ಗುರುನಾನಕ್ ಜಯಂತಿ ಮಹತ್ವ, ಐತಿಹಾಸಿಕ ಹಿನ್ನೆಲೆ

By Staff

ನವಂಬರ್ 8ರಂದು ಗುರು ನಾನಕ್‌ ಜಯಂತಿ ಆಚರಿಸಲಾಗುವುದು.

ಸಿಖ್ಖರ ಪ್ರಥಮ ಧರ್ಮಗುರು ಗುರು ನಾನಕ್ ರವರ ಜನ್ಮದಿನವನ್ನು ವಿಶ್ವದಾದ್ಯಂತ ಸಿಖ್ಖರು ಅತಿ ತನ್ಮಯತೆ, ಉಲ್ಲಾಸ ಮತ್ತು ಭಕ್ತಿಭಾವದಿಂದ ಆಚರಿಸುತ್ತಾರೆ. ಹಬ್ಬಕ್ಕೂ ಮೊದಲು ಸಿಖ್ಖರ ಧರ್ಮಗ್ರಂಥವಾದ ಗುರು ಗ್ರಂಥ್ ಸಾಹಿಬ್ ಗ್ರಂಥವನ್ನು ಒಂದು ಕ್ಷಣವೂ ಬಿಡದಂತೆ ಸತತವಾಗಿ ಪಠಣ ಮಾಡಲಾಗುತ್ತದೆ. ಗ್ರಂಥದಿಂದ ಆಯ್ದ ವಾಕ್ಯಗಳನ್ನು ಆಧರಿಸಿದ ಕವನಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ. ಹೂವಿನಿಂದ

ಅಲಂಕರಿಸಿದ ಪಲ್ಲಕ್ಕಿ ಅಥವಾ ವಾಹನದಲ್ಲಿ ಗ್ರಂಥ್ ಸಾಹಿಬ್ ಗ್ರಂಥವನ್ನು ಈ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಪವಿತ್ರವಾದ ಈ ದಿನವನ್ನು ಗ್ರಂಥ್ ಸಾಹಿಬ್‌ನ ಪಂಕ್ತಿಗಳನ್ನು ಪಠಿಸುತ್ತಲೇ ಕಳೆಯಲಾಗುತ್ತದೆ. ಈ ಜಯಂತಿಗೆ ಸಿಖ್ಖ್ ಸಮುದಾಯದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಇದರ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ..

Significance Of Guru Nanak Jayanthi

ಗುರು ನಾನಕ್ ಜಯಂತಿಯ ಮಹತ್ವ
ಸಿಖ್ ಧರ್ಮದ ಉಗಮಕ್ಕೆ ಒಟ್ಟು ಹತ್ತು ಸಿಖ್ ಧರ್ಮಗುರುಗಳು ಕಾರಣರಾಗಿದ್ದು ಅವರಲ್ಲಿ ಗುರು ನಾನಕ್ ಪ್ರಥಮರಾಗಿದ್ದಾರೆ. ಬೇಡಿ ಕ್ಷತ್ರಿಯ ಕುಟುಂಬದ ಮೆಹ್ತಾ ಕಲ್ಯಾಣ್ ಶಾ ಬೇಡಿ ಅಥವಾ ಮೆಹ್ತಾ ಕಾಲು ಹಾಗೂ ತೃಪ್ತಿ ದೇವಿ ಎಂಬ ದಂಪತಿಗಳೀಗೆ ಪುತ್ರರಾಗಿ ಕ್ರಿ. ಶ. 1469ರಲ್ಲಿ ಗುರು ನಾನಕ್ ದೇವ್ ಜಿ ಹುಟ್ಟಿದರು. ಮೆಹ್ತಾ ಕಾಲು ಗ್ರಾಮದ ಬೆಳೆಯ ಲೆಕ್ಕಾಧಿಕಾರಿಯಾಗಿದ್ದರೆ ತಾಯಿ ಗೃಹಿಣಿಯಾಗಿದ್ದರು. ಬೇಬೇ ನಾನಕಿ ಎಂಬ ಪುತ್ರಿಯೂ ಇವರಿಗಿದ್ದು ಎಲ್ಲರೂ ಇಂದಿನ ಪಾಕಿಸ್ತಾನದಲ್ಲಿರುವ ಲಾಹೋರ್‌ನ ಬಳಿಯ ರಾಯ್ ಭೋಯ್ ದಿ ತಲ್ವಾಂದಿ ಎಂಬ ಗ್ರಾಮದಲ್ಲಿದ್ದರು.

ಇಂದು ಈ ಗ್ರಾಮಕ್ಕೆ ನಾನಾಕನ್ ಸಾಹೇಬ್ ಎಂಬ ಹೆಸರಿದೆ. ಬಾಲಕನಾಗಿದ್ದಿಂದಿನಿಂದಲೂ ಆಧ್ಯಾತ್ಮಿಕ, ಶುದ್ಧತೆ, ಪಾವಿತ್ರ್ಯತೆ, ಸತ್ಯ, ಒಳ್ಳೆಯತನ ಮತ್ತು ಭಕ್ತಿಗೆ ಹೆಚ್ಚು ಆಕರ್ಷಿತರಾಗಿದ್ದರು. ತಂದೆ ಮಾರುಕಟ್ಟೆಯಿಂದ ಮನೆಗೆ ಅಗತ್ಯವಾದ ಸಾಮಾಗ್ರಿಯನ್ನು ತರಲು ಹಣ ನೀಡಿದರೆ ಬಾಲಕ ನಾನಕ್ ಈ ಹಣವನ್ನೆಲ್ಲಾ ಬಡಬಗ್ಗರಿಗೆ ಹಂಚಿ ಬರಿಗೈಯಲ್ಲಿ ಹಿಂದಿರುಗುತ್ತಿದ್ದರು. ಕ್ಷತ್ರಿಯ ಕುಟುಂಬ ಎಂದರೆ ಧೈರ್ಯ, ಸಾಹಸಗಳಿಗೆ ಮೀಸಲಾದ ಕುಟುಂಬ ಎಂದು ಅಂದಿನ ಕಾಲದಲ್ಲಿ ಪ್ರಚಲಿತವಾಗಿತ್ತು.

ಆದರೆ ಬಾಲಕ ನಾನಕ್ ಹಿಂದೂ ಮತ್ತು ಇಸ್ಲಾಂ ಧರ್ಮಗಳನ್ನು ಜೊತೆಯಾಗಿ ಅಭ್ಯಸಿಸಿದರು. ಪ್ರಾಪ್ತ ವಯಸ್ಸಿನಲ್ಲಿ ಅವರು ಮಾತಾ ಸುಲಖಾನಿಯವರನ್ನು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳೂ ಹುಟ್ಟಿದರು. ಬಳಿಕ ಅವರಿಗೆ ತಮ್ಮನ್ನು ಯಾವುದೇ ಅಲೌಕಿಕ ಶಕ್ತಿ ಕರೆಯುತ್ತಿರುವಂತೆ ಭಾಸವಾಯಿತು. ಈ ಕರೆಗೆ ಓಗೊಟ್ಟ ಅವರು ಮನೆ, ಸಂಸಾರವನ್ನು ತೊರೆದು ಕಾಡಿನಲ್ಲಿ ಅಲೆಯಲು ತೊಡಗಿದರು. ಕ್ರಮೇಣ ಧ್ಯಾನವನ್ನು ಆಚರಿಸುತ್ತಾ ತಪಸ್ವಿಯದರು. ಕಾಡಿನಲ್ಲಿಯೇ ಹಲವಾರು ವರ್ಷ ಅಲೆಯುತ್ತಲೇ ಹಿಂದೂ ಮತ್ತು ಇಸ್ಲಾಂ ಧರ್ಮಗಳನ್ನು ಆಳವಾಗಿ ಅಭ್ಯಸಿಸಿದರು. ಅದರಲ್ಲೂ ಸೂಫಿ ಸಂತರ ಬಗ್ಗೆ ವಿಶೇಷ ಆಕರ್ಷಣೆ ಹೊಂದಿದ್ದರು.

ಕಬೀರನ ದೋಹಾಗಳ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಬಳಿಕ ಅವರು ಬೋಧನೆಯನ್ನು ಪ್ರಾರಂಭಿಸಿದರು. ಇವರ ಬೋಧನೆಗಳು ಹಿಂದೂ ಅಥವಾ ಮುಸ್ಲಿಮರಿಗೆ ಪ್ರತ್ಯೇಕವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ವಿಷಯಗಳಲ್ಲಿ ಅವರು ಅಪಾರ ಪಾಂಡಿತ್ಯ ಪ್ರದರ್ಶಿಸುತ್ತಿದ್ದರು. ಒಮ್ಮೆ ಬಾಯಿನ್ ನದಿಯಲ್ಲಿ ಸ್ನಾನಕ್ಕೆ ಮುಳುಗು ಹಾಕಿದವರು ಮೇಲೇಳದೇ ಮೂರು ದಿನಗಳ ವರೆಗೆ ಕಾಣೆಯಾಗಿದ್ದರು.

ಮೂರು ದಿನಗಳ ಬಳಿಕ ಮತ್ತೊಮ್ಮೆ ಜೀವಂತವಾಗಿ ಪ್ರತ್ಯಕ್ಷರಾದರು. ಈ ಅವಧಿಯಲ್ಲಿ ಏನಾಯಿತು ಎಂದು ಅವರು ಸ್ಪಷ್ಟವಾಗಿ ಹೇಳಿಕೊಳ್ಳದೇ ಇದ್ದರೂ ಈ ಅವಧಿಯಲ್ಲಿ ಅವರ ಭೇಟಿ ನೇರವಾಗಿ ಭಗವಂತನೊಂದಿಗೆ ಆಗಿತ್ತು ಎಂದು ಸಿಖ್ಖರು ನಂಬುತ್ತಾರೆ. ನಂತರದ ದಿನಗಳಲ್ಲಿ ನಾನಕರು ಹೆಚ್ಚು ಗಾಂಭೀರ್ಯ ಪ್ರಕಟಿಸಿ ಇಡಿಯ ದಿನ ಹಿಂದೂ ಪಂಡಿತರು, ಮುಸ್ಲಿಂ ಮುಲ್ಲಾಗಳೊಂದಿಗೆ ಸಂಭಾಷಣೆ ಮತ್ತು ಚರ್ಚೆಗಳಲ್ಲಿ ನಿರತರಾಗಿರುತ್ತಿದ್ದರು. ದೇವನನ್ನು ಸ್ತುತಿಸಲು ಅವರು ಸ್ವತಃ ಕವಿಗಳಾಗಿ, ದಾರ್ಶನಿಕರಾಗಿ, ಗಾಯಕರಾಗಿ, ಸಂತರಾಗಿ ರೂಪುಗೊಂಡರು. ದೇವಸ್ತುತಿಯ ಸಮಯದಲ್ಲಿ ಅವರಿಂದ ಅತೀಂದ್ರಿಯ ಶಕ್ತಿಯನ್ನು ಸುತ್ತಲಿನವರು ಗ್ರಹಿಸುತ್ತಿದ್ದರು.

ಅವರ ಗಾಯನ ಮತ್ತು ಸಂದೇಶಗಳಲ್ಲಿ ಕೇವಲ ಪ್ರೀತಿ, ಶಾಂತಿ, ಸತ್ಯ ಮತ್ತು ನವೋದಯದ ಬಗ್ಗೆಯೇ ವರ್ಣನೆಗಳಿರುತ್ತಿದ್ದವು. ಮನುಷ್ಯರ ನಡುವೆ ಸದ್ಭಾವನೆ, ಸಹಾಯ, ಪ್ರೀತಿ ವಿಶ್ವಾಸಗಳನ್ನೇ ಉಳಿಸಿಕೊಳ್ಳಲು ಹೋಗುವಂತೆ ತಮ್ಮ ಗ್ರಂಥಗಳಲ್ಲಿ ಸ್ತುತಿಗಳ ರೂಪದಲ್ಲಿ ಬರೆದರು. ಇಂದಿಗೂ ಈ ಸ್ತುತಿಗಳ ಮೂಲಕ ಸಿಖ್ಖರು ತಮ್ಮ ಧರ್ಮಗುರುಗಳ ಬೋಧನೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಗುರು ನಾನಕರ ಜಯಂತಿಯನ್ನು ಅತಿ ಗೌರವ, ಹೆಮ್ಮೆ ಮತ್ತು ಆದರದಿಂದ ಆಚರಿಸಲಾಗುತ್ತದೆ. ಪ್ರತಿ ಗುರುದ್ವಾರದಿಂದ ಮೆರವಣಿಗೆ ಹೊರಡಿಸಲಾಗುತ್ತದೆ ಹಾಗೂ ಜ್ಯೋತಿಗಳಿಂದ ಬೆಳಗಿಸಲಾಗುತ್ತದೆ.

X
Desktop Bottom Promotion