Nimisha Priya: ಜುಲೈ 16 ಕರಾಳ ದಿನವಾಗುತ್ತಾ? ಕೇರಳದ ನರ್ಸ್‌ಗೆ ಯೆಮನ್‌ನಲ್ಲಿ ಗಲ್ಲು.. ಯಾರು ಈ ನಿಮಿಷಾ ಪ್ರಿಯಾ?

ಕೊನೆ ಕ್ಷಣದ ಹೋರಾಟ! ಯೆಮೆನ್​​ನಲ್ಲಿ ಕೇರಳದ ನರ್ಸ್​ಗೆ ಮರಣದಂಡನೆ. ಕರುಳ ಕುಡಿ ಉಳಿಸಲು ತಾಯಿಯ ಪರದಾಟ. ಈಕೆ ಮಾಡಿದ ತಪ್ಪಾದರೂ ಏನು? ಯಾರು ಈ ನಿಮಿಷಾ ಪ್ರಿಯಾ? ಹೌದು, ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರನ್ನು ಇದೇ ಜುಲೈ 16 ರಂದು ಯೆಮೆನ್‌ನಲ್ಲಿ ಗಲ್ಲಿಗೇರಿಸಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಭಾರತದಲ್ಲಿ ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯೆಮೆನ್‌ನಲ್ಲಿ (Yemen) ನಿಮಿಷಾ ಪ್ರಿಯಾ ಗಲ್ಲಿಗೇರುತ್ತಾರಾ? ಜುಲೈ 16 ಕರಾಳ ದಿನವಾಗುತ್ತಾ? ಎಲ್ಲಾ ವಿವರ ಇಲ್ಲಿದೆ.

ಯೆಮೆನ್ ಅಧಿಕಾರಿಗಳು ಮತ್ತು ನಿಮಿಷಾ ಕುಟುಂಬವನ್ನು ಸಂಪರ್ಕಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಮಾಜ ಸೇವಕ ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್ ಈ ಗಲ್ಲು ಶಿಕ್ಷೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್ ಹೇಳುವ ಪ್ರಕಾರ, ಸಾರ್ವಜನಿಕ ಅಭಿಯೋಜಕರು ಜೈಲು ಅಧಿಕಾರಿಗಳಿಗೆ ಮರಣದಂಡನೆ ಆದೇಶವನ್ನು ನೀಡಿದ್ದಾರೆ. ಜುಲೈ 16 ರಂದು ಮರಣದಂಡನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೂ, ಆಯ್ಕೆಗಳು ಇನ್ನೂ ಮುಕ್ತವಾಗಿವೆ. ಭಾರತ ಸರ್ಕಾರವು ನಿಮಿಷಾ ಪ್ರಿಯಾ (Kerala Nurse Nimisha Priya) ಆಕೆಯ ಜೀವ ಉಳಿಸಲು ಸಹಾಯ ಮಾಡಬಹುದು' ಎಂದು ಹೇಳಿದ್ಧಾರೆ.

Kerala Nurse Nimisha Priya

ನಿಮಿಷಾ ಪ್ರಿಯಾ ಯಾರು?

ನಿಮಿಷಾ ಪ್ರಿಯಾ ಅವರು ಕೇರಳದಲ್ಲಿ ಜನಿಸಿದ್ದು, ದಿನಗೂಲಿ ನೌಕರರ ಕುಟುಂಬಕ್ಕೆ ಸೇರಿದವರು. ನಿಮಿಷಾ 2008 ರಲ್ಲಿ ಉತ್ತಮ ಅವಕಾಶಗಳನ್ನು ಅರಸಿ ಯೆಮೆನ್‌ಗೆ ತೆರಳಿದರು. 2011 ರಲ್ಲಿ, ನಿಮಿಷಾ ಇಡುಕ್ಕಿಯವರಾದ ಟಾಮಿ ಥಾಮಸ್ ಎಂಬುವವರನ್ನು ವಿವಾಹವಾದರು. ಈ ದಂಪತಿಗಳು ಯೆಮೆನ್‌ನ ರಾಜಧಾನಿ ಸನಾದಲ್ಲಿ ನೆಲೆಸಿದ್ದರು. ಇವರಿಗೆ ಮಗಳು ಇದ್ದಾರೆ. ಬಳಿಕ, ನಿಮಿಷಾ ಪ್ರಿಯಾ ಮತ್ತು ಟಾಮಿ 2015 ರಲ್ಲಿ ಯೆಮೆನ್ ರಾಜಧಾನಿ ಸನಾದಲ್ಲಿ ತಮ್ಮದೇ ಆದ ವೈದ್ಯಕೀಯ ಕ್ಲಿನಿಕ್ (ವೈದ್ಯಕೀಯ ಚಿಕಿತ್ಸಾಲಯ) ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆದರೆ, ಇದು ಅವರ ಜೀವನದ ದಿಕ್ಕನ್ನೆ ಬದಲಾಯಿಸಿತು.

ವ್ಯಾಪಾರ ಒಪ್ಪಂದವು ತಪ್ಪಾದ ದಾರಿಗೆ ತಿರುಗಿತ್ತು. ಅದು ಹೇಗೆಂದರೆ, ವಿದೇಶಿಯರು ಸ್ವತಂತ್ರವಾಗಿ ವ್ಯವಹಾರಗಳನ್ನು ನೋಂದಾಯಿಸಲು ಯೆಮೆನ್ ಕಾನೂನುಗಳು ಅನುಮತಿಸದ ಕಾರಣ, ನಿಮಿಷಾ ಪ್ರಿಯಾ ಅವರಿಗೆ ಸ್ಥಳೀಯ ಪಾಲುದಾರರ ಅಗತ್ಯವಿತ್ತು. ಹೀಗಾಗಿ, ಅವರು ಸ್ಥಳೀಯ ಪ್ರಾಯೋಜಕ ತಲಾಲ್ ಅಬ್ದೋ ಮಹ್ದಿ ಎಂಬುವವರನ್ನು ಸಂಪರ್ಕಿಸಿದರು. ಆದರೆ, ಈ ಪಾಲುದಾರಿಕೆಯು ಬೇಗನೆ ಹಳಸಿತು. ತಲಾಲ್ ಅಬ್ದೋ ಮಹ್ದಿ ಕ್ಲಿನಿಕ್‌ನ ಮಾಲೀಕತ್ವದ ಶೇ.67 ರಷ್ಟನ್ನು ತನಗೆ ನೀಡಬೇಕೆಂದು ನಿಮಿಷಾ ಪ್ರಿಯಾ ಮೇಲೆ ಒತ್ತಡ ಹೇರಿದರು. ಉಳಿದ ಶೇ.33 ರಷ್ಟನ್ನು ಆಕೆಯ ಹಳೆಯ ಉದ್ಯೋಗದಾತರಿಗೆ ನೀಡುವಂತೆ ಒತ್ತಾಯಿಸಿದರು.

ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆ

ಕ್ಲಿನಿಕ್ ಚೆನ್ನಾಗಿ ಆದಾಯ ಗಳಿಸಲು ಪ್ರಾರಂಭಿಸಿದಾಗ, ತಲಾಲ್ ಅಬ್ದೋ ಮಹ್ದಿ ಲಾಭವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ಅಲ್ಲದೆ, ಸಂಪೂರ್ಣ ನಿಯಂತ್ರಣವನ್ನು ತಾನೇ ತೆಗೆದುಕೊಳ್ಳಲು ಮುಂದಾದರು. ನಿಮಿಷಾ ಪ್ರಿಯಾ ಆತನನ್ನು ಪ್ರಶ್ನಿಸಿದಾಗ, ತಲಾಲ್ ಅಬ್ದೋ ಮಹ್ದಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬದವರ ಪ್ರಕಾರ, ಕಿರುಕುಳ ಕೇವಲ ಹಣಕಾಸಿಗೆ ಸೀಮಿತವಾಗಿರಲಿಲ್ಲ. ತಲಾಲ್ ಅಬ್ದೋ ಮಹ್ದಿ ಹಲವಾರು ಬಾರಿ ತನ್ನ ಮೇಲೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.

ಮದುವೆಯಾಗಿದ್ದಾನೆ ಎಂದು ಸುಳ್ಳು

ಆತ ತನ್ನ ಪಾಸ್‌ಪೋರ್ಟ್ ಬಳಸಿ ತನ್ನ ಚಲನವಲನಗಳನ್ನು ನಿಯಂತ್ರಿಸುತ್ತಿದ್ದ ಮತ್ತು ವಿವಾಹದ ಫೋಟೋವನ್ನು ಬದಲಾಯಿಸಿ ನ್ಯಾಯಾಲಯದಲ್ಲಿ ತನ್ನನ್ನು ಮದುವೆಯಾಗಿದ್ದಾನೆ ಎಂದು ಸುಳ್ಳು ಹೇಳಿದ್ದಾನೆ ಎಂದು ತಿಳಿಸಲಾಗಿದೆ. 2015 ರಲ್ಲಿ ತಲಾಲ್ ಅಬ್ದೋ ಮಹ್ದಿ ಕೇರಳಕ್ಕೆ ಬಂದು ಆಕೆಯ ಕುಟುಂಬದೊಂದಿಗೆ ಇದ್ದನು. ಆ ಸಮಯದಲ್ಲಿ ಆತ ಮದುವೆಯ ದಾಖಲೆಗಳನ್ನು ತಿರುಚಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದನು. ನಿಮಿಷಾ ಪ್ರಿಯಾ ಅವರ ದೂರುಗಳ ಕಾರಣದಿಂದಾಗಿ ತಲಾಲ್ ಅಬ್ದೋ ಮಹ್ದಿ ಹಲವಾರು ಬಾರಿ ಜೈಲಿಗೆ ಹೋದರೂ, ಆತ ತನ್ನ ಪ್ರಭಾವವನ್ನು ಮುಂದುವರಿಸಿದನು. ಆಕೆಯ ಪಾಸ್‌ಪೋರ್ಟ್ ಅವನ ಬಳಿಯೇ ಉಳಿಯಿತು.

2020ರಲ್ಲಿ ನಿಮಿಷಾ ಪ್ರಿಯಾಗೆ ಮರಣದಂಡನೆ

ಜುಲೈ 2017 ರಲ್ಲಿ, ನಿಮಿಷಾ ಪ್ರಿಯಾ ತನ್ನ ಪಾಸ್‌ಪೋರ್ಟ್ ಕೇಳಲು ಮತ್ತೆ ತಲಾಲ್ ಅಬ್ದೋ ಮಹ್ದಿಯನ್ನು ಜೈಲಿನಲ್ಲಿ ಭೇಟಿಯಾದರು. ಆತನನ್ನು ಶಾಂತಗೊಳಿಸಲು ಔಷಧಿ ನೀಡುವಂತೆ ಜೈಲಿನ ಅಧಿಕಾರಿಯೊಬ್ಬರು ಸೂಚಿಸಿದರು ಎನ್ನಲಾಗಿದೆ. ನಿಮಿಷಾ ಪ್ರಿಯಾ ತಲಾಲ್ ಅಬ್ದೋ ಮಹ್ದಿಗೆ ಇಂಜೆಕ್ಷನ್ (sedatives) ನೀಡಿದರು. ಆದರೆ, ಅತಿಯಾದ ಡೋಸ್‌ನಿಂದ ಆತ ಮೃತಪಟ್ಟನು. ಆತಂಕದಲ್ಲಿ, ಅವರು ತನ್ನ ಸಹೋದ್ಯೋಗಿ ಯೆಮೆನ್ ನರ್ಸ್ ಸಹಾಯವನ್ನು ಕೋರಿದರು. ಆಕೆ ದೇಹವನ್ನು ತುಂಡು ಮಾಡಿ, ನೀರಿನ ಟ್ಯಾಂಕ್‌ನಲ್ಲಿ ಎಸೆಯಲು ಸಲಹೆ ನೀಡಿದಳು. ಇಬ್ಬರೂ ತಲೆಮರೆಸಿಕೊಂಡರು. ಆದರೆ, ಬಳಿಕ ಅವರನ್ನು ಬಂಧಿಸಲಾಯಿತು. 2020ರಲ್ಲಿ, ಯೆಮೆನ್ ನ್ಯಾಯಾಲಯವು ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಿತು. ಆಕೆಯ ಮೇಲ್ಮನವಿಗಳನ್ನು ತಿರಸ್ಕರಿಸಲಾಯಿತು.

'ಬ್ಲಡ್ ಮನಿ'ಮೂಲಕ ಕ್ಷಮಾದಾನ

ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಒತ್ತಾಯಿಸಲು ಭಾರತದಲ್ಲಿ 'ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್' ಅನ್ನು ರಚಿಸಲಾಯಿತು. ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅನುಮತಿಸಲಾದ ಅಭ್ಯಾಸದಂತೆ, ಬಲಿಪಶುವಿನ ಕುಟುಂಬಕ್ಕೆ 'ಬ್ಲಡ್ ಮನಿ' (ರಕ್ತದ ಹಣ) ಅಥವಾ 'ದಿಯ್ಯಾ' (Blood Money) ಪಾವತಿಸುವ ಮೂಲಕ ಕ್ಷಮಾದಾನ ಪಡೆಯಲು ಪ್ರಯತ್ನಿಸಲಾಯಿತು. ಜೂನ್ 2024 ರಲ್ಲಿ, ಭಾರತ ಸರ್ಕಾರವು ತಲಾಲ್ ಅಬ್ದೋ ಮಹ್ದಿಯ ಕುಟುಂಬದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು 40,000 ವರ್ಗಾವಣೆಯನ್ನು ಅನುಮೋದಿಸಿತು. ಆದರೆ, ಯೆಮೆನ್ ಅಧ್ಯಕ್ಷರು ಜುಲೈ 16 ರಂದು ಗಲ್ಲು ಶಿಕ್ಷೆಯನ್ನು ಅನುಮೋದಿಸಿದರು.

ಇದೊಂದು ಮಾನವೀಯ ಕಥೆ

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್, 'ಇದು ಕೇವಲ ಕಾನೂನು ಪ್ರಕರಣವಲ್ಲ, ಇದೊಂದು ಮಾನವೀಯ ಕಥೆ. ಕರುಣೆ, ನ್ಯಾಯ ಮತ್ತು ಎರಡನೇ ಅವಕಾಶಕ್ಕಾಗಿ ಇನ್ನೂ ಸ್ವಲ್ಪ ಅವಕಾಶವಿದೆ' ಎಂದು ಹೇಳಿದರು. ನಿಮಿಷಾ ಪ್ರಿಯಾ ಅವರ ಪ್ರಕರಣವು ಒಂದು ಸಂಕೀರ್ಣ ಪರಿಸ್ಥಿತಿಯನ್ನು ತೋರಿಸುತ್ತದೆ. ಇದರಲ್ಲಿ ಆರ್ಥಿಕ ಸಂಕಷ್ಟಗಳು, ಕಿರುಕುಳ ಮತ್ತು ಕಾನೂನು ತೊಡಕುಗಳು ಸೇರಿವೆ. ಈ ಪ್ರಕರಣವು ಭಾರತೀಯ ಪ್ರಜೆಗಳು ವಿದೇಶದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

English summary

Who Is Nimisha Priya? Kerala Nurse Nimisha Priya faces July 16 execution in Yemen

Who Is Nimisha Priya? Kerala Nurse Nimisha Priya faces July 16 execution in Yemen
Story first published: Sunday, July 13, 2025, 13:00 [IST]
X
Desktop Bottom Promotion