ಊರುಗೋಲು ಹಿಡಿದು ಮಹದೇಶ್ವರ ಬೆಟ್ಟ ಹತ್ತಿದ 102 ವರ್ಷದ ಅಜ್ಜಿ..!

ದೇವಾಲಯ ಭೇಟಿ ನೀಡೋದು ತೀರ್ಥ ಯಾತ್ರೆ ಮಾಡೋದು ಇದೆಲ್ಲಾ 60 ವರ್ಷ ದಾಟಿದ ಮೇಲೆ ಹಿರಿಯ ಜೀವಗಳ ಆಸೆಯಾಗಿರುತ್ತೆ. ಅದೆಷ್ಟೋ ಮಂದಿ ಹಿರಿಯರು ಇದೇ ತಮ್ಮ ಕೊನೆ ಆಸೆ ಎಂದುಕೊಂಡಿರುತ್ತಾರೆ. ಕಾಶಿ. ರಾಮೇಶ್ವರ, ಅಮರನಾಥ ಯಾತ್ರೆ ಮಾಡಬೇಕು ಎಂದು ಕನಸು ಹೊತ್ತಿರುತ್ತಾರೆ. ಆದರೆ ಇದರಲ್ಲಿ ಕೆಲವರು ಆ ಕನಸನ್ನು ನನಸು ಮಾಡಿಕೊಂಡ್ರೆ ಇನ್ನೂ ಕೆಲವರ ಕನಸು ಕನಸಾಗಿಯೇ ಉಳಿಯುತ್ತೆ.

ಯಾಕಂದ್ರೆ ವಯಸ್ಸಾದ ಮೇಲೆ ನಡೆದಾಡುವುದೇ ಕಷ್ಟವಾದಾಗ ಇನ್ನು ಯಾತ್ರೆ ಮಾಡೋದು ಹೇಗೆ? ಇದೇ ಸಮಸ್ಯೆಯಿಂದ ಲಕ್ಷ ಲಕ್ಷ ಮಂದಿ ಅನಾರೋಗ್ಯದ ಕಾರಣದಿಂದಲೇ ಈ ಯಾತ್ರೆಗಳ ಕೈಬಿಡುತ್ತಾರೆ. ಮನೆಯಲ್ಲೇ ಇದ್ದು ದೇವರ ಜಪ ಮಾಡಿಕೊಂಡು ದಿನ ಕಳೆಯುತ್ತಾರೆ. ಆದರೆ ಇನ್ನೊಂದು ವರ್ಗದ ಮಂದಿ ಅಷ್ಟೊಂದು ದೊಡ್ಡ ದೊಡ್ಡ ದೇವಾಲಯಗಳಿಗೆ ಯಾತ್ರೆ ಹೋಗಲಾದೆ ಹತ್ತಿರದ ದೇವಾಲಯ ಸುತ್ತಲು ಮುಂದಾಗುತ್ತಾರೆ.

ಇದೇ ರೀತಿ ಇಲ್ಲೊಬ್ಬ ಶತಾಯುಷಿ ಅಜ್ಜಿಯೊಬ್ಬರು ಇಳಿ ವಯಸ್ಸಿನಲ್ಲೂ ಮಾದೇಶ್ವರನ ದರ್ಶನಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಯಾರು ಅಜ್ಜಿ? ಆಕೆಯ ಕಥೆ ಏನು ಎಂಬುದನ್ನು ನೋಡಿ.

A 102-year-old Woman Climbed Mahadeshwara Hills For Perform Pooja

ತುಮಕೂರಿನ ತಿಪಟೂರು ಮೂಲದ ಅಜ್ಜಿ ಇವರಾಗಿದ್ದು, ಆಕೆಗೆ ಈಗ ಬರೋಬ್ಬರಿ 102 ವರ್ಷವಂತೆ. ದೇವರಲ್ಲಿ ಅಪಾರ ನಂಬಿಕೆ ಇಟ್ಟಿರುವ ಪಾರ್ವತಮ್ಮ ಈ ಇಳಿ ವಯಸ್ಸಿನಲ್ಲೂ ಮಾದಶ್ವರನ ಬೆಟ್ಟ ಹತ್ತಿದ್ದಾರೆ. ಹೌದು ಕೈಯಲ್ಲಿ ಊರುಗೋಲು ಹಿಡಿದು ಕಡಿದಾದ ರಸ್ತೆಯಲ್ಲಿ, ಕಲ್ಲು ಮುಳ್ಳುಗಳ ದಾರಿ ಸವಿಸಿ ಮಾದೇಶ್ವರನ ಬೆಟ್ಟ ಏರುತ್ತಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿ ಉತ್ಸಾಹದಿಂದ ಮೆಟ್ಟಿಲುಗಳ ಹತ್ತಿ ಬರುತ್ತಿರುವುದು ಕಾಣಬಹುದು. ಆಕೆಯನ್ನು ಒಬ್ಬರು ಮಾತನಾಡಿಸಲು ಯತ್ನಿಸಿದ್ದು, ಯುವಕರೇ ನಾಚುವಂತೆ ಅವರು ಉತ್ತರ ನೀಡಿದ್ದಾರೆ. ಅವರು ತಮ್ಮ ಕುಟುಂಬದ ಜೊತೆ ಸೇರಿ ಬರೋಬ್ಬರಿ 18 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ 6 ವರ್ಷಗಳಿಂದಲೂ ಅವರು ಪಾದಯಾತ್ರೆ ಮಾಡುತ್ತಿದ್ದು, ಮಾದೇಶ್ವರನ ದರ್ಶನ ಪಡೆಯಲೆಂದೇ ಮೆಟ್ಟಿಲು ಹತ್ತಿ ಬರುತ್ತಾರಂತೆ. ಒಮ್ಮೆಯು ಅವರಿಗೆ ಆಯಾಸ, ಸುಸ್ತು ಆಗಿಯೇ ಇಲ್ಲವಂತೆ.


ಮೋದಿ ಪ್ರಧಾನಿಯಾಗಲಿ ಎಂದ ಅಜ್ಜಿ

ಇನ್ನು ಮೆಟ್ಟಿಲು ಹತ್ತುವಾಗ ಅಜ್ಜಿಯನ್ನು ಮಾತನಾಡಿಸಿದ ವ್ಯಕ್ತಿ ದೇವರಲ್ಲಿ ಏನು ಪ್ರಾರ್ಥನೆ ಮಾಡುತ್ತೀರಿ ಎಂದಿದ್ದಕ್ಕೆ, ಇಡೀ ದೇಶಕ್ಕೆ ಒಳ್ಳೆಯದಾಗಬೇಕು ಎಂಬ ಮಾತು ಎಲ್ಲರ ಮೆಚ್ಚುಗೆ ಗಳಿಸಿದೆ. ಇದಲ್ಲದೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಬೇಕು ಎಂದು ಅಜ್ಜಿ ಹೇಳಿರುವುದು ಕೇಳಬಹುದು. ಆಕೆ ತನಗಾಗಿ ಏನನ್ನೂ ಬೇಡದೆ ದೇಶದ, ನಾಡಿನ ಕುರಿತ ಪ್ರಾರ್ಥನೆ ಮಾಡಿರುವುದು ಭಾರಿ ಮೆಚ್ಚುಗೆ ಗಳಿಸಿದೆ.


ಶಿವರಾತ್ರಿಯಂದು ಮಲೆ ಮಹದೇಶ್ವರನ ಬೆಟ್ಟದಲ್ಲಿ ವಿಶೇಷ ಪೂಜೆ

ಇಂದು ಮಹಾಶಿವರಾತ್ರಿಯಾಗಿರುವ ಹಿನ್ನೆಲೆ ಚಾಮರಾಜನಗರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು ನೆರೆದಿರುತ್ತದೆ. ಇಂದು ಬೆಟ್ಟದ ಒಡೆಯನಿಗೆ ವಿಶೇಷ ಪೂಜೆ ನೆರವೇರಲಿದೆ. ಹೀಗಾಗಿ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಭಕ್ತರು ಬರುತ್ತಾರೆ. ಕಳೆದ ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸುತ್ತಿದ್ದಾರೆ. ಇದಲ್ಲದೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಶಾಗ್ಯ ಗ್ರಾಮದ ಬಳಿ ಪಾದಯಾತ್ರೆ ಮೂಲಕ ಬರುವಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ವರ್ಷವೂ ನೂರಾರು ಭಕ್ತಾದಿಗಳು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಾರ್ಗ ಮಧ್ಯದ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾ ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹ ಭೋಜನವನ್ನು ಸವಿದು ಸಂಚರಿಸುತ್ತಿರುವುದು ಹನೂರು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದೆ.

English summary

102-Year-Old Woman Climbed Mahadeshwara Hills For Perform Pooja

A 102-year-old Woman Climbed Mahadeshwara Hills For Perform Pooja
Story first published: Friday, March 8, 2024, 10:45 [IST]
X
Desktop Bottom Promotion