For Quick Alerts
ALLOW NOTIFICATIONS  
For Daily Alerts

ಸತ್ಯ ಘಟನೆ: ಈ ಮಹಿಳೆಯ ದಿಟ್ಟ ಹೋರಾಟಕ್ಕೆ-ನಮ್ಮದೊಂದು ಸಲಾಂ...

By Arshad
|

ಅಪಘಾತ ಯಾರಿಗೂ, ಎಲ್ಲಿ ಬೇಕಾದರೂ ಸಂಭವಿಸಬಹುದು. ಇತ್ತೀಚೆಗೆ ರಸ್ತೆಯಲ್ಲಿ ಸುಮ್ಮನೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ತೆಂಗಿನ ಮರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿಲ್ಲವೇ? ನಿತ್ಯವೂ ನಮ್ಮ ರಸ್ತೆಗಳಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಹಲವಾರು ಮುಗ್ಧರ ಪ್ರಾಣ ಹೋಗುವುದು ಮಾತ್ರವಲ್ಲ, ಬದುಕುಳಿದವರಿಗೆ ಜೀವನಪರ್ಯಂತ ಅಂಗವಿಕಲತೆಯೂ ಕಾಡಬಹುದು.

ಆದರೆ ಈ ಪರಿಯ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡ ಮಹಿಳೆಯೊಬ್ಬರು ಈ ವಿಕಲತೆಯನ್ನು ಮೀರಿದ ಸಾಧನೆಯ ಬಗ್ಗೆ ಕೇಳಿದರೆ ಮಾತ್ರ ನೀವು ಬೆರಗಾಗುವುದು ಖಚಿತ. ಅಂದು ಆಕೆ ನಿತ್ಯದಂತೆ ಆಟೋ ಹಿಡಿಯದೇ ಬಸ್ ನಲ್ಲಿ ಹೋಗೋಣವೆಂದು ನಿರ್ಧರಿಸಿದ್ದಳು. ಏಕೆಂದರೆ ಆಟೋ ಬಾಡಿಕೆ ದುಬಾರಿಯಾಗಿದ್ದು ಈಕೆಗೆ ಭರಿಸಲು ಕಷ್ಟವಾಗಿತ್ತು. ಮುಂದೇನಾಯಿತು? ಈ ಘಟನೆ ಆಕೆಯ ಜೀವನವನ್ನು ಹೇಗೆ ಬದಲಿಸಿತು? ಎಂಬ ಕುತೂಹಲವನ್ನು ಆಕೆಯ ಮಾತುಗಳನ್ನೇ ಕೇಳಿ ತಣಿಸಿಕೊಳ್ಳಿ..

Leg Got Crushed In A Road Accident

ಆ ದುರ್ವಿಧಿಯ ದಿನ
ಫೆಬ್ರವರಿ 3, 2010. ನಾನು ಬೆಂಗಳೂರಿನಲ್ಲಿರುವ ಮನೆಗೆ ಹಿಂದಿರುಗಲು ಎಂದಿನಂತೆ ರಿಕ್ಷಾ ಏರಬೇಕಿತ್ತು. ಆದರೆ ಅಂದು ರಿಕ್ಷಾ ಚಾಲಕರು ದುಬಾರಿ ಹಣ ಕೇಳುತ್ತಿದ್ದರು. ಆದ್ದರಿಂದ ನಾನು ಬಸ್ ಹತ್ತಿದೆ. ಆದರೆ ಬಸ್ ಇಳಿಯುವ ಸಮಯದಲ್ಲಿ ಇನ್ನೂ ಪೂರ್ಣವಾಗಿ ಇಳಿದೇ ಇರಲಿಲ್ಲ, ಆಗಲೇ ಬಾಗಿಲು ಮುಚ್ಚಿ ಭರ್ರನೇ ಮುಂದೆ ಚಲಿಸಿಯೇ ಬಿಟ್ಟಿತ್ತು ಕ್ಷಣಾರ್ಧದಲ್ಲಿ ಬಸ್ಸಿನ ಹಿಂದಿನ ಚಕ್ರ ನನ್ನ ಕಾಲ ಮೇಲೆ ಹರಿದಿತ್ತು. ಮೊಣಕಾಲ ಕೆಳಗಿನ ಭಾಗ ಅಪ್ಪಚ್ಚಿಯಾಗಿತ್ತು. ಮೊಣಕಾಲಿನ ಚಿಪ್ಪು ಒಂದು ದಾರದಲ್ಲಿ ನೇತಾಡುತ್ತಿತ್ತು. ರಕ್ತ ಧಾರಾಕಾರವಾಗಿ ಹರಿಯುತ್ತಿತ್ತು. ಅಸಾಧ್ಯ ನೋವಿನ ನಡುವೆ ಅಕ್ಕ ಪಕ್ಕದವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದುದು ಮಾತ್ರ ನೆನಪಿದೆ ಅಷ್ಟೇ. ಮತ್ತೇನಾಯಿತೋ ಗೊತ್ತಿಲ್ಲ.

ಆಸ್ಪತ್ರೆಗೆ ದಾಖಲು
ತಕ್ಷಣವೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಯಿತು. ಅಪಘಾತದ ಪರಿಣಾಮದ ಆಘಾತದಿಂದ ನನ್ನ ಪ್ರಮುಖ ಅಂಗಗಳೂ ನಿಷ್ಟೇಷ್ಟಿತಗೊಂಡಿದ್ದವು. ರಕ್ತ ಪರಿಚಲನೆ ಗಟ್ಟಿಯಾಗಿ ಗ್ಯಾಂಗ್ರೀನ್ ಪ್ರಾರಂಭವಾಗಿತ್ತು. ವೈದ್ಯರಿಗೆ ನಿರ್ವಾಹವಿಲ್ಲದೇ ನನ್ನ ಕಾಲನ್ನು ಶಾಶ್ವತವಾಗಿ ನಿವಾರಿಸಬೇಕಾಗಿ ಬಂದಿತ್ತು. ನನಗೆ ಪ್ರಜ್ಞೆ ಮರಳಿದ ಬಳಿಕ ನನ್ನ ಕಾಲಿರುವ ಭಾಗದಲ್ಲಿ ಕೇವಲ ಏಳು ಇಂಚಿನ ಮುಂಡು ಮಾಂಸ ಮತ್ತು ಮೂಳೆಯ ತುಂಡಿದ್ದುದು ನೋಡಿ ಜೀವನವೇ ಕೊನೆಗೊಂಡಷ್ಟು ದುಃಖವಾಗಿತ್ತು. ಜೀವನವೇ ಬೇಡ ಅನ್ನಿಸಿತ್ತು. ಆದರೆ ನಿಜವಾಗಿ ನನಗೆ ಜೀವನದ ಧೈರ್ಯ ಮೂಡಿಸಿದವರು ನನ್ನ ಪ್ರಿಯತಮ.

ನನಗಾಗಿ ಅವರು ತಮ್ಮ ಅಮೇರಿಕಾದ ಉತ್ತಮ ಗಳಿಕೆಯ ಉದ್ಯೋಗವನ್ನು ತ್ಯಜಿಸಿ ಬೆಂಗಳೂರಿಗೆ ಆಗಮಿಸಿದರು. ಅಲ್ಲಿಯವರೆಗೂ ನನ್ನ ಪ್ರಿಯತಮ ನನ್ನ ಕೈಯನ್ನು ಕೇಳಿರಲಿಲ್ಲ. ಆದರೆ ಈ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಕೇಳಿದರು. ಈ ಬಗ್ಗೆ ಕಲ್ಪನೆಯನ್ನೇ ಮಾಡಿರದಿದ್ದ ನನಗೆ ಅತ್ಯಂತ ಸೋಜಿಗವಾಗಿತ್ತು ಏಕೆಂದರೆ ಅಪಘಾತದಿಂದ ನನ್ನ ದೇಹದ ಹಲವೆಡೆ ಗಾಯಗಳಾಗಿದ್ದು ಕಲೆಗಳು ಇನ್ನೂ ಹಾಗೇ ಉಳಿದಿದ್ದವು ಪ್ರಮುಖವಾಗಿ ನನಗೊಂದು ಕಾಲೇ ಇರಲಿಲ್ಲ. ಏಕಾಗಿ ನನ್ನನ್ನು ಬಯಸುತ್ತಿರುವೆ ಎಂದು ಕೇಳಿದ್ದಕ್ಕೆ ಅವರು "ನಾನು ಪ್ರೀತಿಸಿದ್ದು ನಿನ್ನ ಆತ್ಮವನ್ನೇ ಹೊರತು ದೇಹವನ್ನಲ್ಲ" ಎಂದು ಉತ್ತರಿಸಿದ. ಈತನ ನಿರ್ಧಾರಕ್ಕೆ ಈತನ ತಂದೆತಾಯಿಯರೂ ಒಪ್ಪಿಗೆ ನೀಡಿದ್ದರು. ಬಳಿಕ ಆಸ್ಪತ್ರೆಯಲ್ಲಿದ್ದಾಗಲೇ ಮತ್ತೊಮ್ಮೆ ನನ್ನ ಕೈ ಯಾಚಿಸಿದ. ನನ್ನ ಮನೆಯವರೂ ಒಪ್ಪಿಗೆ ನೀಡಿದ ಬಳಿಕ ಜನವರಿ ೨೦೧೧ರಲ್ಲಿ ನಮ್ಮ ವಿವಾಹವಾಯಿತು.

ನಾನು ಗರ್ಭಿಣಿಯೂ ಆದೆ
2012ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಸ್ನಾರ್ಕೆಲಿಂಗ್ ಅಥವಾ ನೀರಿನಲ್ಲಿ ಮುಳುಗಿ ಪೈಪಿನಿಂದ ಉಸಿರಾಡುತ್ತಾ ಸಮುದ್ರತಳವನ್ನು ನೋಡುವ ಮೋಜಿನಲ್ಲಿದ್ದಾಗ ನನಗೆ ವಾಕರಿಕೆ ಪ್ರಾರಂಭವಾಯಿತು. ಮನೆಗೆ ಹಿಂದಿರುದ ಬಳಿಕ ನನಗೆ ಮಾಸಿಕ ಚಕ್ರ ಈ ತಿಂಗಳು ಸಂಭವಿಸಿಯೇ ಇಲ್ಲ ಎಂದು ಅರಿವಾಯಿತು. ಬಳಿಕ ನಮಗೆ ನಾನು ಗರ್ಭ ಧರಿಸಿರಬಹುದು ಎಂಬ ಅನುಮಾನವುಂಟಾಗಿತ್ತು. ಒಂದು ಕಾಲಿಲ್ಲದ ಹೆಳವೆ ಗರ್ಭಿಣಿಯಾಗುವುದು ನಿಜಕ್ಕೂ ಒಂದು ಸೋಜಿಗ. ಈ ಬಗ್ಗೆ ಯಾರಲ್ಲಿಯೂ ಯಾವ ಮಾಹಿತಿಯೂ ಇರಲಿಲ್ಲ. ಆದರೆ ಅಂತರ್ಜಾಲದಲ್ಲಿ ಸಿಕ್ಕ ಒಂದು ಚಿಕ್ಕ ಲೇಖನವನ್ನೇ ಆಧರಿಸಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ.

ಆದರೆ ಈ ಮಾಹಿತಿ ದೇಹದ ತೂಕವನ್ನು ಆಧರಿಸಿದ್ದು ನನಗೊಂದು ಕಾಲೇ ಇಲ್ಲದ ಕಾರಣ ದೇಹದ ತೂಕ ತಪ್ಪು ಲೆಕ್ಕ ತೋರಿಸುತ್ತಿತ್ತು. ಹಾಗಾಗಿ ನಮ್ಮ ಮೈತೂಕ ಸುಮಾರು ಇಪ್ಪತ್ತೈದು ಕೇಜಿ ಏರಿತು. ನನ್ನ ಕೃತಕ ಕಾಲನ್ನು ಮತ್ತೊಮ್ಮೆ ಈ ದೇಹದ ತೂಕಕ್ಕೆ ಅನುಗುಣವಾಗಿರುವಂತೆ ಬದಲಿಸಲಾಯಿತು ಹಾಗೂ ನಾನು ಓಡಾಡಲು ವಾಕರ್ ಬಳಸತೊಡಗಿದೆ. 2013ರ ಜೂನ್ ನಲ್ಲಿ ಸಿಸೇರಿಯನ್ಹೆ ರಿಗೆಯ ಮೂಲಕ ನನಗೆ ಗಂಡುಮಗುವಾಯಿತು. ಬಳಿಕ ನನ್ನ ಜೀವನವೇ ಬದಲಾಯಿತು.

ನನ್ನ ಶಕ್ತಿ...
ಅಭಿಮನ್ಯು ಗರ್ಭದಲ್ಲಿದ್ದಾಗಲೇ ತಾಯಿಯ ಮಾತುಗಳನ್ನು ಕೇಳುತ್ತಿದ್ದನಂತೆ. ನನಗಂತೂ ಈ ವಿಷಯ ನಿಜವೇ ಅನ್ನಿಸಿತ್ತು. ಏಕೆಂದರೆ ನನ್ನ ಮಗ ಗರ್ಭದಲ್ಲಿದ್ದಾಗಲೇ ನನ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಹೆರಿಗೆಯ ಬಳಿಕ ನನ್ನ ಮಗ ನನ್ನ ಜೀವವೇ ಆಗಿ ಹೋದ. ಆತನ ಲಾಲನೆ ಪಾಲನೆಯಲ್ಲಿ ನನ್ನನ್ನೇ ಪೂರ್ಣವಾಗಿ ತೊಡಗಿಸಿಕೊಂಡೆ. ಆತನನ್ನು ನಡೆಸಲು ಅಥವಾ ಸ್ನಾನ ಮಾಡಿಸಲು ನಾನು ಅಶಕ್ತಳಾಗಿದ್ದರೂ ಮುದ್ದು ಮಾಡಲು, ಅಪ್ಪಿಕೊಳ್ಳಲು, ಹಾಲೂಡಿಸಲು ಶಕ್ತಳಾಗಿದ್ದೆ. ಆತ ಬೆಳೆಯುತ್ತಿದ್ದ ಪ್ರತಿ ಕ್ಷಣವನ್ನೂ ನಾನು ಜೀವನದ ಸಂತೋಷದ ಕ್ಷಣಗಳಾಗಿ ಅನುಭವಿಸಿದೆ.

ಈಗ ಈತ ನಾಲ್ಕರ ಪೋರ! ನನಗೆ ಯಾವುದೇ ನೆರವು ಬೇಕಿದ್ದರೂ ಮೊದಲು ಓಡಿ ಬರುತ್ತಾನೆ. ತನ್ನ ತಾಯಿ ಬಸ್ಸಿನಿಂದ ಇಳಿಯುವಾಗ ಹೇಗೆ ಕಾಲನ್ನು ಕಳೆದುಕೊಂಡಳು ಎಂಬುದನ್ನು ಇತರರಿಗೆ ವಿವರಿಸುತ್ತಾನೆ. ಇವನಿಗೆ ಭಾರತೀಯ ಪೌರಾಣಿಕ ಕಥೆಗಳೆಂದರೆ ಇಷ್ಟ. ಕೇವಲ ಇಪ್ಪತ್ತು ತಿಂಗಳಿನವನಾಗಿದ್ದಾಗಲೇ ನಮ್ಮ ರಾಷ್ಟ್ರಗೀತೆ 'ಜನಗಣಮನ'ವನ್ನು ಸ್ಪಷ್ಟವಾಗಿ ಹಾಡಲು ಪ್ರಾರಂಭಿಸಿದ್ದ. ಎರಡು ವರ್ಷ ವಯಸ್ಸಾದ ಬಳಿಕ ಮನೆಯಿಂದ ಹೊರಹೋಗದಿರುವುದು ಮತ್ತು ಮಗುವಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡಲು ಸಾಧ್ಯವಾಗದಿರುವುದು ನನಗೆ ದೊಡ್ಡ ಕೊರತೆ ಎಂದೆನ್ನಿಸತೊಡಗಿತು.

ಈ ಕೊರತೆಯನ್ನು ತುಂಬಬೇಕಾದರೆ ಮೊದಲಿಗೆ ನನಗೆ ನಾನೇ ಏನಾದರೂ ಮಾಡಬೇಕಿತ್ತು. ಇದಕ್ಕಾಗಿ ನಾನು ಮೊದಲು ನನ್ನಂತೆಯೇ ಕೈಕಾಲುಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳನ್ನು ಸಂಪರ್ಕಿಸಿದೆ. ಒಬ್ಬಿಬ್ಬರಿಂದ ತೊಡಗಿ ಹಲವು ವ್ಯಕ್ತಿಗಳು ಮುಂದೆ ಬಂದು ನಮ್ಮದೇ ಒಂದು ಚಿಕ್ಕ ಗುಂಪಾಯಿತು. ದಿನೇದಿನೇ ಈ ಗುಂಪು ಬೆಳೆಯುತ್ತಾ ಇಂದು ದೊಡ್ಡ ಗುಂಪಾಗಿದೆ. ಈ ಗುಂಪಿನ ಮೂಲಕ ನಡೆಸಿದ ಸಂವಾದದ ಮೂಲಕ ನಾವೆಲ್ಲಾ ಪಡೆದ ಪ್ರಯೋಜನ ಅಷ್ಟಿಷ್ಟಲ್ಲ. ಪರಿಣಾಮವಾಗಿ ಶೀಘ್ರವೇ ನನಗೊಂದು ಬ್ಲೇಡ್ ಇರುವ ಕೃತಕ ಕಾಲು (ಇಂಗ್ಲಿಷಿನ ಸಿ. ಅಕ್ಷರದ ಆಕಾರದ ಪಾದದಂತಿರುವ ಕೃತಕ ಕಾಲು) ದೊರಕಲಿದೆ.

ಇದರಿಂದ ನನಗೆ ಯಾರ ಸಹಾಯವೂ ಇಲ್ಲದೇ ಎಲ್ಲರಂತೆ ಓಡಾಡಲು ಸಾಧ್ಯವಾಗಲಿದೆ. ಸುಮ್ಮನೇ ಮನೆಯಲ್ಲಿ ಕುಳಿತು ಕೊರಗುತ್ತಿದ್ದರೆ ನನಗೆ ಇದು ಸಾಧ್ಯವಾಗುತ್ತಿದ್ದಿಲ್ಲ. ನಾಲ್ಕು ಗೋಡೆಗಳಿಂದ ಹೊರಬಂದು ಸಹಾಯ ಹಸ್ತ ಚಾಚಿದರೆ ಸಹಾಯ ಹಸ್ತ ನೀಡಲು ಈ ಜಗತ್ತಿನಲ್ಲಿ ಇಂದಿಗೂ ಸಹೃದಯಿಗಳು ಸಾವಿರಾರಿದ್ದಾರೆ. ಪ್ರೀತಿಸುವ ಪತಿ, ಪುತ್ರ, ನಾಲ್ಕು ಜನರ ಬಾಂಧವ್ಯ, ಸಮಾಜದಲ್ಲಿ ಮನ್ನಣೆ, ಉತ್ತಮ ಆರೋಗ್ಯ, ಈ ಜೀವನ ಸುಖಕರವಲ್ಲ ಎನ್ನದಿರಲು ಇನ್ನೇನು ಕಾರಣ ನನಗೆ ಉಳಿದಿದೆ? ನಾನೀಗ ಹೆಚ್ಚು ಜೀವನಕ್ಕೆ ತೆರೆದುಕೊಂಡಿದ್ದೇನೆ. ಇನ್ನೂ ಹೆಚ್ಚಿನದನ್ನು ಸಾಧಿಸುವ ಛಲ ಮೂಡಿದೆ. ನನಗೆ ಇದು ಜೀವನದ ನಿಜವಾದ ಸಾರವೇ ಆಗಿದೆ.

Image Source

English summary

Real-life Story: Her Leg Got Crushed In A Road Accident!

Tragedy can strike us at any point of time and this brave woman's story will make you realise this hard fact.It was on a regular day and all that she did was take a bus instead of an auto, as the drivers were asking for huge fares.Read her story in her own words on how she has shown the world that we do not have to play a victim card at all times and sometimes choose to fight and lead a great life.
Story first published: Sunday, September 17, 2017, 14:46 [IST]
X
Desktop Bottom Promotion