ಕಾಲ ಬದಲಾದರೂ ಬಂಧನ ಹಾಗೇ ಇದೆ!

By ಕೃಷ್ಣ ಹರವಳ್ಳಿ

"ಅಣ್ಣಾ ಎಷ್ಟೊತ್ತಿಗೆ ಬರ‍್ತೀಯಾ ಮನೆಗೆ..?" ಹೀಗೆಂದು ತಂಗಿ ಅಣ್ಣನಿಗೆ ಮೊಬೈಲ್‌ನಲ್ಲಿ ಮೆಸೇಜ್‌ ಮಾಡುತ್ತಾಳೆ. "ಬರ‍್ತೀನಿ, ಇನ್ನೈದೇ ನಿಮಿಷ." ಎನ್ನುತ್ತಲೇ ತಂಗಿಗೆ ಇಷ್ಟವಾದ ಡೈರಿ ಮಿಲ್ಕ್‌ ಚಾಕೊಲೇಟ್‌ ಖರೀದಿಗೆ ಅಣ್ಣ ಅಲ್ಲೆಲ್ಲೋ ಅದೇ ನಗರದ ಇನ್ನೊಂದು ಮೂಲೆಯಲ್ಲಿ ತೊಡಗಿರು‌ತ್ತಾನೆ. ಇದು ಆಧುನಿಕ ಕಾಲದ ರಕ್ಷಾ ಬಂಧನದ ಸನ್ನಿವೇಶ.

ಹಿಂದೊಮ್ಮೆ ಇದೇ ರಕ್ಷಾ ಬಂಧನಕ್ಕಿದ್ದ ಪಾವಿತ್ರ‍್ಯತೆ ಈಗ ವಿಭಿನ್ನ ಮಗ್ಗುಲಿಗೆ ಹೊರಳಿಕೊಂಡಿದೆ. ಹಿಂದೊಮ್ಮೆ ವಿದೇಶಿ ಸಾಮ್ರಾಜ್ಯಶಾಹಿಗಳ ದಾಳಿಯ ಸಂದರ್ಭದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಇದೊಂದು ಮಾನಸಿಕ ಶಸ್ತ್ರವಾಗಿತ್ತು. ಆದರೆ ಈಗ ಇದೊಂದು ಸಾಂಸ್ಕೃತಿಕ ಬಂಧವಾಗಿದೆ. ಈಗ ದೂರದ ಊರಿನಲ್ಲಿದ್ದ ಅಣ್ಣನನ್ನು ಕರೆದು ರಾಖಿ ಕಟ್ಟಿ ಅವನಿಂದ ಡೈರಿ ಮಿಲ್ಕನ್ನೋ ಅಥವಾ ಇನ್ಯಾವುದೋ ಚಾಕಲೇಟನ್ನೋ ತೆಗೆದುಕೊಂಡು ಸೋದರಿಯರು ಖುಷಿ ಪಡುತ್ತಾರೆ.

ಹೆಣ್ಣುಮಕ್ಕಳ ರಕ್ಷಣಾ ತಂತ್ರದ ಜಾಣ್ಮೆ

ಹೆಣ್ಣುಮಕ್ಕಳ ರಕ್ಷಣಾ ತಂತ್ರದ ಜಾಣ್ಮೆ

ಹಿಂದೆ ಊರಿನಲ್ಲಿದ್ದ ನೆರೆಹೊರೆಯವರನ್ನು ಸೋದರನಂತೆ ಭಾವಿಸಿ ಗೌರವಿಸಲು ನೆರವಾದದ್ದು ಇದೇ ಸೂತ್ರ. ಅಷ್ಟೇ ಅಲ್ಲ, ಪಡ್ಡೆ ಹೈಕಳ ಕೈಗೆ ಕಟ್ಟಿದ ರಾಖಿಯೂ ಹೆಣ್ಣುಮಕ್ಕಳ ರಕ್ಷಣಾ ತಂತ್ರದ ಜಾಣ್ಮೆ. ಸೋದರಿಯರ ಮನೋಸ್ಥಿತಿಯನ್ನು ಗಮನಿಸಿದರೆ ಇಂದಿಗೂ ಇದೇ ಭಾವ ಬೆಳೆದು ಬಂದಿದೆ.

ಆಚರಣೆಯಲ್ಲಿ ಮಾತ್ರ ಒಂಚೂರು ವ್ಯತ್ಯಾಸ

ಆಚರಣೆಯಲ್ಲಿ ಮಾತ್ರ ಒಂಚೂರು ವ್ಯತ್ಯಾಸ

ಆದರೆ ಆಚರಣೆಯಲ್ಲಿ ಮಾತ್ರ ಒಂಚೂರು ವ್ಯತ್ಯಾಸ. ಅಂಗಡಿಯಲ್ಲಿನ ರಾಖಿ ಖರೀದಿಸಿ ಅದನ್ನು ದೇವರ ಪೀಠದಲ್ಲಿಟ್ಟು ಪೂಜಿಸಿ, ಅಣ್ಣನನ್ನು ಕರೆದು ಕಟ್ಟುವ ರೀತಿ ಈಗ ಸ್ವಲ್ಪ ಮಾಡರ್ನ್‌ ಅಷ್ಟೆ. ಇನ್ನೂ ಕೆಲವು ಆಧುನಿಕರು ಫೇಸ್‌ಬುಕ್‌ನಲ್ಲಿ ರಾಖಿ ಚಿತ್ರ ಕಳಿಸಿ, ಅಣ್ಣಾ ರಕ್ಷಾ ಬಂಧನದ ಶುಭಾಷಯ ಎನ್ನುವವರೂ ಇದ್ದಾರೆ.

ರಾಖಿಗೊಂದು ಪವಿತ್ರ ಭಾವ ಆಧುನಿಕ ಕಾಲದಲ್ಲೂ ಇದೆ

ರಾಖಿಗೊಂದು ಪವಿತ್ರ ಭಾವ ಆಧುನಿಕ ಕಾಲದಲ್ಲೂ ಇದೆ

ಇನ್ನು ಕಾಲೇಜುಗಳಲ್ಲಂತೂ ರಾಖಿ ಹಿಡಿದು ಬರುವ ಹುಡುಗಿಯರು ದಾಳಿಗೆ ಬಂದ ತಾಲಿಬಾನ್‌ ಉಗ್ರರ ರೀತಿ ಕಂಡರೆ ಅಚ್ಚರಿಯಿಲ್ಲ. ಯಾಕೆಂದರೆ ಕಾಲೇಜು ಕ್ಯಾಂಪಸ್‌ಗಳಲ್ಲಿ ರಕ್ಷಾ ಬಂಧನ ಅಕ್ಷರಶಃ ಹೆಣ್ಣುಮಕ್ಕಳಿಗೊಂದು ಬಿಡುಗಡೆಯ ಬಾವ. 'ಕಣ್ಣು ಹಾಕುವವ'ರಿಗೆ ರಾಖಿ ಕಟ್ಟಿದರೆ ಹುಡುಗಿಯರಿಗೊಂದು ನೆಮ್ಮದಿ. ಇನ್ನು ಕಾಲೇಜಿನಲ್ಲಿರುವಷ್ಟೂ ದಿನವೂ ಇವನ ಕಾಟವಿಲ್ಲ. ಅಷ್ಟರ ಮಟ್ಟಿಗೆ ರಾಖಿಗೊಂದು ಪವಿತ್ರ ಭಾವ ಆಧುನಿಕ ಕಾಲದಲ್ಲೂ ಇದೆ!

ತೀರಾ ಸಮೀಪದ ಸಂಬಂಧಗಳಲ್ಲಿ ಮಾತ್ರ ರಾಖಿ ಕಟ್ಟುವ ಸಂಪ್ರದಾಯ

ತೀರಾ ಸಮೀಪದ ಸಂಬಂಧಗಳಲ್ಲಿ ಮಾತ್ರ ರಾಖಿ ಕಟ್ಟುವ ಸಂಪ್ರದಾಯ

ಇಷ್ಟೆಲ್ಲದರ ಆಚೆಯೂ ಸಾಂಪ್ರದಾಯಿಕ ರೂಪದ ರಾಖಿಗಳು ಅಂಗಡಿಗಳಲ್ಲಿ ರಾರಾಜಿಸುತ್ತಿರುತ್ತವೆ. ನೂರು, ಸಾವಿರಗಟ್ಟಲೆ ರೂಪಾಯಿ ಕೊಟ್ಟು ರಂಗುರಂಗಿನ ರಾಖಿ ಕಟ್ಟುವ ಸನ್ನಿವೇಶ ನಗರಗಳಲ್ಲಿ ಈಗ ಕಾಣಸಿಗುವುದು ಅಪರೂಪವೇ. ಆಧುನಿಕ ನಗರಗಳಲ್ಲಿ ಕೆಲಸದ ಗಡಿಬಿಡಿ, ಗಜಿಬಿಜಿಯ ಮಧ್ಯೆಯೇ ಜನರು ಒಂಚೂರು ಪುರಸೊತ್ತು ಮಾಡಿಕೊಂಡು ಸೋದರನಿಗೆ ರಾಖಿ ತೆಗೆದಿಟ್ಟುಕೊಳ್ಳುವುದಿದೆ. ಆದರೆ ತೀರಾ ಸಮೀಪದ ಸಂಬಂಧಗಳಲ್ಲಿ ಮಾತ್ರ ರಾಖಿ ಕಟ್ಟುವ ಸಂಪ್ರದಾಯ ಈಗ ಉಳಿದುಕೊಂಡಿದೆ.

ಪವಿತ್ರ ಬಂಧನ

ಪವಿತ್ರ ಬಂಧನ

ಇದೇ ವೇಳೆ ರಕ್ಷಾ ಬಂಧನಕ್ಕೊಂದು ವೈಭವಯುತ ಹಿನ್ನೆಲೆ ಇದೆ. ಈ ದಿನದ ಒಂದು ಪ್ರಮುಖ ಭಾಗ ಹೆಣ್ಣುಮಕ್ಕಳು ಸೋದರರಿಗೆ ರಾಖಿ ಕಟ್ಟುವುದಾದರೆ, ಯಜ್ಞೋಪವೀತ ಧರಿಸುವ ಈ ದಿನವೂ ಕೆಲವು ಸಮುದಾಯಗಳಲ್ಲಿ ಪವಿತ್ರವಾಗಿದೆ.

ರಕ್ಷಾ ಬಂಧನ ಕಟ್ಟುವ ವಿಧಾನ

ರಕ್ಷಾ ಬಂಧನ ಕಟ್ಟುವ ವಿಧಾನ

ಶುದ್ಧ ಹತ್ತಿಯಿಂದ ಕೈಯಲ್ಲೇ ನೀವಿ ತಯಾರಿಸಿದ ದಾರವನ್ನು ಪೂಜಿಸಿ, ಪವಿತ್ರವೆಂದು ಭಾವಿಸಿ, 27 ದೇವತೆಗಳನ್ನು ಆಹ್ವಾನಿಸಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ, ಸೂರ್ಯನ ಅಪ್ಪಣೆ ಪಡೆದು, ಭೂಮಿಗೆ ಅರ್ಪಿಸಿ ಧರಿಸಲಾಗುತ್ತದೆ. ಇದೆಲ್ಲಕ್ಕೂ ಸಾಕ್ಷಿ ಅಗ್ನಿ. ಹೀಗೆ ಧರಿಸಿದ ನಂತರ ಒಂದಷ್ಟು ಸಾಂಪ್ರದಾಯಿಕ ಆಚರಣೆಗಳೂ ಇವೆ.

ಕಾಲ ಬದಲಾದರೂ ರಕ್ಷಾ ಬಂಧನದ ಪಾವಿತ್ರ‍್ಯತೆ ಮಾತ್ರ ಕಳೆಗುಂದಿಲ್ಲ

ಕಾಲ ಬದಲಾದರೂ ರಕ್ಷಾ ಬಂಧನದ ಪಾವಿತ್ರ‍್ಯತೆ ಮಾತ್ರ ಕಳೆಗುಂದಿಲ್ಲ

ಈ ದಿನ ರಾಖಿ ಕಟ್ಟುವ ಸಂಪ್ರದಾಯ ಆರಂಭವಾಗಿದ್ದಕ್ಕೆ ಸ್ಪಷ್ಟವಾದ ಉಲ್ಲೇಖವಿಲ್ಲ. ಆದರೆ ಭಾರತದ ಮೇಲೆ ಮೊಘಲರ ಆಳ್ವಿಕೆ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿಗಳ ದಾಳಿಯಲ್ಲಿ ಸಾಮಾನ್ಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಇದೊಂದು ತಂತ್ರವನ್ನಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಅಂದಿನಿಂದಲೂ ಕಾಲಕ್ಕೆ ತಕ್ಕಂತೆ ಆಚರಣೆಯಲ್ಲಿ ಬದಲಾವಣೆಗಳಾಗುತ್ತಲೇ ಬಂದಿದ್ದರೂ, ರಕ್ಷಾ ಬಂಧನದ ಪಾವಿತ್ರ‍್ಯತೆ ಮಾತ್ರ ಕಳೆಗುಂದಿಲ್ಲ.

Story first published: Tuesday, August 20, 2013, 13:21 [IST]
X
Desktop Bottom Promotion