ಗಣೇಶ ವಿಸರ್ಜನೆ ಮಾಡುವಾಗ ಈ ನಿಯಮಗಳನ್ನು ಮರೆಯದಿರಿ

ಗಣೇಶ ಚತುರ್ಥಿ ಎಂದರೆ ಎಷ್ಟೊಂದು ಸಡಗರ-ಸಂಭ್ರಮ. ಗಣಪತಿ ಮನೆಗೆ ಬರುವಾಗ ದೂರದಲ್ಲಿರುವ ಮಕ್ಕಳು ಮನೆಗೆ ಬರುತ್ತಾರೆ, ನೆಂಟರಿಷ್ಟರು ಬರುತ್ತಾರೆ, ಅಡುಗೆ ಮನೆಯಲ್ಲಿ ಮೋದಕಗಳ ಪರಿಮಳ, ಗಣಪತಿಯ ಪೂಜೆ ಎಲ್ಲವೂ ನಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗಣಪತಿಯನ್ನು ಕೂರಿಸಿದ ಮೇಲೆ ವಿಸರ್ಜನೆ ಮಾಡಬೇಕು.

ಗಣಪತಿಯನ್ನು 3, 7, 10ನೇ ದಿನದಂದು ವಿಸರ್ಜನೆ ಮಾಡಲಾಗುವುದು. ಗಣಪತಿಯನ್ನು ವಿಸರ್ಜನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಆ ನಿಯಮಗಳೇನು ಎಂದು ನೋಡೋಣ ಬನ್ನಿ:

Ganesha Visarjane 2023

ಗಣೇಶನನ್ನು ವಿಸರ್ಜನೆ ಏಕೆ ಮಾಡಲಾಗುವುದು?
ಗಣೇಶನನ್ನು ನೀರಿನಲ್ಲಿ ಮುಳುಗಿಸಿದಾಗ ಗಣೇಶ ಸ್ವರ್ಗದ ಕಡೆಗೆ ಪ್ರಯಾಣಿಸುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಗಣೇಶನ ಪ್ರತಿಷ್ಠಾಪನೆ, ಪೂಜೆ, ವಿಸರ್ಜನೆಯನ್ನು ನಮ್ಮ ಬದುಕಿಗೆ ಹೋಲಿಸಿದರೆ ಹುಟ್ಟು-ಬದುಕು-ಸಾವು ಎಂಬ ನಮ್ಮ ಬದುಕಿನ ಚಕ್ರವನ್ನು ಸೂಚಿಸುತ್ತದೆ. ಗಣೇಶನನ್ನು ವಿಸರ್ಜನೆ ಮಾಡುವಾಗ ಅದಕ್ಕೊಂದು ಕ್ರಮ ಇದೆ, ಅದರಂತೆ ವಿಸರ್ಜನೆ ಮಾಡಬೇಕು. ಗಣೇಶನನ್ನು ವಿಸರ್ಜನೆ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ:

ಈ ವರ್ಷ ಗಣೇಶನನ್ನು ಸೆಪ್ಟೆಂಬರ್ 28ಕ್ಕೆ ವಿಸರ್ಜನೆ ಮಾಡಲಾಗುವುದು:
ಗಣೇಶನನ್ನು ವಿಸರ್ಜನೆ ಮಾಡುವ ಮುನ್ನ ಪೂಜೆಯನ್ನು ಮಾಡಬೇಕು
ಗಣೇಶನನ್ನು ವಿಸರ್ಜನೆ ಮಾಡುವ ಮುನ್ನ ಗಣೇಶನಿಗೆ ಅದ್ಧೂರಿಯಾಗಿ ಪೂಜೆಯನನ್ನು ಮಾಡಬೇಕು. ಗಣೇಶನನ್ನು ಹಾಗೇ ತೆಗೆದುಕೊಂಡು ಹೋಗಿ ನೀರಿಗೆ ಹಾಕುವುದು ತಪ್ಪು. ಪೂಜೆಯಲ್ಲಿ ಗಣೇಶನಿಗೆ ಇಷ್ಟವಾದ ಗರಿಕೆ, ಮೋದಕ, ಲಡ್ಡು, ಕರ್ಜಿಕಾಯಿ ಎಲ್ಲವನ್ನೂ ಅರ್ಪಿಸಬೇಕು. ಹೂ-ಹಣ್ಣುಗಳನ್ನು ಅರ್ಪಿಸಬೇಕು.

ಮಂತ್ರಗಳನ್ನು ಪಠಿಸಿ
ಗಣೇಶನ ಮಂತ್ರಗಳನ್ನು ಭಕ್ತಿಯಿಂದ ಪಠಿಸಿ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ

ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

ಗಜಾನನಂ ಭೂತ ಗಾಣಧಿ ಸೇವಿತಂ ಕಪಿಥ ಜಂಬೋ ಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ ಪಾದ ಪಂಕಜಂ.

ಹೀಗೆ ಗಣೇಶನ ಮಂತ್ರಗಳನ್ನು ಪಠಿಸಿ ಆರಾಧಿಸಿ.

ನೈವೇದ್ಯ ಅರ್ಪಿಸಿ, ಆರತಿ ಬೆಳಗಿ
ಗಣೇಶನಿಗೆ ನೈವೇದ್ಯ ಅರ್ಪಿಸಿ, ಆರತಿ ಬೆಳಗಿ ನಂತರ ನೆರೆದವರಿಗೆ ನೈವೇದ್ಯವನ್ನು ಹಂಚಿ.

ಗಣೇಶನನ್ನು ಬಿಡುವ ಮುನ್ನ ಎಲ್ಲರೂ ಗಣೇಶನ ವಿಗ್ರಹ ಮುಟ್ಟಿ ಭಕ್ತಿಯಿಂದ ನಮಸ್ಕರಿಸಿ,

ಸಂಭ್ರಮದಿಂದ ಬೀಳ್ಕೊಡಿ
ಗಣೇಶನನ್ನು ನಾವು ಎಷ್ಟು ಸಂಭ್ರಮದಿಂದ ಮನೆಗೆ ತರುತ್ತೇವೋ ಅಷ್ಟೇ ಸಂಭ್ರಮದಿಂದ ಬೀಳ್ಗೊಡಬೇಕು. ಗಣಪತಿ ಬಪ್ಪ ಮೋರಿಯಾ... ಎಂದು ಜೋರಾಗಿ ಹೇಳುತ್ತಾ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾ ಗಣೇಶ ವಿಸರ್ಜನೆಯ ಮೆರವಣಿಗೆ ಮಾಡಬೇಕು.

ಗಣೇಶ ಮೂರ್ತಿಯನ್ನು ಸಂಪೂರ್ಣ ಮುಳುಗಿಸಿ
ಗಣೇಶ ಮೂರ್ತಿಯನ್ನು ಸಂಪೂರ್ಣ ಮೂರು ಸಲ ಮುಳುಗಿಸಿ ನಂತರ ಗಣೇಶನ ವಿಸರ್ಜನೆ ಮಾಡಿ ತಿರುಗಿ ನೋಡದೆ ಬರಬೇಕು.

ಸುರಕ್ಷತೆ ಕಡೆ ಗಮನ ನೀಡಿ
ನೀವು ದೊಡ್ಡ ಗಾತ್ರದ ಗಣಪತಿಯನ್ನು ಕೂರಿಸಿದ್ದರೆ ವಿಸರ್ಜನೆ ಮಾಡಲು ಸ್ವಲ್ಪ ಆಳವಾದ ಗುಂಡಿಗೆ ಇಳಿಯಬೇಕಾಗುತ್ತದೆ, ಆದ್ದರಿಂದ ಸುರಕ್ಷತೆಕ್ರಮಗಳೊಂದಿಗೆ ವಿಸರ್ಜನೆ ಮಾಡಿ. ಗಣೇಶನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ... ಗಣಪತಿ ಬಪ್ಪಾ ಮೋರಿಯಾ....

English summary

Ganesha Visarjane 2023: Don't Forget These Rules

Ganesha Visarjane 2023: Devotees must follow these rules during ganesha visarjana, read on.
Story first published: Wednesday, September 20, 2023, 17:13 [IST]
X
Desktop Bottom Promotion