ದರ್ಶನ್ ಹಾದಿ ತಪ್ಪಲು ಅದೇ ಕಾರಣ.. ಅಲ್ಲಿ ಲಾಕ್ ಆದ್ರೆ ಮುಗೀತು, ಹೊರಗೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ- ಕೆಡಿ ವೆಂಕಟೇಶ್

By Narayana M

ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದ ಕಿಲ್ಲರ್‌ ವೆಂಕಟೇಶ್‌(ಕೆಡಿ ವೆಂಕಟೇಶ್) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ವೆಂಕಟೇಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅವಕಾಶಗಳು ಇಲ್ಲದಂತಾಗಿದೆ.

ಇತ್ತೀಚೆಗೆ ಕಿಲ್ಲರ್ ವೆಂಕಟೇಶ್ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಹೇಗಿದ್ದವರು ಹೇಗಾಗಿದ್ದಾರೆ ನೋಡಿ ಎಂದು ವೀಡಿಯೋ ತೇಲಿ ಬಿಡಲಾಗಿತ್ತು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತುಮಕೂರಿನಲ್ಲಿರುವ ಕಿಲ್ಲರ್ ವೆಂಕಟೇಶ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. Beyond Limits ಯೂಟ್ಯೂಬ್ ಚಾಲನ್‌ಗಾಗಿ ಸಂದರ್ಶನ ನಡೆಸಿದ್ದಾರೆ. ವೆಂಕಟೇಶ್ ನಟಿಸಿದ ಸಿನಿಮಾಗಳು, ಸಿನಿಜರ್ನಿ, ಆರೋಗ್ಯ ಸ್ಥಿತಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆಗೆ ನಟಿಸಿದ ಅನುಭವವನ್ನು ವೆಂಕಟೇಶ್ ಬಿಚ್ಚಿಟ್ಟಿದ್ದಾರೆ.


Actor KD Venkatesh Opens Up on Kidney Failure and Darshan s Legal Troubles

ನಟ ದರ್ಶನ್ ಜೊತೆಗಿನ ಒಡನಾಡದ ಬಗ್ಗೆಯೂ ಕಿಲ್ಲರ್ ವೆಂಕಟೇಶ್ ಮಾತನಾಡಿದ್ದಾರೆ. ದರ್ಶನ್ ಅನ್ಯಾಯವಾಗಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೆಲ್ಲಾ ಬೇಡವಾಗಿತ್ತು. ಕಷ್ಟದಿಂದ ಬಂದು ಚಿತ್ರರಂಗದ ಸ್ಟಾರ್ ನಟನಾಗಿ ಗುರ್ತಿಸಿಕೊಂಡಿದ್ದರು. ಆದರೆ ಸಹವಾಸ ಸರಿ ಇರಲಿಲ್ಲ. ಜೊತೆಗಿದ್ದವರು ಸರಿಯಾಗಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಒಮ್ಮೆ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡು ಬಿಟ್ಟರೆ ಮುಗೀತು. ಅಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಅವರು ಹೊರಗೆ ಬರುವ ವೇಳೆಗೆ ಎಲ್ಲಾ ಮುಗಿದು ಹೋಗಿರುತ್ತದೆ ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಮುಖಾಂತರ ನಟ ದರ್ಶನ್ 1 ಲಕ್ಷ ರೂ. ಸಹಾಯ ಮಾಡಿದ್ದನ್ನು ಕೂಡ ಕಿಲ್ಲರ್ ವೆಂಕಟೇಶ್ ನೆನಪಿಸಿಕೊಂಡಿದ್ದಾರೆ. ದಶಕಗಳಿಂದ ವೆಂಕಟೇಶ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಜೊತೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ದರ್ಶನ್ ಅವರಿಗೂ ವೆಂಕಟೇಶ್ ಅಂತಹ ಬಹಳ ಇಷ್ಟ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಬೃಂದಾವನ' ಸಿನಿಮಾಗಳಲ್ಲಿ ದರ್ಶನ್ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಇನ್ನು ದರ್ಶನ್ ಇಂದಿನ ಸ್ಥಿತಿ ಬಗ್ಗೆ ವೆಂಕಟೇಶ್ ಮಾತನಾಡಿದ್ದಾರೆ.


ದರ್ಶನ್ ಅವರ ತಂದೆ ಜೊತೆ ನಟಿಸುತ್ತಿದ್ದೆ ಅಲ್ವಾ ಹಾಗಾಗಿ ಬಹಳ ಹತ್ತಿರ ಇದ್ರು. ಕಲಾವಿದರಿಗೆ ಗೌರವ ಕೊಟ್ಟು ಮಾತನಾಡಿಸುತ್ತಿದ್ರು. ಆದರೆ ಲಾಕ್ ಆಗಿಬಿಟ್ರು(ರೇಣುಕಾಸ್ವಾಮಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ರು) ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ. "ಇದೆಲ್ಲಾ ಅವರಿಗೆ ಬೇಕಾಗಿರಲಿಲ್ಲ, ತಪ್ಪು ಮಾಡಿಬಿಟ್ರು ಅನ್ನಿಸುತ್ತೆ. ಅವರಿಗೆ 2 ವರ್ಷ ಕೆಟ್ಟ ಸಮಯ, ಏನೇನೋ ಆಗಿಬಿಡ್ತು. ಅಲ್ಲಿ ಕೊಂಚ ಕಂಟ್ರೋಲ್ ಆಗಿಬಿಟ್ಟಿದ್ರೆ, ಇಷ್ಟೆಲ್ಲಾ ಆಗ್ತಿರಲಿಲ್ಲ. ಮುಂದಾಲೋಚನೆ ಇರಬೇಕಿತ್ತು. ದರ್ಶನ್ ಹೀರೊ ಆಗುವ ಸಮಯಕ್ಕೆ ಅವರ ತಂದೆ ಇರಲಿಲ್ಲ. ಇದ್ದಿದ್ದರೆ ಬುದ್ಧಿವಾದ ಹೇಳುತ್ತಿದ್ರು. ಬೇರೆಯವರ ಮಾತು ಕೇಳುವ ಪರಿಸ್ಥಿತಿ ಬರ್ತಿರಲಿಲ್ಲ. ಹಾಗಾಗಿ ಹಾದಿ ತಪ್ಪಿಬಿಟ್ರು" ಎಂದು ವೆಂಕಟೇಶ್ ವಿವರಿಸಿದ್ದಾರೆ.

ಮಾತು ಮುಂದುವರೆಸಿ "ದರ್ಶನ್ ಪಟ್ಟಾಲಂನಲ್ಲಿ ಬುದ್ಧಿ ಹೇಳುವವರು ಇರಲಿಲ್ಲ. ಎಲ್ಲರೂ ಹೊಡಿಮಗ ಕಡಿ ಮಗ ಎನ್ನುತ್ತಿದ್ದವರು. ಗುಂಡು, ತುಂಡು.. ಬುದ್ಧಿ ಹೇಳುವವರು ಇದ್ದಿದ್ದರೆ ಸರಿ ದಾರಿಗೆ ತರುತ್ತಿದ್ರು. ಅಲ್ಲಿ ಲಾಕ್ ಆದವರು (ಪರಪ್ಪನ ಅಗ್ರಹಾರ) ಅಷ್ಟು ಸುಲಭವಾಗಿ ಹೊರಗೆ ಬರಲ್ಲ. ಸುದೀಪ್ ಜೊತೆ ಇದ್ದಾಗ ಸ್ನೇಹ ಚೆನ್ನಾಗಿತ್ತು. ಆದರೆ ಈಗ ಪ್ರಕರಣದಲ್ಲಿ ಜೊತೆಗೆ ಒಳಗೆ ಹೋಗಿರುವವರೆಲ್ಲಾ ಅಂಥವರೇ. ದರ್ಶನ್ ಹೊರಗೆ ಬರುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ" ಎಂದು ಹೇಳಿದ್ದಾರೆ.

ಹಾಲು ಮಾರುತ್ತಾ, ಕ್ಯಾಮರಾ, ಲೈಟ್ ಹೊತ್ತು ಕಷ್ಟ ಬಿದ್ದು ಬೆಳೆದು ಬಂದವರು ದರ್ಶನ್. ಚಿತ್ರರಂಗದಲ್ಲಿ ದೊಡ್ಡಮಟ್ಟಕ್ಕೆ ಬೆಳೆದು ನಿಂತಿದ್ದರು. ದೇವರು ವರ ಕೊಟ್ಟ ಕೊಟ್ಟ, ನೋಡ್ದ ನೋಡ್ದ.. ಓಹ್ ಯಾಕೋ ಉಲ್ಟಾ ಆಗ್ತಾಯಿದೆ ಎಂದು ಅಲ್ಲಿಗೆ ಸಮಾಪ್ತಿ ಮಾಡಿಬಿಟ್ಟ ಎಂದು ನಟ ಕಿಲ್ಲರ್ ವೆಂಕಟೇಶ್ ಹೇಳಿರುವುದು ವೈರಲ್ ಆಗ್ತಿದೆ.

Credit: Filmibeat

Story first published: Sunday, February 22, 2026, 10:17 [IST]
X
Desktop Bottom Promotion