ಹೆಲ್ಮೆಟ್ ಧರಿಸಿ ಬಸ್ ಚಲಾಯಿಸುತ್ತಿರುವ ಚಾಲಕರು..! ಯಾಕೆ ಗೊತ್ತಾ?

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು ಎಂಬ ನಿಯಮವಿದೆ. ಇಲ್ಲದಿದ್ದರೆ ಪೊಲೀಸರು ದಂಡ ವಿಧಿಸೋದು ಕಾಮನ್, ಆದ್ರೆ ಇಲ್ಲೊಂದು ಕಡೆ ಎಲ್ಲಾ ಬಸ್ ಚಾಲಕರು ಸಹ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಬಸ್ ಹತ್ತುತ್ತಿರುವ ಪ್ರಯಾಣಿಕರು ಚಾಲಕರು ಹೆಲ್ಮೆಟ್ ಧರಿಸಿರುವುದು ಕಂಡು ಅಚ್ಚರಿಗೆ ಒಳಗಾದರು.

ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಸರ್ಕಾರಿ ಬಸ್ ಚಾಲಕರು ಈ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸುತ್ತಿದ್ದಾರೆ. ಹಾಗಂತ ಇದು ಕಡ್ಡಾಯ ನಿಯಮವಲ್ಲ. ಜೊತೆಗೆ ಸರ್ಕಾರ ವಿಧಿಸಿದ ನಿಯಮವೂ ಅಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಂದ್‌ಗೆ ಕರೆ ಕೊಟ್ಟ ಹಿನ್ನಲೆ ಬಸ್ ಚಾಲಕರು ಹೆಲ್ಮೆಟ್ ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Bus Drivers Wearing Helmets Do You Know Why

ನಬಣ್ಣ ಅಭಿಜನ್ ರ್ಯಾಲಿಯಲ್ಲಿ ಪೊಲೀಸರ ಕ್ರಮವನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಪಶ್ಚಿಮ ಬಂಗಾಳದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಬಂದ್‌ಗೆ ಕರೆ ನೀಡಿದ್ದರಿಂದ, ಬಸ್ ಚಾಲಕರು ಬುಧವಾರ ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬಂದ್‌ನಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿತ್ತು, ಹಾಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿತ್ತು.

ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಸೇರುವಂತೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಬಸ್ ಚಾಲಕರೊಬ್ಬರು ತಿಳಿಸಿದ್ದಾರೆ. ಇಂದು ಬಂದ್‌ಗೆ ಕರೆ ನೀಡಿರುವುದರಿಂದ ಹೆಲ್ಮೆಟ್ ಧರಿಸಿದ್ದೇವೆ... ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ಸರ್ಕಾರ ಆದೇಶ ನೀಡಿದೆ ಎಂದು ಬಸ್ ಚಾಲಕರೊಬ್ಬರು ತಿಳಿಸಿದ್ದಾರೆ.

ಬಂದ್ ಮಾಡಲು ಕಾರಣವೇನು?

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯೆ ಪರವಾಗಿ ಇಡೀ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದೇ ವೇಳೆ ಈ ಪ್ರಕರಣ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಪ್ರತಿಭಟನಾ ನಿರತರ ಮೇಲೆ ಅಮಾನುಷವಾಗಿ ಲಾಠಿ ಏಟು, ಜಲಪಿರಂಗಿ, ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳ ಉಪಯೋಗಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗು ಬಂದ್ ಮಾಡಲು ನಿರ್ಧರಿಸಲಾಗಿದೆ.

ಬಿಜೆಪಿಯ ಬೆಳಗ್ಗೆ 6 ರಿಂದ ಸಂಜೆ 6 ರ ಸಾರ್ವತ್ರಿಕ ಮುಷ್ಕರಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಪಶ್ಚಿಮ ಬಂಗಾಳ ಸರ್ಕಾರ ಜನರನ್ನು ಒತ್ತಾಯಿಸಿದೆ. "ಸರ್ಕಾರವು ಬುಧವಾರ ಯಾವುದೇ ಬಂದ್‌ಗೆ ಅವಕಾಶ ನೀಡುವುದಿಲ್ಲ. ಜನರು ಅದರಲ್ಲಿ ಭಾಗವಹಿಸದಂತೆ ನಾವು ಒತ್ತಾಯಿಸುತ್ತೇವೆ. ಸಾಮಾನ್ಯ ಜೀವನಕ್ಕೆ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಲಪನ್ ಬಂಡೋಪಾಧ್ಯಾಯ ಪ್ರಕಟಣೆ ಹೊರಡಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ ಮತ್ತು ಎಲ್ಲಾ ಉದ್ಯೋಗಿಗಳು, ತುರ್ತು ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಅಥವಾ ರಜೆಯಲ್ಲಿರುವವರನ್ನು ಹೊರತುಪಡಿಸಿ, ಆಗಸ್ಟ್ 28 ರಂದು ಕರ್ತವ್ಯಕ್ಕೆ ವರದಿ ಮಾಡಬೇಕು ಅಥವಾ ಅವರ ಅನಧಿಕೃತ ಗೈರುಹಾಜರಿಗಾಗಿ ಶೋಕಾಸ್ ನೋಟಿಸ್ ಅನ್ನು ಎದುರಿಸಬೇಕಾಗುತ್ತದೆ ಎಂದು ಅಧಿಸೂಚನೆ ಸಹ ಹೊರಡಿಸಲಾಗಿದೆ. ಹೀಗಾಗಿ ಸರ್ಕಾರಿ ಬಸ್‌ನ ಚಾಲಕರು ಅನಿವಾರ್ಯವಾಗಿ ತಮ್ಮ ರಕ್ಷಣೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

English summary

Bus Drivers Wearing Helmets..! Do You Know Why?

All government bus drivers in West Bengal are driving buses wearing this helmet. As such it is not a mandatory rule. Also not a rule imposed by the government. It is known that bus drivers are wearing helmets behind BJP's bandh call in West Bengal.
Story first published: Wednesday, August 28, 2024, 12:02 [IST]
X
Desktop Bottom Promotion