ಕಾಲ ಬದಲಾಗಿದೆ ಸ್ವಾಮಿ, ಈಗ ಮಹಿಳೆಯರೇ ಸ್ಟ್ರಾಂಗ್‌ ಗುರು!

By Manu

"ನಿನಗೆ ಬಂಧುಗಳನ್ನು ನಾನೇ ನೀಡುತ್ತೇನೆ ಆದರೆ ಸ್ನೇಹಿತರನ್ನು ಮಾತ್ರ ನೀನೇ ಸಂಪಾದಿಸಿಕೊಳ್ಳಬೇಕಪ್ಪ" ಎಂದು ದೇವರು ಮಕ್ಕಳಿಗೆ ಹೇಳುತ್ತಾನೆ ಎಂದು ಜನಪದ ಕಥೆಗಳಲ್ಲಿ ಉಲ್ಲೇಖವಿದೆ. ಆದರೆ ಇಂದಿನ ದಿನಗಳಲ್ಲಿ ಸ್ನೇಹಿತರನ್ನು ಗಳಿಸಿಕೊಳ್ಳುವುದಕ್ಕಿಂತ ಇರುವ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅತಿ ಕಷ್ಟಕರ. ಏಕೆಂದರೆ ಸಂಬಂಧಗಳು ಅಷ್ಟು ಸುಲಭವಾಗಿ ಆಗುವುದಿಲ್ಲ. ಅಂತೆಯೇ ಸಂಬಂಧದಲ್ಲಿ ಪ್ರೇಮ,

ವಿಶ್ವಾಸ, ಆತ್ಮೀಯತೆ ಮೂಡಲು ಪರಸ್ಪರ ಹೊಂದಾಣಿಕೆ ಮತ್ತು ಇರುವುದನ್ನು ಹಂಚಿಕೊಳ್ಳುವ ವಿಶಾಲ ಮನೋಭಾವ, ಇನ್ನೊಬ್ಬರ ತಪ್ಪನ್ನು ಮನ್ನಿಸಿ ತಿದ್ದಲು ನೆರವಾಗುವುದು, ಸಂಗಾತಿಗಳಿಗೆ ಸೂಕ್ತವಾಗುವಂತೆ ತಮ್ಮನ್ನು ತಾವು ಕೊಂಚ ಬದಲಿಸಿಕೊಳ್ಳುವುದು ಎಲ್ಲವೂ ಒಂದು ಸಂಬಂಧ ಸುಂದರವಾಗಿರಲು ಅಗತ್ಯ. ಇವರ ಕಪಟ ಪ್ರೀತಿಯನ್ನು ನಂಬಿ, ಮೋಸ ಹೋದೀರಿ ಜೋಕೆ!

ಸಾಮಾನ್ಯವಾಗಿ ಒಂದು ಸಂಬಂಧವನ್ನು ಉಳಿಸಿಕೊಳ್ಳಲು ಮಹಿಳೆಯರೇ ಹೆಚ್ಚು ಕಾಳಜಿ ವಹಿಸುವುದು ಕಂಡುಬರುತ್ತದೆ. ಅದರಲ್ಲೂ ವಿಫಲವಾದ ಪ್ರೇಮ ಪ್ರಕರಣವನ್ನು ಉಳಿಸಿಕೊಳ್ಳಲು ಮಹಿಳೆಯರು ಕಟ್ಟ ಕಡೆಯ ತ್ರಾಣದವರೆಗೂ ಪ್ರಯತ್ನಿಸುತ್ತಿರುತ್ತಾರೆ. ಇತ್ತೀಚಿನ ಸಂಶೋಧನೆಗಳಲ್ಲಿ ಸಂಬಂಧವನ್ನು ಕಳಚಿಕೊಂಡು ಹೊರಬರುತ್ತಿರುವವರಲ್ಲಿ ಮಹಿಳೆಯರೇ ದಿಟ್ಟತನ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ತೀರಾ ಇತ್ತೀಚಿನವರೆಗೂ ಮಹಿಳೆಯರು ತಮ್ಮ ದುಃಖ ದುಮ್ಮಾನವನ್ನು ತಮ್ಮೊಳಗೇ ಅಡಗಿಸಿಕೊಂಡು ತಮ್ಮ ನಿರಾಶೆಯನ್ನು ನುಂಗುತ್ತಾ ಪಾಲಿಗೆ ಬಂದದ್ದೇ ಪಂಚಾಮೃತವೆಂದು ಅನುಭವಿಸುತ್ತಾ ಬಂದಿದ್ದರು. ಆದರೆ ಇಂದು ಮಹಿಳೆಯರು ವ್ಯಕ್ತಿಸ್ವಾತಂತ್ರ್ಯವೆಂದರೇನು ಎಂಬ ವಿಚಾರದ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗಿದ್ದಾರೆ. ತಮಗೆ ಸೂಕ್ತವಲ್ಲದ ಸಂಬಂಧವನ್ನು ಹೆಚ್ಚು ಕಾಲ ಬೆಳೆಯಲು ಬಿಡದೇ ಮುರಿದು ಹೊರಬಂದು ಸ್ವತಂತ್ರರಾಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಮುಂದಿನ ದಿನಗಳಲ್ಲಿ ಉತ್ತಮ ಜೀವನ ಮತ್ತು ಉತ್ತಮ ಜೀವನಸಂಗಾತಿಯನ್ನೂ ಪಡೆದಿದ್ದಾರೆ. ಬನ್ನಿ, ಇಂತಹ ದಿಟ್ಟ ನಿರ್ಧಾರ ತಳೆಯಲು ಮಹಿಳೆಯರಿಗೆ ಯಾವ ಸನ್ನಿವೇಶಗಳು ಕಾರಣವಾಗಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ವಿಶ್ವಾಸವೇ ಇಲ್ಲವಾದಾಗ

ವಿಶ್ವಾಸವೇ ಇಲ್ಲವಾದಾಗ

ಯಾವುದೇ ಸಂಬಂಧಕ್ಕೆ ಅತ್ಯಗತ್ಯವಾಗಿ ಬೇಕಾಗಿರುವುದು ಪರಸ್ಪರ ವಿಶ್ವಾಸ. ಪತಿ ಪತ್ನಿಯರಲ್ಲಿ ಶೇಖಡಾ ನೂರರಷ್ಟು ವಿಶ್ವಾಸವಿದ್ದರೆ ಸಂಬಂಧ ಅಲ್ಲಾಡಲು ಸಾಧ್ಯವೇ ಇಲ್ಲ. ಆದರೆ ಕೇವಲ ವಿಶ್ವಾಸವಿದ್ದರೆ ಸಾಲದು,ಸಮಾಜದಲ್ಲಿ ಉತ್ತಮ ಬಾಳ್ವೆಗೆ ಅನುಕೂಲವಾಗಿ ನಡೆಯುವಂತಹ ಕಳಕಳಿಯೂ ಬೇಕು. ಉದಾಹರಣೆಗೆ ವಿಶ್ವಾಸವಿದ್ದರೂ ಕೆಲಸ ಮಾಡದೇ ಸೋಂಬೇರಿಯಾಗಿ ಕೇವಲ ಹೆಂಡತಿ ತಂದು ಹಾಕಿದ ಹಣವನ್ನು ಖರ್ಚು ಮಾಡುತ್ತಾ ಜೀವನ ಕಳೆಯುವ ಗಂಡನಿಂದ ಹೊರಬರುವುದೇ ಕ್ಷೇಮ. ಆದರೆ ವಿಶ್ವಾಸವೇ ಕಳೆದರೆ ಈ ಸಂಬಂಧವನ್ನು ಮುಂದುವರೆಸಲು ಯಾವುದೇ ಕಾರಣ ಉಳಿಯುವುದಿಲ್ಲ.

ಇಬ್ಬರ ನಡುವೆ ಮಾತುಕತೆ ಇಲ್ಲವಾದಾಗ

ಇಬ್ಬರ ನಡುವೆ ಮಾತುಕತೆ ಇಲ್ಲವಾದಾಗ

ಪತಿ ಪತ್ನಿಯರ ನಡುವೆ ಬಾಂಧವ್ಯಕ್ಕೆ ಪರಸ್ಪರ ಸಂವಾದ ಅತ್ಯಗತ್ಯ. ದೈಹಿಕವಾಗಿ ದೂರವಾಗಿದ್ದರೂ ಆಗಾಗ ಸಂಭಾಷಣೆ ನಡೆಸುವ ಹಾಗೂ ಪರಸ್ಪರ ಅಭಿಪ್ರಾಯಗಳನ್ನು ನೀಡಿ ಪಡೆಯುವ ಪ್ರಕ್ರಿಯೆ ಇಬ್ಬರ ನಡುವೆ ಅನುರಾಗವನ್ನು ಬೆಸೆಯುತ್ತಾ ಹೋಗುತ್ತದೆ. ಆದರೆ ಒಂದು ವೇಳೆ ಇಬ್ಬರೂ ಪರಸ್ಪರ ಮುಖ ನೋಡುವುದಿರಲಿ, ಮಾತನಾಡುವುದನ್ನೂ ಬೇಡವಾಗಿಸಿದರೆ ಸಂಬಂಧ ಅಲ್ಲಾಡತೊಡಗುತ್ತದೆ. ಮಹಿಳೆಯರಿಗೆ ತಮ್ಮ ಪತಿ ತಮ್ಮ ಮಾತುಗಳನ್ನು ಕೇಳುವವನಾಗಿರಬೇಕು ಮತ್ತು ತನ್ನನ್ನು ಅರ್ಥ ಮಾಡಿಕೊಳ್ಳುವವನಾಗಿರಬೇಕು ಎಂಬ ಬಯಕೆ ಇರುತ್ತದೆ. ಮಾತು ಕೇಳದ ಪತಿಯನ್ನು ಯಾವ ಹೆಣ್ಣೂ ಹಚ್ಚಿಕೊಳ್ಳುವುದಿಲ್ಲ.

ಸಾಮರ್ಥ್ಯಕ್ಕೆ ಮೀರಿದ ಬಯಕೆಗಳು

ಸಾಮರ್ಥ್ಯಕ್ಕೆ ಮೀರಿದ ಬಯಕೆಗಳು

ಪ್ರತಿಯೊಬ್ಬರಲ್ಲಿಯೂ ಕೆಲವು ಆಕಾಂಕ್ಷೆಗಳಿರುತ್ತವೆ. ಅದರಲ್ಲಿ ಕೆಲವು ಮಹತ್ವಾಕಾಂಕ್ಷೆಗಳಾಗಿರುತ್ತವೆ. ಆದರೆ ಕೆಲವೊಮ್ಮೆ ಈ ಆಕಾಂಕ್ಷೆಗಳು ಪತಿಯ ಸಾಮರ್ಥ್ಯಕ್ಕೆ ಮೀರಿದ್ದುದಾಗಿದ್ದು ಇದನ್ನು ಪೂರೈಸದ ಪತಿಯನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಆದರೆ ಬಹುತೇಕ ಮಹಿಳೆಯರು ತಮ್ಮ ಪತಿಯ ಸಾಮರ್ಥ್ಯಕ್ಕೆ ಮೀರಿದ ಬಯಕೆಗಳನ್ನು ಅದುಮಿಟ್ಟು ತಮಗೆ ದಕ್ಕಿದ ಫಲವನ್ನು ಸಂತೋಷವಾಗಿ ಒಪ್ಪಿಕೊಂಡು ಬಾಳನ್ನು ಬಂಗಾರವಾಗಿಸಿಕೊಳ್ಳುತ್ತಾರೆ.

ಸಾಮರ್ಥ್ಯಕ್ಕೆ ಮೀರಿದ ಬಯಕೆಗಳು

ಸಾಮರ್ಥ್ಯಕ್ಕೆ ಮೀರಿದ ಬಯಕೆಗಳು

ಆದರೆ ಕೆಲವು ಮಹಿಳೆಯರಿಗೆ ಮಾತ್ರ ಈ ಆಕಾಂಕ್ಷೆಯೇ ಅತಿ ಮುಖ್ಯವಾಗಿ ಪರಿಣಮಿಸಿ ಪತಿಯಿಂದ ದೂರವಾಗುವ ನಿರ್ಧಾರ ತಳೆಯುತ್ತಾರೆ. ಹಲವು ಪ್ರಸಂಗಗಳಲ್ಲಿ ಮಗುವಿಗೆ ಕಾನ್ವೆಂಟ್ ನಲ್ಲಿ ಓದಿಸುವುದು, ದುಬಾರಿ ವಜ್ರದ ನೆಕ್ಲೇಸ್, ಫಾರಿನ್ ಟೂರ್, ಮರ್ಸಿಡೀಸ್ ಕಾರು ಬೇಕು ಇಂತಹ ಸಾಮರ್ಥ್ಯಕ್ಕೆ ಮೀರಿದ ಬಯಕೆಗಳು ವಿಚ್ಛೇದನ, ಆತ್ಮಹತ್ಯೆ, ದರೋಡೆ, ಕೊಲೆ ಮೊದಲಾದವುಗಳ ಮೂಲಕ ಪರ್ಯವಸಾನವಾಗಿರುವುದು ವಾಸ್ತವವಾಗಿದೆ.

ಪರಸ್ಪರರಿಗೆ ಹೊಂದಿಕೊಳ್ಳದಿರುವುದು

ಪರಸ್ಪರರಿಗೆ ಹೊಂದಿಕೊಳ್ಳದಿರುವುದು

ಒಂದು ಸಂಬಂಧಕ್ಕೆ ಪರಸ್ಪರ ವಿಶ್ವಾಸದ ಜೊತೆಗೇ ಹೊಂದಾಣಿಕೆಯೂ ಅಗತ್ಯ. ವಿವಾಹದ ವಿಧಿಗಳು ಪೂರ್ಣಗೊಂಡ ಬಳಿಕ ನೀವಿಬ್ಬರೂ ಈಗ ಒಂದಾಗಿದ್ದೀರಿ, ಸಾವಿನವರೆಗೂ ಒಂದಾಗಿಯೇ ಇರುತ್ತೇವೆ ಎಂದು ಅಗ್ನಿಸಾಕ್ಷಿಯಾಗಿ ಆಣೆ ಮಾಡಿ ಎಂದು ಬೋಧಿಸಲಾಗುತ್ತದೆ. ಇಲ್ಲಿ ಒಂದಾಗುವುದು ಎಂದರೆ ಪರಸ್ಪರ ಹೊಂದಿಕೊಳ್ಳುವುದು ಎಂದೇ ಅರ್ಥ. ಆದರೆ ಈ ಹೊಂದಿಕೊಳ್ಳುವುದಕ್ಕೆ ತಮ್ಮನ್ನು ತಾವು ಕೆಲವು ವಿಧದಲ್ಲಿ ಬದಲಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವರಿಗೆ ಈ ಬದಲಾವಣೆ ದೊಡ್ಡ ಹೊರೆಯಂತೆ ಕಾಣುತ್ತದೆ. ತಾನು ಬದಲಾಗುವ ಬದಲು ಪತಿಯನ್ನೇ ಬದಲಿಸುವುದು ಉತ್ತಮ ಎಂಬ ನಿರ್ಧಾರ ಹಲವು ವಿವಾಹಗಳು ಮುರಿಯಲು ಕಾರಣವಾಗಿವೆ. ಪರಸ್ಪರರ ಆದ್ಯತೆಗಳು, ಹವ್ಯಾಸಗಳು, ಇಷ್ಟದ ಮತ್ತು ಇಷ್ಟವಿಲ್ಲದ ಕೆಲಸಗಳು ಮೊದಲಾದವು ಹೊಂದಾಣಿಕೆಯನ್ನು ಕದಡುವ ವಿಷಯಗಳಾಗಿವೆ.

ಆತನ ಬೈಗುಳ ಅತಿಯಾದಾಗ

ಆತನ ಬೈಗುಳ ಅತಿಯಾದಾಗ

ಸಾಮಾನ್ಯವಾಗಿ ಪುರುಷರು ತಮ್ಮ ಅಸಮಾಧಾನವನ್ನು ಬೈಗುಳದ ಮೂಲಕ ಪ್ರಕಟಿಸುತ್ತಾರೆ. ಈ ಅಸಮಾಧಾನ ಸಾಂಧರ್ಬಿಕವಾಗಿದ್ದರೆ ಮತ್ತು ಅನಿವಾರ್ಯವಾಗಿದ್ದರೆ ಪತ್ನಿಯ ಸಹಿತ ಸಮಾಜದ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬೈಗುಳ ಸತತವಾಗಿದ್ದು ನಿಂತಾಗ ಕುಳಿತಾಗಲೆಲ್ಲಾ ಮಾತುಗಳ ನಡುವೆ ನುಸುಳುತ್ತಿದ್ದರೆ ಮಹಿಳೆಯರು ಅತೀವವಾದ ಮುಜುಗರವನ್ನು ಅನುಭವಿಸುತ್ತಾರೆ. ತಮ್ಮ ಪತಿಯನ್ನು ತಮ್ಮ ಬಾಂಧವರಿಗೆ ಪರಿಚಯಿಸಲು ಹಿಂದೇಟು ಹಾಕುತ್ತಾರೆ. ಒಂದು ವೇಳೆ ಮೂರನೆಯ ವ್ಯಕ್ತಿಯಿಂದ ನಿಮ್ಮ ಪತಿ ಹೇಗೆ ಬೈಯುತ್ತಿದ್ದರು ಎಂದು ಕೇಳಿದರೆ ಅಲ್ಲೇ ನೇಣು ಹಾಕಿಕೊಳ್ಳೋಣವೆಂದೆನಿಸುತ್ತದೆ. ಇದರ ಬದಲಿಗೆ ಈ ಬೈಗುಳದ ಬುಟ್ಟಿಯಿಂದ ಹೊರಬರುವುದೇ ಸೂಕ್ತ ಎಂಬ ನಿರ್ಧಾರವನ್ನು ತಾಳುತ್ತಾರೆ.

ಆತ್ಮೀಯತೆಯ ಕೊರತೆಯಾದಾಗ

ಆತ್ಮೀಯತೆಯ ಕೊರತೆಯಾದಾಗ

ಪತಿ ಪತ್ನಿಯರಲ್ಲಿ ಅನ್ಯೋನ್ಯತೆಯಿದ್ದಾಗ ಯಾವುದೇ ಶಕ್ತಿ ಈ ಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದಕ್ಕೆ ಪರಸ್ಪರರು ತಮ್ಮ ಸಂಗಾತಿಯ ವ್ಯಕ್ತಿತ್ವವನ್ನು ಗೌರವಿಸಿ ಆತ್ಮೀಯತೆ ಬೆಳೆಸಿಕೊಳ್ಳುವುದು ಅಗತ್ಯ. ಒಂದು ವೇಳೆ ಆತ್ಮೀಯತೆಯೇ ಇಲ್ಲದಿದ್ದರೆ, ಇದೊಂದು ಗುಲಾಮ-ಮಾಲಿಕ ಸಂಬಂಧವಾಗುತ್ತದೆಯೇ ಹೊರತು ಪತಿ=ಪತ್ನಿಯರದ್ದಲ್ಲ. ಇಂದಿನ ಯುವತಿಯರು ಗುಲಾಮರಾಗಲು ಒಪ್ಪದೇ ಇದರಿಂದ ದಿಟ್ಟತನದಿಂದ ಹೊರಬರುತ್ತಾರೆ.

X
Desktop Bottom Promotion