Just In
- 5 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 6 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 7 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡಿನೋವು ಅತಿ ಶೀಘ್ರವಾಗಿ ಕಡಿಮೆಯಾಗಲು ಈ ಮನೆಮದ್ದುಗಳೇ ಸಾಕು
ನಮ್ಮ ಸುತ್ತಮುತ್ತಲ ಜನರಲ್ಲಿ ಅತಿ ಸಾಮಾನ್ಯವಾಗಿ ಕಾಡುವ ಮಂಡಿನೋವು ಕೆಲವಾರು ಕಾರಣಗಳಿಂದ ಎದುರಾಗಿರಬಹುದು. ಯುವ ಜನರಲ್ಲಿ ಆಟದ ಸಮಯದಲ್ಲಿ ಬಿದ್ದು ಅಥವಾ ಬೇರಾವುದೋ ಪೆಟ್ಟಿನಿಂದ ಮಂಡಿನೋವಾಗಿದ್ದರೆ ಉಳಿದವರಿಗೆ ನಿತ್ಯದ ಓಡಾಟದಿಂದ ಮಂಡಿಯ ಕೀಲುಗಳು ತೀರಾ ಸವೆದು ನೋವು ನೀಡುತ್ತಿದ್ದಿರಬಹುದು. ವಿಶೇಷವಾಗಿ ನಡುವಯಸ್ಸು ದಾಟಿದವರಲ್ಲಿ ಇದು ಸಾಮಾನ್ಯವಾಗಿದ್ದು ಐವತ್ತು ದಾಟಿದ ಬಳಿಕ ಸಂಧಿವಾತದ ರೂಪವನ್ನೂ ಪಡೆದುಕೊಳ್ಳಬಹುದು.
ಸಂಧಿವಾತದ ಸ್ಥಿತಿಯಲ್ಲಿ ಮೂಳೆಗಳ ಕೀಲುಗಳು ಒಂದರೊಳಗೊಂದು ಸುಲಭವಾಗಿ ಜಾರಲು ಅಗತ್ಯವಾಗಿರುವ ತೈಲದಂತಹ ದ್ರವ (synovial fluids) ಒಣಗಿ ಕಾಲುಗಳನ್ನು ಮಡಚಲು ಕಷ್ಟಪಡಬೇಕಾಗಿ ಬರಬಹುದು. ಇಂದಿನ ದಿನಗಳಲ್ಲಿ ಹೆಚ್ಚಾಗಿರುವ ಸವಲತ್ತುಗಳನ್ನು ಅಗತ್ಯಕ್ಕೂ ಹೆಚ್ಚಾಗಿಯೇ ಬಳಸುವ ಜನರಿಗೆ ಕಾಲು ಮಡಚುವ ಹಾಗೂ ನಿತ್ಯದ ಅವಶ್ಯಕ ಶಾರೀರಿಕ ಚಟುವಟಿಕೆಗಳು ಸಹಾ ಕಡಿಮೆಯಾಗಿ ಸಂಧಿವಾತ ಆವರಿಸುವ ಸಾಧ್ಯತೆ ಯುವಜನರಿಗೂ ಆವರಿಸಬಹುದು.
ಮಂಡಿನೋವು ಸಮಸ್ಯೆ ಇದ್ದವರು ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ
ನಮ್ಮ ಪಾದದ ಗಂಟುಗಳು ದೇಹದ ಅತಿ ಹೆಚ್ಚಿನ ಭಾರವನ್ನು ಹೊರುತ್ತವಾದರೂ ಮೊಣಕಾಲುಗಳಷ್ಟು ಮಡಚುವುದಿಲ್ಲ. ಹಾಗಾಗಿ ನಡೆಯುವ, ಓಡುವ, ಮೆಟ್ಟಿಲೇರುವ ಮೊದಲಾದ ದೈಹಿಕ ಕಾರ್ಯಗಳಲ್ಲಿ ಮೊಣಕಾಲುಗಳ ಮೇಲೆ ಅತಿಹೆಚ್ಚಿನ ಭಾರ ಬೀಳುತ್ತದೆ. ಅಲ್ಲದೇ ಈ ಗಂಟುಗಳು ದೇಹದ ಗಂಟುಗಳಲ್ಲಿಯೇ ಅತಿ ಸಂಕೀರ್ಣ ಹಾಗೂ ಕ್ಲಿಷ್ಟವಾಗಿದ್ದು ದೇಹವನ್ನು ಚಲನಾ ಸ್ಥಿತಿಯಲ್ಲಿ ಸಮತೋಲನ ಕಾಯ್ದು ಕೊಳ್ಳಲು ನೆರವಾಗುತ್ತವೆ.
ಮಣಿಗಂಟಿನಲ್ಲಿ ನೋವು ಎದುರಾದರೆ ನಿತ್ಯದ ಕೆಲಸಗಳೆಲ್ಲಾ ಬಾಧೆಗೊಳಗಾಗುತ್ತವೆ. ನೋವು ಪ್ರಾರಂಭವಾದಾದ ನಿರ್ಲಕ್ಷ್ಯ ತೋರಿದರೆ ಇದು ತೀವ್ರ ಸ್ವರೂಪಕ್ಕೆ ತಿರುಗಬಹುದು. ಒಂದು ವೇಳೆ ಮಂಡಿನೋವು ಈಗತಾನೇ ಪ್ರಾರಂಭವಾಗಿದ್ದರೆ ಇದನ್ನು ಮೂಲದಲ್ಲಿಯೇ ನಿವಾರಿಸಲು ಕೆಲವು ಮನೆಮದ್ದುಗಳೇ ಸಾಕು. ಬನ್ನಿ, ಈ ಸಮರ್ಥ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ....
ಕ್ಯಾರೆಟ್ ಹೆಚ್ಚು ಹೆಚ್ಚಾಗಿ ತಿನ್ನಿ
ವಾಸ್ತವವಾಗಿ ಈ ಮನೆಮದ್ದು ಚೀನಾದಿಂದ ಬಂದ ವಿಧಾನವಾಗಿದೆ. ಗಜ್ಜರಿ ಅಥವಾ ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಅವಶ್ಯಕ ನಾರು ಹಾಗೂ ಪೋಷಕಾಂಶಗಳಿದ್ದು ಮಂಡಿನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಎರಡು ತಾಜಾ ಕ್ಯಾರೆಟ್ಟುಗಳನ್ನು ಚಿಕ್ಕದಾಗಿ ತುರಿದು ಇದಕ್ಕೆ ಒಂದು ಲಿಂಬೆಹಣ್ಣಿನ ರಸವನ್ನು ಬೆರೆಸಿ ನಿತ್ಯವೂ ಹಸಿಯಾಗಿ ಸೇವಿಸಬೇಕು. ಬದಲಿಗೆ ಕ್ಯಾರೆಟ್ ತುರಿಯಿಂದ ಹಿಂಡಿ ತೆಗೆದ ರಸವನ್ನು ಲಿಂಬೆ ಬೆರೆಸಿಯೂ ತಿನ್ನಬಹುದು, ಆದರೆ ಹಸಿಯಾಗಿ ಸೇವಿಸುವುದರಿಂದ ಹೆಚ್ಚಿನ ನಾರು ಸಿಗುತ್ತದೆ. ನಿತ್ಯದ ಸೇವನೆಯಿಂದ ಮಂಡಿಗಳಿಗೆ ಹೆಚ್ಚಿನ ಪೋಷಣೆ ದೊರೆತು ನೋವು ಇಲ್ಲವಾಗುತ್ತದೆ.
ಹೆಚ್ಚು ಹೆಚ್ಚಾಗಿ ನೀರು ಕುಡಿಯಿರಿ
ನಮ್ಮ ದೇಹಕ್ಕೆ ಉಸಿರಿನ ಮೂಲಕ ಪಡೆಯುವ ಅಮ್ಲಜನಕದಷ್ಟೇ ನೀರು ಸಹಾ ಅಗತ್ಯ. ಬರೆಯ ಒಂದು ಲೋಟ ನೀರು ದೇಹದ ಒಟ್ಟಾರೆ ಆರೋಗ್ಯದ ಮೇಲೆ ಅದ್ಭುತಗಳನ್ನೇ ಮೂಡಿಸಬಲ್ಲುದು. ನಮ್ಮ ದೇಹದ ಹಲವಾರು ಕಾರ್ಯಗಳ ಜೊತೆಗೇ ಕೀಲುಗಳ ಜಾರುವಿಕೆಗೆ ಅಗತ್ಯವಾದ ದ್ರವದ ಉತ್ಪತ್ತಿಗೂ ನೀರು ಅತ್ಯಗತ್ಯವಾಗಿ ಬೇಕು. ಈ ದ್ರವ ಕೀಲುಗಳು ಒಂದರೊಳಗೊಂದು ಸುಲಭವಾಗಿ ಜಾರಲು ಹಾಗೂ ಈ ಭಾಗದಲ್ಲಿರುವ ಮೃದ್ವಸ್ಥಿಗಳು ಸುಸ್ಥಿತಿಯಲ್ಲಿರಲೂ ನೆರವಾಗುತ್ತದೆ. ನೀರಿನ ಲಭ್ಯತೆಯಿಂದ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ ಹಾಗೂ ಪೋಶಕಾಂಶಗಳು ಮಂಡಿಯ ಭಾಗಕ್ಕೆ ತಲುಪಲು ನೆರವಾಗುತ್ತದೆ.
ಈರುಳ್ಳಿ
ಈರುಳ್ಳಿಯಲ್ಲಿರುವ ಉರಿಯೂತ ನಿವಾರಕ ಗುಣ ಮಂಡಿನೋವಿಅನ್ನು ಕಡಿಮೆಮಾಡಲು ನೆರವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಈರುಳ್ಳಿಯಲ್ಲಿರುವ ಗಂಧಕ ವಿಶೇಷವಾಗಿ ಮಂಡಿನೋವನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿದೆ.
ಮೊಣಕಾಲುಗಳ ಮಜಾಜ್
ನೋವಿರುವ ಭಾಗದಲ್ಲಿ ನಯವಾದ ಮಸಾಜ್ ಸಹಾ ನೋವನ್ನು ಕಡಿಮೆ ಮಾಡುವ ಒಂದು ಉತ್ತಮ ಕ್ರಮವಾಗಿದೆ. ನೋವಿರುವ ಯಾವುದೇ ಭಾಗದಲ್ಲಿ ಮಸಾಜ್ ಮಾಡುವುದರಿಂದ ಉತ್ತಮ ಪರಿಹಾರ ಪಡೆಯಬಹುದು. ನಮ್ಮ ಹಿರಿಯರು ನೋವಿರುವ ಭಾಗದಕ್ಕೆ ಅವಶ್ಯಕ ತೈಲಗಳಿಂದ ಮಸಾಜ್ ಮಾಡಿಕೊಳ್ಳುತ್ತಿದ್ದುದನ್ನು ಗಮನಿರಬಹುದು. ಇದಕ್ಕೆ ಕಾರಣ ಎಣ್ಣೆಯ ಮಸಾಜ್ ನಿಂದ ಗಂಟುಗಳು ಉತ್ತಮ ಆರೋಗ್ಯದಲ್ಲಿರುತ್ತವೆ. ಮಸಾಜ್ ಮಾಡುವಾಗ ಸರಿಯಾದ ಕ್ರಮವನ್ನು ಅನುಸರಿಸುವುದು ಅಗತ್ಯ. ಇದರಿಂದ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ನೋವು ಸಹಾ ಕಡಿಮೆಯಾಗುತ್ತದೆ.
ಯೋಗಾಭ್ಯಾಸ
ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗಾಭ್ಯಾಸ ಇಂದು ವಿಶ್ವದ ಮನ್ನಣೆ ಪಡೆಯುತ್ತಾ ಸಾಗಿದೆ. ಇದರ ಸರಿಯಾದ ಅನುಸರಣೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಸುತ್ತದೆ. ಮೊಣಕಾಲುಗಳಿಗೆ ಹೆಚ್ಚಿನ ಶ್ರಮ ನೀಡದೇ ಸುಲಭವಾಗಿ ಮಡಚಲು ನೆರವಾಗುವ ಕೆಲವು ಆಸನಗಳಿದ್ದು ಇವುಗಳನ್ನು ನಿತ್ಯವೂ ಅನುಸರಿಸುವ ಮೂಲಕ ನೋವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಕೊಬ್ಬರಿ ಎಣ್ಣೆ ಹಚ್ಚಿ
ತೆಂಗಿನ ಮರದ ಯಾವುದೇ ಭಾಗ ವ್ಯರ್ಥವಲ್ಲ. ಒಣಕೊಬ್ಬರಿಯಿಂದ ಹಿಂಡಿ ತೆಗೆದ ಕೊಬ್ಬರಿ ಎಣ್ಣೆ ಸಹಾ ಒಂದು ಅತ್ಯುತ್ತಮ ಅವಶ್ಯಕ ತೈಲವಾಗಿದ್ದು ಹಲವಾರು ಕಾಯಿಲೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮಂಡಿನೋವಿದ್ದಾಗ ಹೀಗೆ ಮಾಡಿ: ಒಂದು ಕಪ್ ನಷ್ಟು ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗಾಗಿಸಿ ಈ ಎಣ್ಣೆಯಿಂದ ಮೊಣಕಾಲುಗಳನ್ನು ನಯವಾಗಿ, ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ. ಇದರಿಂದ ನೋವು ಕಡಿಮೆಯಾಗುವುದು ಮಾತ್ರವಲ್ಲ, ರಕ್ತ ಪರಿಚಲನೆಯೂ ಉತ್ತಮಗೊಂಡು ಶೀಘ್ರವೇ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ.
ಕಾಡು ಓಮ (Bathua Leaves (Fat-Hen)
ಕಾಡು ಓಮ (Chenopodium album)ದ ಗಿಡದ ಕೆಲವು ಎಲೆಗಳನ್ನು ಚೆನ್ನಾಗಿ ಅರೆದು ಇದನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ನಿತ್ಯವೂ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದರಿಂದ ನೋವಿನಿಂದ ಉರಿಯುತ್ತಿದ್ದ ಮಂಡಿಗಳನ್ನು ಶೀಘ್ರವೇ ಮೊದಲಿನಂತಾಗಿಸಬಹುದು.
ಅರಿಶಿನ ಬೆರೆಸಿದ ಹಾಲು
ಭಾರತೀಯ ಅಡುಗೆಗಳಲ್ಲಿ ಅರಿಶಿನವನ್ನು ಬಳಸದ ಗೃಹಿಣಿಯೇ ಇಲ್ಲ. ಇದರಲ್ಲಿ ಹಲವಾರು ವ್ಯಾಧಿಗಳಿಗೆ ಔಷಧವಿದ್ದು ಬಹುತೇಕ ಎಲ್ಲಾ ತೊಂದರೆಗಳನ್ನು ಗುಣಪಡಿಸಲು ಬಳಕೆಯಾಗುತ್ತದೆ. ಇದನ್ನು ಸೇವಿಸುವ ಮೂಲಕ ದೇಹದ ಒಳಗಿನಿಂದಲೂ ಹೊರಭಾಗದಲ್ಲಿ ಹಚ್ಚುವ ಮೂಲಕ ಹೊರಗಿನಿಂದಲೂ ದುಪ್ಪಟ್ಟು ಆರೈಕೆ ದೊರಕುವ ಮೂಲಕ ಶೀಘ್ರವೇ ನೋವು ಕಡಿಮೆಯಾಗುತ್ತದೆ. ನಿತ್ಯವೂ ಒಂದು ಲೋಟ ಹಾಲಿನಲ್ಲಿ ಒಂದು ದೊಡ್ದ ಚಮಚದಷ್ಟು ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ಪರಿಹಾರವನ್ನು ಪಡೆಯಬಹುದು.
ಮೆಂತೆಕಾಳುಗಳು
ಅರಿಶಿನದಂತೆಯೇ ಮೆಂತೆಯಲ್ಲಿಯೂ ಹಲವಾರು ಔಷಧೀಯ ಗುಣಗಳಿವೆ. ಇದಕ್ಕಾಗಿ ಕೆಲವು ದೊಡ್ಡ ಚಮಚದಷ್ಟು ಮೆಂತೆಕಾಳುಗಳನ್ನು ಚಿಕ್ಕ ಉರಿಯಲ್ಲಿ ಹುರಿದು ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಹೊರತೆಗೆದು ಕುಟ್ಟಿ ಪುಡಿಮಾಡಿ. ಈ ಪುಡಿಯನ್ನು ಕೊಂಚ ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳುವ ಮೂಲಕ ತಕ್ಷಣವೇ ನೋವು ಕಡಿಮೆಯಾಗುತ್ತದೆ.
ಅರಿಶಿನ ಮತ್ತು ಶುಂಠಿಯ ಟೀ
ಇವೆರಡರಲ್ಲಿಯೂ ಪ್ರಬಲವಾದ ಉರಿಯೂತ ನಿವಾರಕ ಗುಣಗಳಿದ್ದು ಇವೆರಡನ್ನೂ ಜೊತೆಯಾಗಿ ಸೇವಿಸಿದಾಗ ದೇಹದ ಯಾವುದೇ ನೋವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಸಂಧಿವಾತದ ತೊಂದರೆ ಇದ್ದವರಿಗೆ ಈ ಜೋಡಿ ಅತ್ಯುತ್ತಮ ಪರಿಹಾರವಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ನೋವು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಮೂರು ಕಪ್ ನಷ್ಟು ನೀರನ್ನು ಕುದಿಸಿ ಇದಕ್ಕೆ ಕೊಂಚ ಅರಿಶಿನ ಹಾಗೂ ಹಸಿಶುಂಠಿಗಳನ್ನು ಬೆರೆಸಿ ಕೊಂಚ ಹೊತ್ತಿನ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಕುಡಿಯಿರಿ. ನಿತ್ಯವೂ ಈ ಪೇಯವನ್ನು ಸೇವಿಸುವ ಮೂಲಕ ಶೀಘ್ರವೇ ಮಂಡಿನೋವು ಇಲ್ಲವಾಗುತ್ತದೆ.
ಎಪ್ಸಂ ಉಪ್ಪಿನ ಪಟ್ಟಿ ಮಾಡಿ
ಒಂದು ವೇಳೆ ಮಂಡಿನೋವಿನಿಂದ ಮೊಣಕಾಲಿನ ಭಾಗ ಊದಿಕೊಂಡಿದ್ದರೆ ಈ ಭಾಗದಲ್ಲಿ ಉಪ್ಪುನೀರಿನ ಶಾಖ ನೀಡುವುದರಿಂದ ಉತ್ತಮ ಪರಿಹಾರ ದೊರಕುತ್ತದೆ. ಇದೇ ರೀತಿಯಾಗಿ ಉಪ್ಪಿನ ಬದಲು ಎಪ್ಸಂ ಉಪ್ಪು (Epsom salt) ಬಳಕೆಯಾದರೆ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಮೆಗ್ನೀಶಿಯಂ ಊತವನ್ನು ಶೀಘ್ರವಾಗಿ ಕಡಿಮೆಯಾಗಲು ನೆರವಾಗುತ್ತದೆ. ಉತ್ತಮ ಪರಿಹಾರ ಪಡೆಯಲು ಒಂದು ಬಟ್ಟೆಯನ್ನು ಎಪ್ಸಂ ಉಪ್ಪನ್ನು ಕರಗಿಸಿರುವ ನೀರಿನಲ್ಲಿ ಮುಳುಗಿಸಿ ನೋವಿರುವ ಭಾಗದ ಮೇಲೆ ಹದಿನೈದರಿಂದ ಇಪ್ಪತ್ತು ನಿಮಿಷ ಇರಿಸಿ.
ಖರ್ಜೂರ
ಖರ್ಜೂರಗಳಲ್ಲಿ ವಿಟಮಿನ್ ಎ, ಬಿ.ಹಾಗೂ ಸಿ ಅತಿ ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿ ಕಬ್ಬಿಣ ಮತ್ತು ಗಂಧಗಳಂತಹ ಖನಿಜಗಳೂ ಇವೆ. ಆದ್ದರಿಂದ ಸಂಧಿವಾತವಿದ್ದ ಸಮಯದಲ್ಲಿ ಸೇವಿಸಲು ಖರ್ಜೂರ ಉತ್ತಮ ಆಹಾರವಾಗಿದ್ದು ನಿಯಮಿತ ಸೇವನೆಯಿಂದ ಶೀಘ್ರವೇ ನೋವು ಹಾಗೂ ಈ ಮೂಲಕ ಎದುರಾಗಿದ್ದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಪುದೀನಾ ಮತ್ತು ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯಲ್ಲಿರುವ ನೋವು ನಿವಾರಕ ಗುಣ ಮಂಡಿನೋವು ಕಡಿಮೆಗೊಳಿಸಲೂ ನೆರವಾಗುತ್ತದೆ. ಸಂಧಿವಾತದಿಂದ ಕಾಲು ಮಡಚಲೂ ಆಗದಷ್ಟು ತೊಂದರೆ ಇರುವ ರೋಗಿಗಳಿಗೆ ನೀಲಗಿರಿ ಎಣ್ಣೆ ಅತ್ಯುತ್ತಮವಾಗಿದೆ. ಆದರೆ ಈ ಎಣ್ಣೆ ಕೊಂಚ ಉರಿ ತರಿಸುವುದರಿಂದ ಕೊಂಚ ಪುದಿನಾ ಎಣ್ಣೆಯನ್ನು ಬೆರೆಸಿ ಹಚ್ಚಿಕೊಳ್ಳುವ ಮೂಲಕ ತಣ್ಣನೆಯ ಅನುಭವವಾಗುತ್ತದೆ ಹಾಗೂ ನೋವು ಸಹಾ ಶೀಘ್ರವಾಗಿ ಕಡಿಮೆಯಾಗುತ್ತದೆ.
ತಣ್ಣನೆಯ ವಿಧಾನದಿಂದ ಹಿಂಡಲಾದ ಆಲಿವ್ ಎಣ್ಣೆ
ಆಲಿವ್ ಎಣ್ಣೆ ಸಹಾ ನೋವಿಗೆ ಶಮನ ನೀಡುವ ಹಾಗೂ ಕೀಲುಗಳಿಗೆ ಜಾರುಕ ಗುಣವನ್ನು ನೀಡುವ ಕ್ಷಮತೆ ಹೊಂದಿದೆ. ಇದರಲ್ಲಿರುವ ಓಲಿಯೋಕ್ಯಾಂಥಲ್ (oleocanthal) ಎಂಬ ಪೋಷಕಾಂಶ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ನಿತ್ಯವೂ ಮೊಣಕಾಲುಗಳನ್ನು ತಣ್ಣನೆಯ ವಿಧಾನದಿಂದ ಹಿಂಡಲಾದ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವ ಮೂಲಕ ನೋವು ಶೀಘ್ರವೇ ಕಡಿಮೆಯಾಗುತ್ತದೆ.
ತೂಕ ನಿಯಂತ್ರಣ
ನಿಮ್ಮ ಮಂಡಿ ನೋವಿಗೆ ನೀವು ತೆಗೆದುಕೊಳ್ಳಬೇಕಾದ ಕ್ರಮವೆಂದರೆ ತೂಕ ಇಳಿಸುವುದಾಗಿದೆ. ಅತಿಯಾದ ತೂಕ ಮಂಡಿಗಳ ಮೇಲೆ ಒತ್ತಡ ಹೇರುವುದರಿಂದ ಮಂಡಿ ನೋವು ಉದ್ಭವಿಸುತ್ತದೆ. ಆದ್ದರಿಂದ ತೂಕವನ್ನು ಇಳಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.
ಶುಂಠಿ
ಇದರಲ್ಲಿ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳು ಇರುವುದರಿಂದ ಇವು ಮಂಡಿನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಶುಂಠಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನೋವು ಇರುವ ಭಾಗದಲ್ಲಿ ಲೇಪಿಸಿ, ಮಸಾಜ್ ಮಾಡಿ. ನಿಮಗೆ ಬೇಕಾದಲ್ಲಿ ಶುಂಠಿ ಪೇಸ್ಟ್ ಸಹ ಲೇಪಿಸಬಹುದು.