ಮಾದಾವರ-ತುಮಕೂರು ಮೆಟ್ರೋಗೆ ಮತ್ತಷ್ಟು ವೇಗ...DPR ಸಿದ್ದಪಡಿಸುವ ಹೊಣೆ RV ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ!

By Latha M R

ಬೆಂಗಳೂರು ಮೆಟ್ರೋ ಜಾಲವನ್ನು ನಗರ ಮಿತಿಗಳಾಚೆಗೆ ವಿಸ್ತರಿಸುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL), ಮಾದಾವರ (ಬಿಐಇಸಿ ಸಮೀಪ)ದಿಂದ ತುಮಕೂರುವರೆಗೆ ಗ್ರೀನ್ ಲೈನ್ ವಿಸ್ತರಣೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವ ಗುತ್ತಿಗೆಯನ್ನು ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ ನೀಡಿದೆ. ಈ ಕುರಿತು ಸಂಸ್ಥೆಗೆ ಅಧಿಕೃತವಾಗಿ ಸ್ವೀಕೃತಿ ಪತ್ರ (LoA) ಲಭಿಸಿದ್ದು, ಯೋಜನೆ ಪ್ರಾಥಮಿಕ ಹಂತಕ್ಕೆ ಪ್ರವೇಶಿಸಿದೆ.

Bengaluru Metro

ಈ ಗುತ್ತಿಗೆಯಡಿ ಸುಮಾರು ₹1.2 ಕೋಟಿ ವೆಚ್ಚದಲ್ಲಿ 150 ದಿನಗಳೊಳಗೆ DPR ಸಿದ್ಧಪಡಿಸಬೇಕಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದರೂ, ಕಡಿಮೆ ದರ ಮತ್ತು ತಾಂತ್ರಿಕ ಅರ್ಹತೆಗಳ ಆಧಾರದ ಮೇಲೆ ಆರ್‌ವಿ ಇಂಜಿನಿಯರಿಂಗ್ ಆಯ್ಕೆಯಾಗಿದೆ. ಈ DPR ವರದಿಯಲ್ಲಿ ಮೆಟ್ರೋ ಮಾರ್ಗದ ವಿವಿಧ ಪರ್ಯಾಯಗಳ ಅಧ್ಯಯನ, ಭೂ-ತಾಂತ್ರಿಕ ತನಿಖೆ, ಸ್ಥಳೀಯ ಸಮೀಕ್ಷೆಗಳು, ಪರಿಸರ ಹಾಗೂ ತಾಂತ್ರಿಕ ಅಂಶಗಳ ವಿಶ್ಲೇಷಣೆ ಸೇರಿರಲಿದೆ.

ಪ್ರಸ್ತುತ ಬೆಂಗಳೂರು ಮೆಟ್ರೋ ಗ್ರೀನ್ ಲೈನ್ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸುಮಾರು 33.46 ಕಿಲೋಮೀಟರ್ ಉದ್ದವಿದ್ದು, ಈ ಮಾರ್ಗದಲ್ಲಿ ಒಟ್ಟು 31 ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಪ್ರಸ್ತಾವಿತ ಮಾದಾವರ-ತುಮಕೂರು ಮಾರ್ಗದ ಉದ್ದ ಸುಮಾರು 59.60 ಕಿಲೋಮೀಟರ್ ಆಗಿದ್ದು, ಇದು ಜಾರಿಗೆ ಬಂದರೆ ಕರ್ನಾಟಕದ ಮೊದಲ ಅಂತರ್ ನಗರ ಮೆಟ್ರೋ ಮಾರ್ಗವಾಗುವ ಸಾಧ್ಯತೆ ಇದೆ.

ತುಮಕೂರು ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ, ಲಾಜಿಸ್ಟಿಕ್ಸ್ ಮತ್ತು ಉದ್ಯೋಗ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಮತ್ತು ತುಮಕೂರಿನ ನಡುವಿನ ಪ್ರಯಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಸಂಚಾರದ ಒತ್ತಡವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವೇಗದ, ಸುರಕ್ಷಿತ ಮತ್ತು ನಂಬಿಕಸ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಗತ್ಯವಾಗಿತ್ತು. ಕೈಗಾರಿಕಾ ವಲಯದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಇಲಾಖೆಗಳಿಂದ ಈ ಮೆಟ್ರೋ ವಿಸ್ತರಣೆಗೆ ನಿರಂತರ ಒತ್ತಾಯ ಕೇಳಿಬಂದಿತ್ತು.

BMRCL ನಡೆಸಿದ ಕಾರ್ಯಸಾಧ್ಯತಾ ಅಧ್ಯಯನದ ಪ್ರಕಾರ, ಈ ಮಾರ್ಗದಲ್ಲಿ ಗರಿಷ್ಠ ಅವಧಿಯಲ್ಲಿ ಪ್ರತಿ ಗಂಟೆಗೆ ಒಂದು ದಿಕ್ಕಿನಲ್ಲಿ ಸುಮಾರು 15,000 ಪ್ರಯಾಣಿಕರು ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ಯೋಜನೆಗೆ ಬಲವಾದ ಪ್ರಯಾಣಿಕರ ಬೇಡಿಕೆ ಇರುವುದನ್ನೂ, ಆರ್ಥಿಕವಾಗಿ ಸಹ ಇದು ಸಹಕಾರಿಯಾಗುವ ಸಾಧ್ಯತೆ ಇರುವುದನ್ನೂ ಸೂಚಿಸುತ್ತದೆ.

ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ಸಂಪರ್ಕ ಕಲ್ಪನೆಯಾದರೆ, ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಖಾಸಗಿ ವಾಹನಗಳ ಬಳಕೆ ಇಳಿಕೆಯಾಗುವ ಮೂಲಕ ರಸ್ತೆ ಸಂಚಾರದ ಒತ್ತಡ ಹಾಗೂ ವಾಯು ಮಾಲಿನ್ಯ ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ, ಬೆಂಗಳೂರು ಮತ್ತು ತುಮಕೂರಿನ ನಡುವೆ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ ಸಂಪರ್ಕ ಮತ್ತಷ್ಟು ಬಲವಾಗಲಿದೆ.

ಒಟ್ಟಿನಲ್ಲಿ, ಮಾದಾವರ-ತುಮಕೂರು ಗ್ರೀನ್ ಲೈನ್ ವಿಸ್ತರಣೆ ಯೋಜನೆ ಬೆಂಗಳೂರು ಮೆಟ್ರೋ ಜಾಲಕ್ಕೆ ಹೊಸ ಆಯಾಮ ನೀಡುವ ಜೊತೆಗೆ, ರಾಜ್ಯದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ. DPR ಸಿದ್ಧಗೊಂಡ ಬಳಿಕ ಮುಂದಿನ ಹಂತದ ಅನುಮೋದನೆ ಮತ್ತು ಜಾರಿಗೆ ಸಂಬಂಧಿಸಿದ ನಿರ್ಧಾರಗಳು ಕೈಗೊಳ್ಳಲಾಗಲಿದ್ದು, ಈ ಯೋಜನೆಯ ಮೇಲೆ ಸಾರ್ವಜನಿಕರ ಗಮನ ನೆಟ್ಟಿದೆ.

Credit: Goodreturns

Story first published: Sunday, December 21, 2025, 8:48 [IST]
X
Desktop Bottom Promotion