ಪಶು ಸಂಜೀವಿನಿ ಆಂಬ್ಯೂಲೆನ್ಸ್: ಪ್ರತಿಯೊಬ್ಬ ರೈತರಿಗೆ ಈ ಸೇವೆ ವರವಾಗಿದೆ, ಹೇಗೆ? ಈ ಸೇವೆ ಪಡೆಯುವುದು ಹೇಗೆ?

ಅದೊಂದು ಗ್ರಾಮ, ಆ ಗ್ರಾಮಕ್ಕೆ ಆಂಬ್ಯೂಲೆನ್ಸ್ ಸೈರನ್ ಮಾಡುತ್ತಾ ಬರುತ್ತದೆ, ಗ್ರಾಮವೆಂದರೆ ಪಟ್ಟಣದಂಥಲ್ಲ, ಆ ಊರಿನಲ್ಲಿ ಏನಾದರೂ ಘಟನೆ ಸಂಭವಿಸಿದರೆ ಇಡೀ ಊರಿನವರಿಗೆ ಕ್ಷಣ ಮಾತ್ರದಲ್ಲಿ ತಿಳಿಯುತ್ತದೆ, ಇನ್ನು ಆಂಬ್ಯೂಲೆನ್ಸ್ ಸೈರನ್ ಹಾಕುತ್ತಾ ಬಂದಾಗ ಅಲ್ಲಿಯ ಜನರು ಯಾರಿಗೆ ಏನಾಯ್ತು ಎಂದು ಮನೆಯಿಂದ ಹೊರಗೆ ಬರ್ತಾರೆ.

ಎಲ್ಲರ ಮುಖದಲ್ಲಿಯೂ ಗಾಬರಿ, ಯಾರಿಗೆ ಹುಷಾರಿಲ್ಲ? ಅಂತ ಕೇಳ್ತಾರೆ ಯಾರಿಗೆ ಅಂತ ಗೊತ್ತಾಗಲ್ಲ, ನಮ್ಮ ಊರಿಗೆ ಆಂಬ್ಯೂಲೆನ್ಸ್ ಸೌಂಡ್ ಮಾಡಿ ಬರ್ತಾ ಇರುವುದು ಏಕೆ? ಎಂದು ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಏಕೆಂದರೆ ಯಾರಿಗಾದರೂ ಹುಷಾರಿಲ್ಲದೆ ಆಂಬ್ಯೂಲೆನ್ಸ್ ತರಿಸಿದ್ದರೆ ಆ ಊರಿನವರಿಗೆ ಅದು ಗೊತ್ತಾಗುತ್ತಾ ಇತ್ತು... ಹಳ್ಳಿಯಲ್ಲಿ ಇರುವವರಿಗೆ ಗೊತ್ತಿರುತ್ತದೆ ಇಲ್ಲಿ ಮಾಹಿತಿಗಳು 5G ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ.

Pashu Sanjeevini Ambulance

ಎಲ್ಲರನ್ನು ಗಾಬರಿಗೊಳಿಸಿದ ಆಂಬ್ಯೂಲೆನ್ಸ್ ಬಂದು ನಿಲ್ಲುತ್ತೆ, ನೋಡಿದರೆ ಅದರಲ್ಲಿ ಪಶು ಸಂಜೀವಿನಿ ಅಂತ ಬರೆದಿರುತ್ತದೆ.. ಆ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿದ್ದ ಗೋವಿಗೆ ಹೆರಿಗೆ ನೋವು ಬಂದಿರುತ್ತದೆ, ಕರು ಹೊರ ಬಂದಿರಲಿಲ್ಲ, ಹೀಗಾಗಿ ಪಶು ವೈದ್ಯರು ತಮ್ಮ ತಂಡದ ಜೊತೆ ಆಂಬ್ಯೂಲೆನ್ಸ್‌ನಲ್ಲಿ ಬಂದಿದ್ದು. ಆವಾಗಲೇ ಆ ಗ್ರಾಮದವರಿಗೆ ಗೋವುಗಳ ರಕ್ಷಣೆಗೆ ಇಂಥ ವ್ಯವಸ್ಥೆ ಇದೆ ಎಂಬುವುದು ತಿಳಿದಿದ್ದು. ವೈದ್ಯರು ಕರುವನ್ನು ಹೊರ ತೆಗೆಯುತ್ತಾರೆ, ಅವರಲ್ಲೊಬ್ಬರು ಕರುವಿನ ಬಾಯಿಗೆ ಬಾಯಿಟ್ಟು ಊದುತ್ತಾರೆ, ಸುಸ್ತಾಗಿದ್ದ ಕರು ಚೇತರಿಸಿಕೊಳ್ಳುತ್ತದೆ. ದನಕ್ಕೆ ಗ್ಲುಕೋಸ್ ಹಾಕಲಾಗುವುದು, ನಂತರ ಕೆಲ ಔಷಧಿ ಬರೆದು ಕರು-ದನ ಸೇಫ್ ಆಗಿದೆ, ಇದನ್ನು ಕೊಡಿ, ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.

ಈ ಯೋಜನೆ 2022ರಲ್ಲಿಯೇ ಪ್ರಾರಂಭವಾಗಿದೆ, ಆದರೆ ಇದರ ಬಗ್ಗೆ ಬಹುತೇಕ ರೈತರಿಗೆ ಮಾಹಿತಿಯಿಲ್ಲ. ಒಂದು ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೇ ಬರುತ್ತದೆ ಈ ಆಂಬ್ಯೂಲೆನ್ಸ್. ಪಶು ವೈದ್ಯರಿಲ್ಲ ಅಂತ ವ್ಯಥೆ ಪಡುವ ಅಗ್ಯತವಿಲ್ಲ, ಪಶು, ಹಂದಿ ಮುಂತಾದ ಪ್ರಾಣಿಗಳನ್ನು ಗಾಡಿ ಮಾಡಿ ಚಿಕಿತ್ಸೆಗೆ ಕೊಂಡೊಯ್ಯುವ ಅವಶ್ಯಕತೆಯಿಲ್ಲ, ರೈತರು ಕರೆ ಮಾಡಿದರೆ ಸಾಕು, ಆ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುತ್ತಾರೆ.

ಎಲ್ಲಾ ಸಾಕು ಪ್ರಾಣಿಗಳಿಗೂ ಈ ಸೌಲಭ್ಯವಿದೆಯೇ?
ಇಲ್ಲ, ಮನೆಯಲ್ಲಿರುವ ಸಾಕು ನಾಯಿ, ಆಡು ಇವುಗಳಿಗೆಲ್ಲಾ ಈ ಪಶು ಸಂಜೀವಿನಿ ಸೌಲಭ್ಯವಿಲ್ಲ ಎಂದು ಆ ತಂಡದವರು ನಮಗೆ ತಿಳಿಸಿದರು. ನಾವು ವೈದ್ಯರ ಬಳಿ ಈ ಕುರಿತು ಕೇಳಿದಾಗ ದೊಡ್ಡ ಪ್ರಾಣಿಗಳು ಅಂದರೆ ಹಸು, ಎಮ್ಮೆ, ಹಂದಿ ಈ ಬಗೆಯ ಸಾಕು ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ಅವಶ್ಯಕವಿರುವಾಗ 1962ಗೆ ಕರೆ ಮಾಡಿದರೆ ಸಾಕು, ಬಂದು ಚಿಕಿತ್ಸೆ ನೀಡಲಾಗುವುದು, ಪ್ರತಿ ತಾಲೂಕಿನಲ್ಲಿ ಇಂಥದ್ದೊಂದ ಆಂಬ್ಯೂಲೆನ್ಸ್ ಸೇವೆ ಇದೆ, ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬಹುದು ಎಂದಿದ್ದಾರೆ. ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಾದರೆ ಪಶುಚಿಕಿತ್ಸಾ ಕೇಂದ್ರಕ್ಕೆ ಕರೆತಂದರ ನಾವು ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.

ಎಷ್ಟೋ ಬಾರಿ ರಸ್ತೆಯಲ್ಲಿ ದನಗಳಿಗೆ ಅಪಘಾತವಾಗಿ ನರಳುತ್ತವೆ, ಈ ಸಂಖ್ಯೆಗೆ ಕರೆ ಮಾಡಿದರೆ ಸಾಕು, ಅವುಗಳಿಗೆ ತುರ್ತು ಚಿಕಿತ್ಸೆ ದೊರೆಯಲಿದೆ. ಈ ಆಂಬ್ಯೂಲೆನ್ಸ್ ಸೇವೆಯಿಂದಾಗಿ ಅನೇಕ ರೈತರಿಗೆ ವರದಾನವಾಗಿದೆ.

ಪಶುವೈದ್ಯರು, ಆಂಬ್ಯೂಲೆನ್ಸ್ ಡ್ರೈವರ್, ಫಾರ್ಮಸಿಸ್ಟ್ ಹೀಗೆ ನುರಿತ ತಂಡವಿರುತ್ತದೆ. ಪ್ರಾಣಿಗಳಿಗೆ ನುರಿತ ಚಿಇತ್ಸೆಗೆ ಅವಶ್ಯಕವಾದ ಔಷಧಗಳು, ವ್ಯವಸ್ಥೆಗಳು ಆ ಆಂಬ್ಯೂಲೆನ್ಸ್‌ನಲ್ಲಿರುತ್ತದೆ.

ಪ್ರಧಾನಿ ಮೋದಿಯವರ ಪರಿಕಲ್ಪನೆ
ಮೂಕ ಪ್ರಾಣಿಗಳಿಗೂ ತುರ್ತು ಚಿಕಿತ್ಸೆ ದೊರೆಯಬೇಕೆಂದು ನರೇಂದ್ರ ಮೋದಿಯವರ ಪರಿಕಲ್ಪನೆ, ಇದನ್ನು ದೇಶದಲ್ಲಿ 2022ರಲ್ಲಿ ಮೊಟ್ಟ ಮೊದಲಿಗೆ ಶುರು ಮಾಡಿದರು. 2023ರಲ್ಲಿ ಎಲ್ಲ ಆ ರಾಜ್ಯಗಳಿಗೆ ಈ ಸೌಲಭ್ಯ ಸಿಕ್ಕಿದೆ, ಪ್ರತಿ ತಾಲೂಕಿನಲ್ಲಿ ಈ ಆಂಬ್ಯೂಲೆನ್ಸ್ ಸೇವೆಯಿದೆ.

ರೈತರಿಗೆ ತುಂಬಾನೇ ಸಹಾಯವಾಗಿದೆ
ಎಷ್ಟೋ ರೈತರು ಸಾಲ ಮಾಡಿ ಪಶು ಸಂಗೋಪನೆ ಮಾಡುತ್ತಿರುತ್ತಾರೆ , ಒಂದು ವೇಳೆ ದನ ಕರುಗಳಿಗೆ ತೊಂದರೆ ಉಂಟಾಗಿ ಅವು ಸಾವನ್ನಪ್ಪಿದರೆ ರೈತನನ್ನು ಆರ್ಥಿವಾಗಿ ಕೂಡ ಬಾಧಿಸುತ್ತದೆ. ಈ ವ್ಯವಸ್ಥೆ ಇರುವುದರಿಂದ ರೈತರಿಗೆ ಹೆಚ್ಚು ಚಿಂತೆಯಿಲ್ಲ, ಮನೆ ಬಾಗಿಲಿಗೆ ಬಂದು ಉಚಿತ ಚಿಕಿತ್ಸೆ ನೀಡಿ ಹೋಗುತ್ತಾರೆ.

24 ಗಂಟೆಯೂ ಈ ಆಂಬ್ಯೂಲೆನ್ಸ್ ಸೇವೆ ಇದೆಯೇ?
ಕುಶಾಲನಗರ ಪಶು ಚಿಕಿತ್ಸಾ ಕೇಂದ್ರದ ತಂಡ ನಮಗೆ ಈ ಸೇವೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಇರಲಿದೆ ಎಂದು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ಗೋವಿಗೆ ತೊಂದರೆಯಾದರೆ ಈ ಆಂಬ್ಯೂಲೆನ್ಸ್ ಸೇವೆ ಸಿಗಲ್ಲ. ಒಂದೊಳ್ಳೆಯ ಉದ್ದೇಶದಿಂದ ಈ ಸೇವೆ ಆರಂಭವಾಗಿರುವುದು ಖುಷಿಯ ವಿಚಾರ, ಆದರೆ ಸಮಯ ಮಿತಿ ಇರದಿದ್ದರೆ ಯಾವುದೇ ತುರ್ತು ಸಮಯದಲ್ಲಿ ರೈತರು ಇದರ ಸಹಾಯ ಪಡೆಯಬಹುದಿತ್ತು ಅಲ್ವಾ?

English summary

Pashu Sanjeevini Ambulance: How This Service Helping Farmers, How To Connect During Emergency , Veterinary Doctor Explained

Pashu Sanjeevini Ambulance: How This Service Helping Farmers, How To Connect During Emergency , Veterinary Doctor Explained
Story first published: Sunday, October 13, 2024, 23:01 [IST]
X
Desktop Bottom Promotion