ಚಾಣಕ್ಯನ ಪ್ರಕಾರ ಇಂಥವರಿಗೆ ಖಂಡಿತ ಲಕ್ಷ್ಮೀ ಒಲಿಯುತ್ತಾಳೆ

ಲಕ್ಷ್ಮೀ ಕೃಪಾಕಟಾಕ್ಷ ನಮ್ಮ ಜೀವನದಲ್ಲಿ ತುಂಬಾನೇ ಮುಖ್ಯ. ಲಕ್ಷ್ಮೀಯನ್ನು ಒಲಿಸಿಕೊಳ್ಳೋದು ಸುಲಭದ ಮಾತಲ್ಲ ಹಾಗಾಗಿ ನಾವು ನಾನಾ ರೀತಿಯ ವೃತ, ಪೂಜೆ-ಪುನಸ್ಕಾರಗಳನ್ನು ಮಾಡುತ್ತೇವೆ. ಕೆಲವೊಂದು ಬಾರಿ ಎಷ್ಟೇ ಕಸರತ್ತು ಮಾಡಿದರೂ ವ್ಯರ್ಥ ಪ್ರಯತ್ನ. ಅದರ ಹಿಂದೆ ಒಂದು ಬಲವಾದ ಕಾರಣವಿದೆ.

What to do Every Day in order to get Blessings Of Goddess Lakshmi according to Chanakya Niti

ಆಚಾರ್ಯ ಚಾಣಕ್ಯ ಹೇಳೋ ವಿಧಾನ ಅನುಸರಿಸಿದರೆ ಖಂಡಿತ ಲಕ್ಷ್ಮೀ ಒಲಿಯುತ್ತಾಳೆ ಹಾಗೂ ಎಂದಿಗೂ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ. ಹಾಗಾದ್ರೆ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಆಚಾರ್ಯ ಚಾಣಕ್ಯರು ಹೇಳಿದ ಆ ನಾಲ್ಕು ಸಂಗಾತಿಗಳು ಯಾವುದು ಅನ್ನೋದನ್ನ ಒಂದೊಂದಾಗಿ ನೋಡೋಣ.

ಅನ್ಯಾಯ ಮಾರ್ಗದಿಂದ ಹಣ ಸಂಪಾದಿಸಬೇಡಿ

ಲಕ್ಷ್ಮೀ ಚಂಚಲ ಸ್ವಭಾವದವಳು ಆಕೆ ಖಂಡಿತ ನಿಂತಲ್ಲಿ ನಿಲ್ಲೋದಿಲ್ಲ. ಚಾಣಕ್ಯರ ಪ್ರಕಾರ ನಾವು ಎಷ್ಟು ಸಂಪತ್ತನ್ನು ಕೂಡ ಗಳಿಸಬಹುದು. ಆದರೆ ಆ ಸಂಪತ್ತನ್ನು ಧರ್ಮ ಮಾರ್ಗದಿಂದಲೇ ಸಂಪಾದಿಸಿರಬೇಕು. ಅದನ್ನು ಬಿಟ್ಟು ಮೋಸ, ವಂಚನೆಯಿಂದ ಗಳಿಸಿದ ಸಂಪತ್ತು ಯಾವತ್ತಿದ್ದರೂ ಕ್ಷಣಿಕ. ಅಂತಹ ಸಂಪಾದನೆ ಖಂಡಿತ ತುಂಬಾ ದಿನ ಉಳಿಯೋದಿಲ್ಲ. ಅಂತವರಿಂದ ಲಕ್ಷ್ಮೀ ದೂರ ಹೋಗುತ್ತಾಳೆ. ಹಾಗಾಗಿ ಚಾಣಕ್ಯ ಹೇಳ್ತಾರೆ ಒಳ್ಳೆಯ ಕೆಲಸ ಮಾಡಿ ಎಷ್ಟಾದರೂ ಆಸ್ತಿ ಸಂಪಾದಿಸಿ ತೊಂದರೆಯಿಲ್ಲ ಆದರೆ ಕೆಟ್ಟ ಕೆಲಸ ಮಾತ್ರ ಮಾಡಬೇಡಿ.

ಪತಿ ಹಾಗೂ ಪತ್ನಿ ಸಹಬಾಳ್ವೆ ನಡೆಸಬೇಕು

ಚಾಣಕ್ಯನ ಪ್ರಕಾರ ದಾಂಪತ್ಯ ಎಂದ ಮೇಲೆ ಅಲ್ಲಿ ಸರಸ-ವಿರಸ ಸಾಮಾನ್ಯ. ಆದರೆ ಯಾವತ್ತೂ ಪತಿ-ಪತ್ನಿಯರ ನಡುವಿನ ಪ್ರೀತಿ, ಅಕ್ಕರೆ, ಭಾಂದವ್ಯ ಕಡಿಮೆಯಾಗಬಾರದು. ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿ ಪರಸ್ಪರ ಹೀಯಾಳಿಸಿಕೊಳ್ಳುವುದು, ಹೊಡೆದಾಟಗಳು ನಡೆಯುತ್ತಲೇ ಇರುತ್ತದೆ. ಮನೆಯಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಇಂತಹ ಮನೆಯನ್ನು ಲಕ್ಷ್ಮೀ ಖಂಡಿತ ಇಷ್ಟಪಡೋದಿಲ್ಲ. ಯಾವ ಮನೆಯಲ್ಲಿ ಪ್ರತಿನಿತ್ಯ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೋ ಅಲ್ಲಿ ಲಕ್ಷ್ಮೀ ನೆಲೆಸಲು ಇಷ್ಟ ಪಡುತ್ತಾಳೆ.

ಅನ್ನಪೂರ್ಣೆಯನ್ನು ಕಡೆಗಣಿಸಬೇಡಿ

ಅನ್ನಪೂರ್ಣೆ ಸದಾಪೂರ್ಣೆ ಎಂಬ ಮಾತಿನಂತೆ ಹಿಂದೂ ಸಂಪ್ರದಾಯದಲ್ಲಿ ಅನ್ನಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ. ಚಾಣಕ್ಯನ ಪ್ರಕಾರ ಒಂದಗುಳು ಅನ್ನವನ್ನು ಚೆಲ್ಲದಿರಿ. ಎಷ್ಟು ಬೇಕೋ ಅಷ್ಟೇ ಆಹಾರವನ್ನು ಸೇವಿಸಿ. ಅದನ್ನ ಬಿಟ್ಟು ಸಿಕ್ಕಾಪಟ್ಟೆ ಆಹಾರವನ್ನು ತೆಗೆದುಕೊಂಡು ಬಂದು ಬೇಕಾಬಿಟ್ಟಿಯಾಗಿ ಎಸೆಯಬೇಡಿ. ಯಾಕೆಂದರೆ ಅನ್ನಪೂರ್ಣೆಯನ್ನು ಅವಮಾನಿಸಿದರೆ ಅಲ್ಲಿ ಲಕ್ಷ್ಮೀಯು ಇರೋದಕ್ಕೆ ಇಷ್ಟಪಡೋದಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ ಆಹಾರವನ್ನು ಬ್ರಾಹ್ಮಣದ ಒಂದು ವಿಧ ಎಂದು ಪರಿಗಣಿಸಲಾಗಿದೆ. ಹೀಗಾಗಿ ಅನ್ನಪೂರ್ಣೆಗೆ ಅಪಮಾನ ಮಾಡಲೇಬೇಡಿ. ನಿಮ್ಮ ಹೊಟ್ಟೆ ತುಂಬುವಷ್ಟು ಆಹಾರವನ್ನು ಮಾತ್ರ ತೆಗೆದುಕೊಳ್ಳಿ. ಯಾಕೆಂದರೆ ಪ್ರತಿನಿತ್ಯ ಇಡೀ ಜಗತ್ತಿನಲ್ಲೇ ಅದೆಷ್ಟೋ ಜನ ತಿನ್ನಲು ಆಹಾರವಿಲ್ಲದೇ ಸಾಯುತ್ತಿದ್ದಾರೆ.

ಗುರು-ಹಿರಿಯರನ್ನು, ವಿದ್ವಾಂಸರನ್ನು ಗೌರವಿಸಿ

ಪ್ರತಿಯೊಬ್ಬ ವ್ಯಕ್ತಿಯು ಒಬ್ಬರಿಂದ ಗೌರವವನ್ನು ಬಯಸುತ್ತಾನೆ. ನಮ್ಮಲ್ಲಿಯೂ ಬೇರೆಯವರಿಗೆ ಗೌರವವನ್ನು ಕೊಟ್ಟು ಅವರಿಂದ ಗೌರವವನ್ನು ಪಡೆದುಕೊಳ್ಳುವ ಗುಣವಿರಬೇಕು. ಮುಖ್ಯವಾಗಿ, ಗುರು-ಹಿರಿಯರನ್ನು, ಶಿಕ್ಷಕರನ್ನು, ವಿದ್ವಾಂಸರನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಇಂತಹ ಮನೆಯಲ್ಲಿ ಲಕ್ಷ್ಮೀ ಇರಲು ಇಚ್ಟ ಪಡುತ್ತಾಳೆ. ಅಷ್ಟೇ ಅಲ್ಲ, ಯಾವ ಮನೆಯಲ್ಲಿ ಪೂಜೆ-ಪುನಸ್ಕಾರ, ಹೋಮ-ಹವನ, ಯೋಗ ಮುಂತಾದ ಚಟುವಟಿಕೆಗಳು ನಡೆಯುತ್ತದೋ ಅಂತಹ ಸ್ಥಳ ಲಕ್ಷ್ಮೀಗೆ ಅಚ್ಚುಮೆಚ್ಚು.

ಲಕ್ಷ್ಮೀಯನ್ನು ಒಲಿಸಿಕೊಳ್ಳುವುದು ಎಲ್ಲರಿಗೂ ಬಲು ಇಷ್ಟ. ಆದರೆ ಕೆಲವೊಂದು ಜನ ಆತುರಕ್ಕೆ ಬಿದ್ದು ಅಧರ್ಮದ ಮಾರ್ಗದಲ್ಲಿ ದುಡ್ಡು ಸಂಪಾದಿಸಲು ಮುಂದಾಗುತ್ತಾರೆ. ಅನ್ಯಾಯದ ದುಡ್ಡು ಯಾವತ್ತಿದ್ದರೂ ಕ್ಷಣಿಕ. ಹೀಗಾಗಿ ಧರ್ಮ ಮಾರ್ಗದಲ್ಲಿ ನಡೆಯಿರಿ ಲಕ್ಷ್ಮೀ ಕಾಲು ಮುರಿದುಕೊಂಡು ನಿಮ್ಮ ಮನೆಯಲ್ಲೇ ಇರುತ್ತಾಳೆ.

English summary

What to do Every Day in order to get Blessings Of Goddess Lakshmi according to Chanakya Niti

Here are the tips to get the Blessings Of Goddess Lakshmi Says Chanakya Niti. Reed on.
X
Desktop Bottom Promotion