ಬೆಂಗಳೂರು ಎಟಿಎಂ ಕಹಿ ಘಟನೆ ನೆನಪಿದ್ಯಾ.? ಆತ ಸಿಕ್ಕಿಬಿದ್ದಿದ್ದು ಹೇಗೆ? ಈಗ ಎಲ್ಲಿದ್ದಾನೆ..?

ನಿಮಗೆ ಬೆಂಗಳೂರು ಎಟಿಎಂ ಕೇಸ್ ನೆನಪಿರಬಹುದು. ಜ್ಯೋತಿ ಎಂಬ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಜೊತೆಗೆ ಪ್ರತಿ ಎಟಿಎಂ ಮುಂದೆ ಸೆಕ್ಯೂರಿಟಿ ಗಾರ್ಡ್ ಇರುವ ಕಾನೂನು ಸಹ ಜಾರಿಯಾಗುವಂತೆ ಮಾಡಿತ್ತು.

ಈ ಘಟನೆಯಲ್ಲಿ ಆರೋಪಿಯಾಗಿದ್ದವನ ಪತ್ತೆಗೆ ಎರಡು ರಾಜ್ಯದ ಪೊಲೀಸರು ಶ್ರಮಿಸಿದ್ದರು. ಬರೋಬ್ಬರಿ 300ಕ್ಕೂ ಹೆಚ್ಚು ಪೊಲೀಸರು ಈತನ ಹಿಂದೆ ಬಿದ್ದಿದ್ರು, ಹಾಗಾದ್ರೆ ಆತ ಸಿಕ್ಕಿಬಿದ್ದಿದ್ದು ಹೇಗೆ? ಈ ಆತ ಯಾರು..? ಈಗ ಎಲ್ಲಿದ್ದಾನೆ? ಅವನ ಕ್ರೈಮ್ ಹಿಸ್ಟರಿ ಏನು? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

Bangalore ATM assault incident

ಅದು ನವೆಂಬರ್ 19, 2013 ಬೆಂಗಳೂರಿನ ಜೆ.ಸಿ ರಸ್ತೆಯ ಎಟಿಎಂ ಒಳಗೆ 47 ವರ್ಷದ ಮಹಿಳೆಯ ಮೇಲೆ ನಡೆದ ಕ್ರೂರ ದಾಳಿಯ ಸಿಸಿಟಿವಿ ದೃಶ್ಯಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು. ಆಂಧ್ರಪ್ರದೇಶದ ಮೂಲದ 35 ವರ್ಷದ ಕೊಂಡಪ್ಪಗಿರಿ ಮಧುಕರ್ ರೆಡ್ಡಿ ಎಂಬಾತ ಜ್ಯೋತಿ ಎಂಬಾಕೆ ಮೇಲೆ ಮನಸೋಯಿಚ್ಛೆ ದಾಳಿ ನಡೆಸಿದ್ದ. ಆದ್ರೆ ಆತ ಸಿಕ್ಕಿಬಿದ್ದಿದ್ದು ಆಂಧ್ರದಲ್ಲೂ ಅದೂ ಕೊಲೆ ಕೇಸ್‌ನಲ್ಲಿ.

ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದಾಗ, ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಜೆಸಿ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂನಿಂದ ಸ್ವಲ್ಪ ಹಣ ಡ್ರಾ ಮಾಡಲು ಮುಂದಾದರು.

ಪೊಲೀಸ್ ಚಾರ್ಜ್‌ಶೀಟ್ ಪ್ರಕಾರ, ಅವರು ಎಟಿಎಂ ಒಳಗೆ ಪ್ರವೇಶಿಸಿದ ತಕ್ಷಣ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಶಟರ್ ಎಳೆದು ಹಣ ಡ್ರಾ ಮಾಡುವಂತೆ ಆಕೆಗೆ ಒತ್ತಾಯಿಸಿದ ಆಕೆ ತಿರಸ್ಕರಿಸಿದಾಗ ಬ್ಯಾಗ್‌ನಿಂದ ಕತ್ತಿ ಹೊರತೆಗೆದಿದ್ದ. ಹಣ ಡ್ರಾ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ. ಆದರೆ ಈ ಒತ್ತಡಕ್ಕೆ ಜ್ಯೋತಿ ಮಣಿಯಲಿಲ್ಲ. ಆತನ ಎದುರು ಹೋರಾಟಕ್ಕೆ ನಿಂತಳು. ಆದ್ರೆ ದರೋಡೆಯ ಉದ್ದೇಶದಿಂದ ಬಂದಿದ್ದ ಆತ ಕತ್ತಿಯಿಂದ ಹಲ್ಲೆ ಮಾಡಿದ್ದ.

ಜ್ಯೋತಿಯ ಮುಖಕ್ಕೆ ಹಾಗೂ ತಲೆಗೆ ಕತ್ತಿನಿಂದ ಹೊಡೆದಿದ್ದ, ಬಳಿಕ ಜ್ಯೋತಿಯ ಬ್ಯಾಗ್ ಕಸಿದುಕೊಂಡು ಅಲ್ಲಿಂದ ಓಡಿದ್ದ. ಆ ಬ್ಯಾಗ್‌ನಲ್ಲಿ 200 ರೂಪಾಯಿ ಹಾಗೂ ಒಂದು ನೋಕಿಯಾ ಮೊಬೈಲ್ ಫೋನ್ ಮಾತ್ರ ಇತ್ತು. ಆದ್ರೆ ವಿಪರೀತ ರಕ್ತಸ್ರಾವವಾಗಿ ಜ್ಯೋತಿ ಎಟಿಎಂ ಒಳಗೆ ಕುಸಿದು ಬಿದ್ದಿದ್ದಳು.

ದಾರಿಹೋಕರು ಎಟಿಎಂ ಮುಂದೆ ರಕ್ತದ ಕಲೆಗಳನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು, ಆದರೆ ಅಷ್ಟೊತ್ತಿಗಾಗಲೇ ಜ್ಯೋತಿ ಪ್ರಜ್ಞಾಹೀನರಾಗಿದ್ದರು. ಆಕೆಯನ್ನು ಆರಂಭದಲ್ಲಿ ನಿಮ್ಹಾನ್ಸ್ ಮತ್ತು ನಂತರ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆರಂಭದಲ್ಲಿ ರಚಿಸಲಾದ ಎರಡು ತನಿಖಾ ತಂಡಗಳ ಭಾಗವಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಈ ಘಟನೆಯು ರಾಷ್ಟ್ರದ ಗಮನವನ್ನು ಸೆಳೆಯಲು ಹೇಗೆ ತ್ವರಿತವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. "ಇದು ಕನ್ನಡ ಸುದ್ದಿ ವಾಹಿನಿಗಳು ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳ ಆರಂಭಿಕ ವರ್ಷಗಳು. ಇಡೀ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿ, ಅದು ವ್ಯಾಪಕವಾಗಿ ಪ್ರಸಾರವಾಯಿತು ಮತ್ತು ಸಾರ್ವಜನಿಕರಿಂದ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಸಿಸಿಟಿವಿ ದೃಶ್ಯಾವಳಿಗಳ ಹೊರತಾಗಿಯೂ ಅಪರಾಧಿಯನ್ನು ಇನ್ನೂ ಗುರುತಿಸದ ಕಾರಣ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದ್ಕರ್ ಅವರಿಗೆ ಭಾರೀ ಒತ್ತಡವಿತ್ತು ಎಂದು ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ಈ ಘಟನೆ ನಡೆದು ತನಿಖೆ ಕೈಗೊಂಡ ಪೊಲೀಸರಿಗೆ ಎಲ್ಲಿಯೂ ಮಾಹಿತಿ ಸಿಗಲಿಲ್ಲ. ಆಸ್ಪತ್ರೆಯಲ್ಲಿದ್ದ ಜ್ಯೋತಿ ಆರಂಭದಲ್ಲಿ ಮಾತನಾಡುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಈ ವೇಳೆ ಆರೋಪಿ ಪತ್ತೆಗಾಗಿ 5 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು. ಆದರೆ ಚಾಲಾಕಿ ಆರೋಪಿ ಗುರುತು ಸಿಗಬಾರದು ಎಂದು ತಲೆ ಬೋಳಿಸಿಕೊಂಡು ಕೇರಳಕ್ಕೆ ಓಡಿಹೋಗಿದ್ದ ಅಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ.

ಸುಮಾರು ಒಂದು ವರ್ಷವಾದರೂ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳು ಆಗಿರಲಿಲ್ಲ. ಏತನ್ಮಧ್ಯೆ, ಆಸ್ಪತ್ರೆಯಲ್ಲಿ ತಿಂಗಳು ಕಳೆದ ನಂತರ ಜ್ಯೋತಿ ನಿಧಾನವಾಗಿ ಚೇತರಿಸಿಕೊಂಡರು. ಆಕೆಯ ಮಾಹಿತಿ ಮೇಲೆ ಮತ್ತಷ್ಟು ತನಿಖೆ ಚುರುಕುಗೊಂಡಿತು.

ಜೈಲಿಂದ ತಪ್ಪಿಸಿಕೊಂಡಿದ್ದ ಮಧುಕರ್

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಂಬಳ್ಳಪಲ್ಲೆ ಗ್ರಾಮದ ಮಧುಕರ್ ರೆಡ್ಡಿ ವಾಂಟೆಡ್ ಕ್ರಿಮಿನಲ್ ಆಗಿದ್ದು, ಬಾಂಬ್ ದಾಳಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಧುಕರ್ ರೆಡ್ಡಿ 2011 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ.

ನ್ಯಾಯಾಲಯಕ್ಕೆ ಸಲ್ಲಿಸಿದ ಪೊಲೀಸ್ ದಾಖಲೆಗಳ ಪ್ರಕಾರ, 2005ರಲ್ಲಿ ರೆಡ್ಡಿ ಗ್ರಾಮದ ರೆಡ್ಡಿವಾರಿ ಆನಂದ ರೆಡ್ಡಿ ಮೇಲೆ ಬಾಂಬ್ ಎಸೆದಿದ್ದ ಮತ್ತು ಮದನಪಲ್ಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಕಡಪಾ ಸೆಂಟ್ರಲ್ ಜೈಲಿನಲ್ಲಿದ್ದ ಆತ ಡಿಸೆಂಬರ್ 2011 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ, ಜೊತೆಗೆ ಬೇರೆ ಬೇರೆ ಕಡೆ ಕೆಲಸ ಮಾಡಲು ಆರಂಭಿಸಿದ್ದ.

ಜ್ಯೋತಿ ಮೇಲೆ ಹಲ್ಲೆಗೂ 9 ದಿನ ಮೊದಲು ಕೊಲೆ

ಆತ ಬೆಂಗಳೂರಿಗೆ ಬರುವ 9 ದಿನಗಳ ಮುನ್ನ ಆಂಧ್ರ ಪ್ರದೇಶದಲ್ಲಿ ವೃದ್ಧೆಯೊಬ್ಬರ ಕೊಲೆ ಮಾಡಿದ್ದ. ನವೆಂಬರ್ 10 2023ರಂದು ಆತನ ಊರಿನಲ್ಲಿ ವಾಸವಿದ್ದ ವೃದ್ಧೆಯೊಬ್ಬರನ್ನು ಸಣ್ಣ ವಿಚಾರಕ್ಕೆ ಇರಿದು ಕೊಲೆ ಮಾಡಿದ್ದ, ಅಲ್ಲಿಂದ ಸೀದಾ ಆತ ಬಂದಿದ್ದು ಬೆಂಗಳೂರಿಗೆ. ಮಹಾನಗರಿಗೆ ಬಂದೊಡನೆ ಆತ ಹಣಕ್ಕಾಗಿ ಅಲೆದಾಡಿದ್ದ ಇದೇ ವೇಳೆ ಆತನ ಕಣ್ಣಿಗೆ ಬಿದ್ದಿದ್ದು ಎಟಿಎಂ. ಹಣಕ್ಕಾಗಿ ದರೋಡೆ ಮಾಡಲು ಮುಂದಾಗಿದ್ದ ಆತ ಜ್ಯೋತಿ ಮೇಲೆ ದಾಳಿ ಮಾಡಿದ್ದ, ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು ಪ್ರಾಣಾಪಾಯದಿಂದ ಪಾರಾಗಿದ್ದಳು.

ಪ್ರಸ್ತುತ ಮಂಡ್ಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆಗಿರುವ ತಿಮ್ಮಯ್ಯ ಅವರು ನವೆಂಬರ್ 10, 2013 ರಂದು ರೆಡ್ಡಿ ಮಾಡಿದ ಕೊಲೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ರೆಡ್ಡಿಯನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರು. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಪರಾರಿಯಾಗಿರುವವರ ಬಗ್ಗೆ ತನಿಖೆ ನಡೆಸುತ್ತಿದ್ದ ಆಂಧ್ರ ಪೊಲೀಸ್ ತಂಡವು ರೆಡ್ಡಿ ಅವರ ಪ್ರೊಫೈಲ್ ಅನ್ನು ನೋಡಿತ್ತು. ಅವರು ಮದನಪಲ್ಲಿಯಲ್ಲಿರುವ ಅಜ್ಜಿಯ ಮನೆಗೆ ಆಗಾಗ್ಗೆ ಬರುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿದುಕೊಂಡರು.

ಆತನ ಹಿಡಿಯಲು ನಿರಂತರ ಕಾರ್ಯಚರಣೆ ನಡೆಸಿದ ಆಂಧ್ರ ಪೊಲೀಸರು ರೆಡ್ಡಿಯನ್ನು 2017ರ ಜನವರಿ 31ರಂದು ಅಜ್ಜಿಯನ್ನು ಭೇಟಿಯಾಗಲು ಬಂದಿದ್ದಾಗ ಬಂಧಿಸಿದ್ದರು. ನಂತರ ನಡೆದ ವಿಚಾರಣೆಯಲ್ಲಿ ಬೆಂಗಳೂರು ದಾಳಿಯಲ್ಲಿ ತನ್ನ ಕೈವಾಡವನ್ನು ಬಹಿರಂಗಪಡಿಸಿದ್ದ. ಸಿಸಿಟಿವಿ ಚಿತ್ರಗಳು ಅವನ ಮುಖ ಮತ್ತು ಅವರು ವಿವರಿಸಿದ ಘಟನೆಗಳ ಅನುಕ್ರಮಕ್ಕೆ ಹೊಂದಿಕೆಯಾದವು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ತೂರು ಪೊಲೀಸ್ ವರಿಷ್ಠಾಧಿಕಾರಿ ಜಿ ಶ್ರೀನಿವಾಸ್, ಹಣಕ್ಕಾಗಿ ಆತ ಜ್ಯೋತಿಯ ಮೇಲೆ ಹಲ್ಲೆ ನಡೆಸಿದ್ದ ಎಂದಿದ್ದರು.

ಕದ್ದ ಮೊಬೈಲ್ ಅನ್ನು ಆತ 500 ರೂಪಾಯಿಗೆ ಮಾರಾಟ ಮಾಡಿದ್ದ, ಬಳಿಕ ಕೋರ್ಟ್‌ಗೆ ಈ ಮೊಬೈಲ್ ಅನ್ನು ಒಪ್ಪಿಸಲಾಗಿತ್ತು. ಜ್ಯೋತಿ ಅವರು ಸಹ ಕೋರ್ಟ್‌ನಲ್ಲಿ ಆತನ ಗುರುತಿಸಿದ್ದರು. ಫೆಬ್ರವರಿ 1, 2021 ರಂದು, 65ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಶ್ವರ ಅವರು ಮಧುಕರ್ ರೆಡ್ಡಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಸದ್ಯ ಆತ ಈಗ ಕೇಸ್ ಸಂಬಂಧ ಜೈಲು ವಾಸ ಅನುಭವಿಸುತ್ತಿದ್ದಾನೆ.

English summary

Bangalore ATM Case: A Timlapes Of Case Here In Kannada

The attack inside the ATM in Bangalore shocked the entire country. A woman was attacked with a sword while withdrawing money. Do you know how the culprit was caught in this incident?
Story first published: Sunday, February 18, 2024, 15:30 [IST]
X
Desktop Bottom Promotion