Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
Fathers Day 2023 : ಒರ್ವ ಉತ್ತಮ ತಂದೆಯಾಗಬೇಕಾದರೆ ನಿಮ್ಮಲ್ಲಿ ಈ ಗುಣಗಳು ಇರಲೇಬೇಕು!
ಮಕ್ಕಳನ್ನು ಹುಟ್ಟಿಸಿದ ಮಾತ್ರಕ್ಕೆ ಆತ ಒಬ್ಬ ಒಳ್ಳೆಯ ತಂದೆಯಾಗೋದಕ್ಕೆ ಸಾಧ್ಯವಿಲ್ಲ. ಕುಟುಂಬ ಹಾಗೂ ಮಕ್ಕಳಿಗಾಗಿ ಆತ ಕೆಲವೊಂದು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಆಗ ಆತ ಒಳ್ಳೆಯ ತಂದೆ ಅನ್ನಿಸಿಕೊಳ್ಳುತ್ತಾನೆ. ಹಾಗಾದ್ರೆ ಒರ್ವ ಒಳ್ಳೆಯ ತಂದೆ ಎನಿಸಿಕೊಳ್ಳಲು ಆತನಲ್ಲಿ ಯಾವ ಗುಣಗಳು ಇರಬೇಕು? ಅವನು ನಿಭಾಯಿಸಬೇಕಾದ ಕರ್ತವ್ಯಗಳು ಯಾವುದು ಅನ್ನೋದನ್ನು ತಿಳಿಯೋಣ.
ಒಂದು ಅಚ್ಚುಕಟ್ಟಾದ ಸುಂದರ ಸುಖೀ ಸಂಸಾರದ ನಿರ್ವಹಣೆಯಲ್ಲಿ ತಾಯಿಯ ಪಾತ್ರದಂತೆ ತಂದೆಯ ಪಾತ್ರವೂ ಬಹಳ ಮುಖ್ಯ. ಸಪ್ತಪದಿ ತುಳಿಯುವಾಗ ಮಾಡಿದ ಪ್ರತಿಜ್ಞೆಗಳಂತೆ ಕುಟುಂಬ ನಿರ್ವಹಣೆಯಲ್ಲಿ ಇಬ್ಬರೂ ಸಮಾನವಾದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯಬೇಕಾಗುತ್ತದೆ. ಆದರೂ ಮನೆಯ ಮುಖ್ಯ ಸದಸ್ಯ ಎನಿಸಿಕೊಂಡ ತಂದೆಗೆ ಜವಾಬ್ದಾರಿಗಳು ಸ್ವಲ್ಪ ಜಾಸ್ತಿ ಇರುತ್ತವೆ.

ಹೆಂಡತಿಗೆ ಕೇವಲ ಮನೆಯ ನಿರ್ವಹಣೆ ಮುಖ್ಯ ಕೆಲಸವಾದರೆ ತಂದೆಗೆ ಅಥವಾ ಗಂಡನಿಗೆ ತನ್ನ ದುಡಿಮೆಯ ಜೀವನದ ಜೊತೆಗೆ ತನ್ನ ಸಂಸಾರವನ್ನೂ ಸಮತೋಲನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಒಬ್ಬ ವ್ಯಕ್ತಿಗೆ ತನ್ನ ಜೀವನದ ಪ್ರತಿಯೊಂದು ಸಂದರ್ಭವೂ ಮೆಟ್ಟಿಲುಗಳಿದ್ದಂತೆ. ಮೊದಲು ಯೌವನ, ನಂತರ ಮದುವೆ, ಮಕ್ಕಳು ಹೀಗೆ ಪ್ರತಿ ಹಂತದಲ್ಲೂ ಒಂದೊಂದು ಜವಾಬ್ದಾರಿ ಹೆಚ್ಚಾಗುತ್ತಾ ಹೋಗುತ್ತದೆ.
ಜೊತೆಗೆ ಜೀವನದಲ್ಲಿ ಎದುರಾಗುವ ಹಲವಾರು ಸಂದರ್ಭಗಳು ಕೆಲವೊಮ್ಮೆ ಒಳ್ಳೆಯ ಪಾಠ ಕಲಿಸುತ್ತವೆ. ಅದಕ್ಕೇ ತಿಳಿದವರು ಹೇಳಿರುವುದು - ಸಂಸಾರ ಎನ್ನುವುದು ಒಂದು ಸಾಗರ ಇದ್ದಂತೆ. ಅದರಲ್ಲಿ ಈಜಿ ದಡ ಸೇರಿದವನು ಮಾತ್ರ ಒಬ್ಬ ನಿಜವಾದ ಸಮರ್ಥ ವ್ಯಕ್ತಿ ಅನ್ನಿಸಿಕೊಳ್ಳಬಲ್ಲ ಎಂದು. ಇದರ ಅರ್ಥ ಜೀವನದಲ್ಲಿ ಒಬ್ಬ ವ್ಯಕ್ತಿ ಕಲಿಯಬೇಕಾದದ್ದು ಸಾಕಷ್ಟಿದೆ. ಅಷ್ಟೇ ಕಲಿಸಬೇಕಾದದ್ದೂ ಇರುತ್ತದೆ.
ಕುಟುಂಬ ನಿರ್ವಹಣೆಯ ವಿಚಾರ ಬಂದಾಗ ಮನೆಯಲ್ಲಿ ತಂದೆ ಮುಖ್ಯವಾಗುತ್ತಾನೆ. ತಾನು ಕಷ್ಟ ಪಟ್ಟು ಪ್ರತಿ ದಿನ ದುಡಿಯುವ ಹಣದಲ್ಲಿ ನಿಯಮಿತವಾಗಿ ಖರ್ಚು ಮಾಡಿ ಅಲ್ಪ ಸ್ವಲ್ಪ ಕೂಡಿಟ್ಟು ತನ್ನ ಕುಟುಂಬವನ್ನು ಯಾವುದೇ ಹಣಕಾಸಿನ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವ ಪಾತ್ರ ಆತನ ಜವಾಬ್ದಾರಿ ಆಗಿರುತ್ತದೆ. ಈಗಂತೂ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಸಮಾನವಾಗಿ ದುಡಿಯುತ್ತಾರೆ. ಹಾಗಾಗಿ ಹಣಕಾಸಿನ ತೊಂದರೆ ಅಷ್ಟಾಗಿ ಕಾಡುವುದಿಲ್ಲ. ಆದರೆ ಸಂಸಾರ ನಿರ್ವಹಣೆಯಲ್ಲಿ ಗಂಡ ಹೆಂಡತಿ ಇಬ್ಬರೂ ಸೋಲುತ್ತಾರೆ ಎಂದು ಹೇಳಬಹುದು.
ಇದಕ್ಕೆ ಕಾರಣ ಇತ್ತೀಚಿನ ಯುವ ಜನತೆಯಲ್ಲಿ ಕಾಣುತ್ತಿರುವ ಆತುರದ ಸ್ವಭಾವ. ಹಾಗೂ ಯಾವುದೇ ವಿಚಾರದಲ್ಲಿ ತಾಳ್ಮೆ ತುಂಬಾ ಕಡಿಮೆ ಎನ್ನುವ ಅಂಶ. ಕೇವಲ ಇವೆರಡೇ ವಿಚಾರಗಳು ಅನೇಕ ಸಂಸಾರಗಳನ್ನು ಇಂದು ವಿಚ್ಛೇದನದಲ್ಲಿ ಕೊನೆಗೊಳಿಸುತ್ತಿವೆ. ಒಬ್ಬ ಸಮರ್ಥ ತಂದೆ ಆಗಬೇಕಾದರೆ, ಮುಖ್ಯವಾಗಿ ತನ್ನ ಕುಟುಂಬವನ್ನು ಕಷ್ಟದ ಸಂದರ್ಭದಲ್ಲಿ, ಅವಮಾನ, ಅಪಮಾನಗಳು ಎದುರಾದ ಸಂದರ್ಭಗಳಲ್ಲಿ ಹೇಗಾದರೂ ಮಾಡಿ ಈ ಸಂದರ್ಭದಲ್ಲಿ ಗೆಲ್ಲಲೇಬೇಕು ಎಂಬ ಮನಸ್ಥಿತಿಯೊಂದಿಗೆ ಮುನ್ನಡೆಸುವಂತಹ ಗುಣಗಳು ಆತನಲ್ಲಿ ಮೈ ಗೂಡಬೇಕು.
ಈ ಲೇಖನದಲ್ಲಿ ಒಬ್ಬ ವ್ಯಕ್ತಿ ತಾನು ಸಮಾಜದಲ್ಲಿ ತನ್ನ ಹೆಂಡತಿಗೆ ಒಬ್ಬ ಒಳ್ಳೆಯ ಗಂಡ, ತನ್ನ ಮಕ್ಕಳಿಗೆ ಒಬ್ಬ ಒಳ್ಳೆಯ ತಂದೆ, ತನ್ನ ಕುಟುಂಬಕ್ಕೆ ಆದರದ ಆತ್ಮೀಯತೆ ತುಂಬಿದ ಕಣ್ಣು ಎನಿಸಿಕೊಳ್ಳಬೇಕಾದರೆ ಆತನಲ್ಲಿ ಯಾವ ಯಾವ ಗುಣಗಳು ಇರಬೇಕು ಮತ್ತು ಯಾವೆಲ್ಲಾ ಸಂದರ್ಭಗಳನ್ನು ಹೇಗೆ ನಿಭಾಯಿಸಿ ತನ್ನ ಕುಟುಂಬವನ್ನು ಅಚ್ಚುಕಟ್ಟಾದ ರೀತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸಿಕೊಡಲಾಗಿದೆ.
ಒಂದು ಕುಟುಂಬದಲ್ಲಿ ಒಳ್ಳೆಯ ತಂದೆ ಎಂದು ಹೆಸರು ಪಡೆದುಕೊಳ್ಳುವುದು ಹೇಗೆ?

1 ಮೊದಲು ಹೆಂಡತಿಯನ್ನು ಪ್ರೀತಿಸುವ ಗಂಡನಾಗಿರಬೇಕು : -
ಒಂದು ಕುಟುಂಬ ಶುರುವಾಗುವುದೇ ಗಂಡ - ಹೆಂಡತಿ ಎಂಬ ಇಬ್ಬರು ಸಮಾನ ಹಕ್ಕಿರುವ ವ್ಯಕ್ತಿಗಳಿಂದ. ಕುಟುಂಬದ ಅಭಿವೃದ್ಧಿ ಇಬ್ಬರ ನಡುವಿನ ಪ್ರೀತಿಯ ಮೇಲೆ ನಿಂತಿರುತ್ತದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಇಲ್ಲಿ ಗಣನೆಗೆ ಬರುತ್ತದೆ. ಕುಟುಂಬದ ನಿರ್ವಹಣೆಗೆ ಸಂಬಂಧ ಪಟ್ಟಂತೆ ಹಣಕಾಸಿನ ವಿಚಾರದಲ್ಲಿ ಗಂಡ ಸಹಾಯ ಮಾಡಿದರೆ, ಹೆಂಡತಿಗೆ ಗಂಡನ ಸಂಪಾದನೆಯ ಹಣವನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡಿ ಕುಟುಂಬವನ್ನು ನಿರ್ವಹಿಸುವಂತಹ ಮಹತ್ತರ ಜವಾಬ್ದಾರಿ ಇರುತ್ತದೆ. ಹಾಗಾಗಿ ಹೆಂಡತಿಯ ಮೇಲೆ ಗಂಡನಿಗೆ ಮೊಟ್ಟಮೊದಲು ನಂಬಿಕೆ ಇರಬೇಕು.
ಇದರ ಜೊತೆಗೆ ಪ್ರೀತಿ ಜೊತೆಗೂಡಿದರೆ ನಿಜಕ್ಕೂ ಅಂತಹ ಸಂಸಾರ ಸ್ವರ್ಗಕ್ಕೆ ಸಮ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಡೆಯಲ್ಲಿ ಕೇವಲ ವಿಚ್ಛೇದನವನ್ನೇ ನೋಡುತ್ತಿದ್ದೇವೆ. ಕೆಲವು ತಜ್ಞರ ಪ್ರಕಾರ ಇದು ನಮ್ಮ ಸಮಾಜದಲ್ಲಿ ತೀರಾ ಹೇಯಕರ ಬೆಳವಣಿಗೆಯಾಗಿ ದಿನೇ ದಿನೇ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆಯೇ, ವಿನಃ ಇದರಿಂದ ಯಾರಿಗೂ ಯಾವುದೇ ಉಪಯೋಗವಿಲ್ಲ.
ವಿಚ್ಛೇದನದಿಂದ ಕೇವಲ ಗಂಡ - ಹೆಂಡತಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಮಾನಸಿಕ ಸ್ಥಿತಿ ಹದಗೆಡುವುದು ಮಾತ್ರವಲ್ಲದೆ, ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ಕೆಟ್ಟ ಪ್ರಭಾವ ಉಂಟಾಗುತ್ತವೆ. ಹಾಗಾಗಿ ಸಂಸಾರದ ಮುಂದಿನ ಭವಿಷ್ಯದ ಹಾದಿ ಸುಗಮವಾಗಿ ಇರಬೇಕೆಂದರೆ ಮೊದಲು ಗಂಡನಾದವನು ಹೆಂಡತಿಯನ್ನು ಪ್ರೀತಿಸುವುದನ್ನು ಕಲಿಯಬೇಕು. ಹೆಂಡತಿಯ ಮೇಲೆ ಅಪಾರವಾದ ಪ್ರೀತಿ ಕಾಳಜಿ ಹೊಂದಿದ ಗಂಡನಿಗೆ ತನ್ನ ಸಂಸಾರದ ಕುರಿತಾದ ಜವಾಬ್ದಾರಿ ಅಷ್ಟೇ ಇರುತ್ತದೆ ಎಂದು ಹೇಳುತ್ತಾರೆ.

2 ಸಂಸಾರದ ಹೊಣೆಯನ್ನು ಹೊರಬೇಕು : -
ಮೇಲೆ ಹೇಳಿದ ಹಾಗೆ ಒಬ್ಬ ವ್ಯಕ್ತಿ ಒಳ್ಳೆಯ ತಂದೆ ಆಗಬೇಕಾದರೆ ಮೊದಲು ಆತ ಒಬ್ಬ ಒಳ್ಳೆಯ ಗಂಡ ಆಗಿರಬೇಕು. ಅಂದರೆ ತನ್ನ ಸಂಸಾರವನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋಗುವಂತಹ ಅದ್ಭುತ ಜವಾಬ್ದಾರಿ ನಿರ್ವಹಣೆಯಲ್ಲಿ ಸೈ ಎನಿಸಿಕೊಳ್ಳಬೇಕು. ತನ್ನನ್ನೇ ನಂಬಿ ಬಂದ ತನ್ನ ಪತ್ನಿ ಮತ್ತು ಮಕ್ಕಳನ್ನು ಯಾವುದೇ ಕುಂದು ಕೊರತೆ ಇಲ್ಲದಂತೆ ಸಮಯಕ್ಕೆ ಸರಿಯಾಗಿ ಜವಾಬ್ದಾರಿಯುತವಾಗಿ ಅವರ ಬೇಕು ಬೇಡಗಳನ್ನು ಅರಿತು, ಅದಕ್ಕಾಗಿ ಕಷ್ಟ ಪಟ್ಟು ನ್ಯಾಯವಾದ ದಾರಿಯಲ್ಲಿ ದುಡಿದು ಸಂಸಾರದ ಹೊಣೆಯನ್ನು ಎತ್ತಿ ಹಿಡಿಯಬೇಕು.
ತುಂಬಾ ಮನೆಗಳಲ್ಲಿ ನಮ್ಮ ತಂದೆಯೇ ನಮಗೆ ರೋಲ್ ಮಾಡೆಲ್ ಎಂದು ಮಕ್ಕಳು ಹೇಳುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಇರುವ ಮನೆಗಳಲ್ಲಿ ಈ ಮಾತು ಪದೇ ಪದೇ ಕೇಳಿ ಬರುತ್ತದೆ. ಸಂಸಾರ ನಡೆಸುವ ವಿಚಾರದಲ್ಲಿ ಬೇರೆಯವರಿಂದ ಭೇಷ್ ಎನಿಸಿಕೊಳ್ಳದಿದ್ದರೂ, ತನ್ನ ಸ್ವಂತ ಹೆಂಡತಿ ಮತ್ತು ಮಕ್ಕಳಿಂದ ನಿಂದನೆಗೆ ಒಳಗಾಗದಿದ್ದರೆ ಆತನೇ ನಿಜವಾದ ಮತ್ತು ಒಳ್ಳೆಯ ವ್ಯಕ್ತಿ ಎನ್ನಬಹುದು.
ಆದರೆ ತುಂಬಾ ಜನರು ಶಾಲಾ -ಕಾಲೇಜುಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಪಾಸಾಗಿ ಹೊರ ಬಂದವರು ಸಂಸಾರವೆನ್ನುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಅವರದೇ ಆದ ಸ್ವಂತ ಕಾರಣಗಳಿರಬಹುದು. ಅದೇನೇ ಇದ್ದರೂ ಸ್ವಲ್ಪ ತಾಳ್ಮೆ ಮತ್ತು ಬುದ್ಧಿವಂತಿಕೆ ಎರಡಿದ್ದರೆ ಖಂಡಿತ ಈ ಪರೀಕ್ಷೆಯನ್ನೂ ಸಹ ಸುಲಭವಾಗಿ ಗೆಲ್ಲಬಹುದು.

3 ಒಳ್ಳೆಯ ತಂದೆಗೆ ಶಿಸ್ತು ಎನ್ನುವುದು ಮೈಗೂಡಿರಬೇಕು : -
ಇದು ಒಬ್ಬ ತಂದೆಯ ಗುಣಗಳಲ್ಲಿ ಪ್ರತಿಯೊಬ್ಬರೂ ಬಯಸುವ ಗುಣ ಎಂದು ಹೇಳಬಹುದು. ಮನೆಯಲ್ಲಿನ ಮಕ್ಕಳು ಸಾಕಷ್ಟು ವಿಷಯಗಳಲ್ಲಿ ತಂದೆಯನ್ನು ಅನುಸರಿಸುತ್ತಾರೆ. ಕೆಲವು ವಿಚಾರಗಳಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಂಡು ತಪ್ಪು ದಾರಿ ತುಳಿಯುತ್ತಾರೆ. ಅಂತಹ ಸಮಯದಲ್ಲಿ ತನ್ನ ಸುದೀರ್ಘ ಅನುಭವದ ಅಂಶವನ್ನು ಗಮನಕ್ಕೆ ತೆಗೆದುಕೊಂಡು ತನ್ನ ಮಕ್ಕಳನ್ನು ಕೆಟ್ಟ ಹಾದಿಯಲ್ಲಿ ಹೋಗದಂತೆ ತಡೆದು ಸರಿಯಾದ ಮಾರ್ಗದರ್ಶನ ಮಾಡಿ ತನಗಿಂತಲೂ ಒಳ್ಳೆಯ ಹೆಸರನ್ನು ಸಂಪಾದಿಸುವಂತಹ ಬುದ್ಧಿವಂತಿಕೆಯನ್ನು ಕಲಿಸಿ ಕೊಡಬೇಕಾದದ್ದು ಒಬ್ಬ ಒಳ್ಳೆಯ ತಂದೆಯ ಕರ್ತವ್ಯ. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ.
ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ತಮ್ಮ ತಪ್ಪುಗಳನ್ನು ತಿದ್ದಿ ಹೇಳುವಂತಹ ಒಬ್ಬ ಮಾರ್ಗದರ್ಶಕ ಆ ಕ್ಷಣಕ್ಕೆ ಇಲ್ಲದೇ ಹೋದರೆ ಅದೇ ತಪ್ಪುಗಳನ್ನು ಇನ್ನೂ ದೊಡ್ಡದಾಗಿ ಮುಂದುವರಿಸಿಕೊಂಡು ಹೋಗಿ ಮುಂದೊಂದು ದಿನ ಸಮಾಜಕ್ಕೆ ಕಂಟಕರಾಗಿ ಬದಲಾಗುವುದರಲ್ಲಿ ಅನುಮಾನವೇ ಇರುವುದಿಲ್ಲ. ಒಂದು ಕುಟುಂಬದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ. ತಂದೆಗೆ ತನ್ನ ಮಕ್ಕಳು, ಗಂಡನಿಗೆ ತನ್ನ ಹೆಂಡತಿ, ಅಣ್ಣನಿಗೆ ತನ್ನ ತಂಗಿ ಒಳ್ಳೆಯ ದಾರಿಯಲ್ಲಿ ನಡೆಯಲಿ ಮತ್ತು ನಮ್ಮ ಕುಟುಂಬಕ್ಕೆ ಯಾವುದೇ ಕೆಟ್ಟ ಹೆಸರು ಬರದಿರಲಿ ಎಂಬ ಭಾವನೆ ಮಾತ್ರ ಮನಸ್ಸಿನಲ್ಲಿ ಹುದುಗಿರುತ್ತದೆ.
ಹಾಗಾಗಿ ತಪ್ಪು ಮಾಡಿದ ಕ್ಷಣದಲ್ಲಿ ಮಕ್ಕಳಿಗೆ ಹೊಡೆಯುವುದು ಅಥವಾ ಬೈಯುವುದು ತಂದೆಗೂ ಮತ್ತು ಮಕ್ಕಳಿಗೂ ಬೇಸರದ ಸಂಗತಿಯೆ ನಿಜ. ಆದರೆ ಮಕ್ಕಳಿಗೆ ಆ ಕ್ಷಣಕ್ಕೆ ಕೋಪ ಬಂದರೂ ಭವಿಷ್ಯದಲ್ಲಿ ಹಿಂದಿನ ಬೈಗುಳದ ಮೌಲ್ಯ ತಿಳಿಯುತ್ತದೆ. ನಮ್ಮ ತಂದೆ ನಮ್ಮನ್ನು ಕಟ್ಟುನಿಟ್ಟಾಗಿ ಬೆಳೆಸಿದ್ದರಿಂದಲೇ ಇಂದು ನಾವು ಈ ಸಮಾಜದಲ್ಲಿ ತಲೆಯೆತ್ತಿ ನಾಲ್ಕು ಜನರ ಮದ್ಯೆ ಅವರಂತೆ ಬಾಳಲು ಸಾಧ್ಯವಾಗುತ್ತಿರುವುದು ಎಂದು ನೆನಪಿಸಿಕೊಳ್ಳುತ್ತಾರೆ.
ಕೆಟ್ಟ ದಾರಿಯಲ್ಲಿ ಬೆಳೆದು ಬಂದ ಮಕ್ಕಳು ದೊಡ್ಡವರಾದ ಮೇಲೆ ಎಂದಾದರೂ ತಮ್ಮ ಜೀವಕ್ಕೆ ಅಥವಾ ಜೀವನಕ್ಕೆ ಸಂಚಕಾರ ಬಂದ ಸಮಯದಲ್ಲಿ ನಮ್ಮ ತಂದೆಯೂ ಇತರರ ರೀತಿ ಒಳ್ಳೆಯ ವ್ಯಕ್ತಿಯಾಗಿದ್ದರೆ ಅಥವಾ ನಮ್ಮನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದರೆ ಇಂದು ನಾವು ಹೀಗಾಗುತ್ತಿರಲಿಲ್ಲ ಎಂದು ಶಪಿಸುತ್ತಾರೆ ಮತ್ತು ತಾವು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಾರೆ. ಹಾಗಾಗಿ ತಂದೆಯಾದ ವ್ಯಕ್ತಿಯಲ್ಲಿ ಶಿಸ್ತು ಎನ್ನುವುದು ತನ್ನ ರಕ್ತದಲ್ಲೇ ಕರಗತವಾಗಿರಬೇಕು.

4. ಸಮಾಜಕ್ಕೆ ತನ್ನ ಮಕ್ಕಳನ್ನು ಆದರ್ಶಪ್ರಾಯರನ್ನಾಗಿ ಕೊಡುಗೆ ನೀಡಬೇಕು : -
ಸಂಸಾರದ ಜವಾಬ್ದಾರಿಯನ್ನು ಹೊತ್ತ ತಂದೆ ಕೇವಲ ತನ್ನ ಸಂಸಾರಕ್ಕಾಗಿ ಕಷ್ಟ ಪಟ್ಟು ದುಡಿಯುವುದು ಮಾತ್ರವಲ್ಲದೆ, ತನ್ನ ಹೆಂಡತಿ ಹಾಗೂ ತನ್ನ ಮಕ್ಕಳ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು. ಯಾವುದೇ ಮಗುವಿಗೆ ತನ್ನ ಆಯಸ್ಸಿನಲ್ಲಿ ಬಾಲ್ಯವಸ್ಥೆ ಎನ್ನುವುದು ತುಂಬಾ ಚಿಕ್ಕದು. ಹಾಗಾಗಿ ಮಕ್ಕಳು ಮಾಡುವ ತುಂಟತನ, ಕೀಟಲೆ ಎಲ್ಲವೂ ಕೇವಲ ಒಂದೆರಡು ದಿನದಲ್ಲಿ ಕಳೆದು ಹೋದಂಥ ಅನುಭವ ಉಂಟಾಗುತ್ತದೆ. ನಂತರ ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಒಂದೊಂದೇ ಜವಾಬ್ದಾರಿ ಹೆಗಲೇರುತ್ತಾ ಹೋಗುತ್ತದೆ.
ಆ ಕ್ಷಣದಲ್ಲಿ ತುಂಬಾ ಯುವಕರು ಹಾದಿ ತಪ್ಪುವ ಸಾಧ್ಯತೆ ಕೂಡ ಸ್ವಲ್ಪ ಹೆಚ್ಚಿರುತ್ತದೆ. ಕೆಟ್ಟ ಗೆಳೆಯರ ಸಹವಾಸ, ಕೆಟ್ಟ ಚಟಗಳ ಅಭ್ಯಾಸ ಇತ್ಯಾದಿಗಳಿಂದ ಬಹುತೇಕ ಮಕ್ಕಳು ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಕುಟುಂಬದ ಮುಖ್ಯ ಸದಸ್ಯನಾಗಿರುವ ತಂದೆ ಮಕ್ಕಳಿಗೆ ಜವಾಬ್ದಾರಿಯ ಪಾಠ ಕಲಿಸಿ ಕೊಡಬೇಕು. ಜೊತೆಗೆ ಯಾವುದು ಕೆಟ್ಟದ್ದು ಮತ್ತು ಯಾವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಬೇಕು.
ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಮಕ್ಕಳು ಯಾರ ಮಾತನ್ನೂ ಕೇಳುವುದಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಕೋಪ - ತಾಪ ಎಲ್ಲವೂ ಹೆಚ್ಚಿರುತ್ತದೆ. ಹಾಗಾಗಿ ತಂದೆಗೆ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮಕ್ಕಳ ವರ್ತನೆ ಎಷ್ಟೇ ಬೇಸರ ತರಿಸಿದರೂ ಸಹ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಅತ್ಯಂತ ತಾಳ್ಮೆಯಿಂದ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಲೇಬೇಕು. ಈ ಸಂದರ್ಭದಲ್ಲಿ ಸ್ವಲ್ಪ ಎಡವಿದರೂ ಮಕ್ಕಳು ದಾರಿ ತಪ್ಪುತ್ತಾರೆ ಮತ್ತು ತಮ್ಮ ಕೆಟ್ಟ ಚಟಗಳನ್ನು ಇತರರಿಗೂ ಅಂಟಿಸುತ್ತಾರೆ.

5. ಒಳ್ಳೆಯ ವ್ಯಕ್ತಿತ್ವಕ್ಕೆ ತಂದೆ ಉದಾಹರಣೆಯಾಗಬೇಕು : -
ಮೊದಲೇ ಹೇಳಿದಂತೆ ಸಂಸಾರದ ನಿರ್ವಹಣೆ ಹೊತ್ತ ಒಬ್ಬ ವ್ಯಕ್ತಿಯನ್ನು ಕೇವಲ ಕುಟುಂಬದವರು ಮಾತ್ರ ಆದರ್ಶಪ್ರಾಯರಾಗಿ ನೋಡುವುದಿಲ್ಲ. ಜೊತೆಯಲ್ಲಿ ಕೆಲಸ ಮಾಡುವವರು, ಮನೆಯ ಕೆಲಸದ ಆಳುಗಳು, ಮನೆಗೆ ಬಂದು ಹೋಗುವ ನೆಂಟರಿಷ್ಟರು, ಬಂಧು - ಭಾಂದವರು, ಸ್ನೇಹಿತರು, ಹೀಗೆ ಮಾನಸಿಕ ಸಂಬಂಧಗಳ ಸರಪಳಿಯೇ ಏರ್ಪಾಡಾಗಿರುತ್ತದೆ. ಒಬ್ಬೊಬ್ಬರು ಕೂಡ ಆ ವ್ಯಕ್ತಿಯ ಗುಣ ಲಕ್ಷಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ತುಂಬಾ ಜನರು ಕೆಲವೊಂದು ಗುಣ ಲಕ್ಷಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ ಜೊತೆಗೆ ತಮ್ಮ ಮನೆಯಲ್ಲಿ ಅವರಂತೆ ನೀವೂ ಬದುಕಿ ತೋರಿಸಬೇಕು ಎಂದು ಅವರನ್ನು ನೋಡಿ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಆಗಾಗ ಹೇಳುತ್ತಿರುವ ಹಲವಾರು ಸಂದರ್ಭಗಳು ನಮಗೆ ಉದಾಹರಣೆಯಾಗಿ ಸಿಗುತ್ತವೆ. ಹಾಗಾಗಿ ಒಬ್ಬ ವ್ಯಕ್ತಿಯಿಂದ ಪ್ರತ್ಯಕ್ಷವಾಗಿ ಆತನ ಸ್ವಂತ ಸಂಸಾರ ಮುಂದೆ ಬಂದರೆ, ಪರೋಕ್ಷವಾಗಿ ಸಾವಿರಾರು ಜನರು ಸಮಾಜದ ಏಳಿಗೆಗೆ ಭಾಜನರಾಗುತ್ತಾರೆ.

6. ನಾಯಕತ್ವದ ಗುಣದ ಪಕ್ಕದಲ್ಲೇ ಸೇವಾಮನೋಭಾವ ಇರಬೇಕು : -
ಕೆಲವೊಂದು ಸಂದರ್ಭಗಳಲ್ಲಿ ನಾವು ಗಮನಿಸಿರುತ್ತೇವೆ. ಏನೆಂದರೆ ಒಬ್ಬ ವ್ಯಕ್ತಿಯನ್ನು ನೋಡಿ ಇನ್ನೊಬ್ಬ ವ್ಯಕ್ತಿ ಅಥವಾ ಕೆಲವರು ಆತನಿಗೆ ನಾಯಕತ್ವದ ಗುಣ ಇದೆ. ಅದಕ್ಕಾಗಿಯೇ ಯಾವುದೇ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತಹ ಚಾಕಚಕ್ಯತೆ ಆತನಿಗಿದೆ ಎಂದು ಮಾತನಾಡಿಕೊಳ್ಳುತ್ತಾರೆ. ಇಲ್ಲಿ ಒಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಒಬ್ಬ ವ್ಯಕ್ತಿಗೆ ನಾಯಕತ್ವದ ಗುಣ ಹುಟ್ಟಿನಿಂದಲೇ ಬರುವುದಿಲ್ಲ. ಜೀವನದಲ್ಲಿ ಎದುರಾಗುವ ಸಂದರ್ಭಗಳು, ಸಂಕಷ್ಟಗಳು, ಅನುಭವಗಳು ಆತನನ್ನು ಒಬ್ಬ ಯಶಸ್ವಿ ನಾಯಕನನ್ನಾಗಿ ರೂಪಿಸುತ್ತವೆ.
ನಾವು ಗಮನಿಸಿರುವ ಹಾಗೆ ಒಂದು ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡ ಯಾವುದೇ ಅಪ್ರತಿಮ ನಾಯಕರು ಕೂಡ ತುಂಬಿದ ಕೊಡ ತುಳುಕದ ರೀತಿ ನಡೆದುಕೊಳ್ಳುತ್ತಾರೆ. ಅಂದರೆ ಅವರು ತಾವು ಬೆಳೆದು ಬಂದ ಹಾದಿಯನ್ನು ಮರೆತಿರುವುದಿಲ್ಲ. ಎಷ್ಟೇ ದೊಡ್ಡವರಾದರೂ, ಎಷ್ಟೇ ಹೆಸರು ಮಾಡಿದರೂ, ಸ್ವಾರ್ಥ ಮನೋಭಾವವನ್ನು ಬಿಟ್ಟು ಇನ್ನೊಬ್ಬರ ಸೇವೆಯಲ್ಲಿ ಸಂತೋಷ ಕಾಣುವುದನ್ನು ಮಾತ್ರ ಮರೆತಿರುವುದಿಲ್ಲ. ಸಂಸಾರದ ವಿಷಯದಲ್ಲೂ ಅಷ್ಟೇ. ಮನೆಯ ಜವಾಬ್ದಾರಿಯನ್ನು ಹೊತ್ತ ತಂದೆ ಮನೆಯ ನಾಯಕನೇ ಆದರೂ ಆತ ತನ್ನ ಸಂಸಾರದ ಸದಸ್ಯರನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವಂತಹ ಮತ್ತು ಅವರ ಸೇವೆಗೆ ತಾನು ಸದಾ ಸಿದ್ಧ ಎಂಬ ಮನೋಭಾವ ಹೊಂದಿದ್ದರೆ ಮಾತ್ರ ಆತನಿಗೆ ಒಬ್ಬ ಯಶಸ್ವಿ ತಂದೆಯ ಬಿರುದು ಸಿಗುತ್ತದೆ.

7. ತನ್ನ ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು : -
ಸಮಾಜದಲ್ಲಿ ಜೀವಿಸುವ ಯಾವುದೇ ವ್ಯಕ್ತಿ ಒಬ್ಬಂಟಿ ಅಲ್ಲ, ಆಗಿರಲೂ ಸಾಧ್ಯವಿಲ್ಲ. ಪ್ರತಿ ದಿನ ಎದುರಾಗುವ ಹಲವಾರು ಬಗೆಯ ಸಂಕಷ್ಟಗಳಲ್ಲಿ ಇನ್ನೊಬ್ಬರ ನೆರವು ಒಂದಲ್ಲಾ ಒಂದು ರೀತಿಯಲ್ಲಿ ಬೇಕೇ ಬೇಕು. ಪ್ರತಿ ದಿನವೂ ಕೂಡ ನಾವು ಜೀವಿಸಬೇಕಾದರೆ ನಮಗೆ ಯಾರಾದರೂ ಬೆನ್ನೆಲುಬಾಗಿ ನಿಲ್ಲುತ್ತಾರೆ ಅಥವಾ ನಮ್ಮ ಕಷ್ಟಕ್ಕೆ ಇಂತಹವರು ಇದ್ದಾರೆ ಎಂಬ ಭ್ರಮೆಯಲ್ಲೇ ಬದುಕುತ್ತೇವೆ. ಹಾಗೆ ಮನೆಯಲ್ಲಿ ಮಕ್ಕಳು ಅಥವಾ ಹೆಂಡತಿ ಕೂಡ ತಮ್ಮ ಕಷ್ಟಗಳಿಗೆ ಅಥವಾ ತಮ್ಮ ಬೆಂಬಲಕ್ಕೆ ಮನೆಯಲ್ಲಿ ಒಬ್ಬ ವ್ಯಕ್ತಿ ಇದ್ದಾರೆ ಎಂಬ ಭ್ರಮೆಯಲ್ಲಿ ಜೀವನ ಸಾಗಿಸುತ್ತಾರೆ.
ಹಾಗಾಗಿ ಈ ನಂಬಿಕೆಯನ್ನು ಸಂಸಾರದ ಜವಾಬ್ದಾರಿ ಹೊತ್ತ ತಂದೆ ಉಳಿಸಿಕೊಳ್ಳಬೇಕು. ಅದು ಬಿಟ್ಟು ತಾನೇ ಯಾವುದಾದರೂ ಕೆಟ್ಟ ದಾಸ್ಯಗಳಿಗೆ ಬಲಿಯಾಗಿ ಹಾದಿ ತಪ್ಪಿದರೆ, ಕೇವಲ ತನ್ನ ಬಾಳು ನರಕವಾಗುವುದು ಮಾತ್ರವಲ್ಲದೆ ತನ್ನನ್ನೇ ನಂಬಿದ ತನ್ನ ಹೆಂಡತಿ - ಮಕ್ಕಳ ಜೀವನ ಬೀದಿಗೆ ಬಂದು ಬೀಳುತ್ತದೆ. ಶ್ರೀಮಂತರಾದರೂ ಅಷ್ಟೇ, ಬಡವರಾದರೂ ಅಷ್ಟೇ ಮನೆಯಲ್ಲಿ ಮುಂದಾಳತ್ವ ವಹಿಸಿ ಕುಟುಂಬವನ್ನು ಚನ್ನಾಗಿ ನಿರ್ವಹಣೆ ಮಾಡುವಂತಹ ವ್ಯಕ್ತಿ ಇಲ್ಲದೆ ಇದ್ದ ಮೇಲೆ ಜೀವನ ಬೇಲಿಯಿಲ್ಲದ ಹೊಲದಂತೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

8. ಕೋಪದಲ್ಲೂ ಸೌಮ್ಯತೆ ಅತಿ ಮುಖ್ಯ : -
ಸಾಧಾರಣವಾಗಿ ಒಬ್ಬ ಮನುಷ್ಯನಿಗೆ ಎರಡು ರೀತಿಯ ಭಾವನೆಗಳಿರುತ್ತವೆ. ಮೊದಲನೆಯದು ಸಮಾಜಕ್ಕೆ ನಾವೆಲ್ಲಾ ಹೇಗೆ ತೋರ್ಪಡಿಸಿಕೊಳ್ಳುತ್ತೇವೆ ಮತ್ತು ಸಮಾಜ ನಮ್ಮನ್ನು ಯಾವ ರೀತಿ ನೋಡುತ್ತದೆ ಎಂದು. ಎರಡನೆಯದು ಕೋಪದ ಪ್ರವೃತ್ತಿ. ಇದು ಎಲ್ಲಾ ಸಂದರ್ಭಗಳಲ್ಲೂ ಬೆಳಕಿಗೆ ಬರುವುದಿಲ್ಲ. ಕೆಲವೊಂದು ಕೆಟ್ಟ ಸಂದರ್ಭದಲ್ಲಿ, ದುಸ್ಥಿತಿಗಳಲ್ಲಿ, ನಮ್ಮ ಬುದ್ಧಿಯನ್ನು ಕೋಪದ ಕೈಗೆ ಕೊಡಬೇಕಾದಂತಹ ಅನಿವಾರ್ಯತೆ ಉಂಟಾಗುತ್ತದೆ. ಕುಟುಂಬದಲ್ಲಿ ಕೂಡ ಒಬ್ಬ ವ್ಯಕ್ತಿ ಎಲ್ಲಾ ಸಮಯದಲ್ಲೂ ಇದ್ದ ಹಾಗೆ ಇರಲು ಸಾಧ್ಯವಿಲ್ಲ.
ಕೆಲವೊಂದು ಸಮಯದಲ್ಲಿ ತಂದೆ ಆದವನೂ ಕೂಡ ಮಕ್ಕಳ ಮೇಲೆ, ಹೆಂಡತಿ ಮೇಲೆ ಕೋಪಿಸಿಕೊಳ್ಳುವಂತಹ ಸಂದರ್ಭ ಬಂದೇ ಬರುತ್ತದೆ. ಆ ಕ್ಷಣದಲ್ಲಿ ಆತ ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ತನ್ನ ಕೋಪ ಉಗ್ರಾವತಾರ ತಾಳಿದರೆ ಇಡೀ ಸಂಸಾರವೇ ನಾಶವಾಗಿ ಹೋಗುತ್ತದೆ. ಅದೇ ತನ್ನ ಕೋಪದಲ್ಲೂ ಸೌಮ್ಯ ಸ್ವಭಾವವನ್ನು ತೋರುವ ವ್ಯಕ್ತಿ ಮಾತ್ರ ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ಕೊನೆಯವರೆಗೂ ನಿರ್ವಹಣೆ ಮಾಡಬಲ್ಲ. ವಯಸ್ಸಾಗುವವರೆಗೂ ಜೊತೆಯಾಗಿರುವ ಜೋಡಿಗಳಲ್ಲಿ ನಮಗೆ ಕಂಡು ಬರುವುದು ಇದೇ ಅಂಶ.
ಅವರಲ್ಲೂ ಕೋಪ - ತಾಪ, ಮನಸ್ಥಾಪ, ಮುನಿಸು ಎಲ್ಲವೂ ಇರುತ್ತದೆ. ಆದರೆ ಅವುಗಳನ್ನೆಲ್ಲಾ ಇಬ್ಬರೂ ಗೆದ್ದು ತಮ್ಮ ಮಕ್ಕಳಿಗೂ ಅದನ್ನೇ ಕಲಿಸಿಕೊಟ್ಟು ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಮನವರಿಕೆ ಮಾಡಿಕೊಟ್ಟಿರುತ್ತಾರೆ. ಹಾಗಾಗಿಯೇ ಇತರರಿಗೆ ಮಾದರಿಯಾಗಿ ಬದುಕಿ ತೋರಿಸಿರುತ್ತಾರೆ. ಮನೆಯಲ್ಲಿ ಮಕ್ಕಳು ಕೂಡ ತಂದೆ ಕೋಪಿಸಿಕೊಂಡಾಗ ಯಾವ ರೀತಿ ನಡೆದುಕೊಳ್ಳುತ್ತಾನೆ ಮತ್ತು ಪರಿಸ್ಥಿತಿಯನ್ನು ಯಾವ ರೀತಿ ಅವಲೋಕಿಸಿ ಸಹಜ ಸ್ಥಿತಿಗೆ ಮರಳಿಸುವಲ್ಲಿ ಯಶಸ್ವಿಯಾಗುತ್ತಾನೆ ಎಂಬುದನ್ನು ಸೂಕ್ಷ್ಮವಾಗಿ ನೋಡಿ, ಗಮನಿಸಿ, ಕಲಿತು ತಮ್ಮಲ್ಲೂ ಕೂಡ ಅದೇ ಗುಣವನ್ನು ಬೆಳೆಸಿಕೊಳ್ಳುತ್ತಾರೆ.

9. ಒಳ್ಳೆಯ ತಂದೆಗೆ ತಾಳ್ಮೆಯೇ ಅಸ್ತ್ರ : -
ನಮ್ಮ ಜೀವನದಲ್ಲಿ ಪ್ರತಿ ದಿನವೂ ಸಾವಿರಾರು ಅನಿರೀಕ್ಷಿತ ಘಟನೆಗಳು ಕೆಟ್ಟ ಸಂದರ್ಭಗಳು ಎದುರಾಗುತ್ತಿರುತ್ತವೆ. ಮನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತ ತಂದೆಗೆ ಇದು ಸರ್ವೇ ಸಾಮಾನ್ಯ. ನನ್ನ ಹೆಂಡತಿಯ ವಿಚಾರದಲ್ಲಿ, ತನ್ನ ಮಕ್ಕಳ ವಿಚಾರದಲ್ಲಿ ಸಾಕಷ್ಟು ಬಗೆಯ ಸವಾಲುಗಳು ದಿನ ನಿತ್ಯ ಎದುರಾಗುತ್ತವೆ ಮತ್ತು ಇದರ ಜೊತೆಗೆ ಜೀವನದಲ್ಲಿ ಕಷ್ಟಗಳು ಒಂದಾದ ಮೇಲೊಂದರಂತೆ ಬರುತ್ತಲೇ ಇರುತ್ತವೆ.
ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಂತಹ ಜಾಣ್ಮೆ ಮತ್ತು ತಾಳ್ಮೆ ತಂದೆಯಾದ ವ್ಯಕ್ತಿಗೆ ಇರಲೇಬೇಕು. ಕೇವಲ ಸುಖ ಬಂದಾಗ ಮಾತ್ರ ಸಂಸಾರದ ಜೊತೆಗಿದ್ದು, ಕಷ್ಟದ ಸಂದರ್ಭದಲ್ಲಿ ಹೆಂಡತಿ - ಮಕ್ಕಳನ್ನು ಕೈ ಬಿಡುವ ತಂದೆ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ಕೇವಲ ತಾನು ದುಡಿಯುವ ದುಡ್ಡಿನಿಂದಲೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿರುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ಹಣ ಎಂಬುದು ಲೆಕ್ಕಕ್ಕೂ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಅನುಭವ ಒಂದು ಕಡೆ ಕೆಲಸ ಮಾಡಿದರೆ ತಾಳ್ಮೆ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ.

10. ತನ್ನ ಇಡೀ ಕುಟುಂಬ ನಿಂತಿರುವುದು ನಂಬಿಕೆಯ ಮೇಲೆ ಎಂಬ ಅರಿವಿರಬೇಕು : -
ಒಂದು ಕುಟುಂಬದಲ್ಲಿ ಹೆಂಡತಿ ಮಕ್ಕಳು ಗಂಡನನ್ನು ಅಥವಾ ತಂದೆಯನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಿರುವುದಿಲ್ಲ. ಕೇವಲ ಹಣಕಾಸಿನ ವಿಚಾರದಲ್ಲಿ ನಾವು ಈ ಮಾತನ್ನು ಹೇಳುತ್ತಿಲ್ಲ. ಮನೆಯ ಪ್ರತಿಯೊಂದು ಆಗು ಹೋಗುಗಳಲ್ಲಿ ತಂದೆಯ ಪಾತ್ರ ಬಹಳ ಮುಖ್ಯ. ಮಕ್ಕಳು ಬೆಳೆದು ದೊಡ್ಡವರಾಗುತ್ತಾ ಇದ್ದಂತೆ ತಂದೆಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ತನ್ನ ಜವಾಬ್ದಾರಿಗೆ ಹೆಗಲು ಕೊಟ್ಟು ನಿಂತು ಮನೆಯವರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರತಿಯೊಬ್ಬ ತಂದೆಯೂ ಮಾಡಬೇಕು. ತನ್ನ ಮನೆಯ ಯಾವುದೇ ವಿಚಾರ ಹೊರಗೆ ಬಂದು ಹಾದಿ ರಂಪ ಬೀದಿ ರಂಪ ಆಗಿ ಇನ್ನೊಬ್ಬರ ಬಾಯಿಗೆ ಆಹಾರವಾಗಬಾರದು.



Click it and Unblock the Notifications











