್ಯವಿಲ್ಲ. 'ನಾನೊಬ್ಬ ಕಳ್ಳ' ಚಿತ್ರದಲ್ಲಿ ಸಾವಿತ್ರಿ ಆಗಿ 'ಶಂಕರ್‌ ಗುರು' ಚಿತ್ರದಲ್ಲಿ ಸುಮತಿ ಪಾತ್ರಗಳಲ್ಲಿ ಕಾಂಚನಾ ನಟಿಸಿದ್ದರು. 'ಭಾಗ್ಯವಂತ', 'ಭಕ್ತ ಪ್ರಹ್ಲಾದ' ಹೀಗೆ ಹಲವು ಕನ್ನಡ ಸಿ ಸಿನಿಮಾಗಳಲ್ಲಿ ಮಿಂಚಿದ್ದರು. 'ದೇವತಾ ಮನುಷ್ಯ' ಕನ್ನಡದಲ್ಲಿ ಆಕೆ ನಟಿಸಿದ ಕೊನೆಯ ಸಿನಿಮಾ.

Credit: Filmibeat

Story first published: Tuesday, December 9, 2025, 10:35 [IST]
X
Desktop Bottom Promotion