ಅಯೋಧ್ಯೆಯ ಜೊತೆ ಉದ್ಘಾಟನೆಗೊಂಡ ಮತ್ತೊಂದು ರಾಮನ ದೇವಾಲಯ..!! ಎಲ್ಲಿದೆ ಗೊತ್ತಾ?

ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿಂದು ಭಗವಾನ್ ಶ್ರೀರಾಮ ವಿರಾಜಮಾನರಾಗಿದ್ದಾನೆ. ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆ ಅಂತ್ಯಗೊಂಡಿದ್ದು, ನಾಳೆಯಿಂದ ರಾಮ ಭಕ್ತರು ಅಯೋಧ್ಯೆ ರಾಮನ ಕಣ್ತುಂಬಿಕೊಳ್ಳಲಿದ್ದಾರೆ. ಸುಮಾರು 500 ವರ್ಷಗಳ ಸುದೀರ್ಘ ಹೋರಾಟವಾಗಿ ಅಯೋಧ್ಯೆಯಲ್ಲಿ ರಾಮ ನೆಲೆಗೊಂಡಿದ್ದಾನೆ. ಆದರೆ ರಾಮಮಂದಿರ ಲೋಕಾರ್ಪಣೆಯ ದಿನವೇ ದೇಶದಲ್ಲಿ ಮತ್ತೊಂದು ರಾಮ ದೇವಾಲಯವೂ ಉದ್ಘಾಟನೆಗೊಂಡಿದೆ.

ಹೌದು ಈ ರಾಮಮಂದಿರ ಉದ್ಘಾಟನೆಯ ವಿಜೃಂಭಣೆಯ ನಡುವೆ ಸದ್ದಿಲ್ಲದೆ ಮತ್ತೊಂದು ರಾಮನ ದೇವಾಲಯ ಉದ್ಘಾಟನೆಗೊಂಡಿದೆ. ಅಯೋಧ್ಯೆಯಿಂದ ಬರೋಬ್ಬರಿ 1,000 ಕಿಮೀ ದೂರದಲ್ಲಿ, ಮತ್ತೊಂದು ಭವ್ಯವಾದ ರಾಮಮಂದಿರವು ಇಂದು ಆಧ್ಯಾತ್ಮಿಕ ಹೆಗ್ಗುರುತಾಗಿ ದೇಶಕ್ಕೆ ಸಮರ್ಪಿತವಾಗಿದೆ.

ಒಡಿಶಾದ ನಯಾಗಢ್‌ನ ಫತೇಗರ್ ಗ್ರಾಮದಲ್ಲಿ ಭಗವಾನ್ ರಾಮನಿಗೆ ಸಮರ್ಪಿತವಾದ 73 ಅಡಿ ಎತ್ತರದ ದೇಗುಲದ ಉದ್ಘಾಟನೆಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 165 ಅಡಿ ಎತ್ತರದಲ್ಲಿರುವ ಈ ದೇವಾಲಯವು ದೇಣಿಗೆ ಹಣದಲ್ಲಿ ನಿರ್ಮಾಣಗೊಂಡಿದೆ. 2017ರಲ್ಲಿ ಪ್ರಾರಂಭವಾದ ದೇವಾಲಯದ ಯೋಜನೆಯು 150 ಕ್ಕೂ ಹೆಚ್ಚು ಕಾರ್ಮಿಕರ ಶ್ರಮದ ಫಲವಾಗಿ ತಲೆಎತ್ತಿದೆ.

ಈ ದೇವಾಲಯವು ತಾರಾ ತಾರಿಣಿ ಮತ್ತು ಕೋನಾರ್ಕ್ ದೇವಾಲಯಗಳಂತಹ ಸಾಂಪ್ರದಾಯಿಕ ರಚನೆಗಳನ್ನು ನೆನಪಿಸುತ್ತದೆ, ದೇವಾಲಯದ ಗರ್ಭಗುಡಿಯು 65 ಅಡಿಗಳಷ್ಟು ಎತ್ತರದಲ್ಲಿದೆ. ಮುಖ್ಯ ದೇವಾಲಯದ ಸುತ್ತಲೂ ಸೂರ್ಯ ದೇವರು, ಭಗವಾನ್ ಶಿವ, ಗಣೇಶ ಮತ್ತು ಭಗವಾನ್ ಹನುಮಂತನಿಗೆ ಮೀಸಲಾಗಿರುವ ನಾಲ್ಕು ಹೆಚ್ಚುವರಿ ದೇವಾಲಯವೂ ಇದೆ.

ಈ ದೇವಾಲಯದಲ್ಲಿ 5.5 ಅಡಿ ಎತ್ತರದ ಶ್ರೀ ರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹವು ಪ್ರತಿಷ್ಠಾಪಿಸಲ್ಪಟ್ಟಿದೆ. ರಾಜಸ್ಥಾನದ ಶಿಲೆಗಳಿಂದ ಈ ಮೂರ್ತಿಗಳ ಕೆತ್ತನೆ ಕಾರ್ಯ ಮಾಡಲಾಗಿದೆ. ಅಯೋಧ್ಯೆಯ ರಾಮನ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ನಡೆಸಲಾದ ವಿಧಿ ವಿಧಾನಗಳೇ ಇಲ್ಲಿಯೂ ನೆರವೇರಿದೆ.

ಈ ಹಿಂದೆ ಗ್ರಾಮಸ್ಥರು ಬರಗಾಲದ ಸಮಯದಲ್ಲಿ ಮಳೆಗಾಗಿ ಈ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹೀಗಾಗಿ, ಅವರು ಹಿಂದೂ ನಂಬಿಕೆಗಳ ಪ್ರಕಾರ ಪವಿತ್ರ ಬೆಟ್ಟವನ್ನು ಗಿರಿ ಗೋವರ್ಧನ ಬೆಟ್ಟ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ, ಗ್ರಾಮಸ್ಥರ ನಂಬಿಕೆಯು ಈ ಬೆಟ್ಟವನ್ನು ಭಗವಾನ್ ರಾಮನ ವಾಸಸ್ಥಾನವಾಗಿ ನಂಬಿದ್ದರು. ಬಳಿಕ ಅಲ್ಲಿಯೇ ರಾಮನಿಗಾಗಿ ದೇವಸ್ಥಾನ ಕಟ್ಟಲು ಮುಂದಾದರು. ಇಡೀ ಗ್ರಾಮಸ್ಥರು ಸೇರಿದಂತೆ ಒಟ್ಟು 30 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದರು. ಅಲ್ಲದೆ ಉಳಿದ ಹಣವನ್ನು ಸರ್ಕಾರ ಬರಿಸಿದೆ ಎಂದು ವರದಿಯಾಗಿದೆ.

Rama Temple

ಕರ್ನಾಟಕದಲ್ಲೂ ರಾಮ ದೇವಾಲಯ ಲೋಕಾರ್ಪಣೆ

ಬೆಂಗಳೂರು ನಗರ ಜಿಲ್ಲೆಯ ಬಿದರಹಳ್ಳಿ ಹೋಬಳಿಯಲ್ಲಿ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಸಕುಟುಂಬ ಸಮೇತ ರಾಮ ಸೀತ ಲಕ್ಷ್ಮಣ ದೇವಾಲಯ & 33 ಅಡಿ ಎತ್ತರ ಏಕಶಿಲೆ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ.

ಮಂತ್ರಾಲಯದಲ್ಲೂ ರಾಮನ ಪ್ರತಿಷ್ಠಾಪನೆ

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಮುಹೂರ್ತದಲ್ಲೇ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಹನುಮನ 32 ಅಡಿ ವಿಗ್ರಹದ ಎದುರೇ ಪ್ರಭು ಶ್ರೀರಾಮನ 36 ಅಡಿ ಏಕಶಿಲಾ ವಿಗ್ರಹ ನೆಲೆಗೊಂಡಿದೆ. ಈ ಹಿಂದೆ ರಾಮ ಲಕ್ಷ್ಮಣ ವನವಾಸದ ವೇಳೆ ಆಂಧ್ರದ ಮಾದಾವರಂ ಬಳಿಯ ಅರಣ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅಂದು ಅವರು ಕುಳಿತು ವಿಶ್ರಾಂತಿ ಪಡೆದ ಬಂಡೆಯನ್ನು ರಾಯರ ಮೂಲ ಬೃಂದಾವನಕ್ಕೆ ಬಳಕೆ ಮಾಡಲಾಗಿದೆ.

English summary

Another Rama Temple Inaugurated Today..! Do You Know Where It Is..!

On the same day as the dedication of the Ram Mandir, another Rama temple was also inaugurated in the country. Yes, amid the grand opening of this Ram Mandir, another Rama temple has been inaugurated quietly.
Story first published: Monday, January 22, 2024, 19:00 [IST]
X
Desktop Bottom Promotion