Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಕ್ರೀದ್: ಶಾಂತಿ ಸಮಾನತೆ-ಸೌಹಾರ್ದತೆಯ ಸಂದೇಶ ಸಾರುವ ಹಬ್ಬ
ಬಕ್ರೀದ್ ಹಬ್ಬವನ್ನು ಚಂದ್ರನನ್ನು ಆಧರಿಸಿದ ಇಸ್ಲಾಂ ಕ್ಯಾಲೆಂಡರಿನ ಪ್ರಕಾರ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಇಸ್ಲಾಂ ಕ್ಯಾಲೆಂಡರಿನ ಕಡೆಯ ತಿಂಗಳಾದ ದುಲ್ ಹಜ್ಜ್ ತಿಂಗ ಹತ್ತನೆಯ ದಿನದಂದು ಆಚರಿಸಲಾಗುತ್ತದೆ. ರಂಜಾನ್ ನಂತೆಯೇ ಈ ತಿಂಗಳ ಮೊದಲ ದಿನವೂ ಚಂದ್ರನ ಪ್ರಥಮ ದರ್ಶನ ಪಡೆಯುವುದು ಅಗತ್ಯವಾಗಿದೆ.
ಮುಸ್ಲಿಮರಿಗೆ ಈ ಹಬ್ಬ ಅತ್ಯಂತ ಪವಿತ್ರವಾಗಿದ್ದು ವಿಶ್ವದಾದ್ಯಂತ ಮುಸ್ಲಿಮರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನವನ್ನು ಪ್ರವಾದಿ ಇಸ್ಮಾಯೀಲರು ನೀಡಿದ ಬಲಿದಾನದ ರೂಪದಲ್ಲಿ ಆಚರಿಸಲಾಗುತ್ತದೆ. ತಮ್ಮ ಮಗನನ್ನೇ ದೇವರ ಇಚ್ಛೆಯಂತೆ ಬಲಿದಾನ ನೀಡಲು ಸಿದ್ಧವಾಗಿದ್ದ ಇಸ್ಮಾಯೀಲರ ಭಕ್ತಿಯನ್ನು ಮೆಚ್ಚಿ ಕುರಿಯ ಬಲಿಯನ್ನು ಪಡೆಯಲಾಗಿತ್ತು. ಈ ವಿಧಿಯನ್ನೇ ಕುರ್ಬಾನಿ ಎಂದು ಕರೆಯಲಾಗುತ್ತದೆ.
ಈ ದಿನ ಮುಸ್ಲಿಮರು ತಮ್ಮ ಕುಟುಂಬವರ್ಗ ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಹಾಗೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ....

ಈ ಹಬ್ಬದ ಹಿಂದಿನ ನಂಬಿಕೆ
ಮುಸ್ಲಿಂ ಧರ್ಮಗ್ರಂಥಗಳಲ್ಲಿ ವಿವರಿಸಿದ ಪ್ರಕಾರ ಪ್ರವಾದಿ ಇಬ್ರಾಹಿಂ (ರ) ರವರನ್ನು ಅಲ್ಲಾಹನು ಹಲವು ರೀತಿಗಳಿಂದ ಪರೀಕ್ಷಿಸುತ್ತಾನೆ. ಪತ್ನಿ ಮತ್ತು ಪುಟ್ಟ ಮಗುವನ್ನು ಮರುಭೂಮಿಯ ನಟ್ಟ ನಡುವೆ ಬಿಟ್ಟು ಬರುವಂತೆ ಆದೇಶಿಸಲಾಗುತ್ತದೆ. ಈ ಮರುಭೂಮಿಯಲ್ಲಿ ಅವರ ಪತ್ನಿ ಹಾಜಿರಾ ಬಾಯಾರಿಕೆಯಿಂದ ಅಳುತ್ತಿದ್ದ ಕಂದನಿಗಾಗಿ ನೀರು ಹುಡುಕಲು ಸಫಾ ಮತ್ತು ಮರ್ವಾ ಎಂಬ ಎರಡು ಬೆಟ್ಟಗಳ ನಡುವೆ ಓಡಿದಾಗ ನಡುವೆ ನೀರಿನ ಚಿಲುಮೆಯೊಂದು ಹೊರಡುತ್ತದೆ. ನೀರನ್ನು ಕುಡಿದ ಬಳಿಕ ಝಂ ಝಂ (ನಿಲ್ಲು ನಿಲ್ಲು) ಎಂದರೂ ನಿಲ್ಲದ ನೀರು ಇಂದಿಗೂ ಅತ್ಯಂತ ಶುಭ್ರವಾದ ನೀರನ್ನು ಯಾತ್ರಿಕರಿಗೆ ಉಣಿಸುತ್ತಿದೆ. ಈ ಬಾಲಕ ಕೊಂಚ ದೊಡ್ಡವನಾದ ಬಳಿಕ ದೇವರು ಇನ್ನೊಂದು ಪರೀಕ್ಷೆಯನ್ನು ಒಡ್ಡಿ ಇಬ್ರಾಹೀಮರಿಗೆ ಮಗನನ್ನೇ ಬಲಿ ನೀಡುವಂತೆ ಆಜ್ಞಾಪಿಸುತ್ತಾರೆ. ಇದಕ್ಕೆ ತಂದೆ ಮಗ ಇಬ್ಬರು ತಯಾರಾಗುತ್ತಾರೆ. ಇನ್ನೇನು ಕತ್ತಿಯನ್ನು ಕುತ್ತಿಗೆಗೆ ತಾಕಿಸಬೇಕು, ಆಗ ದೇವವಾಣಿ ಇದನ್ನು ತಡೆದು ಇಬ್ರಾಹೀಮರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ, ಮಗನ ಬದಲಿಗೆ ಕುರಿಯನ್ನು ಬಲಿ ನೀಡುವಂತೆ ಆಜ್ಞಾಪಿಸುತ್ತಾರೆ. ಇಂದಿಗೂ ಈ ಬಲಿದಾನವನ್ನು ಕುರಿಯನ್ನು ಬಲಿ ನೀಡುವ ಮೂಲಕ ಹಬ್ಬದ ಮುಖ್ಯ ಕರ್ಮವಾಗಿ ನಿರ್ವಹಿಸಲಾಗುತ್ತದೆ.

ಹಬ್ಬದ ದಿನ ಮುಸ್ಲಿಮರು ಅನುಸರಿಸಬೇಕಾದ ವಿಧಿಗಳು
ಬಕ್ರೀದ್ ಹಬ್ಬದ ದಿನದಂದು ಮುಸ್ಲಿಮರು ಕೆಲವು ವಿಧಿಗಳನ್ನು ಅನುಸರಿಸಬೇಕಾಗುತ್ತದೆ, ಆದರೆ ಇವು ಕಡ್ಡಾಯವಲ್ಲ. ಪ್ರತಿ ಮುಸ್ಲಿಮರೂ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಹಬ್ಬವನ್ನು ಆಚರಿಸುತ್ತಾರೆ. ಬಕ್ರೀದ್ ಹಬ್ಬವನ್ನು ಈದ್-ಉಲ್-ಅಧಾ ಅಥವಾ ಈದ್-ಉಲ್-ಝುಹಾ ಎಂದೂ ಕರೆಯುತ್ತಾರೆ.

ಹಬ್ಬದ ಮುನ್ನಾದಿನದ ಉಪವಾಸ
ಮುಸ್ಲಿಮರಿಗೆ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಿರ್ವಹಿಸಬೇಕಾದ ಹಜ್ ಯಾತ್ರೆಯೂ ಇದೇ ಅವಧಿಯಲ್ಲಿ ನಿರ್ವಹಿಸಲಾಗುತ್ತದೆ. ಹಬ್ಬದ ಮುನ್ನಾದಿನ ಅಥವಾ ದುಲ್ಹಜ್ ತಿಂಗಳ ಒಂಭತ್ತನೆಯ ದಿನ ಹಜ್ ಕರ್ಮದ ಅನುಸಾರವಾಗಿ ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಹಜ್ ಯಾತ್ರಿಕರು ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ. ರಂಜಾನ್ ನಲ್ಲಿ ಆಚರಿಸಿದಷ್ಟೇ ಕಠಿಣವಾಗಿ ಸೂರ್ಯೋದಯಕ್ಕೂ ಒಂದು ಘಂಟೆ ಮುಂಚಿನಿಂದ ಸೂರ್ಯಾಸ್ತದವರೆಗೆ ಅನ್ನ ನೀರನ್ನು ಕುಡಿಯದೇ ಉಪವಾಸ ಆಚರಿಸುತ್ತಾರೆ.

ಹೊಸ ಬಟ್ಟೆ ತೊಡುವುದು
ಈ ಹಬ್ಬದಂದು ಸಾಧ್ಯವಾದರೆ ಹೊಸ ಬಟ್ಟೆಗಳನ್ನು ತೊಡಬೇಕು. ಸಾಧ್ಯವಿಲ್ಲದಿದ್ದರೆ ತನ್ನಲ್ಲಿರುವ ಅತ್ಯುತ್ತಮ ಬಟ್ಟೆಗಳನ್ನು ತೊಡಬೇಕು. ಸಾಮಾನ್ಯವಾಗಿ ಹೆಚ್ಚಿನವರು ಹಬ್ಬಕ್ಕೆಂದು ಹೊಸ ಬಟ್ಟೆಗಳನ್ನು ಮೊದಲೇ ಖರೀದಿಸಿ ಹೊಲಿಸಿಟ್ಟಿರುತ್ತಾರೆ. ಹಬ್ಬದ ದಿನದಂದು ಬೆಳಗ್ಗಿನ ಸ್ನಾನದ ಬಳಿಕ ಈ ಬಟ್ಟೆಗಳನ್ನು ತೊಟ್ಟು ಉತ್ತಮ ಸುಗಂಧವನ್ನು ಲೇಪಿಸಿಕೊಳ್ಳುತ್ತಾರೆ.

ಮಸೀದಿಗೆ ತೆರಳುವುದು
ಹೊಸಬಟ್ಟೆಗಳನ್ನು ತೊಟ್ಟು ಅಲ್ಪ ಉಪಾಹಾರ ಸೇವಿಸಿದ ಬಳಿಕ ಪುರುಷರೆಲ್ಲರೂ ಮಸೀದಿಗೆ ತೆರಳುತ್ತಾರೆ. ಮಹಿಳೆಯರಿಗೂ ಮಸೀದಿಗೆ ಹೋಗುವ ಅವಕಾಶವಿದೆ, ಆದರೆ ಕಡ್ಡಾಯವಿಲ್ಲ. ಮಸೀದಿಯಲ್ಲಿ ವಿಶೇಷ ನಮಾಜ್ ಬಳಿಕ ದುವಾ ಅಥವಾ ಪ್ರಾರ್ಥನೆಯನ್ನು ಸಲ್ಲಿಸುತ್ತಾ ದೇವರಲ್ಲಿ ತಪ್ಪುಗಳಿಗೆ ಕ್ಷಮೆ ಹಾಗೂ ಮುಂದಿನ ಜೀವನ ಸುಖಕರ ಹಾಗೂ ಸಮೃದ್ದತೆಯಿಂದ ಕೂಡಿರಲು ಕೇಳಿಕೊಳ್ಳಲಾಗುತ್ತದೆ.

ತಕ್ಬೀರ್ ಪಠಣ
ಹಬ್ಬದ ದಿನದ ಮುನ್ನದಿನದಿಂದ ತೊಡಗಿ ಮರುದಿನದವರೆಗೂ ಅಂದರೆ ಸತತವಾಗಿ ಮೂರು ದಿನ ವಿಶೇಷ ಪಠಣವಾದ ತಕ್ಬೀರ್ ವಾಕ್ಯಗಳನ್ನು ಎಲ್ಲರೂ ಪಠಿಸುತ್ತಾರೆ. ಮಸೀದಿಗೆ ಹೊರಡುವ ಮುನ್ನ, ದಿನದ ಎಲ್ಲಾ ಪ್ರಾರ್ಥನೆಗೂ ಮುನ್ನ ಹಾಗೂ ಬಳಿಕ ಈ ತಕ್ಬೀರ್ ಅನ್ನು ಪಠಿಸಲಾಗುತ್ತದೆ.

ಬಲಿದಾನ
ಬಕ್ರೀದ್ ಹಬ್ಬದ ಹೆಸರೇ ಹೇಳುವಂತೆ ಬಕ್ರ್ ಅಥವಾ ಕುರಿ ಮತ್ತು ಈದ್ ಅಂದರೆ ಹಬ್ಬ, ಈ ದಿನದಂದು ಕುರಿಯ ಬಲಿದಾನ ನೀಡುವ ಮೂಲಕ ಪ್ರವಾದಿ ಇಸ್ಮಾಯೀಲರು ನಿರ್ವಹಿಸಿದ್ದ ಕರ್ಮವನ್ನು ನಿರ್ವಹಿಸಲಾಗುತ್ತದೆ. ಈ ಬಲಿದಾನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಬಲಿದಾನಕ್ಕೆ ಕುರಿಯೇ ಆಗಬೇಕೆಂದಿಲ್ಲ. ಟಗರು, ಎತ್ತು, ಒಂಟೆ ಮೊದಲಾದ ಪ್ರಾಣಿಗಳೂ ಆಗಬಹುದು. ಆದರೆ ಇವುಗಳು ಕೆಲವು ನಿಯಮಗಳನ್ನು ಪಾಲಿಸುವಂತಿರಬೇಕು. ಧಾರ್ಮಿಕ ವಿಧಿಗೆ ಅನುಸಾರವಾಗಿ (ಹಲಾಲ್) ಈ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ.

ಬಲಿಯ ಮೂಲಕ ಪಡೆದ ಮಾಂಸ ಹಂಚುವಿಕೆ
ಪ್ರಾಣಿಯ ಬಲಿದಾನದ ಬಳಿಕ ಪಡೆದ ಒಟ್ಟಾರೆ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವನ್ನು ಸ್ವಂತಕ್ಕಾಗಿಯೂ, ಒಂದು ಭಾಗವನ್ನು ತನ್ನ ಬಂಧುಬಳಗದವರಿಗೂ ಹಾಗೂ ಇನೊಂದು ಭಾಗವನ್ನು ಬಡವರಿಗೆ ಕಡ್ಡಾಯವಾಗಿ ದಾನ ಮಾಡಬೇಕಾಗುತ್ತದೆ.

ದಾನ ವಿತರಣೆ
ಮುಸ್ಲಿಮರಲ್ಲಿ ಉಳ್ಳವರು ಅರ್ಹ ಕುಟುಂಬಗಳಿಗೆ ಅಗತ್ಯವಿರುವ ಸಾಮಾಗ್ರಿ ಅಥವಾ ಇತರ ನೆರವನ್ನು ನೀಡುವ ಮೂಲಕ ದಾನ ನೀಡುವುದು ಹಬ್ಬದ ಸಂದರ್ಭದಲ್ಲಿ ಸತ್ಕರ್ಮ ಎಂದು ಭಾವಿಸಲಾಗುತ್ತದೆ. ಕೆಲವು ಮುಸ್ಲಿಂ ದೇಶಗಳಲ್ಲಿ ಚಿಕ್ಕ ಪುಟ್ಟ ಅಪರಾಧಗಳಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವವರ ಶಿಕ್ಷೆಯನ್ನು ಮನ್ನಾಗೊಳಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ದಾನದ ಬಗ್ಗೆ ಯಾವುದೇ ಪ್ರಚಾರ ಮಾಡಕೂಡದು ಹಾಗೂ ಪಡೆದವರು ಸಹಾ ಸಮಾಜದಲ್ಲಿ ಹೇಳಿಕೊಳ್ಳಕೂಡದು ಎಂದೂ ವಿವರಿಸಲಾಗಿದೆ.

ಬಂಧುಬಳಕ-ಸ್ನೇಹಿತರ ಮನೆಗೆ ಭೇಟಿ
ಈ ದಿನದಂದು ತಮ್ಮ ಬಂಧು ಬಳಗದವರನ್ನು ಹಾಗೂ ಆಪ್ತ ಸ್ನೇಹಿತರ ಮನೆಗೆ ಭೇಟಿ ನೀಡಿ ಶುಭಾಶಯ ಹಾಗೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಬ್ಬ ಎಂದರೆ ಸಂಭ್ರಮ ಹಾಗೂ ಸಂತೋಷದ ಸಂದರ್ಭವಾಗಿದ್ದು ಸಮಾಜದ ಎಲ್ಲಾ ವರ್ಗದ ಜನರು ಸಂತೋಷದಿಂದ ಕಾಲ ಕಳೆಯುವಂತೆ ತಿಳಿಸಲಾಗಿದೆ.

ಸ್ವಾದಿಷ್ಟ ಊಟದ ಸಿದ್ಧತೆ
ಇಂದಿನ ದಿನ ಬೆಳಿಗ್ಗೆ ಬಲಿದಾನ ನೀಡಿದ ಬಳಿಕ ತಮ್ಮ ಪಾಲಿಗೆ ಬಂದ ಮಾಂಸದಿಂದ ಸ್ವಾದಿಷ್ಟ ಊಟವನ್ನು ತಯಾರಿಸಿ ಸೇವಿಸುವುದು ಸಹಾ ಬಕ್ರೀದ್ ಹಬ್ಬದ ಒಂದು ಪ್ರಮುಖ ವಿಧಿಯಾಗಿದೆ. ಸಾಧ್ಯವಾದಷ್ಟು ತಮ್ಮ ಆತ್ಮೀಯರನ್ನು ಹಾಗೂ ಬಂಧುಗಳನ್ನು ಊಟಕ್ಕೆ ಆಹ್ವಾನಿಸಿ ಜೊತೆಯಾಗಿ ಊಟ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಬೇಕೆಂದು ತಿಳಿಸಲಾಗಿದೆ.

ವಿಶೇಷ ಖಾದ್ಯಗಳ ತಯಾರಿ
ವಿಶೇಷ ಅಡುಗೆಯ ಹೊರತಾಗಿ ಮುಸ್ಲಿಂ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ವಿಶೇಷ ಸಿಹಿತಿನಿಸು ಹಾಗೂ ಇತರ ಖಾದ್ಯಗಳನ್ನು ತಯಾರಿಸುತ್ತಾರೆ. ಅಂದಿನ ದಿನದ ಅಗತ್ಯಕ್ಕಿಂತಲೂ ಕೊಂಚ ಹೆಚ್ಚೇ ಪ್ರಮಾಣವನ್ನು ತಯಾರಿಸಿ ಮುಂದಿನ ದಿನಗಳಲ್ಲಿಯೂ ಸವಿಯುವಂತೆ ಮಾಡಲಾಗುತ್ತದೆ.

ದಿನದ ಕಡೆಯ ಪ್ರಾರ್ಥನೆ
ದಿನವಿಡೀ ಸಂಭ್ರಮವನ್ನು ಆಚರಿಸಿದ ಬಳಿಕ ಸಂಜೆಯ ಪ್ರಾರ್ಥನೆಯ ಹೊತ್ತಿಗೆ ಕುಟುಂಬದ ಎಲ್ಲಾ ಸದಸ್ಯರು ಒಂದೆಡೆ ಸೇರಿ ಈ ಸಂದರ್ಭವನ್ನು ಒದಗಿಸಿದ ಅಲ್ಲಾಹನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ವಿಶ್ವದಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಸಂಭ್ರಮದಿಂದ ಹಾಗೂ ವಿಧಿಗಳಿಗನುಸಾರವಾಗಿ ಆಚರಿಸುತ್ತಾರೆ.



Click it and Unblock the Notifications