2 ವರ್ಷದ ಹಿಂದೆ ಪದ್ಮಶ್ರೀ ಪಡೆದಾತ ಈಗ ದಿನಗೂಲಿ ಕಾರ್ಮಿಕ..!

ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಕೂಡ ಒಂದಾಗಿದೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೆಲವೇ ಕೆಲವು ಮಂದಿಗೆ ಈ ಗೌರವ ಒಲಿದುಬರುತ್ತದೆ. ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಅಂದರೆ ಅದೊಂದು ತಪಸ್ಸು ಮಾಡಿದಂತೆ.

ಆದರೆ ಕಳೆದ ಎರಡು ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಸಾಧಕರೊಬ್ಬರು ಈಗ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಅದನ್ನು ಕಂಡ ಜನರು ಶಾಕ್‌ ಆಗಿದ್ದಾರೆ. ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ಅವರ ಸಾಧನೆ ಗುರುತಿಸಿ ಪದ್ಮಶ್ರೀ ನೀಡಿ ಗೌರವಿಸಿತ್ತು. ಆದರೆ ಇಂದು ದಿನ ಕೂಲಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ.

Padma Shri Awardee Darshanam Mogulaiah Turns As Daily Wage Worker In Hyderabad

ಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗುಳಯ್ಯ ಈಗ ದಿನಗೂಲಿ ಕಾರ್ಮಿಕರು, ಅವರು ವಿಶೇಷ ಸಂಗೀತ ವಾದ್ಯವಾದ 'ಕಿನ್ನೇರ' ವನ್ನು ನುಡಿಸುವವರಾಗಿದ್ದಾರೆ. ಹೀಗಾಗಿ 73 ವರ್ಷದ ಅವರು ವಿಶೇಷ ಸಂಗೀತ ವಾದ್ಯ ಬಳಸುವ ಮೂಲಕ ಸಾಧನೆ ಮಾಡಿದ್ದರಿಂದ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.

ಅವರು ಹೈದರಾಬಾದ್‌ನ ಹೊರಭಾಗದಲ್ಲಿ ಈಗ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ಅವರಿಗೆ ತೆಲಂಗಾಣ ರಾಜ್ಯಸರ್ಕಾರ 1 ಕೋಟಿ ರೂಪಾಯಿ ನಗದು ಹಾಗೂ ನಿವೇಶನ ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ ಹಣವನ್ನು ನೀಡಿದೆ ಎಂದು ತಿಳಿದುಬಂದಿದೆ. ನಿವೇಶನವನ್ನೂ ನೀಡಿತ್ತು ಎಂದು ವರದಿಯಾಗಿದೆ.

ದಿನಗೂಲಿ ನೌಕರರಾಗಿದ್ದೇಕೆ.?

ಸರ್ಕಾರದಿಂದ ಸಿಕ್ಕ 1 ಕೋಟಿ ರೂಪಾಯಿಯಲ್ಲಿ ಅವರು ಮಗಳ ಮದುವೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರ ಪ್ರೋತ್ಸಾಹ ಧನವಾಗಿ ನೀಡಿದ್ದ ಹಣದಿಂದ ಮಗಳ ಮದುವೆ ಮಾಡಿ, ಅಲ್ಪ ಸ್ವಲ್ಪ ಸಾಲ ತೀರಿಸಿರುವುದಾಗಿ ಹೇಳಿದ್ದಾರೆ. ನಿವೇಶನದಲ್ಲಿ ಮನೆ ಕಟ್ಟಲು ಮುಂದಾಗಿ ಹಣವಿಲ್ಲದೆ ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾದ ಬಳಿಕ ಈಗ ಜೀವನ ನಿರ್ವಹಣೆಗಾಗಿ ಕೂಲಿ ಮಾಡಲು ಮುಂದಾಗಿದ್ದಾರೆ.

ಪದ್ಮಶ್ರೀ ಬಳಿಕ ಎಲ್ಲೆಲ್ಲೂ ಫೇಮಸ್

ಅವರು ಕಿನ್ನೇರ ನುಡಿಸಿ ಫೇಮಸ್ ಆಗಿದ್ದಕ್ಕಿಂತ ಅವರಿಗೆ ಪದ್ಮಶ್ರೀ ಸಿಕ್ಕ ಬಳಿಕ ಎಲ್ಲೆಲ್ಲೂ ಫೇಮಸ್ ಆಗಿದ್ದರು. ಒಂದಿಷ್ಟು ದಿನಗಳ ಕಾಲ ಎಲ್ಲಾ ವೇದಿಕೆ ಸಮಾರಂಭದಲ್ಲೂ ಅವರ ಸಂಗೀತ ವಾದ್ಯ ಇರುತ್ತಿತ್ತು. ಆದರೆ ಅಲ್ಲಿ ಅವರು ಹಣ ಪಡೆಯುತ್ತಿದ್ದರೇ ಅಥವಾ ಗೌರವಾರ್ಥವಾಗಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರೇ ಎಂಬುದು ತಿಳಿದುಬಂದಿಲ್ಲ.

ಆದರೆ ಈಗ ಕುಟುಂಬ ನಿರ್ವಹಣೆಯಿಂದಾಗಿ ನಿತ್ಯ ಕಟ್ಟಡ ಕಾರ್ಮಿಕರಂತೆ ಕೆಲಸ ಮಾಡಿ ಕೂಲಿ ಪಡೆದು ಜೀವನ ನಡೆಸುತ್ತಿದ್ದಾರೆ.

ಮೊಗುಲಯ್ಯ ಅವರಿಗೆ 9 ಮಂದಿ ಮಕ್ಕಳಿದ್ದಾರೆ. ಅದರಲ್ಲಿ ಮೊದಲ ಪುತ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಪ್ರತಿ ತಿಂಗಳು 7 ಸಾವಿರ ರೂಪಾಯಿ ಬೇಕಾಗಿದೆಯಂತೆ, ಹೀಗಾಗಿ ಅವರು ಕೂಲಿ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಮೊಗುಲಯ್ಯ ದಕ್ಕಲಿ ಸಮುದಾಯಕ್ಕೆ ಸೇರಿದವರು. ಇದು ಪರಿಶಿಷ್ಟ ಜಾತಿ ಮಾದಿಗರ ಉಪಪಂಗಡ ಎಂದು ವರ್ಗೀಕರಿಸಲಾಗಿದೆ. ಸಮಾಜದ ಅಂಚಿನಲ್ಲಿ ವಾಸಿಸುವ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ದಕ್ಕಲಿಗರು ಸಾಮಾನ್ಯವಾಗಿ ಇತರ ಮಾದಿಗರಿಂದ ಭಿಕ್ಷೆಯನ್ನು ಅವಲಂಬಿಸಿರುತ್ತಾರೆ. ಅವರನ್ನು ಹಾಡಿ ಹೊಗಳುತ್ತಾರೆ. ಸಾಂಪ್ರದಾಯಿಕವಾಗಿ, ದಕ್ಕಲಿಗಳು ಕಿನ್ನೇರವನ್ನು ನುಡಿಸುತ್ತಾರೆ. ಉದ್ದವಾದ ಬಿದಿರಿನ ಕುತ್ತಿಗೆ ಮತ್ತು ಒಣ ಟೊಳ್ಳಾದ ಕುಂಬಳಕಾಯಿಗಳಿಂದ ಮಾಡಿದ ತಂತಿ ವಾದ್ಯ ಅನುರಣಕಗಳಾಗಿ ಕಾರ್ಯನಿರ್ವಹಿಸುತ್ತದೆ. ತಂತಿಗಳನ್ನು ಸಾಂಪ್ರದಾಯಿಕವಾಗಿ ಪ್ರಾಣಿಗಳ ನರಗಳಿಂದ ತಯಾರಿಸಲಾಗುತ್ತದೆ, ಆದರೆ ಈಗ ಅದನ್ನು ಲೋಹದಿಂದ ಬದಲಾಯಿಸಲಾಗಿದೆ.

English summary

Padma Shri Awardee Darshanam Mogulaiah Turns As Daily Wage Worker In Hyderabad

The videos of Darshanam Mogulaiyya, who was awarded the Padma Shri two years ago, is now working as a daily wage worker, and the people who saw it are shocked.
Story first published: Friday, May 3, 2024, 17:30 [IST]
X
Desktop Bottom Promotion