ರಾಮನ ಹೆಸರಲ್ಲಿ ಹುಟ್ಟಿಕೊಂಡ ವಂಚಕರ ಜಾಲ..! ಎಚ್ಚರ ನಿಮಗೂ ಬರಬಹುದು ಈ ಸಂದೇಶ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಹಂತವಾಗಿ ಧಾರ್ಮಿಕ ಕಾರ್ಯಕ್ರಮಗಳು ಸಾಗಿವೆ. ಈಗಾಗಲೇ ರಾಮಲಲ್ಲಾನ ಮೂರ್ತಿ ದೇವಾಲಯದೊಳಗೆ ಇರಿಸಲಾಗಿದೆ. ಇದರ ಜೊತೆ ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠಾಪನೆಗೆ ಸಾವಿರಾರು ಗಣ್ಯರು ಆಗಮಿಸುತ್ತಿದ್ದಾರೆ. ಇವರ ಜೊತೆ ಕೋಟಿ ಕೋಟಿ ರಾಮ ಭಕ್ತರು ಈ ಸುದಿನಕ್ಕಾಗಿ ಕಾದಿದ್ದಾರೆ.

ಈ ನಡುವೆ ರಾಮನ ಹೆಸರಲ್ಲಿ ಆನ್‌ಲೈನ್ ವಂಚಕರು ಹುಟ್ಟಿಕೊಂಡಿದ್ದಾರೆ. ಅಯೋಧ್ಯೆಗೆ ತೆರಳಬೇಕು, ರಾಮನ ಆಶೀರ್ವಾದ ಪಡೆಯಬೇಕು ಎಂದುಕೊಂಡಿದ್ದ ಭಕ್ತರ ಬಯಕೆಯನ್ನೇ ದಾಳವಾಗಿಸಿಕೊಂಡಿರುವ ವಂಚಕರು ಆನ್‌ಲೈನ್‌ನಲ್ಲಿ ಹಣ ಕೀಳಲು ಮುಂದಾಗಿದ್ದಾರೆ. ವಿಐಪಿ ಪಾಸ್ ಹೆಸರಲ್ಲಿ ಭಕ್ತರನ್ನು ವಂಚಿಸುವ ಜಾಲ ಹುಟ್ಟಿಕೊಂಡಿದೆ.

ಅಯೋಧ್ಯೆ ರಾಮ ಮಂದಿರದ ಉಚಿತ ಪಾಸ್‌ಗಾಗಿ ಈ ಕೆಳಗಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಎಂಬ ಸಂದೇಶ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಮ ಜನ್ಮ ಭೂಮಿ ಗೃಹ ಸಂಪರ್ಕ್ ಅಭಿಯಾನ್ ಎಂಬ ಹೆಸರಿನಡಿ ಈ ಜಾಲ ಹರಡಿಕೊಂಡಿದೆ. ಇದಕ್ಕಾಗಿ ವಿಐಪಿ ಪಾಸ್ ನೀಡಲಾಗುವುದು. ನೀವು ಫಾರ್ಮ್ ವೊಂದನ್ನು ಫಿಲ್ ಮಾಡಿ ಸಾಕು ಎಂದು ಸಂದೇಶ ಕಳುಹಿಸಲಾಗುತ್ತಿದೆ.

Ram Mandir

ಇದೊಂದು apk ಫೈಲ್‌ ಆಗಿದ್ದು, ಈ ಆಪ್ ಡೌನ್‌ಲೋಡ್ ಆಗಲಿದೆ. ಬಳಿಕ ನಿಮ್ಮ ವೈಯಕ್ತಿಕ ಸಂದೇಶಗಳು, ಕಾರ್ಡ್ ಸಂಖ್ಯೆಗಳು, ಸಂಪರ್ಕಗಳು ಇತ್ಯಾದಿ ಸೇರಿದಂತೆ ಒಬ್ಬರ ವೈಯಕ್ತಿಕ ಡೇಟಾವನ್ನು ಕದಿಯಲು ಸ್ಕ್ಯಾಮ್‌ಸ್ಟರ್‌ಗೆ ಸಹಾಯ ಮಾಡಬಹುದು. ಇದು ನಿಮ್ಮ ಮೊಬೈಲ್ ಫೋನ್‌ಗಳನ್ನು ರಿಮೋಟ್‌ನಿಂದ ನಿಯಂತ್ರಿಸಲು ಮತ್ತು ನಿಮ್ಮ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಹ್ಯಾಕರ್‌ಗೆ ಸಹಾಯ ಮಾಡುತ್ತದೆ.

ರಾಮನ ಹೆಸರಲ್ಲಿ ಹಣ ಸಂಗ್ರಹ

ಶ್ರೀ ರಾಮ ಜನ್ಮಭೂಮಿ ತೀರ್ಥ ಛೇತ್ರ ಅಯೋಧ್ಯೆ, ಉತ್ತರ ಪ್ರದೇಶ" ಎಂಬ ನಕಲಿ ಸಾಮಾಜಿಕ ಮಾಧ್ಯಮ ಪುಟವೊಂದು ಭಕ್ತರ ಬಳಿ ಹಣ ಸಂಗ್ರಹಿಸುತ್ತಿರುವುದು ವರದಿಯಾಗಿದೆ. ಅವರು ನೀಡಿರುವ ವೆಬ್‌ಸೈಟ್ ತೆರೆದಾಗ ಅದರಲ್ಲಿ ಕ್ಯೂ ಆರ್ ಕೋಡ್ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇದು ರಾಮ ಮಂದಿರ ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್ ಆಗಿಲ್ಲ. ಬದಲಿಗೆ ಯಾರೋ ಹಣ ಸಂಗ್ರಹಿಸಲು ಮಾಡಿಕೊಂಡಿರುವ ವೆಬ್‌ಸೈಟ್ ಆಗಿದೆ. ಅಲ್ಲಿ ಹಣ ಪಡೆದು ರಾಮ ಮಂದಿರಕ್ಕಾಗಿ ಉಪಯೋಗಿಸಲಾಗುವುದು ಎಂದು ಬರೆದುಕೊಳ್ಳಲಾಗಿದೆ. ಆದರೆ ಇದೊಂದು ವಂಚಕರ ವೆಬ್‌ಸೈಟ್ ಆಗಿದ್ದು, ದೇಣಿಗೆ ನೀಡಿದರೆ ಆ ಹಣ ವಂಚಕರ ಕೈ ಸೇರುತ್ತಿದೆ.

ಹಾಗಾದರೆ ಜನವರಿ 22 ರಂದು ರಾಮ ಮಂದಿರಕ್ಕೆ ಪ್ರವೇಶ ಪಡೆಯುವುದು ಹೇಗೆ?

ಜನವರಿ 22 ರಂದು ಆಹ್ವಾನಗಳನ್ನು ಹೊಂದಿರುವ ಅಥವಾ ಸರ್ಕಾರಿ ಕರ್ತವ್ಯದಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಅಯೋಧ್ಯೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳೀಯ ಹೋಟೆಲ್‌ಗಳಿಗೆ ಸಾಧ್ಯವಾದಷ್ಟು ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲು ಮತ್ತು ಟ್ರಸ್ಟ್‌ನ ಆಹ್ವಾನಿತರಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜನವರಿ 22ರ ಬಳಿಕವಷ್ಟೇ ಆರತಿ ಬುಕ್ಕಿಂಗ್ ತೆರೆದುಕೊಳ್ಳಲಿದ್ದು, ಅಂದಿನಿಂದ ಆನಲೈನ್‌ನಲ್ಲಿ ಪಾಸ್ ಬುಕ್ ಮಾಡಬಹುದಾಗಿದೆ. ದಿನಕ್ಕೆ ಮೂರು ಬಾರಿ ಆರತಿ ನಡೆಸಲಾಗುತ್ತದೆ. ಪಾಸ್ ಹೊಂದಿರುವವರು ಮಾತ್ರ ಭಾಗವಹಿಸಬಹುದು. ಆರತಿಗೆ ಪಾಸ್ ಅನ್ನು ಸರ್ಕಾರ ನೀಡಿದ ಗುರುತಿನ ಚೀಟಿಗಳನ್ನು ಒದಗಿಸುವ ಮೂಲಕ ಪಡೆಯಬಹುದು. ಇದೀಗ, ಪಾಸ್‌ನೊಂದಿಗೆ ಕೇವಲ 30 ಜನರಿಗೆ ಮಾತ್ರ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಈ ಸಂಖ್ಯೆಯನ್ನು ಹೆಚ್ಚಿಸಬಹುದು. ಈ ಸೇವೆಯು ಉಚಿತವಾಗಿರುತ್ತದೆ.

English summary

Don't Fall Prey To These Scams Being Run To Loot Devotees In Name Of Ram

Online fraudsters have sprung up in Rama's name. Fraudsters have taken advantage of the desire of the devotees to go to Ayodhya and seek the blessings of Rama and have started extorting money online.
Story first published: Friday, January 19, 2024, 11:00 [IST]
X
Desktop Bottom Promotion