ರೈತನಿಗೆ 1 ಕೋಟಿ ಪರಿಹಾರ ನೀಡಿ ಪೇಚಿಗೆ ಸಿಲುಕಿದ ರೈಲ್ವೆ..! ಇದು ಒಂದು ಮರದ ಕಥೆ!

ಜಮೀನು ವಿವಾದಗಳು, ಸರ್ಕಾರದ ಪರಿಹಾರ ಸಂಬಂಧವಾಗಿ ನೀವು ಹಲವು ಸುದ್ದಿಗಳ ಕೇಳಿರುತ್ತೀರಿ. ಸರ್ಕಾರ ರೈತರ ಜಮೀನನ್ನು ಖರೀದಿ ಮಾಡುವುದು ಪರಿಹಾರ ನೀಡುವುದು ಸ್ವಾದೀನ ಪಡಿಸಿಕೊಳ್ಳುವುದು ಹೀಗೆ ಯಾವುದಾದರು ವಿಚಾರದಿಂದ ಸುದ್ದಿಯಾಗುವುದು ಸಾಮಾನ್ಯ. ಅದ್ರಲ್ಲೂ ರೈಲ್ವೆ ಇಲಾಖೆ ಹೊಸ ಮಾರ್ಗಗಳಿಗಾಗಿ ಸಾವಿರಾರು ಎಕರೆ ಭೂಮಿಯನ್ನು ಪಡೆದು ರೈತರಿಗೆ ಪರಿಹಾರ ನೀಡಲು ಮುಂದಾಗುತ್ತದೆ.

ಹೊಸ ಮಾರ್ಗ ಸಂಬಂಧವಾಗಿ ರೈಲ್ವೆ ಇಲಾಖೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವುದು ನೋಡಬಹುದು. ಹಾಗೆ ರೈತರಿಗೆ ಪರಿಹಾರ ನೀಡುವಾಗಲು ಹಲವು ರೀತಿ ಸಮಸ್ಯೆಗಳಾಗುವುದು ನೋಡಬಹುದು. ಈಗ ಇದೇ ರೈಲ್ವೆ ಇಲಾಖೆ ರೈತರೊಬ್ಬರಿಂದಲೇ 1 ಕೋಟಿ ರೂಪಾಯಿ ಮರಳಿ ಪಡೆಯಲು ಮುಂದಾಗಿದೆ.

Railway Seeks Refund After Rs 1 Crore Red Sandalwood Tree Is Revalued At Just Rs 10 981

ರೈಲ್ವೆ ಇಲಾಖೆ ಪರಿಹಾರವಾಗಿ ನೀಡಿದ್ದ 1 ಕೋಟಿ ರೂಪಾಯಿಯನ್ನು ರೈತನು ಮರಳಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಲಾಗಿದೆ. ಇದಕ್ಕೆ ಕಾರಣವಾಗಿದ್ದು ಒಂದು ಮರ. ಹಾಗಾದ್ರೆ ಏನಿದು ಪ್ರಕರಣ ರೈತನಿಗೆ ನೀಡಿದ ಪರಿಹಾರ ಮರಳಿ ಪಡೆಯುತ್ತಿರುವುದೇಕೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮಹಾರಾಷ್ಟ್ರದ ಯವಾತ್ಮಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ರೈತರೊಬ್ಬರ ಜಮೀನಿನಲ್ಲಿ ಹೊಸ ರೈಲು ಮಾರ್ಗ ಹೋಗುವುದಿತ್ತು. ಆದ್ರೆ ಜಮೀಗೆ ಸೂಕ್ತ ಪರಿಹಾರ ನೀಡಲಾಗಿತ್ತು. ಆದ್ರೆ ಜಮೀನಿನಲ್ಲಿದ್ದ ಮರಗಳ ಪರಿಶೀಲನೆ ಹಾಗೂ ಅವುಗಳ ಮೌಲ್ಯ ಅರಿತು ಪರಿಹಾರ ನೀಡುವುದು ತಡವಾಗಿತ್ತು. ಅದರಂತೆ ಆತನ ಜಮೀನಿನಲ್ಲಿದ್ದ ಒಂದು ಮರಕ್ಕೆ ಬರೋಬ್ಬರಿ 1 ಕೋಟಿ ಪರಿಹಾರ ನೀಡಲು ಮುಂದಾಗಲಾಗಿತ್ತು.

94 ವರ್ಷದ ರೈತ ಕೇಶವ್ ಶಿಂಧೆ ಎಂಬಾತರ ಜಮೀನಿನಲ್ಲಿದ್ದ ಕೆಂಪು ಬಣ್ಣದ ಮರವೊಂದರ ಮೌಲ್ಯ 1 ಕೋಟಿ ಎಂದು ರೈತನ ಮಕ್ಕಳು ಪರಿಹಾರ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದು ಕೆಂಪು ರಕ್ತ ಚಂದನವೆಂದು, ಅಪರೂಪದ ಮರವೆಂದು ಹೇಳಿದ್ದರು. ಹಾಗೆ ಇದು 1 ಶತಮಾನದ ಹಿಂದಿನ ಮರವೆಂದು ವಾದ ಮಾಡಿದ್ದರು.

ಕೋರ್ಟ್ ಕೂಡ 1 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಇದರಂತೆ ರೈಲ್ವೆ ಇಲಾಖೆ ಕೂಡ 1 ಕೋಟಿ ರೂ. ಪರಿಹಾರ ನೀಡಿತ್ತು. ಆದ್ರೆ ಬಳಿಕ ಇಲಾಖೆಯು ಈ ಮರದ ಸಂಪೂರ್ಣ ಮಾಹಿತಿ ಪಡೆಯಲು ಮುಂದಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಪತ್ರ ಬರೆದು ಮರದ ವೈಜ್ಞಾನಿಕ ಪರೀಕ್ಷೆ ನಡೆಬೇಕು ಎಂದು ಕೇಳಿಕೊಂಡಿತ್ತು.

ಹೊರಬಿತ್ತು ಅಸಲಿ ಸತ್ಯ

ಮೊದಲು ಇದು ರಕ್ತ ಚಂದನ ಎಂದು 1 ಕೋಟಿ ರೂಪಾಯಿ ನೀಡಲಾಗಿತ್ತು. ಆದ್ರೆ ಪರೀಕ್ಷೆಯ ಬಳಿಕ ಇದು ಕೇವಲ 10 ಸಾವಿರ ಬೆಲೆ ಬಾಳುವ ಮರ ಎಂದು ತಿಳಿದುಬಂದಿದೆ. ಬಳಿಕ ರೈಲ್ವೆ ಇಲಾಖೆಗೆ ಆಘಾತ ಆಗಿದೆ. ವೈಜ್ಞಾನಿಕ ಮೌಲ್ಯಮಾಪನವು ಮರವು ರಕ್ತ ಚಂದನವಲ್ಲ ಬದಲಿಗೆ ಇದು ಬಿಜಸಲ್ (ಪ್ಟೆರೊಕಾರ್ಪಸ್ ಮಾರ್ಸುಪಿಯಂ) ಎಂದು ಬಹಿರಂಗಪಡಿಸಿತು. ಈ ಮರದ ಮೌಲ್ಯ ಕೇವಲ 10,981 ರೂಪಾಯಿ ಎಂದು ತಿಳಿದುಬಂದಿದೆ. ಈಗ ರೈಲ್ವೆ ಇಲಾಖೆ ರೈತನಿಗೆ ನೀಡಿದ ಹಣ ಮರಳಿ ನೀಡುವಂತೆ ಕೇಳಿಕೊಂಡಿದೆ. ಸದ್ಯ ಈ ಪ್ರಕರಣ ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿದೆ. ಆದ್ರೆ ರೈತನ ಪರ ವಕೀಲರು ಇದೊಂದೇ ಮರವಲ್ಲ ಜಮೀನಿನಲ್ಲಿದ್ದ ಬೇರೆ ಮರಗಳನ್ನು ಅಪಮೌಲ್ಯ ಮಾಡಲಾಗಿದೆ, ರೈತನಿಗೆ ದೊರೆಯಬೇಕಿದ್ದ ಪರಿಹಾರದ ಹಣ ಸರಿಯಾಗಿ ಸಿಕ್ಕಿಲ್ಲ ಎಂದು ವಾದಿಸಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆ ಇನ್ನು ನಡೆಯುತ್ತಿದೆ.

English summary

Railway Seeks Refund After Rs 1 Crore Red Sandalwood Tree Is Revalued At Just Rs 10,981

A farmer has been asked to return the Rs 1 crore compensation paid by the Railways to a court. The reason for this is a tree.
Story first published: Friday, September 5, 2025, 10:45 [IST]
X
Desktop Bottom Promotion