ಪುರಿ ಜಗನ್ನಾಥ ರಥ ಯಾತ್ರೆಯ ವಿಶೇಷತೆಗಳೇನು?

By Deepak M

ಒಡಿಶಾ ರಾಜ್ಯದ ಜನರು ಅತ್ಯಂತ ಕಾತರದಿಂದ ಎದುರು ನೋಡುವ ಉತ್ಸವ ಪುರಿ ರಥಯಾತ್ರೆ. ಮೂಲತಃ ಈ ರಥ ಯಾತ್ರೆಯನ್ನು ಇಲ್ಲಿನ ಮೂಲ ದೇವರಾದ ಜಗನ್ನಾಥ ಸ್ವಾಮಿಗಾಗಿ ಮಾಡಲಾಗುತ್ತದೆ. ರಥಯಾತ್ರೆಯಂದು ಇಲ್ಲಿನ ಪ್ರಧಾನ ದೇವಾಲಯದಿಂದ ಹೊರಡುವ ರಥಗಳು ಸಮೀಪದ ದೇವಾಲಯದವರೆಗೆ ಸಾಗುತ್ತವೆ. ಈ ರಥಗಳನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯಾತ ಭಕ್ತರು ಭಕ್ತಿ ಭಾವಗಳಿಂದ ಎಳೆಯುತ್ತಾರೆ.

ಇದನ್ನು ಅವರು ಸೇವೆ ಎಂದೇ ಪರಿಗಣಿಸುವುದು ಇಲ್ಲಿನ ವಿಶೇಷ. ಪುರಿಯ ರಥ ಯಾತ್ರೆಗೆ ಸುಮಾರು 5,000 ವರ್ಷಗಳ ಇತಿಹಾಸವಿದೆ. ಬಹುತೇಕ ಭಾರತದ ಮೂಲೆ ಮೂಲೆಯಲ್ಲಿರುವ ಎಲ್ಲಾ ಜಗನ್ನಾಥ ಮಂದಿರಗಳಲ್ಲಿ ಇದೇ ದಿನ ರಥ ಯಾತ್ರೆಯನ್ನು ನಡೆಸಿಕೊಡಲಾಗುತ್ತದೆ. ಆದರೆ ಪುರಿಯಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಕೂಡಿದ ವೈಭವೋಪೇತ ರಥ ಯಾತ್ರೆ ನಡೆಯುತ್ತದೆ. ಪ್ರತಿ ವರ್ಷದ ರಥ ಯಾತ್ರೆಗೆ ಮರದಿಂದ ಹೊಚ್ಚ ಹೊಸ ರಥಗಳನ್ನು ನಿರ್ಮಿಸಲಾಗುತ್ತದೆ. ಮತ್ತು ಇವುಗಳು ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ಕರೆದೊಯ್ಯುತ್ತವೆ.

What Is So Special About Rath Yatra?

ಈ ರಥಗಳನ್ನು ನಿರ್ಮಿಸುವ ಬಡಗಿಗಳು ತಮ್ಮ ರಥ ನಿರ್ಮಾಣದ ಕಾರ್ಯವನ್ನು ಅಕ್ಷಯ ತೃತಿಯಾದ ಶುಭದಿನದಂದು ಆರಂಭಿಸುತ್ತಾರೆ. ಈ ರಥಗಳನ್ನು ಪ್ರಕಾಶಮಾನವಾದ ಬಣ್ಣಗಳನ್ನು ಬಳಿಯುತ್ತಾರೆ. ಇವುಗಳಿಗೆ ಕೆಂಪು, ಹಳದಿ ಅಥವಾ ಹಸಿರು ಛತ್ರಿಗಳನ್ನು ಹೊದಿಸಲಾಗುತ್ತದೆ. ಸಾಮಾನ್ಯವಾಗಿ ಜಗನ್ನಾಥ ಸ್ವಾಮಿಯ ರಥವು ಕೆಂಪು ಮತ್ತು ಹಳದಿ ಛತ್ರಿಗಳನ್ನು, ಬಲಭದ್ರ ಸ್ವಾಮಿಯ ರಥವು ಕೆಂಪು ಮತ್ತು ಹಸಿರು ಹಾಗು ಸುಭದ್ರಳ ರಥವು ಕೆಂಪು ಮತ್ತು ಕಪ್ಪು ಛತ್ರಿಗಳನ್ನು ಹೊಂದಿರುತ್ತದೆ.

2014ರ ರಥ ಯಾತ್ರೆಯು ನೋಡುವವರ ಕಣ್ಮನಗಳನ್ನು ಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕು ಇದನ್ನು ನೋಡಲು ಮರೆಯಬೇಡಿ. ಜಗನ್ನಾಥ ಸ್ವಾಮಿಯ ರಥವನ್ನು ನಂದಿಘೋಷ್ ಅಥವಾ ಚಕ್ರಧ್ವಜ ಎಂದು ಕರೆಯಲಾಗುತ್ತದೆ. ಇದರರ್ಥ ಅಪ್ಯಾಯಮಾನವಾದ ಅಥವಾ ಇನಿದಾದ ಧ್ವನಿ ಎಂದರ್ಥ. ಈ ರಥವು 65 ಟನ್‍ಗಳಷ್ಟು ಭಾರವನ್ನು ಹೊಂದಿರುತ್ತದೆ. ಬಲಭದ್ರ ಸ್ವಾಮಿಯ ರಥವು ತಾಳಧ್ವಜ ಎಂದು ಹೆಸರಾಗಿದೆ. ಇದರರ್ಥ ಶಕ್ತಿಯುತವಾದ ತಾಳ ಎಂದರ್ಥ. ಸುಭದ್ರಳ ರಥವನ್ನು ಪದ್ಮ ಧ್ವಜ ಅಥವಾ ದರ್ಪದಲನ್ ಎಂದು ಕರೆಯುತ್ತಾರೆ. ಇದರರ್ಥ ಗರ್ವದ ನಾಶ ಮಾಡುವುದು ಎಂದರ್ಥ.

ವಿಧಿಗಳು:
ರಥ ಯಾತ್ರೆ ನಡೆಯುವಾಗ ಬಲಭದ್ರ ಸ್ವಾಮಿಯ ವಿಗ್ರಹವನ್ನು ಮೊದಲು ತರಲಾಗುತ್ತದೆ. ಆನಂತರ ದೇವಿ ಸುಭದ್ರ ಮತ್ತು ಕೊನೆಗೆ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ತರಲಾಗುತ್ತದೆ. ಪುರಿಯ ರಾಜನು ಆ ಊರಿನ ರಸ್ತೆಗಳನ್ನು ಚಿನ್ನದ ಪೊರಕೆಯಿಂದ ಗುಡಿಸಿ, ರಥಗಳು ಮುಂದೆ ಸಾಗಲು ಅನುವು ಮಾಡಿಕೊಡುತ್ತಾನೆ. ಈ ರಥಗಳಿಗೆ ದಪ್ಪದಾದ ಮತ್ತು ಉದ್ದವಾಗಿರುವ ಹಗ್ಗಗಳನ್ನು ಕಟ್ಟಿರಲಾಗುತ್ತದೆ. ಹೀಗಾಗಿ ಸಾವಿರಾರು ಜನರು ಈ ರಥಗಳನ್ನು ಎಳೆಯಲು ಸಹಾಯವಾಗುತ್ತದೆ. ಹೀಗೆ ಕಟ್ಟಲಾದ ರಥಗಳನ್ನು ಭಕ್ತಾಧಿಗಳು ಸಮೀಪದ ಗುಂಡಿಚ ದೇವಾಲಯದವರೆಗೆ ಎಳೆದುಕೊಂಡು ಹೋಗುತ್ತಾರೆ. ಮೂಲತಃ ಈ ದೇವಾಲಯವು ಜಗನ್ನಾಥ ಸ್ವಾಮಿಯ ಅತ್ತೆಯ ನಿವಾಸವಂತೆ.

ರಥಯಾತ್ರೆಯ ಮಹತ್ವ:
ರಥ ಯಾತ್ರೆಯು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಕಥಾ ಉಪನಿಷತ್ ಪ್ರಕಾರ, ಮಾನವನ ದೇಹವು ರಥದಂತಿದೆಯಂತೆ, ಇದನ್ನು ಚಲಾಯಿಸುವ ಸಾರಥಿ ದೇವರು. ದೇವರು ಈ ರಥವನ್ನು ಐಹಿಕ ಸುಖ ಭೋಗಗಳ ಮೂಲಕ ನಮ್ಮನ್ನು ಹಾಯಿಸಿ ಆಧ್ಯಾತ್ಮಿಕ ಸ್ಥಾನದ ಕಡೆಗೆ ಕರೆದೊಯ್ಯುತ್ತಾನಂತೆ. ಜನನ ಮತ್ತು ಮರಣಗಳ ಚಕ್ರದಿಂದ ಬಿಡುಗಡೆಯಾಗಲು ದೇವರಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಸಮರ್ಪಣೆಯನ್ನು ಹೊಂದದ ಹೊರತು ಮುಕ್ತಿ ಸಾಧ್ಯವಿಲ್ಲ. ಜಾಹೀರಾತು 2014ರ ರಥ ಯಾತ್ರೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಿರಂತರ ವೀಕ್ಷಿಸುತ್ತಿರಿ Boldsky. ದೇವರ ಕೃಪೆಗೆ ಪಾತ್ರರಾಗಬಹುದಾದ ಹೆಜ್ಜೆ ಹೆಜ್ಜೆಗು ಆಧ್ಯಾತ್ಮಿಕತೆಯ ಪರಮೋಚ್ಛ ಸ್ಥಿತಿಗೆ ಕೊಂಡೊಯ್ಯುವ ಅವಿಸ್ಮರಣೀಯ ಯಾತ್ರೆಯ ಅನುಕ್ಷಣಗಳತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತೇವೆ.

X
Desktop Bottom Promotion