ಗಣಪನಿಗೆ ಪ್ರಿಯವಾದ ಗರಿಕೆ ಸ್ವಾಹಾ

By * ಮನಸ್ವಿನಿ, ನಾರಾವಿ

Garike Grass benefits
ದೂರ್ವಾಯುಗ್ಮಂ ಪೂಜಾಯಾಮಿ... ಅನೆಮುಖದ ಪ್ರಥಮ ಪೂಜ್ಯ ಗಣಪನಿಗೆ ಗರಿಕೆ ಅತಿಪ್ರಿಯವಾದ ಆಹಾರ. ಇತ್ತೀಚೆಗೆ ನಗರದ ದೇಗುಲದಲ್ಲಿ ಅವಿರತವಾಗಿ ನಡೆದುಕೊಂಡಿರುವ ಎರಡು ಪೂಜೆಗಳೆಂದರೆ ಒಂದು ಹುಣ್ಣಿಮೆಯಂದು ಶ್ರೀಸತ್ಯನಾರಾಯಣ ಪೂಜೆ ಇನ್ನೊಂದು ಚೌತಿಯಂದು ಸಂಕಷ್ಟಹರ ಚತುರ್ಥಿಪೂಜೆ.

ಭಕ್ತಾದಿಗಳಲ್ಲಿ ಅದರಲ್ಲೂ ಯುವಕ ಯುವತಿಯರಿಗೆ ಗಣೇಶನ ಮೇಲೆ ಭಕ್ತಿ, ಪ್ರೀತಿ ಹೆಚ್ಚು. ಕೆಲಸ, ಪ್ರೀತಿ, ದುಡ್ದು ಹೀಗೆ ಯಾವುದೇ ಬೇಕೆನಿಸಿದರೂ ಮೊದಲ ಅಪ್ಲಿಕೇಷನ್ ಗಣೇಶನಿಗೆ ತಲುಪುತ್ತದೆ. ಗಣೇಶನಿಗೆ ಅರ್ಜಿ ಹಾಕಲು ಹೂವು ಹಣ್ಣು ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ. ಏಕದಂತನಿಗೆ ಗರಿಕೆ ಅಥವಾ ತೆಂಗಿನಕಾಯಿ ನೀಡಿದರೆ ಮಾತ್ರ ಆತ ಒಲಿಯುತ್ತಾನೆ.

ಸೋ, ಚೌತಿ ದಿನದಂದು ಗರಿಕೆಗಾಗಿ ಯುವಕ, ಯುವತಿಯರು ಹುಡುಕಾಡುವುದು ಸಾಮಾನ್ಯವಾಗಿದೆ. ಕೆಲವರು ಗರಿಕೆ ಗುರುತಿಸಲು ಕಷ್ಟವೆಂದೋ ಅಥವಾ ನಮಗ್ಯಾಕೆ ಕಷ್ಟ ಎಂದೋ ಹೂವಾಡಿಗರಿಗೆ ಗರಿಕೆ ತಂದು ಕೊಡಲು ಹೇಳಿಬಿಡುತ್ತಾರೆ. 21 ಗರಿಕೆ ಕಟ್ಟುಗೆ ಇಂತಿಷ್ಟು ದುಡ್ಡು ಎಂದು ನೀಡಿದರೆ ಆಯಿತು. ನಂತರ ಆ ಗರಿಕೆ ಗಣಪನ ಅಲಂಕಾರಕ್ಕೆ ಮೀಸಲು.

ಇಂತಿರ್ಪ ಗರಿಕೆ ಚರಿತ್ರೆಯ ಮುಖ್ಯಭಾಗವಾದ ಗರಿಕೆ ಆರೋಗ್ಯಕ್ಕೆ ಉಪಯೋಗ ಹೇಗೆ ಎಂಬುದನ್ನು ನೋಡೋಣ. ಮನುಷ್ಯ ಕಾಲಿರಿಸದಿದ್ದರೆ, ಎಲ್ಲ ಕಡೆಯಲ್ಲಿ ಸುಲಭವಾಗಿ ಬೆಳೆಯುವ ಗರಿಕೆ ಚಿರಪರಿಚಿತವಾದ ಹುಲ್ಲು ಜಾತಿಯ ಸಸ್ಯ.ಹೆಚ್ಚು ಆರೈಕೆ ಬೇಡದೆ ತನ್ನಷ್ಟಕ್ಕೆ ತಾನು ಬೆಳೆಯುವ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕ. ಗರಿಕೆಯನ್ನು ಸಂಸ್ಕೃತದಲ್ಲಿ ಅನಂತಾ, ಶತಪರ್ವಿಕಾ, ಸಹಸ್ರವೀರ್ಯಾ, ಶತವಲ್ಲಿ ಎನ್ನುತ್ತಾರೆ.

ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆ ಯಾಗುತ್ತದೆ.

ಉಪಯೋಗಗಳು:
* ಅರಿಶಿನ ಸುಣ್ಣ ಮತ್ತು ಗರಿಕೆ ಹುಲ್ಲನ್ನು ಚೆನ್ನಾಗಿ ಹಿಚುಕಿ ಉಗುರು ಸುತ್ತಿಗೆ ಪಟ್ಟು ಹಾಕಿದರೆ ಗುಣವಾಗುತ್ತದೆ.

* ಒಂದು ಚಮಚದಷ್ಟು ಸಕ್ಕರೆ ಪಾಕಕ್ಕೆ ಒಂದು ಚಮಚದಷ್ಟು ಗರಿಕೆ ಹುಲ್ಲಿನ ರಸವನ್ನು ಬೆರೆಸಿ 3 ಬಾರಿ ಕುಡಿದರೆ ಶೀತಭೇದಿ ಗುಣವಾಗುತ್ತದೆ.

* ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸಲು, ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ಒಂದು ಬಟ್ಟಲಷ್ಟು ನೀರಿನ ಜೊತೆ ಬೆರೆಸಿ ಮಿಕ್ಸಿಗೆ ಹಾಕಿ ಅರೆಯಿರಿ. ನಂತರ ರಸವನ್ನು ಸೋಸಿಕೊಂಡು ಕುಡಿಯಿರಿ.ಇದೇ ರೀತಿ ಸುಮಾರು 40-45 ದಿನಗಳ ಕಾಲ ಕುಡಿದರೆ ರಕ್ತ ಶುದ್ಧೀಕರಣಗೊಂಡು ರೋಗಗಳು ದೂರಾಗುತ್ತವೆ.

* ಮೈಕೈ ನೋವು ನಿವಾರಣೆಗೆ, ತೊಳೆದ ಗರಿಕೆ ಹುಲ್ಲನ್ನು ಎರಡು ಲೋಟ ಪ್ರಮಾಣದ ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿರಿ. ಕಾದ ನೀರನ್ನು ಸ್ನಾನದ ನೀರಿನೊಡನೆ ಸೇರಿಸಿ ಸ್ನಾನ ಮಾಡಿ.

* ಶೀತ ಹೋಗಲಾಡಿಸಲು, ಒಂದು ಹಿಡಿಯಷ್ಟು ತುಳಸಿ ಮತ್ತು ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ನೀರಿಗೆ ಹಾಕಿ ಕಾಯಿಸಿರಿ. ರಾತ್ರಿ ಕಾಯಿಸಿಟ್ಟ ನೀರನ್ನು ಬೆಳಗ್ಗೆ ಸೋಸಿ 3 ಬಾರಿ ಕುಡಿದರೆ ಶೀತ ಮಾಯ. ಕೆಲವೊಮ್ಮೆ ಗರಿಕೆ ರಸವನ್ನು ಮೂಗಿನ ಹೊಳ್ಳೆಗೆ ನೇರವಾಗಿ ಬಿಡುವುದುಂಟು. ಆದರೆ, ಸ್ವಯಂಚಿಕಿತ್ಸೆ ಮಾಡಲು ಮುಂದಾಗಿ ರಸದ ಪ್ರಮಾಣ ಹೆಚ್ಚು ಕಮ್ಮಿಯಾದರೆ ಅಪಾಯ.

* ಬಿದ್ದ ಗಾಯಕ್ಕೆ ಮುಲಾಮು : ಗರಿಕೆ ಹುಲ್ಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಅರೆದಾಗ ಬರುವ ರಸವನ್ನು ಅಥವಾ ಅಥವಾ ನುಣ್ಣಗಾದ ಗರಿಕೆ ಪೇಸ್ಟನ್ನು ಬಿದ್ದ ಗಾಯಕ್ಕೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ.

* 1-2 ಚಮಚ ಶುಚಿಗೊಳಿಸಿದ ಗರಿಕೆ ರಸವನ್ನು ಸಮಪ್ರಮಾಣದ ಜೇನುತುಪ್ಪ ಅಥವಾ ಸಕ್ಕರೆ ಜತೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ರಕ್ತಸ್ರಾವ, ಮೊಳೆರೋಗ, ಇತರ ಉರಿಗಳನ್ನು ತಡೆಗಟ್ಟಬಹುದು.

* ಆಸ್ತಮಾ, ಅಲರ್ಜಿ ಮುಂತಾದ ರೋಗವುಳ್ಳವರು ಮುಂಜಾನೆ 6 ರ ಸುಮಾರಿಗೆ 5-6 ಟೀ ಚಮಚ ಗರಿಕೆ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion