ಕಾವೇರಿ ತೀರ್ಥ ಆನ್‌ಲೈನ್ ಡೆಲಿವರಿಗೆ ವಿರೋಧ: ಕಾವೇರಿ ತೀರ್ಥದ ಮಹತ್ವದ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳಿವು

ಕಾವೇರಿ ತೀರ್ಥವನ್ನು ಕೊಡಗಿನಿಂದ ಆಚೆಯೂ ಭಕ್ತರಿಗೆ ತಲುಪಿಸಲು ಆನ್‌ಲೈನ್‌ ಡೆಲಿವರಿ ಯೋಜನೆ ಹಾಕಲಾಗಿತ್ತು. ಕೊಡಗಿನ ದೇಶದ ವಿವಿಧ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅವರು ಕಾವೇರಿ ತೀರ್ಥಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರು. ಹೀಗಾಗಿ ಭಕ್ತರಿಗೆ ಆನ್‌ಲೈನ್‌ ಡೆಲಿವರಿ ಮೂಲಕ ತಲುಪಿಸುವ ಯೋಜನೆಗೆ ದೇವಾಸ್ಥಾನದ ಆಡಳಿತ ಮಂಡಳಿ ಕೂಡ ಒಪ್ಪಿಗೆ ಸೂಚಿಸಿತ್ತು.

Cauvery Theertha Delivery

ಈ ಕುರಿತು ಕೊಡಗಿನ ಜಿಲ್ಲಾಧಿಕಾರಿ ಸತೀಶ್‌ www.indiapost.gov.in ಭೇಟಿ ನೀಡಿ ಆನ್‌ಲೈನ್‌ ಬುಕ್ಕಿಂಗ್‌ ಮಾಡಬಹುದು ಎಂದು ಸೂಚಿಸಿದ್ದರು. ಇದೀಗ ಕಾವೇರಿ ತೀರ್ಥವನ್ನು ಆನ್‌ಲೈನ್‌ ಮೂಲಕ ಡೆಲಿವರಿ ಮಾಡಬಾರದು ಎಂದು ಕೊಡಗಿನ ಜನತೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

ಕರ್ನಾಟಕದ ಪುಣ್ಯ ನದಿಗಳಲ್ಲಿ ಒಂದಾಗಿರುವ ಕಾವೇರಿಯ ಉಗಮ ಸ್ಥಾನ ಕೊಡಗು. ಕಾವೇರಿಯ ಉಗಮ ಸ್ಥಾನ ತಲಕಾವೇರಿ. ತಲಕಾವೇರಿಯಲ್ಲಿ ಪ್ರತಿವರ್ಷ ತುಲಾ ಸಂಕ್ರಾಂತಿಯಂದು ತೀರ್ಥೋದ್ಬವವಾಗುವುದು. ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಇದು ಕೂಡ ಒಂದು. ಈ ದಿನ ಮಾತ್ರ ಕಾವೇರಿಯಲ್ಲಿ ತೀರ್ಥೋದ್ಭವವಾಗುವುದು.

ಅಲ್ಲಿಂದ ತಂದ ತೀರ್ಥವನ್ನು ಕೊಡಗಿನ ಪ್ರತಿ ಮನೆ-ಮನೆಗಳಲ್ಲಿ ಇಟ್ಟು ಪೂಜಿಸುತ್ತಾರೆ. ಈ ತೀರ್ಥ ನಮ್ಮ ಮನಸ್ಸು ಹಾಗೂ ಮನೆಯನ್ನು ಶುದ್ಧ ಮಾಡುತ್ತದೆ ಎಂಬ ನಂಬಿಕೆ ಅಲ್ಲಿಯ ಜನರದ್ದು. ಈ ತೀರ್ಥ ಪಡೆಯಲು ಕಾವೇರಿ ಸಂಕ್ರಮಣದಂದು ಕಾವೇರಿ ಉಗಮಸ್ಥಾನ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಈ ತೀರ್ಥವನ್ನು ಅಷ್ಟೊಂದು ಪವಿತ್ರ ಎಂಬುವುದು ಕೊಡಗಿನ ಜನತೆ ತುಂಬಾ ಬಲವಾಗಿ ನಂಬಿದ್ದಾರೆ. ಆ ಕಾರಣದಿಂದಲೇ ಕಾವೇರಿ ತೀರ್ಥವನ್ನು ಆನ್‌ಲೈನ್‌ನಲ್ಲಿ ಡೆಲಿವರಿ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

ತೀರ್ಥರೂಪಿಣಿಯಾಗಿರುವ ಕಾವೇರಿಯನ್ನು ಹಣಕ್ಕಾಗಿ ಮಾರಾಟ ಮಾಡುವಂತಿಲ್ಲ ಎಂಬುವುದಾಗಿ ಕೊಡಗಿನ ಜನತೆ ಹೇಳುತ್ತಿದ್ದಾರೆ.

ಕಾವೇರಿ ತೀರ್ಥದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ನೋಡುವುದಾದರೆ:

ತುಲಾ ಸಂಕ್ರಾಂತಿಯಂದು ತೀರ್ಥೋದ್ಭವ
ಪ್ರತಿ ವರ್ಷ ಗ್ರಹಗಳ ಅಧಿಪತಿಯಾದ ಸೂರ್ಯನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸಂಚರಿಸಿದಾಗ ತುಲಾ ಸಂಕ್ರಮಣವಾಗುತ್ತದೆ. ಈ ದಿನವನ್ನು ಕಾವೇರಿ ಸಂಕ್ರಮಣ ಎಂದು ಆಚರಿಸಲಾಗುವುದು. ತುಲಾ ಸಂಕ್ರಮಣದ ಅದೇ ಘಳಿಗೆಯಲ್ಲಿ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ವರ್ಷದ ಅಷ್ಟು ದಿನಗಳಲ್ಲಿ ಶಾಂತವಾಗಿರುವ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪದಲ್ಲಿ ಕಂಡು ಬರುತ್ತಾಳೆ.


ಈ ದಿನ ಉಕ್ಕಿ ಬರುವ ತೀರ್ಥವನ್ನು ಸಂಗ್ರಹಿಸಿ ಈ ತೀರ್ಥವನ್ನು ಪುಣ್ಯ ತೀರ್ಥವನ್ನಾಗಿ ಬಳಸುತ್ತಾರೆ. ಮಗುವಿನ ಜನನವಾದಲೂ ಈ ತೀರ್ಥ ಮಗುವಿಗೆ ಕೊಡುತ್ತಾರೆ. ಯಾರಾದರೂ ಮರಣವೊಂದಿದರೆ ಮನೆ ಶುದ್ಧ ಮಾಡುವ ಕಾರ್ಯದಲ್ಲೂ ಈ ತೀರ್ಥ ಬಳಸುತ್ತಾರೆ. ಈ ತೀರ್ಥ ಚಿಮುಕಿಸಿದರೆ ಆ ಭಾಗ ಶುದ್ಧವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ತೀರ್ಥವನ್ನು ಪ್ರತಿಯೊಂದು ಹಬ್ಬ-ಹರಿದಿನಗಳಲ್ಲೂ ಬಳಸುತ್ತಾರೆ.

ಪಿಂಡ ಪ್ರಧಾನ ಕಾರ್ಯಕ್ರಮ
ಕಾವೇರಿ ತೀರ್ಥೋದ್ಬವಕ್ಕೆ ಮುನ್ನ ಕಾವೇರಿ, ಕನ್ನಿಕೆ, ಸುಜೋತಿ ಸಂಗಮ ಸ್ಥಳದಲ್ಲಿ ಪಿಂಡ ಪ್ರಧಾನ ಮಾಡಲಾಗುವುದು. ಇಲ್ಲಿ ಪಿಂಡ ಪ್ರಧಾನ ಮಾಡಿದರೆ ಮರಣವೊಂದಿದವರಿಗೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಇದೆ.

ಕಾವೇರಿ ಸಂಕ್ರಮಣದಂದು ಕಾವೇರಿ ಪೂಜೆಗೆ ಕಣಿ ಪೂಜೆ
ಈ ದಿನ ದೋಸೆ ಹಾಗೂ ಸಿಹಿ ಕುಂಬಳಕಾಯಿ ಸಾರು ಮಾಡಿ ಕುಡಿ ಬಾಳೆಲೆಯಲ್ಲಿಟ್ಟು, ಅದಕ್ಕೆ ತುಪ್ಪ ಹಾಕಿ, ತುದಿಗೆ ಬತ್ತಿ ಇಟ್ಟು ದೀಪ ಹಚ್ಚಿ ಗದ್ದೆಯಲ್ಲಿ ಈ ದಿನ ನೆಟ್ಟ ಮೂರು ಬೆಚ್ಚಿನ ಮೇಲೆ (ಒಂದು ಬಳ್ಳಿ ಸಿಗುತ್ತೆ, ಅದನ್ನು ಬಿದುರಿಗೆ ಸಿಕ್ಕಿಸಿ, ಕೆಂಪು ಹೂ ಇಡಲಾಗುವುದು) ಪೂರ್ವಕ್ಕೆ ಬಾಳೆ ಕುಡಿ ಮುಖ ಬರವಂತೆ ಇಟ್ಟು ಬರುತ್ತಾರೆ.

ನಂತರ ಮನೆಯ ಬಾವಿ ಅಥವಾ ಬೋರ್‌ವೆಲ್‌ಗೆ ಗಂಗೆ ಪೂಜೆ ಮಾಡಿ ಮನೆಗೆ ನೀರು ತರುತ್ತಾರೆ. ಭಾಗಮಂಡಲಕ್ಕೆ ಹೋದವರು ತೀರ್ಥವನ್ನು ತಂದು ಊರಿನಲ್ಲಿ, ಊರ ದೇವಾಲಯದಲ್ಲಿ ಹಂಚುತ್ತಾರೆ.

English summary

Opposition To kodagu Cauvery Theertha Prasadam Delivery: Interesting Facts About Cauvery Theertha

Opposition To kodagu Cauvery Theertha Prasadam Delivery: Everyone must know why Kodagu people so atatched to cauvery theertha, here are interesting facts
X
Desktop Bottom Promotion