ರಾಮಮಂದಿರ ಉದ್ಘಾಟನೆಗೆ ಭಕ್ತರು ತೆರಳಬಹುದೇ? ಇಲ್ಲಿದೆ ಸ್ಪಷ್ಟನೆ..!

ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ರಾಮಮಂದಿರ ಕಣ್ತುಂಬಿಕೊಳ್ಳುವ ಸಮಯ ಹತ್ತಿರವಾಗಿದೆ. ಇನ್ನೊಂದು ತಿಂಗಳಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ದೇವಾಲಯದ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಅಯೋಧ್ಯೆ ವಿಮಾನ ನಿಲ್ದಾಣವು ತಿಂಗಳ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡಿಸೆಂಬರ್ 30 ರಂದು ದೆಹಲಿಯಿಂದ ಅಯೋಧ್ಯೆಗೆ ತನ್ನ ಉದ್ಘಾಟನಾ ವಿಮಾನ ಹಾರಾಟ ನಡೆಸಲಿದೆ ಎಂದು ತಿಳಿದುಬಂದಿದೆ.

Ram Mandir

ಜನವರಿ 16 ರಿಂದ ಮಾರ್ಗದಲ್ಲಿ ನಿತ್ಯವು ವಿಮಾನಯಾನ ಸೇವೆಯನ್ನು ಪ್ರಾರಂಭಿಸುತ್ತದೆ. ಇಂಡಿಗೋ ಡಿಸೆಂಬರ್ 30 ರಂದು ತನ್ನ ಉದ್ಘಾಟನಾ ವಿಮಾನ ಹಾರಾಟ ನಡೆಸಲಿದ್ದು, ಜನವರಿ 6 ರಿಂದ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸಲಿದೆ.

ಸಾರ್ವಜನಿಕರಿಗಿಲ್ಲ ಪ್ರವೇಶ

ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನದಂದು ಆಹ್ವಾನಿತರಿಗೆ ಮಾತ್ರ ಅಥವಾ ಸರ್ಕಾರಿ ಕರ್ತವ್ಯದಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಅಯೋಧ್ಯೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಟ್ರಸ್ಟ್‌ನಿಂದ ಆಹ್ವಾನಿತರಿಗೆ ಆದ್ಯತೆ ನೀಡುವ ಸಲುವಾಗಿ ಮುಂಗಡ ಬುಕಿಂಗ್‌ಗಳನ್ನು ರದ್ದುಗೊಳಿಸಲು ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪರಿಶೀಲನಾ ಸಭೆಯಲ್ಲಿ, ಸ್ಥಳೀಯ ಹೋಟೆಲ್‌ಗಳಿಗೆ ಸಾಧ್ಯವಾದಷ್ಟು ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲು ಮತ್ತು ಟ್ರಸ್ಟ್‌ನ ಆಹ್ವಾನಿತರಿಗೆ ಆದ್ಯತೆ ನೀಡುವಂತೆ ಅಯೋಧ್ಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯಾತ್ರಾರ್ಥಿಗಳಿಗೆ ಧರ್ಮಶಾಲಾಗಳು ಮತ್ತು ಹೋಟೆಲ್‌ಗಳಲ್ಲಿ ನಿಗದಿತ ದರದಲ್ಲಿ ತಂಗಲು ವಸತಿ ವ್ಯವಸ್ಥೆ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ. ಜನವರಿ 22 ರಂದು, ಆಮಂತ್ರಣ ಪತ್ರಗಳನ್ನು ಹೊಂದಿರುವವರು ಅಥವಾ ಸರ್ಕಾರಿ ಕರ್ತವ್ಯದಲ್ಲಿ ನಿಯೋಜನೆಗೊಂಡವರು ಮಾತ್ರ ಅಯೋಧ್ಯೆಗೆ ಬರಲು ಸಾಧ್ಯವಾಗುತ್ತದೆ. ಈ ದಿನದಂದು ಸುಮಾರು 100 ವಿಮಾನಗಳು ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.

ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಯೋಧ್ಯೆ ರೈಲು ನಿಲ್ದಾಣವನ್ನು ಡಿಸೆಂಬರ್ 30 ರಂದು ಉದ್ಘಾಟಿಸಲಾಗುವುದು. ಜೊತೆಗೆ ವಂದೇ ಭಾರತ್ ಸೇರಿದಂತೆ ಎರಡು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಹಸಿರು ನಿಶಾನೆ ತೋರಲಿದ್ದಾರೆ.

ಕಣಕಣದಲ್ಲೂ ರಾಮ ಕೀ ಚೈನ್ ವೈರಲ್

ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆ ಸಿಂಗಾರಗೊಳ್ಳುತ್ತಿದೆ. ಬೀದಿ ಬೀದಿಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದೆ. ಈ ನಡುವೆ ಬಾಲರಾಮನ ಕೀ ಚೈನ್‌ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಬಾಲ ರಾಮನ ಚಿತ್ರವಿದ್ದು, ಕಣ ಕಣದಲ್ಲೂ ರಾಮ ಎಂದು ಬರೆಯಲಾಗಿದೆ. ಇನ್ನೊಂದು ಭಾಗದಲ್ಲಿ ರಾಮ ಬಾಣ ಕೈಯಲ್ಲಿ ಹಿಡಿದು ಕಮಲದ ಮೇಲೆ ಕುಳಿತಿರುವ ಚಿತ್ರವಿದೆ.

ಸಾರ್ವಜನಿಕರಿಗೆ ರಾಮನ ದರ್ಶನ ಯಾವಾಗಿಂದ?

ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಇದಾದ ಮಾರನೆ ದಿನ ಜನವರಿ 23ರಿಂದ ಸಾರ್ವಜನಿಕರ ದರ್ಶನಕ್ಕೆ ದೇವಾಲಯ ಮುಕ್ತವಾಗಲಿದೆ ಎಂದು ತಿಳಿದುಬಂದಿದೆ. ಈ ಭವ್ಯ ದೇವಾಲಯ ದರ್ಶನಕ್ಕೆ ಲಕ್ಷ ಲಕ್ಷ ಭಕ್ತಾಧಿಗಳು ಮೊದಲ ದಿನದಿಂದಲೇ ಹರಿದುಬರುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ವಿರೋಧ ಪಕ್ಷಗಳಿಗೂ ಆಹ್ವಾನ

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಆದರೆ ಯಾವೆಲ್ಲಾ ನಾಯಕರು ಈ ಸಮಾರಂಭದಲ್ಲಿ ಹಾಜರಾಗುತ್ತಾರೆ ಎಂಬುದು ಗೌಪ್ಯವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ಅಧಿರ್ ರಂಜನ್ ಚೌಧರಿ ಅವರಿಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇವರಲ್ಲಿ ಎಷ್ಟು ಮಂದಿ ಹಾಜರಾಗುತ್ತಾರೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಿಲ್ಲ.

English summary

Can Devotees Go To The Inauguration Of Ram Mandir? Here Is The Clarification..!

Exactly a month remains from today for the historic consecration ceremony of the Ram Janmabhoomi Temple. preparations are underway in full swing to welcome dignitaries from across the nation and globe to the grand event
Story first published: Friday, December 22, 2023, 18:06 [IST]
X
Desktop Bottom Promotion