ಅಯೋಧ್ಯೆ ರಾಮನಿಗೂ ಶ್ರೀರಂಗನಾಥಸ್ವಾಮಿಗೂ ಇದೆ ನಂಟು..! ಏನಿದು ಪುರಾತನ ಕಥೆ ಗೊತ್ತಾ..?

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕುಂಬಾಭಿಷೇಕ ಜನವರಿ 22 ರಂದು ನಡೆಯಲಿದೆ. ಈ ಭವ್ಯ ಸಮಾರಂಭದ ಧಾರ್ಮಿಕ ಕಾರ್ಯಗಳು ಆರಂಭವಾಗಿದೆ. ಅಲ್ಲದೆ ಶ್ರೀರಾಮ ಲಲ್ಲಾನ ಮೂರ್ತಿ ಸಹ ಅನಾವರಣಗೊಂಡಿದೆ. ಇನ್ನೇನು ಸೋಮವಾರ ಅಧಿಕೃತವಾಗಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು, 24ರಿಂದ ಭಕ್ತಾಧಿಗಳಿಗೂ ದರ್ಶನಕ್ಕೆ ಅವಕಾಶ ಸಿಗಲಿದೆ.

ಆದರೆ ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು , ರಾಮಾಯಣಕ್ಕೆ ಸಂಬಂಧಿಸಿರುವ ಪ್ರತಿ ದೇವಾಲಯಗಳಿಗೂ ಯಾತ್ರೆ ಆರಂಭಿಸಿದ್ದರು. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ಪ್ರಮುಖ ದೇವಾಲಯಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ನಡುವೆ ನಿನ್ನೆ ಅವರು ತಮಿಳುನಾಡಿನ ತಿರುಚನಪಳ್ಳಿಯಲ್ಲಿರುವ ಶ್ರೀರಂಗನಾಥ ದೇವಾಲಯಕ್ಕೂ ಭೇಟಿ ನೀಡಿದ್ದರು. ಈ ದೇವಾಲಯಕ್ಕೂ ರಾಮಾಯಣಕ್ಕೂ ಹಾಗೂ ಅಯೋಧ್ಯೆ ರಾಮನಿಗೂ ಇರುವ ಸಂಬಂಧವೇನು..?

ಗೋಕರ್ಣದಂತೆಯೇ ಇದೆ ಇಲ್ಲಿನ ಕಥೆ..!

ರಾಜ್ಯದ ಗೋಕರ್ಣ ದೇವಾಲಯದ ಆತ್ಮಲಿಂಗ ಕಥೆ ನಿಮಗೆಲ್ಲ ತಿಳಿದಿದೆ. ರಾವಣ ಈಶ್ವರನ ಬಳಿ ವರವಾಗಿ ಪಡೆದಿದ್ದ ಆತ್ಮಲಿಂಗವನ್ನು ಮಾರುವೇಶದಲ್ಲಿ ಬಂದಿದ್ದ ಗಣೇಶ ಸಮುದ್ರದಡದಲ್ಲಿ ಇಟ್ಟಾಗ ರಾವಣನಿಗೆ ಆತ್ಮಲಿಂಗ ದೊರೆಯದೆ ಅದು ನೆಲದಡಿ ಮಾಯವಾಯಿತು ಎಂದು ನಂಬಲಾಗಿದೆ. ಆದರೆ ಇದೇ ರೀತಿ ರಾವಣನ ಸಹೋದರ ವಿಭೀಷಣನಿಗೂ ಆಗಿತ್ತು ಎಂದು ಈ ಶ್ರೀರಂಗನಾಥ ಸ್ವಾಮಿ ಕಥೆ ಹೇಳುತ್ತದೆ.

 Sriranganath Swamy

ಶ್ರೀರಂಗನಾಥ ಮೂರ್ತಿ ಪಡೆದಿದ್ದ ವಿಭೀಷಣ

ಭೂಮಿ ಮೇಲಿನ ವೈಕುಂಠ ಅಂತಲೇ ಈ ಶ್ರೀರಂಗನಾಥ ಸ್ವಾಮಿ ದೇವಾಲಯವನ್ನು ಕರೆಯಲಾಗುತ್ತದೆ. ಶ್ರೀರಂಗಂ ದೇವಾಲಯದ ವಿಗ್ರಹವು ಬ್ರಹ್ಮನ ತಪಸ್ಸಿನಿಂದ ತಿರುಪ್ಪಲಕಾಡದಿಂದ ಹೊರಹೊಮ್ಮಿದ ಕಾರಣ ಅದನ್ನು ಸ್ವಯಂಬು ಎಂದು ಕರೆಯಲಾಗುತ್ತದೆ. ಅಂತಹ ವಿಶಿಷ್ಟ ಮೂಲಕ್ಕೆ ಬ್ರಹ್ಮನು ಸೂರ್ಯನನ್ನು ಶಾಶ್ವತ ಪೂಜೆಯನ್ನು ಮಾಡಲು ನೇಮಿಸಿದನು.

ಆಗ ಸೂರ್ಯ ಕುಲದಲ್ಲಿ ಅಂದರೆ ರಘು ವಂಶದಲ್ಲಿ ಜನಿಸಿದ ರಾಜ ಇತ್ಸುವಾಕು ಈ ವಿಗ್ರಹವನ್ನು ತನ್ನ ರಾಜಧಾನಿ ಅಯೋಧ್ಯೆಗೆ ಪೂಜೆಗಾಗಿ ಕೊಂಡೊಯ್ದನು. ದಶರಥ ಮತ್ತು ರಾಮ ವಿಗ್ರಹವನ್ನು ಪೂಜಿಸಿದರೆ, ಆದರೆ ರಾಮನು ಶ್ರೀಲಂಕಾದಿಂದ ಬಂದಿದ್ದ ರಾವಣನ ಕಿರಿಯ ಸಹೋದರ ವಿಭೀಷಣನಿಗೆ ಈ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದನು.

ವಿಭೀಷಣನು ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಶ್ರೀಲಂಕಾಕ್ಕೆ ಹೋಗುವಾಗ ತಿರುಚ್ಚಿ ಕಾವೇರಿ ನದಿಯ ದಡವನ್ನು ತಲುಪಿದನು. ಆದರೆ ಆತ ಮೂರ್ತಿಯನ್ನು ಓರ್ವ ಕುರಿ ಕಾಯುವ ಹುಡುಗನ ಕೈಗೆ ಇಟ್ಟು ಇದನ್ನು ನೆಲಕ್ಕೆ ಇಡಬೇಡ ಈಗ ಹಿಂದಿರುಗುತ್ತೇನೆ ಎಂದಿದ್ದನಂತೆ. ಆದರೆ ಆ ಹುಡುಗ ಕೆಲ ಹೊತ್ತು ಕಾದು ವಿಗ್ರಹವನ್ನು ನೆಲದ ಮೇಲಿಟ್ಟನು.

ವಿಭೀಷಣ ಕಾವೇರಿಯಲ್ಲಿ ಸ್ನಾನ ಮಾಡಿ ಬಂದು ನೋಡಿದಾಗ, ವಿಗ್ರಹ ನೆಲದ ಮೇಲಿತ್ತು. ವಿಭೀಷಣ ವಿಗ್ರಹವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದನು ಆದರೆ ಸಾಧ್ಯವಾಗಲಿಲ್ಲ. ಬಾಲಕನಾಗಿ ಬಂದ ಗಣಪತಿಯು 'ವಿಗ್ರಹವನ್ನು ಕೆಳಗಿಳಿಸಿದ್ದು ನಾನೇ' ಎಂದು ಹೇಳಿ ಬೆಟ್ಟದ ಮೇಲಿದ್ದ ಕೋಟೆಯ ಬಳಿ ಹೋಗಿ ಕುಳಿತನಂತೆ.

ಆದರೆ ವಿಭೀಷಣ ಇಷ್ಟಕ್ಕೆ ಸುಮ್ಮನಾಗದೆ ಅಲ್ಲಿಯೇ ತಪಸ್ಸಿಗೆ ಕುಳಿತನಂತೆ. ಈ ವೇಳೆ ಶ್ರೀರಂಗನಾಥರು ಪ್ರತ್ಯಕ್ಷರಾಗಿ ನನ್ನ ದೇವಾಲಯ ಇಲ್ಲಿಯೇ ಕಟ್ಟುವಂತೆಯೂ ಶ್ರೀಲಂಕಾದ ಕಡೆಗೆ ಅದರ ಮೂಖವಿರುವಂತೆಯೂ ಹೇಳಿದರಂತೆ. ಇದಾದ ಬಳಿಕ ಚೋಳ ರಾಜರು ಇಲ್ಲಿ ಬೃಹತ್ ದೇವಾಲಯ ಕಟ್ಟಿದರು. ಆದರೆ ಒಮ್ಮೆ ಕಾವೇರಿ ನದಿ ಪ್ರವಾಹದಿಂದಾಗಿ ಇಡೀ ದೇವಾಲಯ ಮುಚ್ಚಿ ಹೋಗಿತ್ತು. ಬಳಿಕ ಮತ್ತೆ ದೇವಾಲಯವನ್ನು ಪತ್ತೆ ಮಾಡಿ ನವೀಕರಿಸಲಾಗಿತ್ತಂತೆ.

English summary

There Is A Connection Between Ayodhya Rama And Sriranganath Swamy..!

You all know the story of Atmalinga of Gokarna temple. This story of Sriranganatha Swami says that the same happened to Ravana's brother Vibhishana.
Story first published: Sunday, January 21, 2024, 14:30 [IST]
X
Desktop Bottom Promotion