Latest Updates
-
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಇವನಿಗೆ ಏನೋ ಶಿಕ್ಷೆ ಆಯಿತು, ಆದರೆ ಪಾಪ ಇವರ ಗೋಳು ಕೇಳುವವರು ಯಾರು?
ಸ್ವತಃ ತನ್ನನ್ನು ತಾನೇ ದೇವಮಾನವನೆಂದು ಘೋಷಿಸಿಕೊಂಡ ಕಪಟ ಬಾಬಾ ಗುರ್ಮೀತ್ ರಾಮ್ ರಹೀಮ್ ರನ್ನು ಸುಮಾರು ಹದಿನೈದು ವರ್ಷಗಳ ಹಿಂದೆ ನಡೆಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಕಡೆಗೂ ತಪ್ಪಿತಸ್ಥನೆಂದು ಘೋಷಿಸಿ ನ್ಯಾಯಾಲಯ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ಈ ಪ್ರಕರಣ ಇತ್ಯರ್ಥಗೊಳ್ಳಲು ಇಷ್ಟು ತಡವಾಗಲು ಭಾರೀ ರಾಜಕೀಯ ಒತ್ತಡ ಒಂದು ಕಾರಣವಾದರೆ ತಮ್ಮ ಹದಿಹರೆಯದ ಹೆಣ್ಣುಮಕ್ಕಳನ್ನು ಹಾಗೂ ವಯಸ್ಕ ಮಹಿಳೆಯರನ್ನು ಅವರ ಪಾಲಕರೇ ಸ್ವತಃ ಈ ಆಶ್ರಮದಲ್ಲಿ ಬಿಟ್ಟು ಬರುತ್ತಿದ್ದುದು ಇನ್ನೊಂದು ಕಾರಣ.
ಈ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಯುವತಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದ್ದರೂ ಈ ಬಾಬಾಗಳ ರಾಜಕೀಯ ಪ್ರಭಾವದಿಂದ ಯಾರೂ ಇವರ ಕೂದಲನ್ನೂ ಕೊಂಕಿಸಲು ಸಾಧ್ಯವಾಗಲಾರದು ಎಂಬ ಭಾವನೆ ದಟ್ಟವಾಗಿತ್ತು. ಈ ಅತ್ಯಾಚಾರಕ್ಕೆ ಒಳಗಾದ ಯುವತಿಯರ ಮಾನಸಿಕ ಸ್ಥಿತಿಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ದೇಹಕ್ಕಿಂತಲೂ ಮನಸ್ಸಿನ ಮೇಲಾದ ಆಘಾತ ಕೆಲವಾರು ವರ್ಷಗಳವರೆಗೆ ಬಾಧಿಸಬಹುದು. ಅದರಲ್ಲೂ ರಾಜಕೀಯ ರಕ್ಷಣೆಯಿಂದ ತಾನೇನು ಮಾಡಿದರೂ ಈ ದೇಶದಲ್ಲಿ ಏನೂ ಆಗದು ಎಂದು ಎದೆ ತಟ್ಟಿಕೊಂಡು ತಮ್ಮ ಅತ್ಯಾಚಾರ ಅನಾಚಾರಗಳನ್ನು ರಾಜಾರೋಷವಾಗಿ ಎಸಗುವ ಈ ಕಪಟ ಬಾಬಾಗಳ ದೌರ್ಜನ್ಯಕ್ಕೆ ತುತ್ತಾದವರಿಗೆ ಯಾವುದೇ ನೆರವು, ರಕ್ಷಣೆ ಅಥವಾ ಪರಿಹಾರ ದೊರಕುವುದೇ ಇಲ್ಲ ಎಂಬ ಹತಾಶೆ ಇವರ ಜೀವನವನ್ನೇ ನರಕವಾಗಿಸಿಬಿಡುತ್ತದೆ. ಇವರಿಗೆ ಸಮಾಜದ ಮೇಲೆಯೇ ಜುಗುಪ್ಸೆ ಮೂಡುತ್ತದೆ. ಬನ್ನಿ, ಈ ನತದೃಷ್ಟರು ಎದುರಿಸುವ ಮಾನಸಿಕ ತುಮುಲಗಳ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ...

ಖಿನ್ನತೆ
ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಪ್ರಮುಖ ಲಕ್ಷಣಗಳೆಂದರೆ ಬಹುಕಾಲದವರೆಗೆ ಖಿನ್ನತೆಯನ್ನು ಅನುಭವಿಸುವುದು, ಹತಾಷೆ, ತನ್ನಿಂದೇನೂ ಆಗದು ಎಂಬ ತಪ್ಪಿತಸ್ಥ ಭಾವನೆ, ವಿವರಿಸಲು ಸಾಧ್ಯವಾಗದ ಅಳು, ಹಸಿವಿನಲ್ಲಿ ಬದಲಾವಣೆ, ಶಕ್ತಿ ಉಡುಗುವುದು, ತೂಕದಲ್ಲಿ ಅತಿಯಾದ ಹೆಚ್ಚಳ ಅಥವಾ ಇಳಿಕೆ ಮೊದಲಾದವು ಕಂಡುಬರುತ್ತವೆ.

ಸಮಾಜದಿಂದ ವಿಮುಖತೆ
ಈ ವ್ಯಕ್ತಿಗಳು ಸಮಾಜದೊಂದಿಗೆ ಹೆಚ್ಚೂ ಕಡಿಮೆ ಸಂಪರ್ಕವನ್ನು ಕಡಿದುಕೊಂಡಿರುತ್ತಾರೆ ಹಾಗೂ ಅತ್ಯಂತ ಕಡಿಮೆ ಜನರೊಂದಿಗೆ ವ್ಯವಹರಿಸುತ್ತಾರೆ. ಇವರು ಸಾಮಾನ್ಯವಾಗಿ ಹಗಲುಗನಸು ಕಾಣುತ್ತಾ ವಾಸ್ತವಜಗತ್ತಿನಲ್ಲಿ ಇಲ್ಲದೇ ಇರುವಂತೆ ವರ್ತಿಸುತ್ತಾರೆ. ಇವರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಗಮನ ಹರಿಸಲು ವಿಫಲರಾಗುತ್ತಾರೆ. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗಳಿಗೆ ಎದುರಾಗುವ ತೊಂದರೆಗಳಲ್ಲಿ ಇದು ಪ್ರಮುಖವಾಗಿದೆ.

ಲೈಂಗಿಕ ರೋಗಗಳು
ಲೈಂಗಿಕ ಸಂಪರ್ಕದಿಂದ ಆವರಿಸಬಹುದಾದ ಯಾವುದೇ ಲೈಂಗಿಕ ರೋಗಗಳು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕಿನಿಂದ ವ್ಯಕ್ತಿಯಿಂದ ವ್ಯಕ್ತಿಗೆ ದಾಟುತ್ತದೆ. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ದೈಹಿಕವಾಗಿ ಬಳಲುವ ಕಾಯಿಲೆಗಳಲ್ಲಿ ಇದು ಪ್ರಮುಖವಾಗಿದೆ.

ಊಟದಲ್ಲಿ ಏರುಪೇರು
ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ದೈಹಿಕವಾಗಿ ಕೆಲವಾರು ಬಗೆಯ ತೊಂದರೆಗಳನ್ನು ಅನುಭವಿಸುತ್ತಾರೆ. ಇದರಲ್ಲಿ ದೇಹದ ಸಂವೇದನೆ ಹಾಗೂ ಭಾವನೆಗಳ ನಿಯಂತ್ರಣದಲ್ಲಿ ಏರುಪೇರು ಆಗಿರುವುದು ಪ್ರಮುಖವಾಗಿದೆ. ಇವರು ಸೂಕ್ತ ಸಮಯದಲ್ಲಿ ಸೂಕ್ತ ಪ್ರಮಾಣದ ಆಹಾರ ಸೇವಿಸಲು ವಿಫಲರಾಗುತ್ತಾರೆ ಅಥವಾ ಆಹಾರದ ಪ್ರಮಾಣ ವಿಪರೀತ ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಪರಿಣಾಮವಾಗಿ ಆರೋಗ್ಯ ಕೆಡುತ್ತದೆ ಹಾಗೂ ತೂಕದಲ್ಲಿ ಏರಿಕೆ ಅಥವಾ ಇಳಿಕೆ ಕಂಡುಬರುತ್ತದೆ.

ಅಸಮರ್ಪಕ ನಿದ್ದೆ
ಅತ್ಯಾಚಾರದ ಪ್ರಮುಖ ಪರಿಣಾಮವನ್ನು ವ್ಯಕ್ತಿಯ ನಿದ್ದೆಯಿಂದ ಅಳೆಯಬಹುದು. ಈ ವ್ಯಕ್ತಿಗಳಿಗೆ ಸುಲಭವಾಗಿ ನಿದ್ದೆ ಆವರಿಸುವುದಿಲ್ಲ ಹಾಗೂ ನಿದ್ದೆ ಆವರಿಸಿದರೆ ಸುಲಭವಗಿ ಎಚ್ಚರಾಗುವುದೂ ಇಲ್ಲ. ಇವರು ಸಾಮಾನ್ಯ ಅವಧಿಗಿಂತಲೂ ತೀರಾ ಕಡಿಮೆ ಅಥವಾ ತೀರಾ ಹೆಚ್ಚು ಘಂಟೆಗಳ ಕಾಲ ನಿದ್ರಿಸುತ್ತಾರೆ. ಅತ್ಯಾಚಾರದ ಘೋರ ಪರಿಣಾಮಗಳಲ್ಲಿ ಇದು ಪ್ರಮುಖವಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ
ಈ ವ್ಯಕ್ತಿಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಮಾನಸಿಕ ಚಿಕಿತ್ಸಕರಲ್ಲಿ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಅಗತ್ಯವಿದ್ದರೆ ಇವರನ್ನು ಆಪ್ತಸಲಹೆ ನೀಡುವ ತರಗತಿಗಳಿಗೆ ಸೇರಿಸಬೇಕು. ತಜ್ಞರು ನೀಡುವ ಸಲಹೆಗಳು ಮತ್ತು ಚಿಕಿತ್ಸೆಯಿಂದ ಇವರ ಯೋಚನಾಲಹರಿ ಬದಲಾಗುತ್ತದೆ ಹಾಗೂ ಶೀಘ್ರವೇ ಗುಣಮುಖರಾಗಿ ಮನೆಗೆ ಮರಳಲು ಸಾಧ್ಯವಾಗುತ್ತದೆ. ಇಲ್ಲದೇ ಇದ್ದಲ್ಲಿ ಇವರ ಮಾನಸಿಕ ಸ್ಥಿತಿ ದಿನೇ ದಿನೇ ಹದಗೆಡುತ್ತಾ ಇವರ ಚಿಂತನೆಗಳು ಆತ್ಮಹತ್ಯೆಗೆ ಪ್ರಚೋದಿಸುತ್ತವೆ ಅಥವಾ ಉನ್ಮತ್ತ ಭಾವನೆಯಿಂದ ಹತ್ಯೆಯಿಂದ ಸೇಡು ತೀರಿಸಿಕೊಳ್ಳುವ ಬಗ್ಗೆಯೂ ಯೋಚಿಸಬಹುದು. (ಇದೇ ಘಟನೆಯನ್ನು ಆಧರಿಸಿದ ಹಿಂದಿ ಚಲನಚಿತ್ರ 'ಝಖ್ಮೀ ಔರತ್' ಅನ್ನು ಇಲ್ಲಿ ಸ್ಮರಿಸಬಹುದು).



Click it and Unblock the Notifications











